ದಿಲ್ಲಿಯಲ್ಲಿ ಉಗ್ರರ ಇರುವಿಕೆ ಬಗ್ಗೆ ಗುಪ್ತಚರ ಮಾಹಿತಿ: ಉತ್ತರ ಭಾರತದ ವಿಮಾನ ನಿಲ್ದಾಣಗಳಲ್ಲಿ ಹೈ ಅಲರ್ಟ್
ಹೊಸದಿಲ್ಲಿ : ಜೈಶ್-ಎ-ಮುಹಮ್ಮದ್ ಸಂಘಟನೆಯ ನಾಲ್ಕು ಮಂದಿ ಉಗ್ರರು ರಾಜಧಾನಿ ದಿಲ್ಲಿ ಪ್ರವೇಶಿಸಿದ್ದು ಹಬ್ಬದ ಋತುವಿನಲ್ಲಿ ದಾಳಿ ನಡೆಸಲು ಯೋಜನೆ ಹಾಕಿದ್ದಾರೆಂಬ ಗುಪ್ತಚರ ಮಾಹಿತಿ ಹಿನ್ನೆಲೆಯಲ್ಲಿ ಉತ್ತರ ಭಾರತದಾದ್ಯಂತದ ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ ಹಾಗೂ ಕಟ್ಟೆಚ್ಚರಿಕೆ ವಹಿಸಲಾಗಿದೆ.
ನಾಲ್ಕು ಮಂದಿ ಉಗ್ರರು ರಾಜಧಾನಿಗೆ ನುಸುಳಿದ್ದಾರೆಂಬ ಮಾಹಿತಿ ದಿಲ್ಲಿ ಪೊಲೀಸರ ವಿಶೇಷ ಸೆಲ್ ಗೆ ಬುಧವಾರ ಸಂಜೆ ದೊರೆತಿದೆಯೆನ್ನಲಾಗಿದೆ. ನಾಲ್ಕು ಮಂದಿಯೂ ಅಪಾರ ಶಸ್ತ್ರಾಸ್ತ್ರ ಹೊಂದಿದ್ದಾರೆಂಬ ಮಾಹಿತಿ ಕೂಡ ಲಭಿಸಿದ್ದು ತಕ್ಷಣ ರಾಜಧಾನಿಯಾದ್ಯಂತ ಶೋಧ ಕಾರ್ಯಾಚರಣೆ ನಡೆಸಲಾಗಿದೆ. ಮುಖ್ಯವಾಗಿ ಜನಜಂಗುಳಿಯಿರುವ ಪ್ರದೇಶಗಳಲ್ಲಿ ತಪಾಸಣೆ ತೀವ್ರಗೊಳಿಸಲಾಗಿದೆ.
ಈ ವಿಚಾರ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ನಿವಾಸದಲ್ಲಿ ಇಂದು ಬೆಳಿಗ್ಗೆ ನಡೆದ ಸಭೆಯಲ್ಲೂ ಚರ್ಚೆ ನಡೆಸಲಾಗಿದೆ.
"ನಾವು ಕಟ್ಟೆಚ್ಚರಿಕೆಯಿಂದಿದ್ದೇವೆ, ಎಲ್ಲಾ ಉಗ್ರ ನಿಗ್ರಹ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಭಯ ಪಡಲು ಏನೂ ಇಲ್ಲ,'' ಎಂದು ಕೇಂದ್ರ ದಿಲ್ಲಿ ಡಿಸಿಪಿ ಎಂ ಎಸ್ ರಂಧವ ಹೇಳಿದ್ದಾರೆ.