ನೆರೆ ಪರಿಹಾರ ನಿರ್ವಹಣೆಯಲ್ಲಿ ಬಿಜೆಪಿ ಸರಕಾರ ಸಂಪೂರ್ಣ ವಿಫಲ: ಸಿ.ಎಂ.ಇಬ್ರಾಹಿಮ್
ಬೆಂಗಳೂರು, ಅ.5: ರಾಜ್ಯದ ಇತಿಹಾಸದಲ್ಲಿ ಅತಿವೃಷ್ಟಿ, ಅನಾವೃಷ್ಟಿ, ಬರಗಾಲ ಏಕಕಾಲದಲ್ಲಿ ಎಂದೂ ಸಂಭವಿಸಿರಲಿಲ್ಲ. 70 ವರ್ಷದ ಇತಿಹಾಸದಲ್ಲಿ ಇಲ್ಲಿಂದ ಆರಿಸಿ ಹೋದ ಜನಪ್ರತಿನಿಧಿಗಳು ತಮ್ಮ ಕರ್ತವ್ಯ ನಿರ್ವಹಣೆ ಮಾಡುವುದರಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಕೇಂದ್ರದ ಮಾಜಿ ಸಚಿವ ಹಾಗೂ ವಿಧಾನಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಮ್ ವಾಗ್ದಾಳಿ ನಡೆಸಿದರು.
ಶನಿವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯ ಸರಕಾರ 38 ಸಾವಿರ ಕೋಟಿ ರೂ.ನಷ್ಟವಾಗಿದೆ ಎಂದು ತಿಳಿಸಿದೆ. ಆದರೆ, ವಾಸ್ತವಾಂಶವಾಗಿ ಒಂದು ಲಕ್ಷ ಕೋಟಿ ರೂ.ಗಳಷ್ಟು ಹಾನಿಯಾಗಿದೆ ಎಂದರು.
ಕೇಂದ್ರ ಸರಕಾರ ಇವತ್ತು ರಾಜ್ಯಕ್ಕೆ 1200 ಕೋಟಿ ರೂ.ಪರಿಹಾರ ಬಿಡುಗಡೆ ಮಾಡಿದೆ. ಆದರೆ, ನಮ್ಮ ರಾಜ್ಯದಲ್ಲಿ ಅಧ್ಯಯನ ಮಾಡಿ ಹೋಗಿರುವ ತಂಡ ಈವರೆಗೆ ಕೇಂದ್ರ ಸರಕಾರಕ್ಕೆ ವರದಿಯನ್ನೆ ಒಪ್ಪಿಸಿಲ್ಲ. ಅಧ್ಯಯನ ಮಾಡಿರುವವರಿಗೆ ಡೆಂಗ್ ಜ್ವರ ಬಂದು ಮಲಗಿದ್ದಾರೆ ಎಂಬ ಸುದ್ದಿ ಇದೆ. ನಮ್ಮ ರಾಜ್ಯದ ಬಗ್ಗೆ ಏಕಿಷ್ಟು ತಾತ್ಸಾರ ಎಂಬುದು ಅರ್ಥವಾಗುತ್ತಿಲ್ಲ ಎಂದು ಇಬ್ರಾಹಿಮ್ ಹೇಳಿದರು.
1200 ಕೋಟಿ ರೂ.ಗಳನ್ನು ಕೂಡಲೇ ಖರ್ಚು ಮಾಡಲು ಸಾಧ್ಯವಿಲ್ಲ ಎಂದು ರಾಜ್ಯ ಸರಕಾರ ಹೇಳಿದೆ. ಅಧಿಕಾರ ನಡೆಸುವ ಪರಿಜ್ಞಾನ ಇಲ್ಲದೇ ಇರುವುದರಿಂದ, ಇಂತಹ ಹೇಳಿಕೆ ಬಂದಿದೆ. 48 ಗಂಟೆಗಳಲ್ಲಿ ಜಿಲ್ಲಾಧಿಕಾರಿ, ತಹಶೀಲ್ದಾರ್ ಮೂಲಕ 1200 ಕೋಟಿ ರೂ.ಗಳನ್ನು ಖರ್ಚು ಮಾಡಬಹುದು ಎಂದು ಅವರು ತಿಳಿಸಿದರು.
ನೆರೆ ಪರಿಹಾರ ವಿಚಾರದಲ್ಲಿ ಸಂಸದರು, ರಾಜ್ಯ ಸರಕಾರ ವಿಫಲವಾಗಿದೆ. ನಾವು ಏನಾದರೂ ಮಾಡಲು ಹೋದರೆ ವಿಪಕ್ಷಗಳು ರಾಜಕಾರಣ ಮಾಡುತ್ತಿವೆ ಎಂದು ಆಪಾದನೆ ಹೊರಿಸುತ್ತಾರೆ. ಕೇಂದ್ರ ಸರಕಾರಕ್ಕೆ ಈ ರಾಜ್ಯ ಸರಕಾರ ಬೇಕೋ ಬೇಡವೋ, ಯಡಿಯೂರಪ್ಪ ಮೇಲೆ ಅವರಿಗೆ ಪ್ರೀತಿ ಇದೆಯೋ ಇಲ್ಲವೋ ಆ ವಿವಾದಕ್ಕೆ ನಾನು ಹೋಗುವುದಿಲ್ಲ ಎಂದು ಅವರು ತಿಳಿಸಿದರು.
ಕೇಂದ್ರ ಸರಕಾರ ಪರಿಹಾರ ನೀಡುತ್ತಿಲ್ಲ ಎಂದು ಹೇಳಿಕೆ ನೀಡಿದ್ದಕ್ಕೆ ಬಿಜೆಪಿಯ ಶಾಸಕರೊಬ್ಬರಿಗೆ ಶೋಕಾಸ್ ನೋಟಿಸ್ ಜಾರಿಗೊಳಿಸಲಾಗಿದೆ. ಸಂಸದ ವಿ.ಶ್ರೀನಿವಾಸ್ ಪ್ರಸಾದ್, ಕೇಂದ್ರದ ನಡೆಯನ್ನು ಬಹಿರಂಗವಾಗಿ ಟೀಕಿಸಿರುವುದು ಸ್ವಾಗತಾರ್ಹ. ಅಧಿಕಾರ ಯಾರಿಗೂ ಶಾಶ್ವತವಲ್ಲ, ಈ ಹಿಂದೆ ನಾನು ಕೇಂದ್ರದಲ್ಲಿ ಸಚಿವನಾಗಿದ್ದೆ, ಈಗ ಅಧಿಕಾರ ಇಲ್ಲ. ನಾಳೆ ಯಡಿಯೂರಪ್ಪಗೂ ಇದೇ ಪರಿಸ್ಥಿತಿ ಬರಬಹುದು ಎಂದು ಅವರು ಹೇಳಿದರು.
ಮುಖ್ಯಮಂತ್ರಿ ಈ ಕೂಡಲೇ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ರಾಜ್ಯ, ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಸರ್ವಪಕ್ಷಗಳ ಸಮಿತಿಯನ್ನು ರಚನೆ ಮಾಡಲಿ. ಅವರ ಪಕ್ಷದ ಆಂತರಿಕ ವಿಚಾರಗಳ ಬಗ್ಗೆ ನಾನು ಚರ್ಚೆ ಮಾಡುವುದಿಲ್ಲ, ಅದರ ಅಗತ್ಯವು ನನಗಿಲ್ಲ. ರಾಜ್ಯದ ಸ್ವಾಭಿಮಾನ ಉಳಿಯಬೇಕು ಎಂಬುದಷ್ಟೇ ನನ್ನ ಕಾಳಜಿ ಎಂದು ಇಬ್ರಾಹಿಮ್ ತಿಳಿಸಿದರು.
ಬಿಹಾರದಲ್ಲಿ ನೆರೆ ಬಂದರೆ ಕೂಡಲೆ ಟ್ವೀಟ್ ಮಾಡುವ ಪ್ರಧಾನಿ ಮೋದಿ, ನಮ್ಮ ರಾಜ್ಯದ ಬಗ್ಗೆ ಯಾಕೆ ಒಂದೇ ಒಂದು ಮಾತನ್ನು ಆಡಿಲ್ಲ. ಆರೂವರೆ ಕೋಟಿ ಜನಸಂಖ್ಯೆ ಹೊಂದಿರುವ ಕರ್ನಾಟಕ ತಬ್ಬಲಿಯಾಗಿದೆಯೇ, ಚಳಿಗಾಲದ ಅಧಿವೇಶನ ಬಳಿಕ ಕಾಂಗ್ರೆಸ್ ಪಕ್ಷ ರಾಜ್ಯಾದ್ಯಂತ ನ್ಯಾಯಕ್ಕಾಗಿ ಆಗ್ರಹಿಸಿ ಹೋರಾಟ ರೂಪಿಸಲಿದೆ ಎಂದು ಅವರು ಹೇಳಿದರು.
ಸಂತೋಷ್-ಯಡಿಯೂರಪ್ಪ ನಡುವಿನ ಜಗಳದಲ್ಲಿ ಕರ್ನಾಟಕ ಸಿಕ್ಕಿ ನರಳುತ್ತಿದೆ. ರಾಜ್ಯಕ್ಕೆ ಒದಗಿ ಬಂದಿರುವ ಪರಿಸ್ಥಿತಿ ಎಲ್ಲರಿಗೂ ತಿಳಿದಿದೆ. ಕೇಂದ್ರ ಸರಕಾರ ಇದೇ ರೀತಿ ತಾರತಮ್ಯ ಮಾಡುತ್ತಾ ಹೋದರೆ, ಕರ್ನಾಟಕದಲ್ಲಿ ವಿಭಿನ್ನವಾದ ಕೂಗು ಮೊಳಗಬಹುದು, ಅದಕ್ಕೆ ಅವಕಾಶ ಕೊಡಬೇಡಿ ಎಂದು ಇಬ್ರಾಹಿಮ್ ಮನವಿ ಮಾಡಿದರು.
ರಾಜ್ಯದ ಜನತೆಗೆ ನ್ಯಾಯ ಒದಗಿಸುವಲ್ಲಿ ಬಿಜೆಪಿ ಸರಕಾರ ವಿಫಲವಾಗಿದೆ. ಆದುದರಿಂದ, ಮಾಧ್ಯಮಗಳು ಹಾಗೂ ಮಠಾಧೀಶರ ನಿಯೋಗ ಪ್ರಧಾನಿಯನ್ನು ಭೇಟಿ ಮಾಡಿ, ಹೆಚ್ಚಿನ ಪರಿಹಾರ ಆಗ್ರಹಿಸುವ ಮೂಲಕ ರಾಜ್ಯದ ಘನತೆ ಹಾಳಾಗದಂತೆ ಕಾಪಾಡಬೇಕು.
-ಸಿ.ಎಂ.ಇಬ್ರಾಹಿಮ್, ಮಾಜಿ ಕೇಂದ್ರ ಸಚಿವ
ನೆರೆ ಪೀಡಿತ ಸಂತ್ರಸ್ತರಿಗೆ ನೆರವು ಒದಗಿಸುವ ಬದಲು ರಾಜ್ಯದಲ್ಲಿ ಎನ್ಆರ್ಸಿ ಬಗ್ಗೆ ಸಭೆಗಳನ್ನು ಮಾಡುತ್ತಿದ್ದಾರೆ. ಯಾರು ಹೊರ ದೇಶದಿಂದ ಬಂದಿದ್ದಾರೋ ಅವರನ್ನು ಹೊರಗೆ ಹಾಕಲು ಏನು ಮಾಡಬೇಕೋ ಅದನ್ನು ನಾವು ಮಾಡುತ್ತೇವೆ. ಸರಕಾರ, ಸೇನೆಗೆ ಸಂಪೂರ್ಣ ಸಹಕಾರ ನೀಡುತ್ತೇವೆ. ಆದರೆ, ಇವರ ಆದ್ಯತೆ ಏನು? ದೇಶದ ಜನ ಉಪವಾಸ ಸಾಯುತ್ತಿರುವಾಗ, ಇವರ ಚಿಂತನೆ ಯಾವ ವಿಚಾರದ ಕಡೆ ಇದೆ?
-ಸಿ.ಎಂ.ಇಬ್ರಾಹಿಮ್, ಮಾಜಿ ಕೇಂದ್ರ ಸಚಿವ