ಕರ್ನಾಟಕ ಋಣ ಪರಿಹಾರ ಕಾಯ್ದೆ ಪ್ರಶ್ನಿಸಿ ಅರ್ಜಿ: ಗಿರವಿ ವ್ಯಾಪಾರಿಗಳ ವಿರುದ್ಧ ಕ್ರಮ ಕೈಗೊಳ್ಳದಂತೆ ಹೈಕೋರ್ಟ್ ಆದೇಶ

Update: 2019-09-13 10:50 GMT

ಬೆಂಗಳೂರು, ಸೆ.12: ಹಿಂದಿನ ಸಮ್ಮಿಶ್ರ ಸರಕಾರ ಜಾರಿಗೆ ತಂದಿರುವ ಕರ್ನಾಟಕ ಋಣ ಪರಿಹಾರ ಕಾಯ್ದೆಯನ್ನು ಅಸಾಂವಿಧಾನಿಕ ಎಂದು ಘೋಷಿಸುವಂತೆ ಕೋರಿ ಸಲ್ಲಿಕೆಯಾಗಿರುವ ಅರ್ಜಿಗೆ ಸಂಬಂಧಿಸಿದಂತೆ ಹೈಕೋರ್ಟ್ ಗಿರವಿ ವ್ಯಾಪಾರಿಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಂತೆ ರಾಜ್ಯ ಸರಕಾರಕ್ಕೆ ಮಧ್ಯಂತರ ಆದೇಶ ನೀಡಿದೆ. 

ರಾಜ್ಯ ಜ್ಯುವೆಲ್ಲರಿ ಫೆಡರೇಷನ್‌ನ(ಕೆಎಸ್‌ಜೆಎಫ್) ಪ್ರಧಾನ ಕಾರ್ಯದರ್ಶಿ ಡಾ.ಬಿ.ರಾಮಾಚಾರಿ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಲೋಕ್ ಆರಾಧೆ ಅವರಿದ್ದ ನ್ಯಾಯಪೀಠ, ಈ ಆದೇಶ ನೀಡಿತು.

ಅರ್ಜಿದಾರರ ಆಕ್ಷೇಪವೇನು: ಗಿರವಿ ವ್ಯಾಪಾರಿಗಳಿಗೆ ಹಾಗೂ ಲೇವಾದೇವಿದಾರರಿಗೆ ಸರಕಾರವೇ ಕಾನೂನು ಪ್ರಕಾರ ಪರವಾನಗಿ ನೀಡಿದ್ದು, ತೆರಿಗೆಯನ್ನೂ ಸಂಗ್ರಹಿಸುತ್ತಿದೆ. ವಹಿವಾಟು ನಡೆಸಲು ಹಲವು ನಿಯಮಗಳನ್ನು ರೂಪಿಸಿರುವ ಸರಕಾರ, ವ್ಯವಸ್ಥಿತವಾಗಿ ಕಾನೂನು ಚೌಕಟ್ಟಿನಲ್ಲಿ ವ್ಯವಹರಿಸಲು ಅವಕಾಶ ಕಲ್ಪಿಸಿದೆ. ಹೀಗಿರುವಾಗ ಋಣ ಪರಿಹಾರ ಕಾಯ್ದೆ ಜಾರಿಗೆ ತರುವ ಮೂಲಕ ಗಿರವಿ ವ್ಯಾಪಾರಿಗಳಿಗೆ ನಷ್ಟ ಉಂಟು ಮಾಡುತ್ತಿರುವುದು ಸರಿಯಲ್ಲ. ರೈತರ ಸಾಲ ಮನ್ನಾ ಮಾಡಿದ ಸರಕಾರ, ಬ್ಯಾಂಕ್‌ಗಳಿಗೆ ಹಣ ಮರು ಪಾವತಿಸಿದೆ. ಗಿರವಿ ವ್ಯಾಪಾರಿಗಳು ಮತ್ತು ಲೇವಾದೇವಿದಾರರಿಂದ ಪಡೆದ ಸಾಲ ಮನ್ನಾ ಮಾಡಿರುವ ಸರಕಾರ ಇವರಿಗೆ ಯಾವುದೇ ರೀತಿಯ ಪರಿಹಾರ ನೀಡಿಲ್ಲ ಎಂದು ಅರ್ಜಿದಾರರು ಆಕ್ಷೇಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News