ಜೋಡಿ ಕೊಲೆ ಆರೋಪಿಗೆ ಗುಂಡೇಟು
ಬೆಂಗಳೂರು, ಸೆ.5: ಜೋಡಿ ಕೊಲೆ ಆರೋಪಿ ಕಾಲಿಗೆ ಇಲ್ಲಿನ ತಲಘಟ್ಟಪುರ ಠಾಣಾ ಪೊಲೀಸರು, ಪಿಸ್ತೂಲಿನಿಂದ ಗುಂಡು ಹಾರಿಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನಗರದ ನಿವಾಸಿ ವಿನೋದ್ ಎಂಬಾತ ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.
ಇಲ್ಲಿನ ನಾಗೇಗೌಡನಪಾಳ್ಯದಲ್ಲಿ ಆರೋಪಿ ವಿನೋದ್ ತಲೆಮರೆಸಿಕೊಂಡಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು, ವಶಕ್ಕೆ ಪಡೆಯಲು ಮುಂದಾದ ವೇಳೆ, ಪೊಲೀಸ್ ಪೇದೆ ಪ್ರದೀಪ್ ಎಂಬುವರ ಮೇಲೆ ಹಲ್ಲೆ ನಡೆಸಲು ಯತ್ನಿಸಿದ್ದಾನೆ. ಈ ವೇಳೆ ಆತ್ಮ ರಕ್ಷಣೆಗಾಗಿ ತಲಘಟ್ಟಪುರ ಠಾಣೆಯ ಎಸ್ಸೈ ನಾಗೇಶ್ ಅವರು ಒಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ, ಶರಣಾಗುವಂತೆ ಸೂಚಿಸಿದ್ದಾರೆ.
ಆದರೂ, ಆರೋಪಿ ಪುನಃ ಹಲ್ಲೆಗೆ ಮುಂದಾಗಿದ್ದಾನೆ. ಹೀಗಾಗಿ, ಎಸ್ಸೈ ಅವರು ವಿನೋದ್ ಕಾಲಿಗೆ ಗುಂಡು ಹಾರಿಸಿದ್ದಾರೆ. ಪರಿಣಾಮ ಬಲಗಾಲಿಗೆ ಗುಂಡು ತಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.
ಇತ್ತೀಚಿಗೆ ಜೆ.ಪಿ.ನಗರದಲ್ಲಿ ನಡೆದ ರೌಡಿ ಮಂಜುನಾಥ್ ಹಾಗೂ ವರುನ್ ಕೊಲೆಯಲ್ಲಿ ಆರೋಪಿ ಭಾಗಿಯಾಗಿದ್ದ ಎನ್ನಲಾಗಿದ್ದು, ಈ ಸಂಬಂಧ ತನಿಖೆ ಮುಂದುವರೆಸಲಾಗಿದೆ.