ಬೆಂಗಳೂರು: ತೆರಿಗೆ ಬಾಕಿ ಉಳಿಸಿಕೊಂಡಿದ್ದ ಕಲ್ಯಾಣ ಮಂಟಪ, ಗಾರ್ಮೆಂಟ್ಸ್ ಗೆ ಬೀಗ

Update: 2019-10-23 17:19 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಅ.23: ಸುಮಾರು ಒಂದು ಕೋಟಿಗೂ ಅಧಿಕ ತೆರಿಗೆ ಬಾಕಿ ಉಳಿಸಿಕೊಂಡಿದ್ದ ಯಲಹಂಕ ವಲಯದಲ್ಲಿರುವ ಎರಡು ಕಲ್ಯಾಣ ಮಂಟಪ ಮತ್ತು ಒಂದು ಗಾರ್ಮೆಂಟ್ಸ್ಗೆ ಬಿಬಿಎಂಪಿ ಅಧಿಕಾರಿಗಳು ಬೀಗ ಜಡಿದಿದ್ದಾರೆ.

ಯಲಹಂಕ ವಲಯದ ಜಂಟಿ ಆಯುಕ್ತ ಡಾ.ಅಶೋಕ್ ಮಾರ್ಗದರ್ಶನದಲ್ಲಿ ಬ್ಯಾಟರಾಯನಪುರ ಉಪವಿಭಾಗದ ಸಹಾಯಕ ಕಂದಾಯಾಧಿಕಾರಿ ಗುರುಪ್ರಸನ್ನ ಅವರ ನೇತೃತ್ವದಲ್ಲಿ ಪಾಲಿಕೆ ಅಧಿಕಾರಿಗಳು ಥಣಿಸಂದ್ರ ಮುಖ್ಯರಸ್ತೆಯಲ್ಲಿರುವ ಆನಂದಮೂರ್ತಿ ಮಾಲಕತ್ವದ ರಾಯಲ್ ಗ್ರಾಂಡ್ ಕಲ್ಯಾಣ ಮಂಟಪದ ಮೇಲೆ ದಾಳಿ ನಡೆಸಿದರು.

ಕಳೆದ ಏಳೆಂಟು ವರ್ಷಗಳಿಂದ ಆನಂದಮೂರ್ತಿ ಸುಮಾರು 30 ಲಕ್ಷ ರೂ. ಆಸ್ತಿ ತೆರಿಗೆ ಪಾವತಿಸಿರಲಿಲ್ಲ. ಕೆ.ಪದ್ಮನಾಭಯ್ಯ ಮತ್ತು ಪ್ರಕಾಶ್ ಎಂಬುವರ ಮಾಲಕತ್ವದ ಮಂಜುನಾಥ ಪ್ಯಾಲೇಸ್ ಕಲ್ಯಾಣಮಂಟಪದ ಮೇಲೆ ದಾಳಿ ಮಾಡಲಾಯಿತು. ಇವರು ಕೂಡ 20ಲಕ್ಷ ರೂ. ತೆರಿಗೆ ಬಾಕಿ ಉಳಿಸಿದ್ದರು. ಥಣಿಸಂದ್ರದ ಅಗ್ರಹಾರದಲ್ಲಿರುವ ಗಾರ್ಮೆಂಟ್ಸ್ ಮಾಲಕ ಎಂ.ವಿ.ಶ್ರೆಧರ್ ಎಂಬುವರು ಸುಮಾರು 6 ಲಕ್ಷ ರೂ. ತೆರಿಗೆ ಬಾಕಿ ಉಳಿಸಿದ್ದರು. ಇವರಿಗೆ ಹಲವು ಬಾರಿ ನೋಟಿಸ್ ಜಾರಿ ಮಾಡಿದ್ದರೂ ಕೂಡ ಸೂಕ್ತವಾಗಿ ಪ್ರತಿಕ್ರಿಯಿಸಿರಲಿಲ್ಲ. ಅಲ್ಲದೆ ತೆರಿಗೆ ಕಟ್ಟಿರಲಿಲ್ಲ.

ಈ ಮೂವರು ತೆರಿಗೆ ಕಳ್ಳರ ವಿರುದ್ಧ ಈಗಾಗಲೇ ಜಪ್ತಿ ವಾರೆಂಟ್ ಕೊಡಲಾಗಿದೆ. ಯಲಹಂಕ ಜಂಟಿ ವಲಯ ಅಶೋಕ್ ಮಾರ್ಗದರ್ಶನದಂತೆ ಈ ಮೂರೂ ಆಸ್ತಿಗಳಿಗೆ ಬೀಗ ಹಾಕಿದ್ದೇವೆ ಎಂದು ಸಹಾಯಕ ಕಂದಾಯ ಅಧಿಕಾರಿ ಗುರುಪ್ರಸನ್ನ ತಿಳಿಸಿದರು.

ಒಟ್ಟು ಈ ಮೂರು ಆಸ್ತಿಗಳಿಂದ 60 ಲಕ್ಷ ರೂ. ತೆರಿಗೆ, ಬಡ್ಡಿ ಸೇರಿ ಒಂದು ಕೋಟಿ ಬಾಕಿ ಇದೆ. ಕಂದಾಯ ವಸೂಲಾತಿ ಕಾರ್ಯಕ್ರಮದಡಿ ನಾವು ಇವುಗಳಿಗೆ ಬೀಗ ಜಡಿದಿದ್ದೇವೆ. ಸದ್ಯದಲ್ಲೇ ಯಾರ್ಯಾರು ಹೆಚ್ಚು ತೆರಿಗೆ ಬಾಕಿ ಉಳಿಸಿದ್ದಾರೋ ಅಂಥವರ ಪಟ್ಟಿ ಮಾಡಿ ಪ್ರತಿ ವಾರ ದಾಳಿ ನಡೆಸಿ ತೆರಿಗೆ ಬಾಕಿ ಇರುವ ಆಸ್ತಿಗಳಿಗೆ ಬೀಗ ಜಡಿಯುತ್ತೇವೆ ಎಂದು ಗುರುಪ್ರಸನ್ನ ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News