ಪ್ರವಾಹ ಸಂತ್ರಸ್ತರ ಪುನರ್ವಸತಿಗೆ ದಾನಿಗಳು ಮುಂದಾಗಬೇಕು: ಬಿ.ಎಸ್.ಯಡಿಯೂರಪ್ಪ
Update: 2019-08-21 12:50 GMT
ಬೆಂಗಳೂರು, ಆ.21: ಜಲಪ್ರವಾಹದಿಂದ ಸಂಕಷ್ಟಕ್ಕೆ ಈಡಾಗಿರುವ ಜನತೆಯ ಪುನರ್ವಸತಿಗೆ ದಾನಿಗಳು ಉದಾರವಾಗಿ ನೆರವಿನ ಹಸ್ತ ಚಾಚಬೇಕೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.
ಬುಧವಾರ ಗೃಹ ಕಚೇರಿ ಕೃಷ್ಣಾದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರವಾಹ ಪೀಡಿತರ ಪುನರ್ ವಸತಿಗೆ ಸಿದ್ಧಗಂಗಾ ಮಠವು 50ಲಕ್ಷ ರೂ.ನೆರವು ನೀಡುತ್ತಿದೆ. ಅದನ್ನು ಪಡೆದು, ಶ್ರೀಗಳ ಆಶೀರ್ವಾದ ಪಡೆಯಲು ಮಠಕ್ಕೆ ಹೋಗುತ್ತಿದ್ದೇನೆಂದು ತಿಳಿಸಿದರು.
ರಾಜ್ಯದ ಅರ್ಧ ಭಾಗ ಜಲಪ್ರವಾಹಕ್ಕೆ ಸಿಲುಕಿ ಸಾಕಷ್ಟು ಸಮಸ್ಯೆಗೆ ಈಡಾಗಿದೆ. ಇಲ್ಲಿನ ಜನತೆ ಮನೆ, ಆಸ್ತಿ-ಪಾಸ್ತಿಗಳನ್ನು ಕಳೆದುಕೊಂಡಿದ್ದಾರೆ. ಇವರ ಪುನರ್ ವಸತಿ ಕಲ್ಪಿಸುವ ನಿಟ್ಟಿನಲ್ಲಿ ನಾಡಿನ ಜನತೆ ಉದಾರವಾಗಿ ಆರ್ಥಿಕ ಸಹಾಯ ಮಾಡಬೇಕೆಂದು ಅವರು ಹೇಳಿದರು.