ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಬೆಂಗಾವಲು ವಾಹನ ಢಿಕ್ಕಿ: ಆರು ವರ್ಷದ ಬಾಲಕ ಮೃತ್ಯು

Update: 2019-09-11 10:14 GMT

ಜೈಪುರ್, ಸೆ.11: ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ರ ಬೆಂಗಾವಲು ಪಡೆಯ ಕಾರು ಬೈಕ್ ಒಂದಕ್ಕೆ ಬುಧವಾರ ಢಿಕ್ಕಿ ಹೊಡೆದ ಪರಿಣಾಮ ಬೈಕಿನಲ್ಲಿದ್ದ ಆರು ವರ್ಷದ ಬಾಲಕ ಮೃತಪಟ್ಟ ಘಟನೆ ನಡೆದಿದೆ ಎಂದು indiatoday.in ವರದಿ ಮಾಡಿದೆ.

ಭಾಗವತ್ ರಾಜಸ್ಥಾನದ ತಿಜಾರದಿಂದ ವಾಪಸ್ ಬರುತ್ತಿದ್ದಾಗ ಹರ್ಸೊಲಿ ಮುಂಡವರ್ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದೆ.

ಅಪಘಾತಕ್ಕೀಡಾದ ಬೈಕ್ ಸ್ಥಳೀಯ ಸರಪಂಚ ಚೇತ್ರಂ ಯಾದವ್ ಅವರದ್ದಾಗಿತ್ತು. ಅಪಘಾತದಲ್ಲಿ ಯಾದವ್ ಅವರಿಗೆ ಗಂಭೀರ ಗಾಯಗಳಾಗಿವೆ. ಮೃತ ಬಾಲಕ ಸಚಿನ್ ಚೇತ್ರಂ ಯಾದವ್ ರ ಮೊಮ್ಮಗನಾಗಿದ್ದಾನೆ.

ಪುಷ್ಕರ್‍ನಲ್ಲಿ ಮೂರು ದಿನಗಳ ಆರೆಸ್ಸೆಸ್ ಸಮನ್ವಯ ಸಭೆಯಲ್ಲಿ ಭಾಗವಹಿಸಲು ಭಾಗವತ್ ರಾಜಸ್ಥಾನಕ್ಕೆ ಆಗಮಿಸಿದ್ದರು. ಸುಮಾರು 200ಕ್ಕೂ ಅಧಿಕ ಆರೆಸ್ಸೆಸ್ ಪ್ರತಿನಿಧಿಗಳು ಲೋಕಸಭಾ ಚುನಾವಣೆ ನಂತರ ಮೊದಲ ಬಾರಿಗೆ ನಡೆದ ಈ ಸಭೆಯಲ್ಲಿ ಭಾಗವಹಿಸಿದ್ದರು.

ಇದೇ ವರ್ಷದ ಮೇ ತಿಂಗಳಲ್ಲಿ ಭಾಗವತ್ ಅವರ ಬೆಂಗಾವಲು ಪಡೆಯ ವಾಹನವೊಂದು ದನಕ್ಕೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು ಯತ್ನಿಸಿದಾಗ ಪಲ್ಟಿಯಾಗಿ ಒಬ್ಬ ಸಿಐಎಸ್‍ಎಫ್ ಅಧಿಕಾರಿ ಗಾಯಗೊಂಡಿದ್ದರು. ಈ ಘಟನೆ ಮಹಾರಾಷ್ಟ್ರದ ಚಂದ್ರಾಪುರ್ ಜಿಲ್ಲೆಯ ವರೋರ ಎಂಬಲ್ಲಿ ನಡೆದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News