7ನೇ ತರಗತಿಗೆ ಪಬ್ಲಿಕ್ ಪರೀಕ್ಷೆ: ಅವೈಜ್ಞಾನಿಕ, ಅನರ್ಥಕಾರಿ ಶಿಕ್ಷಣ ನೀತಿ

Update: 2019-10-08 18:33 GMT

ಆರ್‌ಟಿಇ 2009 ಕಾಯ್ದೆಯ ಪರಿಚ್ಛೇದ 4ರ ಅನುಸಾರ 6ನೇ ವಯಸ್ಸಿನ ನಂತರವೂ ಶಾಲೆಗೆ ದಾಖಲಾಗದ ಮಕ್ಕಳಿಗೆ ಅಥವಾ 18ನೇ ವಯಸ್ಸಿಗಿಂತ ಮೊದಲು ಶಿಕ್ಷಣವನ್ನು ಅರ್ಧದಲ್ಲಿಯೆ ಮೊಟಕುಗೊಳಿಸುವ ಮಕ್ಕಳಿಗೆ ವಿಶೇಷ ಸೌಲಭ್ಯ ಕೊಡಬೇಕು, ಅಗತ್ಯ ಕಾರ್ಯಯೋಜನೆಗಳನ್ನು ರೂಪಿಸಬೇಕು ಎಂದು ವಿವರಿಸುತ್ತದೆ. ಆದರೆ ಸುರೇಶ್ ಕುಮಾರ್ ಅವರ ಈ 7ನೇ ತರಗತಿಗೆ ಪಬ್ಲಿಕ್ ಪರೀಕ್ಷೆ ನಡೆಸುವ ನಿರ್ಧಾರ ಈ ಪರಿಚ್ಛೇದ 4ರ ಆಶಯಗಳಿಗೆ ವಿರುದ್ಧವಾಗಿದೆ.
ಯಾವುದೇ ವಿವೇಚನೆ, ಪೂರ್ವ ಸಿದ್ಧತೆ ಇಲ್ಲದೆ 7ನೇ ತರಗತಿಗೆ ಪಬ್ಲಿಕ್ ಪರೀಕ್ಷೆ ನಡೆಸುವುದರಿಂದ ಬಡ ಕುಟುಂಬದ ಮಕ್ಕಳ ಭವಿಷ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ.


ಇತ್ತೀಚಿನ ಬೆಳವಣಿಗೆ

  ಈಗಿನ ರಾಜಕೀಯ-ಸಾಮಾಜಿಕ-ಆರ್ಥಿಕ ಬಿಕ್ಕಟ್ಟುಗಳ ಗಾಯದ ಮೇಲೆ ಬರೆ ಎಳೆದಂತೆ ಕರ್ನಾಟಕದ ಬಿಜೆಪಿ ಸರಕಾರದ ಶಿಕ್ಷಣ ಮಂತ್ರಿ ಸುರೇಶ್ ಕುಮಾರ್ ಅವರು ಮಕ್ಕಳಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳೆಸಲು, 10ನೇ ತರಗತಿಯಲ್ಲಿ ಮಕ್ಕಳ ಉತ್ತೀರ್ಣ ಪ್ರಮಾಣವನ್ನು ಹೆಚ್ಚಿಸಲು 7ನೇ ತರಗತಿಯಿಂದ ಪಬ್ಲಿಕ್ ಪರೀಕ್ಷೆ ಪ್ರಾರಂಭಿಸುವುದಾಗಿ ಹೇಳಿಕೆ ನೀಡಿದ್ದಾರೆ. ಶಿಕ್ಷಣದ ಕುರಿತಾದ ಪ್ರಾಥಮಿಕ ತಿಳುವಳಿಕೆ ಇಲ್ಲದಂತಿರುವ ಶಿಕ್ಷಣ ಮಂತ್ರಿ ಈ ರೀತಿಯಾಗಿ ಬೇಕಾಬಿಟ್ಟಿ ನಿರ್ಧಾರ ತೆಗೆದುಕೊಳ್ಳುತ್ತಿರುವುದರ ಮೂಲಕ ಇಲ್ಲಿನ ಮಕ್ಕಳನ್ನು ಬಲಿಪಶು ಮಾಡುತ್ತಿದ್ದಾರೆ. ಈ ರೀತಿಯ ತುಘಲಕ್ ನಿರ್ಧಾರದಿಂದಾಗಿ ತಳ ಸಮುದಾಯದ, ದಲಿತ, ಆದಿವಾಸಿ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಾರೆ. ಅಲ್ಲದೆ ಶಿಕ್ಷಣ ಮಂತ್ರಿಯ ಈ ನಿರ್ಧಾರವು 54 ಪರಿಚ್ಛೇದಗಳನ್ನೊಳಗೊಂಡ ಮಕ್ಕಳ ಹಕ್ಕಿಗಾಗಿ ವಿಶ್ವಸಂಸ್ಥೆಯ ಸಮಾವೇಶ (UNCRC)ದ ನೀತಿಗಳಿಗೆ ವಿರುದ್ಧವಾಗಿದೆ. ಮಕ್ಕಳು ತಮ್ಮ ಹಕ್ಕನ್ನು ಸಂಪೂರ್ಣವಾಗಿ ಅನುಭವಿಸುವಂತೆ ಸರಕಾರ ಮತ್ತು ಪೋಷಕರು ಎಲ್ಲ ಬಗೆಯ ಕಾರ್ಯವಿಧಾನಗಳನ್ನು ಜಾರಿಗೊಳಿಸಬೇಕು ಎಂಬುದು ಅದರ ನೀತಿಯಾಗಿದೆ. ಅದರ ಪರಿಚ್ಛೇದ 28ರ ಅನುಸಾರ ಪ್ರತಿ ಮಗುವಿಗೂ ಶಿಕ್ಷಣ ಪಡೆಯುವ ಹಕ್ಕಿದೆ. ಪರಿಚ್ಛೇದ 3ರ ಅನುಸಾರ ಮಕ್ಕಳ ಹಿತಾಸಕ್ತಿಗೆ ಮೊದಲ ಆದ್ಯತೆ ಕೊಡಬೇಕು. ಪರಿಚ್ಛೇದ 12ರ ಅನುಸಾರ ತಮಗೆ ಪರಿಣಾಮ ಬೀರುವ ವಿಷಯಗಳಲ್ಲಿ ಮಕ್ಕಳ ಅಭಿಪ್ರಾಯ, ದೃಷ್ಟಿಕೋನವನ್ನು ಪರಿಗಣಿಸಬೇಕು. ಆದರೆ ಶಿಕ್ಷಣ ಮಂತ್ರಿ ಸುರೇಶ್ ಕುಮಾರ್ ಅವರ 7ನೇ ತರಗತಿಗೆ ಪಬ್ಲಿಕ್ ಪರೀಕ್ಷೆ ನಡೆಸುವ ನಿರ್ಧಾರ ಈ UNCRC ನೀತಿಯ ಉಲ್ಲಂಘನೆಯಾಗಿದೆ. ಜೊತೆಗೆ ಭಾರತ ಸಂವಿಧಾನದ ಪರಿಚ್ಛೇದ 45, 21ಎಯ ಆಶಯಗಳನ್ನೂ ಕಡೆಗಣಿಸುತ್ತದೆ.

ಆರ್‌ಟಿಇ 2009 ಕಾಯ್ದೆಯ ಪರಿಚ್ಛೇದ 4ರ ಅನುಸಾರ 6ನೇ ವಯಸ್ಸಿನ ನಂತರವೂ ಶಾಲೆಗೆ ದಾಖಲಾಗದ ಮಕ್ಕಳಿಗೆ ಅಥವಾ 18ನೇ ವಯಸ್ಸಿಗಿಂತ ಮೊದಲು ಶಿಕ್ಷಣವನ್ನು ಅರ್ಧದಲ್ಲಿಯೆ ಮೊಟಕುಗೊಳಿಸುವ ಮಕ್ಕಳಿಗೆ ವಿಶೇಷ ಸೌಲಭ್ಯ ಕೊಡಬೇಕು, ಅಗತ್ಯ ಕಾರ್ಯಯೋಜನೆಗಳನ್ನು ರೂಪಿಸಬೇಕು ಎಂದು ವಿವರಿಸುತ್ತದೆ. ಆದರೆ ಸುರೇಶ್ ಕುಮಾರ್ ಅವರ ಈ 7ನೇ ತರಗತಿಗೆ ಪಬ್ಲಿಕ್ ಪರೀಕ್ಷೆ ನಡೆಸುವ ನಿರ್ಧಾರ ಈ ಪರಿಚ್ಛೇದ 4ರ ಆಶಯಗಳಿಗೆ ವಿರುದ್ಧವಾಗಿದೆ.
ಯಾವುದೇ ವಿವೇಚನೆ, ಪೂರ್ವ ಸಿದ್ಧತೆ ಇಲ್ಲದೆ 7ನೇ ತರಗತಿಗೆ ಪಬ್ಲಿಕ್ ಪರೀಕ್ಷೆ ನಡೆಸುವುದರಿಂದ ಬಡ ಕುಟುಂಬದ ಮಕ್ಕಳ ಭವಿಷ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಅದು ಯಾಕೆ ಎನ್ನುವುದಕ್ಕೆ ಕೆಳಗೆ ವಿವರಿಸಲಾಗಿದೆ

ಪ್ರಸ್ತುತ ಪರಿಸ್ಥಿತಿ
20ನೇ ಶತಮಾನದ ಮಹಾನ್ ಶಿಕ್ಷಣತಜ್ಞ ಮತ್ತು ದಾರ್ಶನಿಕ ಬ್ರೆಝಿಲ್‌ನ ಪೌಲ್ ಫ್ರೈರೆ ‘‘ಯಾವುದೇ ಬಗೆಯ ‘ಕಲಿಕೆಯರಿಮೆ’ಯು (pedagogy) ಶೋಷಿತರನ್ನು ಅದೃಷ್ಟಹೀನರು ಎಂದು ಕರೆದು ಅವರಿಂದ ದೂರವುಳಿದು ಅಥವಾ ಅವರನ್ನು ಮುಖ್ಯವಾಹಿನಿಯಿಂದ ಪ್ರತ್ಯೇಕಿಸಿ ವಿಮೋಚನೆಯನ್ನು ಸಾಧಿಸಲು ಸಾಧ್ಯವಿಲ್ಲ. ವಿಮೋಚನೆಯ ಹೋರಾಟದಲ್ಲಿ ಶೋಷಿತರು ಸ್ವತಃ ಆ ಕಲಿಕೆಯರಿಮೆಯ ಭಾಗವಾಗಿರಬೇಕು’’ ಎಂದು ವಿವರಿಸಿದ. ಫ್ರೈರೆ 1972ರಲ್ಲಿ ಬರೆದ ‘ಶೋಷಿತರ ಕಲಿಕೆಯರಿಮೆ’, 1985ರಲ್ಲಿ ಬರೆದ ‘ಶಿಕ್ಷಣದ ರಾಜಕೀಯ’ ಕೃತಿಗಳು ಆಧುನಿಕ ಶಿಕ್ಷಣಕ್ಕೆ, ಕಲಿಕೆಯರಿಮೆಗೆ ಅಗತ್ಯವಾದ ಹೊಸ ಬಗೆಯ ಚಿಂತನೆ ಮತ್ತು ವೈಜ್ಞಾನಿಕ, ತಾತ್ವಿಕವಾದ ಅಧ್ಯಯನವನ್ನು ವಿವರಿಸುತ್ತದೆ. ಸಾಂಪ್ರದಾಯಿಕ ಶಾಲಾ ಶಿಕ್ಷಣವನ್ನು ಒಡೆದು ಹಾಕಿ ಅದನ್ನು ಪುನರೂಪಿಸಬೇಕು (deschooling) ಎಂದು ಚಿಂತಿಸಿದ ಮತ್ತೊಬ್ಬ ಶಿಕ್ಷಣ ತಜ್ಞ ಇವಾನ್ ಇಲಿಚ್. ವಿಯೆನ್ನಾದಲ್ಲಿ ಹುಟ್ಟಿದ ಇಲಿಚ್, ‘ಡೀಸ್ಕೂಲಿಂಗ್ ಸೊಸೈಟಿ’ (Deschooling Society), ‘ಸಂಭ್ರಮದ ಹತಾರಗಳು’, ‘ಸಮತೆಯ ಚೈತನ್ಯ’, ‘ವೈದ್ಯಕೀಯ ಪ್ರತೀಕಾರ’ ಇತ್ಯಾದಿ ಪುಸ್ತಕಗಳನ್ನು ಬರೆದ. 1973ರಲ್ಲಿ ಪ್ರಕಟವಾದ ‘ಡೀಸ್ಕೂಲಿಂಗ್ ಸೊಸೈಟಿ’ ಪುಸ್ತಕದಲ್ಲಿ ‘‘ಶಾಲೆಗಳು ಮಕ್ಕಳಿಗೆ ಅದರಲ್ಲೂ ಬಡತನದ ಹಿನ್ನೆಲೆಯಿಂದ ಬಂದ ಮಕ್ಕಳಿಗೆ ಕಾರ್ಯವಿಧಾನವನ್ನು, ತಿರುಳನ್ನು ಗೊಂದಲಗೊಳಿಸುವ ವಿದ್ಯಾಭ್ಯಾಸ ನೀಡುತ್ತವೆ. ಇದು ಮುಸುಕಾಗುತ್ತ ಹೋದ ಹಾಗೆ ಮತ್ತಷ್ಟು ಇಲಾಜು ಮಾಡಿದಷ್ಟು ಉತ್ತಮ ಫಲಿತಾಂಶ ಅಥವಾ ಮೇಲಕ್ಕೇರುವುದು ಯಶಸ್ಸಿಗೆ ದಾರಿ ಎನ್ನುವ ತರ್ಕವನ್ನು ಮುಂದಿಡುತ್ತವೆ. ಮಕ್ಕಳ ಕಲ್ಪನಾಶಕ್ತಿಯನ್ನು, ಭಾವನಾಶಕ್ತಿಯನ್ನು ಶೈಕ್ಷಣಿಕ ಶಿಸ್ತಿನೊಳಗೆ ಬಂಧಿಸಿ ಮೌಲ್ಯದ ಬದಲಿಗೆ ಸೇವೆಯನ್ನು ಒಪ್ಪಿಕೊ ಎಂದು ಕಲಿಸಲಾಗುತ್ತದೆ’’ ಎಂದು ವಿವರಿಸುತ್ತಾನೆ.

ಇಂಡಿಯಾದಲ್ಲಿ ಶೋಷಿತರ ಪರವಾಗಿ ಚಿಂತಿಸುವ ಫ್ರೈರೆ, ಇಲಿಚ್ ಮಾದರಿಯ ಶಿಕ್ಷಣ ತಜ್ಞರಿಲ್ಲ. ಇಂದು ಪ್ರಜಾಪ್ರಭುತ್ವದ ಅಡಿಪಾಯವಾದ ಸಾರ್ವಜನಿಕ ಶಿಕ್ಷಣವೆನ್ನುವುದು ಅವನತಿ ಹೊಂದುತ್ತಿದೆ. ಸರಕಾರ-ಖಾಸಗಿ ಶಿಕ್ಷಣ ಸಂಸ್ಥೆಗಳು-ಶಿಕ್ಷಣ ಇಲಾಖೆ ಎಂಬ ಈ ತ್ರಿವಳಿ ಅನೈತಿಕ ಸಂಬಂಧ ಸರಕಾರಿ ಶಾಲೆಗಳನ್ನು ಹಂತಹಂತವಾಗಿ ಕೊಲ್ಲುತ್ತಿವೆ. ಇದರ ವಿವರಗಳು ಸಾಕಷ್ಟು ಬಾರಿ ಚರ್ಚೆಯಾಗಿದೆ. ಆದರೆ ಎಲ್ಲರಿಗೂ ಉತ್ತಮ ಗುಣಮಟ್ಟದ ಉಚಿತ, ಕಡ್ಡಾಯ ಶಿಕ್ಷಣ ದೊರಕಬೇಕು ಎನ್ನುವ ಆಶಯದೊಂದಿಗೆ (ಸಂವಿದಾನದ ಪರಿಚ್ಛೇದ 45, 21ಎ) 4, ಆಗಸ್ಟ್ 2009ರಂದು ‘ಕಡ್ಡಾಯ ಶಿಕ್ಷಣ ಕಾಯ್ದೆ’ (ಆರ್‌ಟಿಇ) ಜಾರಿಗೆ ಬಂತು. ಬಡತನ ರೇಖೆಗಿಂತ ಕೆಳಗಿರುವ ಶೇಕಡಾ 25 ಪ್ರಮಾಣದ ಕುಟುಂಬಗಳ ಮಕ್ಕಳಿಗೆ ಉಚಿತ, ಕಡ್ಡಾಯ, ಗುಣಮಟ್ಟದ ಶಿಕ್ಷಣ ಕೊಡಬೇಕು ಎಂಬುದು ಇದರ ಮೂಲ ಆಶಯವಾಗಿದೆ. ಆರ್‌ಟಿಇನ ಲೋಪದೋಷಗಳ ಕುರಿತು, ಅದರಿಂದುಂಟಾದ ಪ್ರಮಾದಗಳ ಕುರಿತು ಇಲ್ಲಿ ಚರ್ಚಿಸುವುದಿಲ್ಲ. ಅದಕ್ಕೆ ಬೇರೆಯದೇ ವೇದಿಕೆ ಬೇಕಾಗುತ್ತದೆ. ಶಿಕ್ಷಣ ಹಕ್ಕು ಕಾಯ್ದೆಯ ಪರಿಚ್ಛೇದ 16ರ ಅನುಸಾರ ‘no detention policy' (ಫೇಲು ಮಾಡುವಂತಿಲ್ಲ) ನೀತಿಯನ್ನು ಅಳವಡಿಸಲಾಗಿದೆ.

ಈ ಅನುಚ್ಛೇದದ ಪ್ರಕಾರ 8ನೇ ತರಗತಿಯವರೆಗೂ ಬಾಲಕ /ಬಾಲಕಿಯನ್ನು ನಪಾಸು ಮಾಡುವ ಹಾಗಿಲ್ಲ ಮತ್ತು ಶಾಲೆಯಿಂದ ಹೊರ ಹಾಕುವ ಹಾಗಿಲ್ಲ. ಇನ್ನೂ ಸರಳವಾಗಿ ಹೇಳಬೇಕೆಂದರೆ ಯಾವುದೇ ವಿದ್ಯಾರ್ಥಿಯನ್ನು ವ್ಯಾಸಂಗದಿಂದ ತಡೆಹಿಡಿಯುವ ಹಾಗಿಲ್ಲ. ಮಕ್ಕಳಿಗೆ ಅವರ 14ನೇ ವಯಸ್ಸಿನವರೆಗೂ (1-8 ತರಗತಿ) ಶಿಕ್ಷಣವು ಕಡ್ಡಾಯವಾಗಿ ದೊರಕಬೇಕು. 3 ಜನವರಿ 2019ರಂದು ರಾಜ್ಯಸಭೆಯಲ್ಲಿ ಈ ‘ಫೇಲು ಮಾಡುವಂತಿಲ್ಲ ನೀತಿ’ಯಡಿ ಆರ್‌ಟಿಇ ಕಾಯ್ದೆಯ ಪರಿಚ್ಛೇದ 16ಕ್ಕೆ ತಿದ್ದುಪಡಿ ತಂದು 5ನೇ ತರಗತಿಯಲ್ಲಿಯೇ (11ನೇ ವಯಸ್ಸಿನಲ್ಲಿ) ಮಕ್ಕಳನ್ನು ಫೇಲು ಮಾಡಬಹುದು ಎನ್ನುವ ಹೊಸ ನೀತಿಯು ಅಂಗೀಕಾರವಾಗುತ್ತದೆ ಮತ್ತು ಇದು ಎಲ್ಲಾ ರಾಜ್ಯ ಸರಕಾರಗಳ ಶಿಕ್ಷಣ ಇಲಾಖೆಗಳಿಗೂ ಅನ್ವಯಿಸುತ್ತದೆ ಮತ್ತು ಇದನ್ನು ಜಾರಿಗೊಳಿಸುವ ವಿವೇಚನೆಯನ್ನು ಆಯಾ ರಾಜ್ಯ ಸರಕಾರಗಳಿಗೆ ವಹಿಸಲಾಗಿದೆ. ಈ ತಿದ್ದುಪಡಿಯು ಈಗಾಗಲೇ ಅವಸಾನ ಹೊಂದುತ್ತಿರುವ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಗೆ ಕೊನೆಯ ಮೊಳೆ ಹೊಡೆಯುತ್ತದೆ. ಈ ತಿದ್ದುಪಡಿಯನ್ನು ಪ್ರಸ್ತಾಪಿಸಿದ ಕೇಂದ್ರ ಸರಕಾರ ಮತ್ತು ಅದನ್ನು ಅನುಮೋದಿಸುವ ಸಂಸತ್ತು ಮತ್ತು ಅದನ್ನು ಜಾರಿಗೊಳಿಸುವ ರಾಜ್ಯ ಸರಕಾರಗಳು ಸ್ವತಃ ಕೈಯಾರೆ ಮುಂದೆ ನಿಂತು ಮಕ್ಕಳು ಶಾಲೆ ತೊರೆಯುವಂತೆ, ವ್ಯಾಸಂಗ ಮೊಟಕುಗೊಳಿಸುವುದಕ್ಕೆ ಕಾರಣರಾಗುತ್ತವೆೆ. ಬಡ ಮಕ್ಕಳ ಭವಿಷ್ಯ ಅತಂತ್ರವಾಗುವುದಕ್ಕೆ ಜವಾಬ್ದಾರರಾಗುತ್ತವೆೆ.
ಯಾತಕ್ಕೆ ‘ಫೇಲು ಮಾಡುವಂತಿಲ್ಲ ನೀತಿ’ ಅಳವಡಿಸಿಕೊಂಡರು ಎನ್ನುವ ಪ್ರಶ್ನೆಗೆ ಉತ್ತರಿಸುವ ಮೊದಲು ಕೆಳಗಿನ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕಾಗಿದೆ

ಯಾವ ಕಾರಣಗಳಿಗೆ ಮಕ್ಕಳು ಶಾಲೆಯಿಂದ ಹೊರಗುಳಿಯುತ್ತಾರೆ?

ಕುಟುಂಬದ ಬಡತನದ ಕಾರಣಕ್ಕೆ, ಲಿಂಗ ತಾರತಮ್ಯದ ಕಾರಣಕ್ಕೆ, ಜಾತಿ, ಧರ್ಮ ಕಾರಣಕ್ಕೆ, ಪೋಷಕರ ನಿರಾಸಕ್ತಿಯ ಕಾರಣದಿಂದ (ಗ್ರಾಮೀಣ ಭಾಗಗಳಲ್ಲಿ ಇದು ಹೆಚ್ಚು), ದುಬಾರಿ ಶುಲ್ಕದ ಕಾರಣದಿಂದ, ಮೂಲಭೂತ ಸೌಕರ್ಯಗಳ ಕೊರತೆಯ ಕಾರಣದಿಂದ ಮಕ್ಕಳು ಶಾಲೆಯಿಂದ ಹೊರಗುಳಿಯುತ್ತಾರೆ. ಅಲ್ಲದೆ ತರಗತಿಯೊಳಗಿನ ಜಾತಿ, ಧರ್ಮ, ವರ್ಗ ತಾರತಮ್ಯದ ಕಾರಣಕ್ಕೆ ಮಕ್ಕಳು ಶಾಲೆಯಿಂದ ಹೊರಗುಳಿಯುತ್ತಾರೆ. ಮುಖ್ಯವಾಗಿ 5ರಿಂದ 6ನೇ ತರಗತಿಗೆ, 7ರಿಂದ 8ನೇ ತರಗತಿಗೆ ಮತ್ತು 9ರಿಂದ 10ನೇ ತರಗತಿಗೆ ಪ್ರವೇಶಿಸುವ transition ಹಂತಗಳಲ್ಲಿನ ಗೊಂದಲಗಳು, ಶೈಕ್ಷಣಿಕ ಬಿಕ್ಕಟ್ಟುಗಳ ಕಾರಣಕ್ಕೆ ಶಾಲೆಯಿಂದ ಹೊರಗುಳಿಯುತ್ತಾರೆ.

ಮಕ್ಕಳು ಯಾವ ಕಾರಣಗಳಿಗೆ ಫೇಲಾಗುತ್ತಾರೆ?

ಗುಣಮಟ್ಟ ಬೋಧನೆಯ, ಕಲಿಕೆಯ ಕೊರತೆ ಕಾರಣದಿಂದ, ಶಿಕ್ಷಕರ ಕೊರತೆಯಿಂದ, ಏಕೋಪಾಧ್ಯಾಯ ಶಾಲೆಗಳಿಂದ, ಅವೈಜ್ಞಾನಿಕ ಪಠ್ಯಪುಸ್ತಕಗಳ ಕಾರಣದಿಂದ, ಪಠ್ಯಪುಸ್ತಕಗಳ ಕೊರತೆಯಿಂದ, ಮೂಲಭೂತ ಸೌಕರ್ಯಗಳ ಕೊರತೆಯ ಕಾರಣದಿಂದ, ಶಿಕ್ಷಕರ ಬೇಜವಾಬ್ದಾರಿ ಕಾರಣದಿಂದ, ಅಪೌಷ್ಟಿಕತೆಯ ಕಾರಣದಿಂದ, ಕುಟುಂಬದ ಪ್ರತಿಕೂಲ ಪರಿಸ್ಥಿತಿಯ ಕಾರಣದಿಂದ ಇತ್ಯಾದಿಗಳ ಕಾರಣಕ್ಕೆ ಮಕ್ಕಳು ಫೇಲ್ ಆಗುತ್ತಾರೆ. ಈ ಕಾಯ್ದೆಯ ಸೆಕ್ಷನ್ 27ರ ಅನುಸಾರ ಶಿಕ್ಷಕ/ಶಿಕ್ಷಕಿಯನ್ನು ಪಾಠ ಮಾಡುವ ಜವಾಬ್ದಾರಿಯಿಂದ ಹೊರತಂದು ಬೋಧನೇತರ ಚಟುವಟಿಕೆಗಳಾದ ಜನಗಣತಿ, ಚುನಾವಣೆ, ವಿಕೋಪ ಪರಿಹಾರ ಕಾರ್ಯಗಳಲ್ಲಿ ಬಳಸಿಕೊಳ್ಳಬಾರದು ಎಂದು ಹೇಳಿದೆ. ಆದರೆ ಎಲ್ಲಾ ಸರಕಾರಿ ಶಾಲೆಗಳಲ್ಲಿ ಈ ನೀತಿಸಂಹಿತೆಯ ವಿರುದ್ಧವಾದ ನಿಯಮಗಳಿವೆ. ಶಿಕ್ಷಕರು ಬೋಧಕೇತರ ಚಟುವಟಿಕೆಗಳು ಅವರ ದಿನದ ಬಹುಪಾಲು ಸಮಯವನ್ನು ಬೋಧನೆಯಿಂದ ವಂಚಿತಗೊಳಿಸುತ್ತದೆ. ಈ ಕಾಯ್ದೆಯು ಗುತ್ತಿಗೆ ಆಧಾರದ ಮೇಲೆ ಶಿಕ್ಷಕ/ಶಿಕ್ಷಕಿಯರ ನೇಮಕಾತಿಗೆ ಅವಕಾಶ ಮಾಡಿಕೊಡುತ್ತದೆ ಮತ್ತು ಆ ಮೂಲಕ ಗೌರವಯುತವಾದ ಸಂಬಳ ಮತ್ತು ಸೌಲಭ್ಯಗಳನ್ನು ನಿರಾಕರಿಸಲಾಗುತ್ತದೆ. ಈ ಕಾರಣಗಳಿಗಾಗಿಯೂ ಮಕ್ಕಳು ಫೇಲ್ ಆಗುತ್ತಾರೆ
ಮೇಲೆ ತಿಳಿಸಿದಂತೆ ತರಗತಿಯೊಳಗಿನ ಜಾತಿ, ಧರ್ಮ, ವರ್ಗ ತಾರತಮ್ಯದ ಕಾರಣಕ್ಕೆ, 5ರಿಂದ 6ನೇ ತರಗತಿಗೆ 7ರಿಂದ 8ನೇ ತರಗತಿಗೆ ಮತ್ತು 9ರಿಂದ 10ನೇ ತರಗತಿಗೆ ಪ್ರವೇಶಿಸುವ transition ಹಂತಗಳಲ್ಲಿನ ಗೊಂದಲಗಳು, ಶೈಕ್ಷಣಿಕ ಬಿಕ್ಕಟ್ಟುಗಳ ಕಾರಣಕ್ಕೆ ಫೇಲಾಗುತ್ತಾರೆ. ಆದರೆ ವೈರುಧ್ಯವೆಂದರೆ ಈ ಆರ್‌ಟಿಇ ಕಾಯ್ದೆ ಜಾರಿಗಾಗಿ ಬೋಧನಾ ಮತ್ತು ಪಠ್ಯಕ್ರಮಗಳ ವಲಯದಲ್ಲಿ ಪೂರ್ವ ಸಿದ್ಧತೆಯನ್ನು ಮಾಡಿಕೊಳ್ಳದೆ (ಉದಾಹರಣೆಗೆ ನಿಧಾನ ಕಲಿಕೆಯ ಪ್ರವೃತ್ತಿಯ ಮಕ್ಕಳಿಗಾಗಿ bridge courseಗಳನ್ನು ಪ್ರಾರಂಭಿಸುವುದು) ಈ ‘ಫೇಲು ಮಾಡುವಂತಿಲ್ಲ ನೀತಿ’ಯನ್ನು ಕುರುಡಾಗಿ ಅನುಸರಿಸಿದರೆ ಅದು ಟೊಳ್ಳುತನದ ಪ್ರದರ್ಶನವಾಗುತ್ತದೆ. ಇಲ್ಲಿ ಕಡೆಗೆ ಮಕ್ಕಳ ಬುದ್ಧಿವಂತಿಕೆ, ಗ್ರಹಣ ಶಕ್ತಿ, ನೆನಪಿನ ಶಕ್ತಿಗಳ ನ್ಯೂನತೆ ಅವರ ಫೇಲಾಗುವುದಕ್ಕೆ ಅಂತಿಮ ಕಾರಣಗಳು. ಅವು ಪ್ರಮುಖ ಕಾರಣಗಳಲ್ಲ.

ತಮಗೆ ಸಂಬಂಧಿಸಿರದ, ತಾವು ಜವಾಬ್ದಾರರಲ್ಲದ ಕಾರಣಗಳಿಗೆ ಮಕ್ಕಳು ಶಾಲೆಯಿಂದ ಹೊರಗುಳಿಯುವ, ಫೇಲ್ ಆಗುವ ಈ ಪ್ರವೃತ್ತಿಗೆ ಕಡಿವಾಣ ಹಾಕಬೇಕೆನ್ನುವುದು ‘ಈ ಫೇಲು ಮಾಡುವಂತಿಲ್ಲ ನೀತಿ’ಯ ಮೂಲ ಉದ್ದೇಶ. ಮತ್ತೊಂದು ಕಡೆ ವ್ಯಾಸಂಗದಲ್ಲಿ ದುರ್ಬಲ, ಪ್ರತಿಭೆಯ ಕೊರತೆ ಎನ್ನುವ ನೆಪವನ್ನೊಡ್ಡಿ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳು ಬಡಮಕ್ಕಳ ವಿದ್ಯಾಭ್ಯಾಸವನ್ನೇ ಮೊಟಕುಗೊಳಿಸುವ ದುರುದ್ದೇಶಕ್ಕೂ ಕಡಿವಾಣ ಹಾಕಬೇಕೆನ್ನುವುದು ಇದರ ಉದ್ದೇಶ.
ಆದರೆ 8ನೇ ತರಗತಿಯವರೆಗಿನ ‘ಈ ಫೇಲು ಮಾಡುವಂತಿಲ್ಲ ನೀತಿ’ಯನ್ನು ವಿರೋಧಿಸುವ ಕೆಲ ಶಿಕ್ಷಣತಜ್ಞರು ‘‘ನಂತರ 9ನೇ ತರಗತಿಯಲ್ಲಿ ವಿದ್ಯಾರ್ಥಿ/ವಿದ್ಯಾರ್ಥಿನಿಯು ಅತ್ಯಂತ ಕಠಿಣ ಸ್ಪರ್ಧೆಗಳನ್ನು ಎದುರಿಸಬೇಕಾಗುತ್ತದೆ ಮತ್ತು ಆ ಒತ್ತಡವನ್ನು ನಿಭಾಯಿಸಲು ವಿಫಲರಾಗುತ್ತಾರೆ ಮತ್ತು ನಿರಂತರವಾಗಿ ಫೇಲಾಗುತ್ತಾರೆ, ಶಾಲೆಯಿಂದ ಹೊರಗುಳಿಯುತ್ತಾರೆ’’ ಎಂದು ಅಭಿಪ್ರಾಯಪಡುತ್ತಾರೆ. ಮುಂದುವರಿದು ‘‘ಇದರ ಕಾರಣಕ್ಕಾಗಿ ಮಕ್ಕಳು ಶಿಕ್ಷಣದ ಮೇಲೆ ಆಸಕ್ತಿ ತೋರುವುದಿಲ್ಲ, ಕಲಿಕೆ ಗುಣಮಟ್ಟ ಕುಂದುತ್ತ ಹೋಗುತ್ತದೆ, ಶಿಕ್ಷಕರಿಗೆ ಉತ್ತರದಾಯಿತ್ವ ಇರುವುದಿಲ್ಲ, ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಕ್ಕಳ ಭವಿಷ್ಯಕ್ಕೆ ಅಂಧಕಾರ ಕವಿಯುತ್ತದೆ’’ ಎಂದು ವಾದಿಸುತ್ತಾರೆ. ಆದರೆ ‘ಫೇಲು ಮಾಡುವಂತಿಲ್ಲ ನೀತಿ’ಯನ್ನು ವಿರೋಧಿಸುವವರು ಮೇಲೆ ತಿಳಿಸಿದ ಸಾರ್ವಜನಿಕ ಶಿಕ್ಷಣದ ವೈಫಲ್ಯ, ಸಮಾಜೋ-ಆರ್ಥಿಕ ಕಾರಣಗಳ ದುರಂತ ಕುರಿತು ಪ್ರಶ್ನಿಸಿದಾಗ ನಿರುತ್ತರರಾಗುತ್ತಾರೆ. ಶಿಕ್ಷಣದ ಖಾಸಗೀಕರಣವೂ ಸಹ ಈ ದುರಂತಕ್ಕೆ ಕಾರಣವಲ್ಲವೇ ಎನ್ನುವ ಪ್ರಶ್ನೆಗೆ ಅವರ ಬಳಿ ಉತ್ತರವಿಲ್ಲ. ಅಲ್ಲದೆ ಫೇಲು ಮಾಡಿದ ನಂತರ ಅದೇ ತರಗತಿಯಲ್ಲಿ ಪುನರಾವರ್ತನೆಯಾದರೆ ಮಕ್ಕಳ ಶಿಕ್ಷಣದ ಗುಣಮಟ್ಟ ಸುಧಾರಿಸುತ್ತದೆಯೇ ಎನ್ನುವುದಕ್ಕೆ ಯಾವುದೇ ಅಂಕಿಅಂಶಗಳ ಪುರಾವೆ ಇಲ್ಲ.
ಆದರೆ ಈ ಎಲ್ಲ ಕೊರತೆಗಳನ್ನು ನೀಗಿಸಲೆಂದೇ ಈ ಕಾಯ್ದೆಯ ಪರಿಚ್ಛೇದ 29(2)(ಎ)ಯಲ್ಲಿ ವಿಸ್ತಾರವಾದ ಮತ್ತು ನಿರಂತರವಾದ ಮೌಲ್ಯಮಾಪನ (CCE) ಪದ್ಧತಿಯನ್ನು ಜಾರಿಗೆ ತರಲಾಯಿತು. ಇದರ ಆಶಯವೆಂದರೆ ಶಿಕ್ಷಕ ಸಿಲಬಸ್‌ನ ಭಾಗವೊಂದನ್ನು ಮುಗಿಸಿದ ನಂತರವಷ್ಟೇ ಮೌಲ್ಯಮಾಪನವನ್ನು ಕೈಗೊಳ್ಳಬೇಕು. ಈ ಪದ್ಧತಿಯಿಂದ ಶಿಕ್ಷಕನಿಗೆ ತಾನು ಹೇಗೆ ಬೋಧಿಸಿದ್ದೇನೆ ಎಂದು ಆ ಕೂಡಲೇ ಅರಿವಾಗುತ್ತದೆ. ಒಂದು ವೇಳೆ ನಿರೀಕ್ಷಿತ ಮಟ್ಟದಲ್ಲಿ ಕಲಿಕೆ ಇಲ್ಲದಿದ್ದ ಪಕ್ಷದಲ್ಲಿ ಬದಲಾವಣೆಗೊಂಡ ಪಠ್ಯದೊಂದಿಗೆ ಆ ಭಾಗವನ್ನು ಮರಳಿ ಬೋಧಿಸಬೇಕಾಗುತ್ತದೆ. ಇದೂ ಸಹ ಫೇಲು ಮಾಡುವಂತಿಲ್ಲ ಸಿದ್ಧಾಂತಕ್ಕಾಗಿ ಮೂಲಭೂತ ಸೌಲಭ್ಯಗಳನ್ನು ಮತ್ತು ಇನ್ನಿತರ ಸೌಕರ್ಯಗಳನ್ನು ಬಯಸುತ್ತದೆ. ಇದನ್ನು ಸಾಧಿಸಲು ಶಿಥಿಲಗೊಳ್ಳುತ್ತಿರುವ, ವ್ಯಾಪಾರೀಕರಣಗೊಳ್ಳುತ್ತಿರುವ ಶಿಕ್ಷಣ ವ್ಯವಸ್ಥೆಯನ್ನು ಶೀಘ್ರವಾಗಿ ಸರಿಪಡಿಸಬೇಕಾಗುತ್ತದೆ. ಆದರೆ ಈ ಕಾಯ್ದೆಯಲ್ಲಿ ಈ ಸುಧಾರಣೆಗಳಿಗೆ ಅವಕಾಶಗಳಿಲ್ಲ. ಅದರೆ ಈ ನೀತಿಯಲ್ಲಿರುವ ಅನೇಕ ತೊಡಕುಗಳನ್ನು ನಿವಾರಿಸಲು ಸಹ ಸಾರ್ವಜನಿಕ ಶಿಕ್ಷಣ ಇಲಾಖೆಯು ವಿಫಲವಾಯಿತು.

ಮರೆಯುವ ಮುನ್ನ

ಇಂದಿನ ಅಸಮಾನ ಶಿಕ್ಷಣ ವ್ಯವಸ್ಥೆಯಲ್ಲಿ ಮಕ್ಕಳಿಗೆ ಪಬ್ಲಿಕ್ ಪರೀಕ್ಷೆ ಎನ್ನುವುದು ಒಂದು ಭಯಂಕರ ದುಃಸ್ವಪ್ನದಂತೆ. ಅಂಚಿನಲ್ಲಿರುವ ಸಮುದಾಯದ ಬಡಕುಟುಂಬದ ಮಕ್ಕಳಲ್ಲಿ ಇದು ಭಯವನ್ನು ಹುಟ್ಟಿಸುತ್ತದೆ. ಇದು ಅಕ್ಷರ ವಂಚಿತರನ್ನು ಶೈಕ್ಷಣಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತಷ್ಟು ದುರ್ಬಲಗೊಳಿಸುತ್ತದೆ. ಪರಿಸ್ಥಿತಿ ಇಷ್ಟೊಂದು ಗಂಭೀರವಾಗಿರುವಾಗ ಶಿಕ್ಷಣ ಮಂತ್ರಿ ಸುರೇಶ್ ಕುಮಾರ್ ಅವರ ಈ ಅಸೂಕ್ಷ್ಮ, ಅರ್ಥಹೀನ ನಿರ್ಧಾರದಿಂದಾಗಿ ಗ್ರಾಮೀಣ ಭಾಗದ ಮಕ್ಕಳ ಶಿಕ್ಷಣದ ಭವಿಷ್ಯಕ್ಕೆ ದೊಡ್ಡ ಮಟ್ಟದ ಕೊಡಲಿ ಏಟು ಬೀಳುತ್ತದೆ. ಶಿಕ್ಷಣ ಸಚಿವರ ಈ ನಿರ್ಧಾರ ಖಾಸಗೀಕರಣಕ್ಕೆ ಮುನ್ನುಡಿ ಬರೆದಂತಿದೆ. ಶಿಕ್ಷಣ ತಜ್ಞ ಅನಿಲ್ ಸದ್ಗೋಪಾಲ್ ಅವರು ಫಿನ್ಲೆಂಡ್‌ನಿಂದ ಪಾಠ ಕಲಿಯಬೇಕಿದೆ. ಪ್ರಜಾತಾಂತ್ರಿಕವಾದ, ವಿಕೇಂದ್ರೀಕೃತವಾದ, ಪಾಲ್ಗೊಳ್ಳುವಿಕೆಯ ಮಾದರಿಯ ನೆರೆಹೊರೆಯ ಶಾಲೆಗಳ ಆಧಾರದ ಮೇಲೆ ಈಗಿನ ಶಾಲಾ ವ್ಯವಸ್ಥೆಯನ್ನು ಸಂಪೂರ್ಣವಾಗಿ ಸಾರ್ವಜನಿಕ ಹೂಡಿಕೆಯ ಸಮಾನ ಶಾಲಾ ವ್ಯವಸ್ಥೆಯನ್ನಾಗಿ ಪರಿವರ್ತಿಸಬೇಕಾಗಿದೆ. ಶಿಕ್ಷಣದ ವ್ಯಾಪಾರೀಕರಣ ಮತ್ತು ಸಾರ್ವಜನಿಕ ಹೂಡಿಕೆಯನ್ನು ಹಿಂದೆಗೆದುಕೊಂಡು ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಸಿದ್ಧಾಂತ ಎನ್ನುವ ಎರಡು ಅಪಾಯಕಾರಿ ನೀತಿಗಳು ಬದಲಾಗಬೇಕು. ಇದನ್ನು ಜಾರಿಗೊಳಿಸಲು ಈಗಿನ ಶಿಕ್ಷಣ ಹಕ್ಕು ಕಾಯ್ದೆಯನ್ನು ಹಿಂದೆಗೆದುಕೊಂಡು ಹೊಸ ಕಾಯ್ದೆಯನ್ನು ರೂಪಿಸಬೇಕಾಗಿದೆ ಎಂದು ವಿವರಿಸುತ್ತಾರೆ
ಸಮಾನ ಶಿಕ್ಷಣದ ಅಂತಿಮ ಗುರಿಯಾದ ನೆರೆಹೊರೆ ಶಾಲಾ ವ್ಯವಸ್ಥೆಯನ್ನು ಜಾರಿಗೊಳಿಸುವುದೇ ಈಗ ಉಳಿದಿರುವ ಒಂದೆ ದಾರಿ

Writer - ಬಿ. ಶ್ರೀಪಾದ ಭಟ್

contributor

Editor - ಬಿ. ಶ್ರೀಪಾದ ಭಟ್

contributor

Similar News