ಆಯುಕ್ತರ ಆದೇಶಕ್ಕೆ ಬೆಲೆ ನೀಡದ ಬಿಬಿಎಂಪಿ ಸಿಬ್ಬಂದಿಗಳು
Update: 2019-10-12 17:09 GMT
ಬೆಂಗಳೂರು, ಅ.11: ವಿಧಾನಸಭೆ ಅಧಿವೇಶನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಶನಿವಾರದಂದು ಕರ್ತವ್ಯಕ್ಕೆ ಹಾಜರಾಗುವಂತೆ ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಅವರು ಸಿಬ್ಬಂದಿಗಳಿಗೆ ಸುತ್ತೋಲೆ ಹೊರಡಿಸಿದ್ದರು. ಆದರೆ, ಆಯುಕ್ತರ ಆದೇಶಕ್ಕೆ ಸಿಬ್ಬಂದಿಗಳು ಕಿಂಚಿತ್ತೂ ಬೆಲೆ ಕೊಟ್ಟಿಲ್ಲ.
ಬಜೆಟ್ ಅಧಿವೇಶನ ನಡೆಯುತ್ತಿದ್ದು, ಎರಡನೇ ಶನಿವಾರವಿದ್ದರೂ ರಜೆಯನ್ನು ರದ್ದುಗೊಳಿಸಿ ವಿಧಾನಸೌಧದಲ್ಲಿ ಕರ್ತವ್ಯ ನಿರ್ವಹಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪಾಲಿಕೆಯಲ್ಲೂ ಕರ್ತವ್ಯ ನಿರ್ವಹಿಸಬೇಕೆಂದು ಬಿಬಿಎಂಪಿ ಸಿಬ್ಬಂದಿಗಳಿಗೆ ಸೂಚನೆ ನೀಡಲಾಗಿತ್ತು. ಆದರೆ, ಸಿಬ್ಬಂದಿಗಳು ಮಾತ್ರ ನಮಗೂ ಇದಕ್ಕೂ ಸಂಬಂಧವಿಲ್ಲ ಎಂಬಂತೆ ಮನೆಯಲ್ಲೆ ಉಳಿದುಕೊಂಡಿದ್ದಾರೆ.
ಡಿ ದರ್ಜೆ ನೌಕರರು ಬಂದು ಬಾಗಿಲು ತೆರೆದರೂ ಅಧಿಕಾರಿಗಳು ಮಾತ್ರ ಕಚೇರಿಗೆ ಆಗಮಿಸಿಲ್ಲ. ಇದರಿಂದ ಸಮಸ್ಯೆ ಹೇಳಿಕೊಳ್ಳಲು ಬಂದಂತಹ ಜನ ಸಾಮಾನ್ಯರೂ ಅಧಿಕಾರಿಗಳಿಗಾಗಿ ಕಾದು ಕಾದು ನಂತರ ಹಿಂತಿರುಗಿದ್ದಾರೆ ಎನ್ನಲಾಗಿದೆ.