ಬಿಜೆಪಿಯಲ್ಲಿ ಅಸಮಾಧಾನ ಇರುವುದು ಸ್ವಾಭಾವಿಕ: ಸಚಿವ ಕೋಟಾ ಶ್ರೀನಿವಾಸ ಪೂಜಾರಿ
Update: 2019-08-27 16:06 GMT
ಬೆಂಗಳೂರು, ಆ.27: ಕೆಲವರಿಗೆ ಸಚಿವ ತಪ್ಪಿರುವುದಕ್ಕೆ ಹಾಗೂ ಖಾತೆ ಹಂಚಿಕೆಗೆ ಸಂಬಂಧಿಸಿದಂತೆ ಬಿಜೆಪಿಯಲ್ಲಿ ಅಸಮಾಧಾನ ಇರುವುದು ಸ್ವಾಭಾವಿಕ. ಆದರೆ, ಇದು ಸದ್ಯದಲ್ಲೇ ಸರಿಹೋಗಲಿದೆ ಎಂದು ಮೀನುಗಾರಿಕೆ ಮತ್ತು ಬಂದರು ಖಾತೆ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಆರೆಸ್ಸೆಸ್ ಹಿನ್ನೆಲೆಯ ಪಕ್ಷವಾಗಿದೆ. ಆರೆಸ್ಸೆಸ್ ಶಿಸ್ತು ಬಿಜೆಪಿಯಲ್ಲಿ ಪಾಲಿಸಿಕೊಂಡು ಬರಲಾಗುತ್ತಿದೆ. ಹೀಗಾಗಿ ಬಿಜೆಪಿಯಲ್ಲಿ ತಾತ್ಕಾಲಿಕವಾಗಿ ಉಂಟಾಗಿರುವ ಅಸಾಮಾಧಾನ ಶೀಘ್ರವಾಗಿ ಬಗೆಹರಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಜಕಾರಣದಲ್ಲಿ ಸಿಡಿಲು ಗುಡುಗು ಬರಬಹುದು. ಅದೆಲ್ಲವನ್ನು ಎದುರಿಸುವ, ನಿಭಾಯಿಸುವ ಶಕ್ತಿ ಬಿಜೆಪಿಗಿದೆ. ಪಕ್ಷದಲ್ಲಿ ಅಶಿಸ್ತಿನ ಪ್ರಶ್ನೆ ಬರುವುದಿಲ್ಲ. ಸದ್ಯದಲ್ಲಿಯೆ ಎಲ್ಲವೂ ತಣ್ಣಗಾಗಲಿದೆ. ಸಚಿವರೆಲ್ಲರೂ ಅಭಿವೃದ್ಧಿ ಕಾರ್ಯಗಳತ್ತ ಮುಖ ಮಾಡಿದ್ದೇವೆಂದು ಅವರು ಹೇಳಿದರು.