ಪ್ರಧಾನಿಗೆ ಪತ್ರ ಬರೆದ ಖ್ಯಾತನಾಮರ ವಿರುದ್ಧ ಪ್ರಕರಣ ದಾಖಲಿಸಿರುವುದು ಖಂಡನೀಯ: ಪಿಎಫ್‌ಐ ಆಕ್ರೋಶ

Update: 2019-10-06 17:11 GMT

ಬೆಂಗಳೂರು, ಅ.6: ದೇಶದಲ್ಲಿ ನಡೆಯುತ್ತಿರುವ ಗುಂಪುಹತ್ಯೆಯ ಘಟನೆಗಳ ಹೆಚ್ಚಳದ ಕುರಿತು ಕಳವಳ ಸೂಚಿಸುವ ನಿಟ್ಟಿನಲ್ಲಿ ಪ್ರಧಾನಿಗೆ ಪತ್ರ ಬರೆದ ಖ್ಯಾತನಾಮರ ವಿರುದ್ಧ ಪ್ರಕರಣ ದಾಖಲಿಸಿರುವುದು ಖಂಡನೀಯ ಎಂದು ಪಿಎಫ್‌ಐ ಆಕ್ರೋಶ ವ್ಯಕ್ತಪಡಿಸಿದೆ.

ದೇಶದಲ್ಲಿ ಪ್ರಧಾನಿ ಮೋದಿಯನ್ನು ಪ್ರಶ್ನಿಸಿದರು ಎಂಬ ಕಾರಣಕ್ಕೆ ಖ್ಯಾತನಾಮರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅವರ ವಿರುದ್ಧ ಹಲವು ಸೆಕ್ಷನ್‌ಗಳ ಪ್ರಕಾರ ಎಫ್‌ಐಆರ್ ದಾಖಲಿಸಲಾಗಿದೆ.

ಇದರಲ್ಲಿ ದೇಶದ್ರೋಹ, ಸಾರ್ವಜನಿಕ ಕಿರುಕುಳ, ಉದ್ದೇಶಪೂರ್ವಕವಾಗಿ ಶಾಂತಿಭಂಗಕ್ಕೆ ಪ್ರಚೋದಿಸುವುದರೊಂದಿಗೆ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುವ ಮತ್ತು ಅವಮಾನಿಸುವ ಸೆಕ್ಷನ್‌ಗಳು ಒಳಗೊಂಡಿವೆ ಎಂದು ಹೇಳಲಾಗಿದೆ. ಇವೆಲ್ಲವೂ ಜನರನ್ನು ಬೆದರಿಸುವ ನಿಟ್ಟಿನಲ್ಲಿ ಕಾನೂನಿನ ಸಂಪೂರ್ಣ ದುರ್ಬಳಕೆಯಾಗಿದೆ ಎಂದು ಪಿಎಫ್‌ಐ ಹೇಳಿದೆ.

ಮುಕ್ತವಾಗಿ ಮಾತನಾಡುವುದು, ಅಸಮ್ಮತಿಯ ಹಕ್ಕನ್ನು ರಕ್ಷಿಸುವುದು ಮತ್ತು ಅಲ್ಪಸಂಖ್ಯಾತರು-ದಲಿತರ ಮೇಲೆ ಹೆಚ್ಚುತ್ತಿರುವ ಹಿಂಸಾಚಾರಗಳ ವಿರುದ್ಧ ಧ್ವನಿ ಎತ್ತುವುದು ಕೂಡ ದೇಶದಲ್ಲಿ ಇದೀಗ ಅಪರಾಧವಾಗಿಬಿಟ್ಟಿದೆ ಎಂಬುದು ಅತಿರೇಕದ ವಿಚಾರವಾಗಿದೆ ಎಂದು ಪಿಎಫ್‌ಐ ನಾಯಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News