ಬಲಾಢ್ಯ ರಾಜಕೀಯ ಶಕ್ತಿಯಾಗಬೇಕಿದೆ ಕನ್ನಡ ಭಾಷಿಕ ಸಮುದಾಯ

Update: 2019-10-02 18:25 GMT

ಬೃಹತ್ ಬೆಂಗಳೂರು ಮಹಾನಗರಪಾಲಿಕೆಯ ಮೇಯರ್ ಸ್ಥಾನ ಕನ್ನಡೇತರರ ಪಾಲಾಗಿರುವ ಹಿನ್ನೆಲೆಯಲ್ಲಿ ‘ಕನ್ನಡಿಗ’ರೆಂದರೆ ಯಾರು? ಕನ್ನಡಿಗ ಎಂದು ಹೇಳಲು ಇರುವ ಮಾನದಂಡವೇನು ಎಂಬುದರ ಬಗ್ಗೆ ಬಿಸಿಬಿಸಿ ಚರ್ಚೆಗಳು ನಡೆಯುತ್ತಿರುವ ಈ ಸನ್ನಿವೇಶದಲ್ಲಿಯೇ ಕನ್ನಡ ಭಾಷಿಕ ಜನಾಂಗ ತನ್ನನ್ನು ತಾನು ಆಳಿಕೊಳ್ಳಲು ಸಶಕ್ತವಾಗಿದೆಯೇ ಮತ್ತು ಅದಕ್ಕೆ ಬೇಕಾಗಿರುವುದು ಏನು ಎಂಬುದರ ಬಗ್ಗೆ ಒಂದಿಷ್ಟು ಚಿಂತನೆ ಮಾಡಬೇಕಾದ ಅನಿವಾರ್ಯ ಬಂದೊದಗಿದೆ.

   ನಿಜವಾದ ಅರ್ಥದಲ್ಲಿ ಇವತ್ತು ಕನ್ನಡ ಚಳವಳಿಗಳು ಸಂಪೂರ್ಣವಾಗಿ ಸ್ಥಗಿತಗೊಂಡಂತೆ ಕಾಣುತ್ತಿವೆ. ಇಂತಹ ಚಳವಳಿಗಳ ಆತ್ಮವಾಗಿರಬೇಕಾಗಿದ್ದ ಅಕ್ಷರಸ್ಥ ಮಧ್ಯಮವರ್ಗ ಸ್ವತ: ಜಡಗೊಂಡಿರುವ ಈ ಸನ್ನಿವೇಶದಲ್ಲಿ ನಮ್ಮ ಕನ್ನಡ ಚಳವಳಿ ಸಹ ನಿಸ್ತೇಜಗೊಂಡಂತೆ ನಮಗೆ ಭಾಸವಾಗು ತ್ತಿದ್ದರೆ ಅಚ್ಚರಿಯೇನಲ್ಲ. ಇಂತಹ ನಿರಾಶಾದಾಯಕ ಸನ್ನಿವೇಶದಲ್ಲಿಯೂ ಕನ್ನಡ ಚಳವಳಿಯ ಕುರಿತು ಒಂದಿಷ್ಟು ಆಶಾಭಾವನೆ ಒಡಮೂಡಿದ್ದು ಕಳಸಾಬಂಡೂರಿ ಮತ್ತು ಕಾವೇರಿ ನದಿ ನೀರಿನ ಹಂಚಿಕೆಯ ವಿವಾದಗಳ ಬಗ್ಗೆ ನಡೆದ ಹೋರಾಟದ ಕ್ಷಣದಲ್ಲಿ ಮಾತ್ರ.

 ಹಾಗೆ ನೋಡಿದರೆ ನಾವು ಕನ್ನಡ ಚಳವಳಿಯ ಒಟ್ಟು ಅರ್ಥವನ್ನೇ ಸಂಕುಚಿತಗೊಳಿಸಿ ನೋಡುವ ವಿಷಯದಲ್ಲಿಯೇ ಎಡವಿದ್ದೇವೆ. ಯಾಕೆಂದರೆ ಕನ್ನಡ ಚಳವಳಿ ಎಂದರೆ ಅದು ಕೇವಲ ಕನ್ನಡ ಭಾಷೆಗೆ ಸೀಮಿತವಲ್ಲ. ಬದಲಿಗೆ ಕರ್ನಾಟಕದ ನೆಲ, ಜಲ, ಭಾಷೆ, ನೈಸರ್ಗಿಕ ಸಂಪನ್ಮೂಲಗಳೂ ಸೇರಿದಂತೆ ಒಟ್ಟು ಕನ್ನಡ ನಾಡಿನ ಚಳವಳಿಯೇ ನಿಜವಾದ ಕನ್ನಡ ಚಳವಳಿ! ಆದರೆ ಇದುವರೆಗೂ ನಡೆದ ಕನ್ನಡ ಚಳವಳಿಗಳು ಕೇವಲ ಭಾಷಿಕ ಚಳವಳಿಗಳಾಗಿ: ಆಡಳಿತ ಭಾಷೆ ಕನ್ನಡವಾಗಬೇಕು, ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ನೀಡಬೇಕು, ನಾಮಫಲಕಗಳು ಕನ್ನಡದಲ್ಲಿ ಇರಬೇಕೆಂಬ ಬೇಡಿಕೆಗಳಿಗೆ ಮಾತ್ರ ಸೀಮಿತವಾಗಿ ನಡೆಯುತ್ತ ಬಂದಿವೆ. ಇಂತಹ ಏಕಮುಖ ಚಳವಳಿಯ ಅಪಾಯವೆಂದರೆ ಕನ್ನಡ ಚಳವಳಿ ಏಕಾಏಕಿಯಾಗಿ ಉಳಿದುಬಿಡುವುದು ಮತ್ತು ಕನ್ನಡದ ನೆಲ, ಜಲ, ಸಂಪನ್ಮೂಲಗಳ ವಿಷಯ ತನಗೆ ಸಂಬಂಧಿಸಿದ್ದಲ್ಲವೆಂಬ ಅಭಿಪ್ರಾಯ ಬೆಳೆಸಿಕೊಂಡು ಬಿಡುವುದಾಗಿದೆ. ಹೀಗಾದಾಗ ಇಡೀ ಕನ್ನಡ ಚಳವಳಿ ಕೇವಲ ಭಾಷಾ ದುರಭಿಮಾನದ ಸಂಕೇತವಾಗಿ ಮಾತ್ರ ಉಳಿದು ಬಿಡುವ ಅಪಾಯವಿದೆ.

ಅದರಲ್ಲೂ ಇವತ್ತಿನ ಜಾಗತೀಕರಣ ನಮ್ಮ ಸ್ಥಳೀಯ ಸಂಪನ್ಮೂಲಗಳನ್ನು ರಾಕ್ಷಸ ರೀತಿಯಲ್ಲಿ ನುಂಗುತ್ತ, ನಮ್ಮಿಳಗೆ ಕೊಳ್ಳುಬಾಕತನವನ್ನು ಸೃಷ್ಟಿಸಿ, ನಮ್ಮ ಪ್ರಾದೇಶಿಕ ಭಾಷೆ, ಸಂಸ್ಕೃತಿ, ಜನಪದ ಪರಂಪರೆಗಳನ್ನೆಲ್ಲ ನಾಶ ಮಾಡುತ್ತ ಹೋಗುತ್ತಿರುವ ಈ ದಿನಗಳಲ್ಲಿ ಕನ್ನಡ ಚಳವಳಿ ತನ್ನ ಮಿತಿಯನ್ನು ಮೀರಿ ಬೆಳೆಯಬೇಕಿದೆ. ರಾಷ್ಟ್ರೀಯ ಮತ್ತು ಅಂತರ್‌ರಾಷ್ಟ್ರೀಯ ಖಾಸಗಿ ಬಂಡವಾಳಶಾಹಿ ಶಕ್ತಿಗಳು ದೈತ್ಯಾಕಾರವಾಗಿ ಬೆಳೆಯುತ್ತ ನಮ್ಮ ಬಹುಮುಖಿ ಸಂಸ್ಕೃತಿಯನ್ನು ಏಕರೂಪಿ ಸಂಸ್ಕೃತಿಯಾಗಿ ಬದಲಾಯಿಸಹೊರಟಿರುವ ಸಂಕೀರ್ಣ ಸನ್ನಿವೇಶದಲ್ಲಿ ಕನ್ನಡ ಚಳವಳಿ ಎನ್ನುವುದು ಏಕಾಂಗಿಯಾಗಿ ನಿಲ್ಲದೆ ಉಳಿದೆಲ್ಲ ಚಳವಳಿಗಳ ಜೊತೆ ಬೆರೆತು ಹೋರಾಡಿದರೆ ಮಾತ್ರ ಕನ್ನಡ ಚಳವಳಿ ಕನ್ನಡ ಭಾಷಿಕ ಸಮುದಾಯದ ಚಳವಳಿಯಾಗಿ ಗುರುತಿಸಿ ಕೊಳ್ಳಬಹುದು. ಅದು ನಮ್ಮ ನೆಲಜಲಗಳನ್ನು ಸಂರಕ್ಷಿಸಿಕೊಳ್ಳುವ ವಿಚಾರವಿರಲಿ, ರೈತರ ಹಿತಾಸಕ್ತಿಯನ್ನು ಕಾಪಾಡಿಕೊಳ್ಳುವುದಿರಲಿ, ದಲಿತ ಮತ್ತಿತರ ಹಿಂದುಳಿದ ಜಾತಿಗಳ ಹಕ್ಕುಗಳನ್ನು ಕಾಪಾಡುವುದಿರಲಿ, ಶಿಕ್ಷಣದಲ್ಲಿ ಕನ್ನಡವೇ ಪ್ರಧಾನ ಭಾಷೆಯಾಗುವ ವಿಚಾರವಿರಲಿ, ಕನ್ನಡಿಗರಿಗೆ ಉದ್ಯೋಗದಲ್ಲಿ ಆದ್ಯತೆ ನೀಡುವ ವಿಚಾರವೇ ಆಗಿರಲಿ, ಇವೆಲ್ಲವೂ ಕನ್ನಡದ ಚಳವಳಿ ಎಂಬ ಭಾವನೆ ಮೂಡಿದಾಗ ಮಾತ್ರ ಅಂತಹ ಚಳವಳಿಗೆ ನಿಜವಾದ ಬಲ ಬರುತ್ತದೆ. ಕರ್ನಾಟಕದ ಮಟ್ಟಿಗೆ ಕನ್ನಡವೆಂದರೆ ಕೇವಲ ಭಾಷೆ ಮಾತ್ರವಲ್ಲ ಎಂಬುದನ್ನು ನಾವುಗಳು ಅರ್ಥಮಾಡಿಕೊಳ್ಳಬೇಕಿದೆ.

ಕರ್ನಾಟಕದ ಎಲ್ಲ ಸಮಸ್ಯೆಗಳು ಕನ್ನಡದ ಸಮಸ್ಯೆಗಳೇ ಎಂಬ ಆರೋಗ್ಯಕಾರಿ ಮನೋಭಾವ ರೂಪುಗೊಂಡಾಗ ಮಾತ್ರ ನಾವು ಒಳಗಿನ ಮತ್ತು ಹೊರಗಿನ ಅನ್ಯ ಸಂಸ್ಕೃತಿಗಳ ಎದುರು ಹೋರಾಡಬಲ್ಲಂತಹ ಕಸುವು ಪಡೆಯಬಹುದಾಗಿದೆ. ಇಂತಹದೊಂದು ಚಳವಳಿಯನ್ನು ರೂಪಿಸಲು ನಮಗೆ ಸಾಧ್ಯವಾದಾಗ ಮಾತ್ರ ಕರ್ನಾಟಕ ತನ್ನ ಹಕ್ಕುಗಳಿಗಾಗಿ ಇನ್ನೊಬ್ಬರ ಮುಂದೆ ಕೈಚಾಚಿ ನಿಲ್ಲ ಬೇಕಾದ ಪರಿಸ್ಥಿತಿ ಬರುವುದಿಲ್ಲ. ಇಂತಹ ಕನ್ನಡ ಚಳವಳಿಯಿಂದ ಮಾತ್ರ ಕನ್ನಡ ಭಾಷಿಕ ಸಮುದಾಯ ಸಶಕ್ತವಾಗಬಹುದು. ಕನ್ನಡ ಭಾಷಿಕ ಸಮುದಾಯ ಸಶಕ್ತವಾಗುವುದು ಎಂದರೆ ನಾವು ರಾಜಕೀಯವಾಗಿ ಬಲಿಷ್ಠವಾಗುವುದು ಎಂದರ್ಥ!

ಹೌದು ಇವತ್ತು ಎರಡು ಕಡೆಯಿಂದ ನಾವು ದುರ್ಬಲರಾಗುತ್ತ ಹೋಗುತ್ತಿದ್ದೇವೆ. ಮೊದಲನೆಯದಾಗಿ ಕಳೆದ ಏಳು ದಶಕಗಳಿಂದ ಸರದಿಯಂತೆ ನಮ್ಮನ್ನು ಆಳುತ್ತ ಬರುತ್ತಿರುವ ರಾಷ್ಟ್ರೀಯ ಪಕ್ಷಗಳು ಭಾಷೆ, ನೆಲ, ಜಲಗಳ ವಿಷಯಗಳಲ್ಲಿ ನಮ್ಮ ಹಿತಾಸಕ್ತಿಯನ್ನು ಕಡೆಗಣಿಸುತ್ತ ರಾಜಕೀಯವಾಗಿ ಬಲಿಷ್ಠವಾಗಿರುವ ಇತರ ರಾಜ್ಯಗಳ ಹಿತಾಸಕ್ತಿಯನ್ನು ಕಾಯುತ್ತ ಬರುತ್ತಿವೆ.

ಇನ್ನು ಎರಡನೆಯದಾಗಿ, ತೊಂಬತ್ತರ ದಶಕದ ನಂತರ ನಾವು ಒಪ್ಪಿಕೊಂಡ ಮುಕ್ತ ಆರ್ಥಿಕ ನೀತಿವಿಶ್ವದ ಎಲ್ಲ ಬಗೆಯ ಬಂಡವಾಳಶಾಹಿ ಕಂಪೆನಿಗಳನ್ನು ತಂದು ನಮ್ಮ ನೆಲದಲ್ಲಿ ಬೀಡುಬಿಡಿಸಿದೆ. ಆ ಬಂಡವಾಳಶಾಹಿ ಶಕ್ತಿಗಳಿಗೆ ಪ್ರಾದೇಶಿಕ ಭಾಷೆ ಸಂಸ್ಕೃತಿಯನ್ನು ಕಾಪಾಡಬೇಕೆನ್ನುವ ಯಾವ ಜರೂರತ್ತೂ ಇರುವುದಿಲ್ಲ. ಜೊತೆಗೆ ಯಾವ ಹಿಂಜರಿಕೆಯೂ ಇಲ್ಲದೆ ನಮ್ಮ ನೆಲಜಲವನ್ನು ಅವ್ಯಾಹತವಾಗಿ ಬಳಸಿಕೊಳ್ಳುತ್ತ ಹೋಗುತ್ತವೆ. ಇನ್ನು ಶಿಕ್ಷಣ ಮಾಧ್ಯಮದಲ್ಲಿ ಮಾತೃಭಾಷೆ, ಸ್ಥಳೀಯರಿಗೆ ಉದ್ಯೋಗವೆಂಬುದೆಲ್ಲ ಅವುಗಳ ಪದಕೋಶದಲ್ಲಿ ಇರದ ಶಬ್ದಗಳು. ಹೀಗೆ ಎರಡೂ ಕಡೆಯಿಂದಲೂ ನಾವು ಶೋಷಿತರಾಗುತ್ತ ಹೋಗುತ್ತೇವೆ.

 ಇದನ್ನು ತಪ್ಪಿಸಲು ಮತ್ತು ನಮ್ಮ ನೆಲ, ಜಲ, ಭಾಷೆ, ಸಂಸ್ಕೃತಿಗಳನ್ನು ಉಳಿಸಿಕೊಳ್ಳಲು ನಮಗಿರುವ ಏಕೈಕ ಮಾರ್ಗ ಕನ್ನಡ ಚಳವಳಿ ಮತ್ತು ತನ್ಮೂಲಕ ಕನ್ನಡ ಭಾಷಿಕ ಸಮುದಾಯವನ್ನು ರಾಜಕೀಯವಾಗಿ ಬಲಿಷ್ಠವಾಗಿಸುತ್ತ ಹೋಗುವುದು. ನಮ್ಮದೇ ಬಲಾಢ್ಯ ಪ್ರಭುತ್ವ ಮಾತ್ರ ನಮ್ಮದನ್ನೆಲ್ಲ ಕಾಪಾಡಬಹುದಾಗಿದೆ. ಕನ್ನಡವನ್ನು ಒಂದು ಪ್ರಬಲ ರಾಜಕೀಯ ಶಕ್ತಿಯಾಗಿ ಪರಿವರ್ತಿಸಲು ಇರುವ ಏಕೈಕ ಮಾರ್ಗವೆಂದರೆ ನಮ್ಮ ಕನ್ನಡ ಚಳವಳಿಯನ್ನು ಬಲಗೊಳಿಸುತ್ತ ಹೋಗುವುದು. ಈಗಿರುವ ಹಲವು ಚಳವಳಿಗಳ( ರೈತ, ದಲಿತ, ಕಾರ್ಮಿಕ ಇತ್ಯಾದಿ)ನ್ನು ಕನ್ನಡದ ಹೆಸರಲ್ಲಿ ಒಟ್ಟಿಗೆ ಕರೆದೊಯ್ಯಬೇಕಾದ ಅನಿವಾರ್ಯ ನಮಗಿದೆ. ಇನ್ನು ಕನ್ನಡ ಭಾಷಿಕ ಸಮುದಾಯವೊಂದು ಬಲಾಢ್ಯ ರಾಜಕೀಯ ಶಕ್ತಿಯಾಗಲು ಈ ಚಳವಳಿಗಳ ಒಳಗಿಂದಲೇ ಒಡಮೂಡಿಬರುವ ಒಂದು ಪ್ರಾದೇಶಿಕ ರಾಜಕೀಯ ಪಕ್ಷವೊಂದರ ಅಗತ್ಯವಿದೆ. ಇದು ನಂತರದಲ್ಲಿ ಯೋಚಿಸಬೇಕಾದ ವಿಚಾರವಾಗಿದೆ. ಸದ್ಯಕ್ಕೆ ಕನ್ನಡ ಭಾಷಿಕ ಸಮುದಾಯವನ್ನು ರಾಜಕೀಯವಾಗಿ ಬಲಾಢ್ಯಗೊಳಿಸುವತ್ತ ಮಾತ್ರ ನೋಡಬೇಕಾಗಿದೆ. ಈ ದಿಸೆಯಲ್ಲಿ ನಮ್ಮ ಎಲ್ಲ ಚಳವಳಿಗಳೂ ಕನ್ನಡ ಚಳವಳಿಯ ವಿಶಾಲವೇದಿಕೆಯ ಅಡಿಯಲ್ಲಿ ಬರಬೇಕಿದೆ.

Similar News