​ಸಾಹಿತ್ಯ ಅಕಾಡಮಿಗಳು ರಾಜಕೀಯ ಮೇಲಾಟದ ವೇದಿಕೆಗಳಲ್ಲ: ಎಸ್‌ಡಿಪಿಐ ರಾಜ್ಯಾಧ್ಯಕ್ಷ ಇಲ್ಯಾಸ್ ತುಂಬೆ

Update: 2019-10-21 12:56 GMT

ಬೆಂಗಳೂರು, ಅ.21: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿ ಹಾಗೂ ತುಳು ಸಾಹಿತ್ಯ ಅಕಾಡಮಿಗಳಿಗೆ ರಾಜ್ಯ ಸರಕಾರ ಅರ್ಹರಲ್ಲದ ಹಾಗೂ ಸಂಬಂಧಪಡದ ವ್ಯಕ್ತಿಗಳನ್ನು ಸದಸ್ಯರನ್ನಾಗಿ ನೇಮಕಗೊಳಿಸಿದ್ದು ಸಾಹಿತ್ಯ ಅಕಾಡಮಿಗಳಲ್ಲಿ ಪ್ರತಿಷ್ಠಾ ರಾಜಕಾರಣ ಮಾಡುವ ಚಪಲಕ್ಕೀಡಾಗಿದೆಯಲ್ಲದೆ ಸ್ವತಃ ರಾಜ್ಯ ಸರಕಾರ ಅಪಹಾಸ್ಯಕ್ಕೀಡಾಗಿದೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ರಾಜ್ಯಾಧ್ಯಕ್ಷ ಇಲ್ಯಾಸ್ ಮುಹಮ್ಮದ್ ತುಂಬೆ ಅಣಕಿಸಿದ್ದಾರೆ.

ಬ್ಯಾರಿ ಸಾಹಿತ್ಯ ಅಕಾಡಮಿಗೆ ಬ್ಯಾರಿ ಸಮುದಾಯಕ್ಕೆ ಸೇರದ ಮತ್ತು ಬ್ಯಾರಿ ಭಾಷೆಯ ಗಂಧಗಾಳಿ ತಿಳಿಯದ ವ್ಯಕ್ತಿಗಳನ್ನು ಸದಸ್ಯರನ್ನಾಗಿ ನೇಮಿಸಿರುವ ಹಿಂದಿನ ಉದ್ದೇಶವೇನು? ಎಂದು ಪ್ರಶ್ನಿಸಿರುವ ಇಲ್ಯಾಸ್ ಮುಹಮ್ಮದ್, ಕನ್ನಡ ಭಾಷೆ ಗೊತ್ತಿಲ್ಲದ ಮರಾಠಿಗರನ್ನು ಕನ್ನಡ ಸಾಹಿತ್ಯ ಅಕಾಡಮಿಗೆ ಸದಸ್ಯರನ್ನಾಗಿ ನೇಮಕ ಮಾಡಿದರೆ ಎಂತಹ ವಿರೋಧಾಭಾಸ ಹಾಗೂ ಕುಚೋದ್ಯವಾಗುತ್ತದೆಯಲ್ಲವೇ? ಅದೇ ರೀತಿ ಬ್ಯಾರಿ ಸಾಹಿತ್ಯ ಅಕಾಡಮಿಗೆ ಸರಕಾರ ಇಬ್ಬರು ಮಹಿಳೆಯರ ಸಹಿತ ಬ್ಯಾರಿಯೇತರ ಸಮುದಾಯದ ವ್ಯಕ್ತಿಗಳನ್ನು ನೇಮಕ ಮಾಡಿರುವುದು ಬ್ಯಾರಿ ಸಂಸ್ಕೃತಿ ಮತ್ತು ಸಾಹಿತ್ಯಕ್ಕೆ ಮಾಡಿದ ಅವಮಾನವಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ತುಳು ಸಾಹಿತ್ಯ ಅಕಾಡಮಿಗೂ ತುಳು ಸಾಹಿತ್ಯಕ್ಕೆ ಅರ್ಹರಲ್ಲದ ವ್ಯಕ್ತಿಗಳನ್ನು ನೇಮಕ ಮಾಡಿ ಯೋಗ್ಯರಿಗೆ ಅವಕಾಶಗಳನ್ನು ತಿರಸ್ಕರಿಸಲಾಗಿದೆ. ಕೊಂಕಣಿ ಸಾಹಿತ್ಯ ಅಕಾಡಮಿಯಲ್ಲೂ ಕ್ರೈಸ್ತ ಕೊಂಕಣಿಗಳಿಗೆ ಅವಕಾಶವನ್ನು ನಿರಾಕರಿಸಲಾಗಿದೆ. ಇಷ್ಟೆಲ್ಲಾ ಕುಚೋದ್ಯಗಳಿಗೆ ಪೂರಕವಾಗುವಂತೆ ಬ್ಯಾರಿ, ತುಳು, ಕೊಂಕಣಿ ಸಾಹಿತ್ಯ ಅಕಾಡಮಿಗಳ ನೂತನ ಸದಸ್ಯರಾಗಿ ಸರಕಾರದಿಂದ ನೇಮಕ ಮಾಡಿಕೊಂಡವರು ಸರಣಿ ರಾಜೀನಾಮೆ ನೀಡುತ್ತಿರುವುದು ರಾಜ್ಯ ಸರಕಾರದ ತಪ್ಪುಧೋರಣೆಗೆ ಹಿಡಿದ ಕನ್ನಡಿಯಾಗಿದೆ. ರಾಜ್ಯದ ಸಂಸ್ಕೃತಿ ಸಚಿವ ಸಿ.ಟಿ. ರವಿ ಮತ್ತು ಸಾಹಿತ್ಯ ಅಕಾಡಮಿಗೆ ಸದಸ್ಯರನ್ನಾಗಿ ನೇಮಿಸುವಂತೆ ಹೆಸರು ಸೂಚಿಸಿದ ಜಿಲ್ಲೆಯ ಶಾಸಕರು ಈ ಅಸಂಬದ್ಧತೆಯ ಬಗ್ಗೆ ಬಹಿರಂಗ ಕ್ಷಮೆ ಕೇಳಬೇಕು. ಸಾಹಿತ್ಯ ಅಕಾಡಮಿಗಳು ಆಯಾಯ ಸಾಹಿತ್ಯ-ಸಂಸ್ಕೃತಿಯ ವಿಕಾಸ ಹಾಗೂ ವೈಭವಕ್ಕೆ ವೇದಿಕೆಗಳಾಗಬೇಕೇ ಹೊರತು ಸರಕಾರ ಹಾಗೂ ರಾಜಕೀಯ ಪಕ್ಷಗಳ ಪ್ರತಿಷ್ಠೆಯನ್ನು ಸಾಬೀತುಪಡಿಸುವ ರಣರಂಗವಾಗಬಾರದು. ಪಕ್ಷ ಭೇದವಿಲ್ಲದೆ ಸಾಹಿತ್ಯ ಸಂಸ್ಕೃತಿಗಳಿಗೆ ಕೊಡುಗೆ ನೀಡುವ ವ್ಯಕ್ತಿತ್ವಗಳನ್ನೇ ಇಂತಹ ಸಾಹಿತ್ಯ ಅಕಾಡಮಿಗಳಿಗೆ ನೇಮಿಸಿ ರಾಜ್ಯದ ವೈವಿಧ್ಯಮಯ ಸಂಸ್ಕೃತಿಯನ್ನು ಬೆಳೆಸಿ ಪ್ರೋತ್ಸಾಹಿಸಬೇಕಿದೆ ಎಂದು ಇಲ್ಯಾಸ್ ಮುಹಮ್ಮದ್ ತುಂಬೆ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News