ಶಿವಾಜಿನಗರ ವಿಧಾನಸಭಾ ಕ್ಷೇತ್ರ: ಚುನಾವಣೆಯಲ್ಲಿ ಸ್ಪರ್ಧಿಸಲು ಪಾಲಿಕೆ ಸದಸ್ಯರು ಉತ್ಸುಕ

Update: 2019-09-22 17:33 GMT
ಎ.ಆರ್.ಝಾಕಿರ್

ಬೆಂಗಳೂರು, ಸೆ.22: ಶಾಸಕ ರೋಷನ್ ಬೇಗ್ ಅನರ್ಹತೆಯಿಂದಾಗಿ ತೆರವಾಗಿರುವ ಶಿವಾಜಿನಗರ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಬಿಬಿಎಂಪಿ ಸದಸ್ಯರು ಉತ್ಸುಕರಾಗಿದ್ದಾರೆ.

ಪ್ರಮುಖವಾಗಿ ಫ್ರೇಜರ್‌ಟೌನ್‌ನ ಪಾಲಿಕೆ ಸದಸ್ಯ ಎ.ಆರ್.ಝಾಕಿರ್, ಭಾರತಿನಗರ ವಾರ್ಡ್ ಸದಸ್ಯ ಶಕೀಲ್ ಅಹ್ಮದ್, ಶಿವಾಜಿನಗರ ವಾರ್ಡ್‌ನ ಪಾಲಿಕೆ ಸದಸ್ಯೆಯ ಪತಿ ಇಶ್ತಿಯಾಕ್, ಮಾಜಿ ಪಾಲಿಕೆ ಸದಸ್ಯ ಸಯ್ಯದ್ ಶುಜಾವುದ್ದೀನ್ ಮುಂಚೂಣಿಯಲ್ಲಿದ್ದಾರೆ.

ಶಿವಾಜಿನಗರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ವಿಧಾನಪರಿಷತ್ ಸದಸ್ಯರಾದ ಸಿ.ಎಂ.ಇಬ್ರಾಹೀಂ, ರಿಝ್ವಾನ್ ಅರ್ಶದ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಝೀಝ್ ಪ್ರಯತ್ನಗಳನ್ನು ನಡೆಸುತ್ತಿದ್ದಾರೆ. ಆದರೆ, ಯಾವುದೇ ಕಾರಣಕ್ಕೂ ಹೊರಗಿನವರನ್ನು ಅಭ್ಯರ್ಥಿಯನ್ನಾಗಿ ಮಾಡಬಾರದು ಎಂದು ಪಾಲಿಕೆ ಸದಸ್ಯರು ಕೆಪಿಸಿಸಿಗೆ ಸ್ಪಷ್ಟವಾಗಿ ತಿಳಿಸಿದ್ದಾರೆ.

ಒಂದು ವೇಳೆ ಹೊರಗಿನವರನ್ನು ಅಭ್ಯರ್ಥಿಗಳನ್ನಾಗಿ ಮಾಡಿದರೆ ಕ್ಷೇತ್ರದ ಜನತೆ ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ. ಇದು ಕಾಂಗ್ರೆಸ್ ಪಾಲಿಗೆ ದುಬಾರಿ ಯಾಗಬಹುದು ಎಂಬ ಸಂದೇಶವನ್ನು ಕ್ಷೇತ್ರದ ಮುಖಂಡರು ನಾಯಕರಿಗೆ ಸ್ಪಷ್ಟವಾಗಿ ತಿಳಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ರೋಷನ್ ಬೇಗ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಈ ಕ್ಷೇತ್ರವನ್ನು ನಿರಂತರವಾಗಿ ಪ್ರತಿನಿಧಿಸುತ್ತಿದ್ದರು. ಆದುದರಿಂದ, ನಾವು ಯಾರೂ ಕೂಡ ಕಾಂಗ್ರೆಸ್ ಟಿಕೆಟ್‌ಗಾಗಿ ಬೇಡಿಕೆ ಇಡಲಿಲ್ಲ. ಈಗ ಕಾಂಗ್ರೆಸ್ ಅಭ್ಯರ್ಥಿ ಇಲ್ಲಿ ಇಲ್ಲ. ಆದುದರಿಂದ, ಪಕ್ಷಕ್ಕಾಗಿ ನಾವು ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ನಮಗೆ ಅವಕಾಶ ನೀಡಬೇಕು ಎಂದು ಮುಖಂಡರಿಗೆ ಮನವಿ ಮಾಡಿದ್ದೇವೆ ಎಂದು ಫ್ರೇಜರ್ ಟೌನ್ ವಾರ್ಡ್‌ನ ಪಾಲಿಕೆ ಸದಸ್ಯ ಎ.ಆರ್.ಝಾಕಿರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News