ಬೆಂಗಳೂರು: ಚಿನ್ನಾಭರಣ ಮಳಿಗೆಗೆ ನುಗ್ಗಿ ದರೋಡೆಕೋರರಿಂದ ಗುಂಡಿನ ದಾಳಿ

Update: 2019-08-21 15:36 GMT

ಬೆಂಗಳೂರು, ಆ.21: ಚಿನ್ನಾಭರಣ ಮಳಿಗೆಗೆ ನುಗ್ಗಿದ ದರೋಡೆಕೋರರು, ಪಿಸ್ತೂಲಿನಿಂದ ಗುಂಡು ಹಾರಿಸಿ ಪರಾರಿಯಾಗಿರುವ ಘಟನೆ ಇಲ್ಲಿನ ವೈಯಾಲಿಕಾವಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ನಗರದ ಅರಮನೆ ಮೈದಾನದ ಗುಟ್ಟಹಳ್ಳಿ 2ನೆ ಮುಖ್ಯರಸ್ತೆಯ ವಿನಾಯಕ ವೃತ್ತ ಸಮೀಪವಿರುವ ಸಾಮ್ರಾಟ್ ಜ್ಯುವೆಲರಿ ಮಳಿಗೆಗೆ ಬುಧವಾರ ಮಧ್ಯಾಹ್ನ 2:30ಕ್ಕೆ ಬೈಕ್‌ನಲ್ಲಿ ಬಂದ ಮೂವರು ದುಷ್ಕರ್ಮಿಗಳು, ಚಿನ್ನಾಭರಣ ಖರೀದಿ ಮಾಡುವ ನಾಟಕವಾಡಿದ್ದಾರೆ.

ಕೆಲ ಸಮಯದ ಬಳಿಕ ಚಿನ್ನಾಭರಣ ದೋಚಲು ಪ್ರಯತ್ನಿಸಿದ್ದಾರೆ. ಈ ಸಂದರ್ಭದಲ್ಲಿ ಮಳಿಗೆ ಮಾಲಕ ಆಶಿಶ್ ಮತ್ತಿತರರು ಪ್ರತಿರೋಧವೊಡ್ಡಿ ಜೋರಾಗಿ ಕೂಗಿಕೊಂಡಿದ್ದಾರೆ ಎನ್ನಲಾಗಿದೆ.

ಇದರಿಂದ ಗಾಬರಿಗೊಂಡು ದುಷ್ಕರ್ಮಿಗಳು ಪಿಸ್ತೂಲಿನಿಂದ ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ಈ ಬಗ್ಗೆ ಘಟನಾ ಸ್ಥಳಕ್ಕೆ ಭೇಟಿ ನೀಡಿದ ವೈಯಾಲಿಕಾವಲ್ ಠಾಣಾ ಪೊಲೀಸರು ಆರೋಪಿಗಳ ಪತ್ತೆಗೆ ಕ್ರಮ ಕೈಗೊಂಡಿದ್ದು, ಸಿಸಿ ಕ್ಯಾಮೆರಾ ಪರಿಶೀಲನೆ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News