ಕತರ್: ಕ್ಯೂಐಎಸ್ಎಫ್ ವತಿಯಿಂದ ‘ಸ್ವಾತಂತ್ರ್ಯದ ಕಾವಲುಗಾರರಾಗಿ’ ಜನಜಾಗೃತಿ ಸಭೆ

Update: 2019-09-25 19:00 GMT

ಕತರ್: ಕತಾರ್ ಇಂಡಿಯನ್ ಸೋಷಿಯಲ್ ಫೋರಂ (ಕ್ಯೂಐಎಸ್ಎಫ್) ಆಯೋಜಿಸಿದ್ದ ಕಾರ್ನರ್ ಮೀಟ್ ಹಾಗೂ ಸಾರ್ವಜನಿಕ ಕಾರ್ಯಕ್ರಮವು ಇತ್ತೀಚೆಗೆ ಕತಾರ್ ನ ಮದೀನಾ ಖಲೀಫಾ, ಅಲ್ ಸದ್ದ್ ಮತ್ತು ಇಂಡಸ್ಟ್ರಿಯಲ್ ಏರಿಯಾದಲ್ಲಿ ನಡೆಯಿತು.

ಮದೀನತ್ ಖಲೀಫಾ ದಲ್ಲಿ ನಡೆದ ಕಾರ್ನರ್ ಮೀಟ್, ನಿಯಾಜ಼್ ತೋಡಾರ್ ರವರ ಸ್ವಾಗತ ಭಾಷಣದೊಂದಿಗೆ ಪ್ರಾರಂಭವಾಯಿತು. ಮುಖ್ಯ ಭಾಷಣಕಾರರಾಗಿ ಮಾತನಾಡಿದ ಶಾಕಿರ್ ಪುಂಜಾಲಕಟ್ಟೆ, ಬಿಜೆಪಿ ಸರ್ಕಾರದ ಜನವಿರೋಧಿ‌ ಅಧಿಕಾರದ ಭಾಗವಾಗಿ, ದೇಶಾದ್ಯಂತ  ದಲಿತರ ಮತ್ತು ಅಲ್ಪಸಂಖ್ಯಾಂತರ ಮೇಲೆ ನಡೆಯುತ್ತಿರುವ ನಿರಂತರ ಹಲ್ಲೆ ಹಾಗೂ ಕರಾಳ ಕಾನೂನಿನ ವಿರುದ್ಧ, ಜಾತ್ಯತೀತ ಮನೋಭಾವನೆ ಹೊಂದಿದ ಎಲ್ಲರೂ ಒಂದಾಗಿ ಹೋರಾಟದ ರಂಗಕ್ಕೆ ಇಳಿಯಬೇಕೆಂದು ಕರೆ ನೀಡಿದರು. 

ನಿಯಾಝ್ ತೋಡಾರ್ ಧನ್ಯವಾದಗೈದರು.

ಅಲ್ ಸದ್ದ್ ನಲ್ಲಿ ನಡೆದ ಕಾರ್ನರ್ ಮೀಟ್ ನಲ್ಲಿ, ಸಭೆಯನ್ನುದ್ದೇಶಿಸಿ ಮಾತನಾಡಿದ ಜಲೀಲ್ ಕಲ್ಲಡ್ಕ, ಪ್ರಸಕ್ತ ಸನ್ನಿವೇಶದಲ್ಲಿ ಜಾರಿಗೊಳಿಸಿರುವ ಎನ್ ಆರ್ ಸಿ, ಮುಸ್ಲಿಮರನ್ನು ದೇಶದಿಂದ ಹೊರದಬ್ಬುವ ಪ್ರಯತ್ನದ ಭಾಗವಾಗಿದೆ. ಮಾತ್ರವಲ್ಲ ಉಎಪಿಎಯಂತಹ ಕರಾಳ ಕಾನೂನು, ತ್ರಿವಳಿ ತಲಾಖ್ ಬಿಲ್ ಬಗ್ಗೆ ಜಾಗೃತರಾಗಬೇಕೆಂದು ಎಚ್ಚರಿಸಿದರು. 

ಸರ್ಕಾರದ ಕೋಮುವಾದ ಮತ್ತು ಜಾತಿ ರಾಜಕೀಯದಿಂದ, ದೇಶದ ಸಂವಿಧಾನವು ಅಪಾಯದ ಅಂಚಿನಲ್ಲಿದೆ. ಸಂವಿಧಾನವನ್ನು ಉಳಿಸಿಕೊಳ್ಳಲು, ಹೋರಾಟದ ಅಗತ್ಯವಿದೆ ಎಂದು ತಿಳಿಸಿದರು.

ಇಮ್ರಾನ್ ದೇರಳಕಟ್ಟೆ ಸ್ವಾಗತ ಭಾಷಣ ಮಾಡಿದರು. ಇರ್ಷಾದ್ ಕುಳಾಯಿ ಧನ್ಯವಾದಗೈದರು.

ಇದೇ ಅಭಿಯಾನದ ಅಂಗವಾಗಿ ಕತಾರ್ ನ‌ ಇಂಡಸ್ಟ್ರಿಯಲ್ ಏರಿಯಾದಲ್ಲಿ ಆಯೋಜಿಸಿದ್ದ ಸಾರ್ವಜನಿಕ ಕಾರ್ಯಕ್ರಮವು, ನಯೀಮ್ ಬೆಳಪು ರವರ ಅಧ್ಯಕ್ಷತೆಯಲ್ಲಿ, ಸಾಜಿದ್ ರವರ ಸ್ವಾಗತ ಭಾಷಣದೊಂದಿಗೆ ಆರಂಭವಾಯಿತು.

ಉದ್ಘಾಟನಾ ಭಾಷಣ ಮಾಡಿದ, ಕ್ಯೂಐಎಸ್ಎಫ್ ಕೇಂದ್ರ ಕಾರ್ಯಕಾರಿ ಸಮಿತಿಯ ಸದಸ್ಯರಾದ ಲತೀಫ್ ಮಡಕೇರಿ, ಕ್ಯೂಐಎಸ್ಎಫ್ ನ ಕಾರ್ಯವೈಖರಿಯ ಬಗ್ಗೆ ಪರಿಚಯಿಸುತ್ತ, ಯಾವುದೇ ಜಾತಿ, ಮತ, ಬೇಧಭಾವಗಳಿಲ್ಲದೇ, ಅನಿವಾಸಿ ಭಾರತೀಯರು ತೊಂದರೆಗೊಳಗಾದಾಗ ಅವರೊಡನೆ ವಿಚಾರ ವಿನಿಮಯ ಮಾಡಿ, ಅವರ ತೊಂದರೆಗಳನ್ನು ನಿವಾರಿಸುವಲ್ಲಿ ಕ್ಯೂಐಎಸ್ಎಫ್ ಮುಂಚೂಣಿಯಲ್ಲಿದೆ. ಕಾನೂನುಭದ್ದವಾಗಿ, ಯಾವುದೇ ತೊಂದರೆ ಇದ್ದಲ್ಲಿ, ಯಾರು ಬೇಕಾದರೂ ಕ್ಯೂಐಎಸ್ಎಫ್ ನೆರವನ್ನು ಪಡೆಯಬಹುದು ಎಂದು ತಿಳಿಸಿದರು.

ಮುಖ್ಯ ಭಾಷಣಕಾರರಾಗಿ ಮಾತನಾಡಿದ ಕ್ಯೂಐಎಸ್ಎಫ್ ಕರ್ನಾಟಕ ರಾಜ್ಯದ ಕಾರ್ಯದರ್ಶಿಗಳಾದ ಫಸೀಉದ್ದೀನ್ , ಭಾರತದ ದೇಶದ ಆರ್ಥಿಕ ವ್ಯವಸ್ಥೆಯು ಕುಸಿಯುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದರು.

ಬಿಜೆಪಿ ಸರ್ಕಾರವು ಅಧಿಕಾರದ ಚುಕ್ಕಾಣಿ ಹಿಡಿದ ದಿನದಿಂದ, ಅಲ್ಲಸಂಖ್ಯಾಂತರ ಮೇಲೆ ನಿರಂತರ ದಾಳಿ ನಡೆಯುತ್ತಿರುವುದು ಅಲ್ಪ ಸಂಖ್ಯಾಂತರನ್ನು ಭಯಭೀತ ರನ್ನಾಗಿಸುವ ಹುನ್ನಾರವಾಗಿದೆ. ಗೋಹತ್ಯೆ ವಿಚಾರ ಹಾಗೂ ಕಳ್ಳತನದ ಆರೋಪದಲ್ಲಿ ಮುಸ್ಲಿಮರ ಮೇಲೆ ಹಲ್ಲೆ, ಕರಾಳ ಕಾನೂನಿನನಡಿಯಲ್ಲಿ ಬಂಧಿಸಿ ವರ್ಷಗಟ್ಟಲೇ ಜೈಲಿನಲ್ಲಿ ಕೊಳೆಯುವಂತೆ ಮಾಡುವುದು ಸಹ ಕೋಮುವಾದಿ ಸರ್ಕಾರದ ಷಡ್ಯಂತ್ರದ ಒಂದು ಭಾಗವಾಗಿದೆ. ಇಂತಹ ಪರಿಸ್ಥಿತಿಯನ್ನು ಎಲ್ಲರೂ ಎದೆಗುಂದದೇ ಎದುರಿಸಬೇಕೆಂದು ಕರೆ ನೀಡಿದರು.

ಕ್ಯೂಐಎಸ್ಎಫ್ ಕರ್ನಾಟಕ ರಾಜ್ಯಾಧ್ಯಕ್ಷ ರಾದ ನಝೀರ್ ಪಾಷಮಾತನಾಡಿ, ಭಾರತಕ್ಕೆ ಮುಸ್ಲಿಮರು ನೀಡಿದ ಕೊಡುಗೆಗಳು, ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮುಸ್ಲಿಮರ ಪಾತ್ರ, ಜಾತ್ಯಾತೀತ ಹಾಗೂ ಕೋಮುವಾದಿ ಪಕ್ಷಗಳ ಆಳ್ವಿಕೆಯಲ್ಲಿ ದಲಿತರ, ಮುಸ್ಲಿಮರ, ದಮನಿತ ವರ್ಗಗಳ ಹಾಗೂ ಆದಿವಾಸಿಗಳ ಕಡೆಗಣನೆ, ಫ್ಯಾಸಿಸ್ಟರ ಕುತಂತ್ರಗಳಿಗೆ ಬಲಿ ಪಶುಗಳಾಗುತ್ತಿರುವ ಸಾಮಾನ್ಯ ನಾಗರಿಕರು, ಪಠ್ಯಪುಸ್ತಕಗಳ ಕೆಸರೀಕರಣ, ಸಾಹಿತ್ಯದ ಪುಟಗಳ ತಿರುಚುವಿಕೆ ಇನ್ನೂ ಮುಂತಾದ ವಿಷಯಗಳ ಬಗ್ಗೆ ಸಾರ್ವಜನಿಕರಿಗೆ ಮನವರಿಕೆ ಮಾಡಿಸಿ, ಭಾರತದ ಸ್ವಾತಂತ್ರವನ್ನು ಮತ್ತು ಸಂವಿಧಾನವನ್ನು ಕಾಪಾಡಿಕೊಳ್ಳಬೇಕಾದ ಅಗತ್ಯತೆ ಇಂದಿನ ಕಾಲದ ಬೇಡಿಕೆಯಾಗಿದೆ. ಇದಕ್ಕಾಗಿ ಒಂದು ಪರ್ಯಾಯ ರಾಜಕೀಯ ಪಕ್ಷದ ಅವಶ್ಯಕತೆ ಅನಿವಾರ್ಯ ಎಂದು ಹೇಳಿದರು. 

ಅಮಾನುಲ್ಲ ಶೇಖ್ ಧನ್ಯವಾದಗೈದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News