ಸ್ಟಾರ್ಟಪ್‌ಗಳಿಗೆ ಉತ್ತೇಜನ: ಸಿಂಗಾಪುರ ಕಾನ್ಸಲ್ ಜನರಲ್ ಜೊತೆ ಸಿಎಂ ಚರ್ಚೆ

Update: 2019-09-18 16:35 GMT

ಬೆಂಗಳೂರು, ಸೆ.18: ಚೆನ್ನೈನಲ್ಲಿರುವ ಸಿಂಗಾಪುರದ ಕಾನ್ಸಲ್ ಜನರಲ್ ಪಾಂಗ್ ಕಾಕ್ ತಿಯಾನ್ ಅವರು ಬುಧವಾರ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿಯಾಗಿ, ವಿವಿಧ ವಿಷಯಗಳ ಕುರಿತು ಚರ್ಚಿಸಿದರು. ಈ ಸಂದರ್ಭದಲ್ಲಿ ಕರ್ನಾಟಕವು ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ರಾಜ್ಯವಾಗಿದ್ದು, ಹೂಡಿಕೆಗೆ ಸಾಕಷ್ಟು ಅವಕಾಶಗಳಿವೆ. ರಾಜ್ಯದಲ್ಲಿ ಹೂಡಿಕೆದಾರ ಸ್ನೇಹಿ ವಾತಾವರಣವಿದೆ ಎಂದು ಮುಖ್ಯಮಂತ್ರಿಗಳು ವಿವರಿಸಿದರು. 

ಈ ಸಂದರ್ಭದಲ್ಲಿ ಕಾನ್ಸಲ್ ಜನರಲ್ ಅವರು ಐಟಿಪಿಎಲ್‌ನಲ್ಲಿ, ಲಾಜಿಸ್ಟಿಕ್ ವಲಯದಲ್ಲಿ, ಮಾಹಿತಿ ತಂತ್ರಜ್ಞಾನ, ಬೆಂಗಳೂರು ನಗರಾಭಿವೃದ್ಧಿ ಯೋಜನೆಗಳಲ್ಲಿ ಸಿಂಗಾಪುರದ ಕಂಪೆನಿಗಳು ಹೂಡಿಕೆ ಮಾಡಿವೆ. ಪ್ರಸ್ತುತ ಸಿಂಗಾಪುರ ಸರಕಾರವು ಸ್ಟಾರ್ಟಪ್‌ಗಳ ವಿದೇಶಿ ಸಹಯೋಗದ ಉತ್ತೇಜನಕ್ಕಾಗಿ ಜಾರಿಗೊಳಿಸಿರುವ ಗ್ಲೋಬಲ್ ಇನ್ನೊವೇಷನ್ ಅಲಯನ್ಸ್ ಯೋಜನೆಯ ಕುರಿತು ಮಾಹಿತಿ ನೀಡಿದರು.

ಇದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತಾ, ರಾಜ್ಯ ಸರಕಾರವು ಇಂತಹ ಒಂದು ಯೋಜನೆಯನ್ನು ಮಾಹಿತಿ ತಂತ್ರಜ್ಞಾನ ಇಲಾಖೆಯಿಂದ ಜಾರಿಗೊಳಿಸಿದ್ದು, 12 ದೇಶಗಳಲ್ಲಿ ಸಹಯೋಗ, ಪಾಲುದಾರಿಕೆಯ ಅವಕಾಶಗಳನ್ನು ಒದಗಿಸಲಾಗುತ್ತಿದೆ. ಸಿಂಗಾಪುರವೂ ಇದರಲ್ಲಿ ಪಾಲ್ಗೊಳ್ಳಬಹುದಾಗಿದೆ ಎಂದು ತಿಳಿಸಿದರು. ಮುಖ್ಯಮಂತ್ರಿಗಳ ಕಾರ್ಯದರ್ಶಿ ಶಿವಯೋಗಿ ಸಿ. ಕಳಸದ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News