'ಗೌರಿ-ಗಣೇಶ, ಮೊಹರಂ' ಶಾಂತಿ ಸಭೆ: ಅಣ್ಣ-ತಮ್ಮಂದಿರ ರೀತಿ ಹಬ್ಬ ಆಚರಿಸಿ- ಪೊಲೀಸ್ ಆಯುಕ್ತ ಭಾಸ್ಕರ್ ರಾವ್

Update: 2019-08-30 17:19 GMT

ಬೆಂಗಳೂರು, ಆ.30: ಗೌರಿ-ಗಣೇಶ ಹಬ್ಬ ಮತ್ತು ಮೊಹರಂ ಅನ್ನು ಅಣ್ಣ-ತಮ್ಮಂದಿರ ರೀತಿ ಆಚರಣೆ ಮಾಡುವ ಮೂಲಕ ಕೋಮು ಸೌಹಾರ್ದತೆ ಕದಡದೆ ನೋಡಿಕೊಳ್ಳಬೇಕು ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಾಕೀತು ಮಾಡಿದರು.

ಶುಕ್ರವಾರ ನಗರ ಪುರಭವನದಲ್ಲಿ ಬೆಂಗಳೂರು ನಗರ ಪೊಲೀಸ್ ಹಾಗೂ ಬಿಬಿಎಂಪಿ ವತಿಯಿಂದ ನಡೆದ ಗೌರಿ-ಗಣೇಶ, ಮೊಹರಂ ಹಬ್ಬದ ಶಾಂತಿ ಪಾಲನಾ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

ಗೌರಿ-ಗಣೇಶ ಮತ್ತು ಮೊಹರಂ ಒಂದೇ ಸಮಯಕ್ಕೆ ಆಚರಣೆಯಾಗುತ್ತಿದೆ. ಈ ವೇಳೆ ನಗರದಲ್ಲಿ ಯಾವುದೇ ಆತಂಕದ, ಭಯದ ವಾತಾವರಣ ನಿರ್ಮಾಣವಾಗದಂತೆ ಸಾರ್ವಜನಿಕರು ಎಚ್ಚರವಾಗಿರಬೇಕು. ಕಾನೂನನ್ನು ಗೌರವಿಸಬೇಕು. ಒಂದು ವೇಳೆ ಯಾರಾದರೂ ಕಾನೂನು ಕೈಗೆತ್ತಿಕೊಳ್ಳಲು ಪ್ರಯತ್ನಿಸಿದರೆ ಕಠಿಣ ಶಿಕ್ಷೆ ನೀಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಬಿಬಿಎಂಪಿ ಆಯುಕ್ತ ಬಿ.ಎಚ್ ಅನಿಲ್‌ ಕುಮಾರ್ ಮಾತನಾಡಿ, ಗಣೇಶ ಮೂರ್ತಿಗಳನ್ನು ಸಾರ್ವಜನಿಕ ಸ್ಥಳಗಳಲ್ಲಿಡುವ ಬಗ್ಗೆ ಅನುಮತಿ ಪಡೆಯಬೇಕು. ಮೂರ್ತಿಗಳ ಜವಾಬ್ದಾರಿ ವಹಿಸುವವರು ಸಂಬಂಧಪಟ್ಟ ಠಾಣೆಗಳಿಗೆ ಅಗತ್ಯ ಮಾಹಿತಿ ನೀಡಬೇಕು. ಪಾಲಿಕೆ, ಬೆಸ್ಕಾಂ, ಅಗ್ನಿಶಾಮಕ ಹಾಗೂ ಸಂಚಾರಿ ಪೊಲೀಸ್ ಠಾಣೆಗಳಲ್ಲಿ ಕಡ್ಡಾಯವಾಗಿ ನಿರಾಪೇಕ್ಷಣಾ ಪತ್ರ ಪಡೆಯಬೇಕು. ವಿಸರ್ಜನೆ ವೇಳೆ ಪಾಲಿಕೆ ನಿಗದಿ ಪಡಿಸಿರುವ ಸಮಯವನ್ನು ಪಾಲಿಸಬೇಕು ಹಾಗೂ ಪೂಜಾ ಸಾಮಗ್ರಿ ಹಾಗೂ ಇತರೆ ಕಸವನ್ನು ನೀರಿಗೆ ಹಾಕದೆ, ಪ್ರತ್ಯೇಕ ವಿಲೇವಾರಿ ಮಾಡಲು ಅನುಕೂಲವಾಗುವಂತೆ ಹಾಕಬೇಕು ಎಂದು ಹೇಳಿದರು.

ಸಭೆಯಲ್ಲಿ ಬಿಬಿಎಂಪಿ ಜಂಟಿ ಆಯಕ್ತ ರವೀಂದ್ರ, ನಗರ ಅಪರಾಧ ವಿಭಾಗದ ಪೊಲೀಸ್ ಹೆಚ್ಚುವರಿ ಆಯುಕ್ತ ಸಂದೀಪ್ ಪಾಟೀಲ್, ಬಿಬಿಎಂಪಿ ಅಧಿಕಾರಿಗಳಾದ ಮುರುಗನ್, ಮಾಲಿನ್ಯ ನಿಯಂತ್ರಣ ಮಂಡಳಿಯ ರಾಜಶೇಖರ್, ಅಗ್ನಿಶಾಮಕ ಇಲಾಖೆ, ಅಧಿಕಾರಿಗಳು ಉಪಸ್ಥಿತರಿದ್ದರು.

ಸುಳ್ಳು ವದಂತಿಗಳು ಬೇಡ..!

ಹಬ್ಬದ ಸಂದರ್ಭದಲ್ಲಿ ಕಿಡಿಗೇಡಿಗಳು ಇಲ್ಲ ಸಲ್ಲದ ಸುಳ್ಳು ಸುದ್ದಿಗಳನ್ನು ಜಾಲತಾಣದಲ್ಲಿ ಹರಡುತ್ತಿರುತ್ತಾರೆ. ಇಂತಹ ಸುದ್ದಿಗಳಿಗೆ ಯಾರು ಕಿವಿಗೊಡಬಾರದು.

-ಭಾಸ್ಕರ್ ರಾವ್, ಬೆಂ.ನಗರ ಪೊಲೀಸ್ ಆಯುಕ್ತ.

243 ಕಡೆ ಅವಕಾಶ...

ಗಣೇಶ ಮೂರ್ತಿಗಳ ವಿಸರ್ಜನೆಗೆ 33 ಕಲ್ಯಾಣಿ, 110 ಮೊಬೈಲ್ ಟ್ಯಾಂಕರ್ ಮತ್ತು 100 ಟ್ಯಾಂಕರ್‌ಗಳನ್ನು ಸಿದ್ಧಪಡಿಸಲಾಗಿದೆ. ಆಯಾ ವಾರ್ಡಿಗೆ ಹತ್ತಿರವಾಗುವ ರೀತಿ ಮತ್ತು ಮೆರವಣಿಗೆ ಮಾರ್ಗದ ಅನುಸಾರ ಟ್ಯಾಂಕರ್‌ಗಳನ್ನು ನಿರ್ಮಿಸಲಾಗಿದೆ ಎಂದು ಪಾಲಿಕೆ ಆಯುಕ್ತರು ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News