ಮಹಿಳೆ ಕೊಲೆ: ಆರೋಪಿ ಪತಿ ಬಂಧನ
Update: 2019-09-21 14:38 GMT
ಬೆಂಗಳೂರು, ಸೆ.21: ಮಹಿಳೆಯ ಮೇಲೆ ಹಲ್ಲೆ ನಡೆಸಿ, ಕೊಲೆಗೈದಿರುವ ಘಟನೆ ಇಲ್ಲಿನ ಕೆ.ಆರ್.ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಶನಿವಾರ ಈ ಘಟನೆ ನಡೆದಿದ್ದು, ದೊಡ್ಡಬಸವನಪುರದ ಶಶಿಕಲಾ (32) ಕೊಲೆಯಾಗಿದ್ದು, ಈಕೆಯ ಪತಿಯೇ ಕೃತ್ಯವೆಸಗಿರುವ ಶಂಕೆ ಹಿನ್ನೆಲೆ ವೆಂಕಟಗಿರಿ(38) ಎಂಬಾತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗಾರೆ ಮೇಸ್ತ್ರಿಯಾಗಿರುವ ವೆಂಕಟಗಿರಿ, ಕೆ.ಆರ್.ಪುರ ವ್ಯಾಪ್ತಿಯ ದೊಡ್ಡ ಬಸವನಪುರದಲ್ಲಿ 2ನೆ ಪತ್ನಿ ಶಶಿಕಲಾಗೆ ಬಾಡಿಗೆ ಮನೆ ಮಾಡಿಕೊಟ್ಟಿದ್ದನು. ಶುಕ್ರವಾರ ರಾತ್ರಿ ಕೌಟುಂಬಿಕ ವಿಚಾರವಾಗಿ ಜಗಳವಾಡಿ ಆಕೆಯ ಶೀಲ ಶಂಕಿಸಿದ್ದಾನೆ. ಬಳಿಕ, ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ, ಕೊಲೆಗೈದಿದ್ದಾನೆ ಎಂದು ಹೇಳಲಾಗುತ್ತಿದೆ.
ಘಟನೆ ಸಂಬಂಧ ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ಆರೋಪಿ ವೆಂಕಟಗಿರಿಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.