ಮಾರಕಾಸ್ತ್ರಗಳಿಂದ ಕಡಿದು ಹಳೇ ರೌಡಿಯ ಕೊಲೆ
Update: 2019-09-23 17:58 GMT
ಬೆಂಗಳೂರು, ಸೆ.23: ಹಳೇ ರೌಡಿಯನ್ನು ದುಷ್ಕರ್ಮಿಗಳು ಕೊಲೆ ಮಾಡಿರುವ ಘಟನೆ ಯಲಹಂಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕಟ್ಟಿಗೆಹಳ್ಳಿಯ ನಿವಾಸಿ ದಿಲೀಪ್(34) ಕೊಲೆಯಾದ ರೌಡಿ ಎಂದು ಪೊಲೀಸರು ಗುರುತಿಸಿದ್ದಾರೆ.
ಮೃತ ದಿಲೀಪ್, ಆಟೊ ಚಾಲಕನಾಗಿದ್ದು, ಸರಗಳ್ಳತನ ಪ್ರಕರಣಗಳಲ್ಲಿ ಹೆಚ್ಚಾಗಿ ಭಾಗಿಯಾಗಿದ್ದರಿಂದ ಈತನ ವಿರುದ್ಧ ಯಲಹಂಕ ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ತೆರೆಯಲಾಗಿತ್ತು. ಈತ ರೌಡಿ ಚಟುವಟಿಕೆಗಳಿಂದ ದೂರವಿದ್ದು, ಆಟೊ ಚಾಲಕನಾಗಿ ಜೀವನ ನಿರ್ವಹಣೆ ಮಾಡುತ್ತಿದ್ದನು ಎನ್ನಲಾಗಿದೆ.
ರವಿವಾರ ರಾತ್ರಿ ಯಲಹಂಕ ರೈಲ್ವೆ ನಿಲ್ದಾಣದ ಬಳಿ ಆಟೋದಲ್ಲಿ ಬರುತ್ತಿದ್ದಾಗ ದುಷ್ಕರ್ಮಿಗಳು ಆಟೊ ಅಡ್ಡಗಟ್ಟಿ, ಮುಖಕ್ಕೆ ಖಾರದ ಪುಡಿ ಎರಚಿ, ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಈ ಸಂಬಂಧ ಮೊಕದ್ದಮೆ ದಾಖಲಿಸಿಕೊಂಡಿರುವ ಯಲಹಂಕ ಠಾಣಾ ಪೊಲೀಸರು ತನಿಖೆ ಕೈಗೊಂಡಿದ್ದಾರೆ.