ರೈತರನ್ನು ಬಿಜೆಪಿ ನೆನೆಯುತ್ತದೆ, ಆದರೆ ಅವರಿಗಾಗಿ ಕೆಲಸ ಮಾಡಿಲ್ಲ: ಮಲ್ಲಿಕಾರ್ಜುನ ಖರ್ಗೆ
Update: 2019-08-27 16:01 GMT
ಬೆಂಗಳೂರು, ಆ.27: ರೈತರ ಹೆಸರನ್ನು ಬಿಜೆಪಿ ದಿನನಿತ್ಯ ನೆನೆಯುತ್ತದೆ. ಆದರೆ, ಅವರಿಗಾಗಿ ಎಂದೂ ಕೆಲಸ ಮಾಡಿಲ್ಲ ಎಂದು ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದರು.
ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಒಂದು ಕಡೆ ಪ್ರವಾಹ ಪೀಡಿತರಾಗಿ ಸಾಕಷ್ಟು ಜನ ತೊಂದರೆಗೀಡಾಗಿದ್ದಾರೆ. ತೊಂದರೆ ಕೇಳುವವರು, ನೋಡುವವರು ಯಾರೂ ಇಲ್ಲ. ಇನ್ನೊಂದು ಕಡೆ ಬರ ಇದೆ. ಆದರೆ, ಸರಕಾರ ಯಾವುದೇ ರೀತಿ ಕ್ರಮ ಕೈಗೊಳ್ಳುತ್ತಿಲ್ಲ ಎಂದರು.
ಅಧಿಕಾರಕ್ಕೆ ಬಂದು ಒಂದು ತಿಂಗಳಾದರೂ ಮುಖ್ಯಮಂತ್ರಿ ಒಬ್ಬರೇ ಓಡಾಡುತ್ತಿದ್ದಾರೆ. ಮಂತ್ರಿ ಮಂಡಲ ರಚನೆ ಮಾಡಲು 25 ದಿನ ತೆಗೆದುಕೊಂಡರು. ಬಳಿಕ ಖಾತೆ ಹಂಚಿಕೆಗೆ ನಾಲ್ಕೈದು ದಿನ ಆಗಿದೆ. ಒಟ್ಟಾರೆ, ದೃಢ ನಿರ್ಧಾರ ತೆಗೆದುಕೊಳ್ಳಲು ಯಡಿಯೂರಪ್ಪಗೆ ಸಾಧ್ಯವಾಗುತ್ತಿಲ್ಲ ಎಂದು ದೂರಿದರು.