ಟೆಂಪೋ ಢಿಕ್ಕಿ: ನಿವೃತ್ತ ಯೋಧ ಮೃತ್ಯು

Update: 2019-10-11 16:22 GMT

ಬೆಂಗಳೂರು, ಅ.11: ವೇಗವಾಗಿ ಬಂದ ಟೆಂಪೋ ವಾಹನ ಢಿಕ್ಕಿ ಹೊಡೆದು ಬೈಕ್‌ನಲ್ಲಿ ಹೋಗುತ್ತಿದ್ದ ನಿವೃತ್ತ ಯೋಧ ಮೃತಪಟ್ಟಿರುವ ಘಟನೆ ಯಲಹಂಕದ ರಾಮಚಂದ್ರಾಪುರದ ಮುಖ್ಯರಸ್ತೆಯಲ್ಲಿ ನಡೆದಿದೆ ಎನ್ನಲಾಗಿದೆ.

ರಾಮಚಂದ್ರಾಪುರದ ಜಾನ್ಸಿ ಮಂಜುನಾಥ್ (66) ಮೃತರು ಎಂದು ತಿಳಿದುಬಂದಿದೆ.

ಸೇನೆಯಿಂದ ನಿವೃತ್ತರಾಗಿ ರಾಮಚಂದ್ರಾಪುರದಲ್ಲಿ ವಾಸಿಸುತ್ತಿದ್ದ ಮಂಜುನಾಥ್, ಗುರುವಾರ ಕೆಲಸದ ಮೇಲೆ ಬೈಕ್‌ನಲ್ಲಿ ಹೋಗುತ್ತಿದ್ದರು. ಮಾರ್ಗ ಮಧ್ಯೆ ರಾಮಚಂದ್ರಾಪುರದ ಮುಖ್ಯ ರಸ್ತೆಯಲ್ಲಿ ವಿದ್ಯಾರಣ್ಯಪುರದ ಕಡೆಯಿಂದ ಎದುರಿನಿಂದ ಬಂದ ನಂದಿ ಟೆಂಪೋ ವಾಹನ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಘಟನೆಯಲ್ಲಿ ಕೆಳಗೆ ಬಿದ್ದು ತಲೆಗೆ ಗಂಭೀರವಾಗಿ ಗಾಯಗೊಂಡಿದ್ದ ಮಂಜುನಾಥ್ ಅವರನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿರುವ ಯಲಹಂಕ ಸಂಚಾರ ಠಾಣಾ ಪೊಲೀಸರು, ವಾಹನ ಚಾಲಕನನ್ನು ಬಂಧಿಸಿ, ಮುಂದಿನ ತನಿಖೆ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News