ಬಹುತ್ವದ ವಿಜಯ

Update: 2019-10-24 18:26 GMT

ನವಭಾರತದ ನಿರ್ಮಾಣದಲ್ಲಿ ಹಿಂದಿ ವಹಿಸಿದ ಮಹತ್ವಪೂರ್ಣ ಪಾತ್ರವನ್ನು ಯಾರೂ ಅಲ್ಲಗಳೆಯುವುದಿಲ್ಲ. ಅದು ಸಾಹಿತ್ಯ ಮತ್ತು ಸಂಸ್ಕೃತಿಗೆ ನೀಡಿರುವ ಕೊಡುಗೆ ಕೂಡ ಪ್ರಶ್ನಾತೀತ. ಆದರೆ ಅದು ಮಾತ್ರ ದೇಶವನ್ನು ಒಂದುಗೂಡಿಸುವ ಅಂಶ ಎನ್ನುವುದು ಒಂದು ಪ್ರಶ್ನಾರ್ಹ ನಿಲುವು. ಹೀಗೆ ಹೇಳುವುದು ಇತರ ಎಲ್ಲ ಭಾರತೀಯ ಭಾಷೆಗಳ ಮಹತ್ವ ಮತ್ತು ಸ್ವಾಭಿಮಾನವನ್ನು ಅವಮಾನಿಸಿದಂತೆ ಆಗುತ್ತದೆ. ಬಹುಮತೀಯವಾದ ಸಿದ್ಧಾಂತದಿಂದ ನಿಯಂತ್ರಿಸಲ್ಪಡುವ ಒಂದು ಸರಕಾರದಿಂದ ಇಂತಹ ನಿಲುವು ಕೇಳಿ ಬಂದಾಗ ಅದು ಇನ್ನಷ್ಟು ಅಪಾಯಕಾರಿಯಾಗುತ್ತದೆ.


ಸಾವಿರಾರು ಉಪ ಭಾಷೆಗಳು ಹಾಗೂ ವ್ಯಾಪಕವಾಗಿ ಜನರು ಮಾತನಾಡುವ ನೂರಕ್ಕೂ ಹೆಚ್ಚು ಭಾಷೆಗಳನ್ನು ಹೊಂದಿರುವ ಒಂದು ರಾಷ್ಟ್ರ ಭಾರತ. 22 ಭಾಷೆಗಳಿಗೆ ಅಧಿಕೃತ ಭಾಷೆಗಳ ಸ್ಥಾನಮಾನವಿದೆ. ಹೀಗೆ ಭಾರತದ ಭಾಷಾ ಶ್ರೀಮಂತಿಕೆ ಅದರ ಬಹುತ್ವದ ಸಂಸ್ಕೃತಿಯನ್ನು ಇನ್ನಷ್ಟು ಶ್ರೀಮಂತವಾಗಿಸಿದೆ. ರಾಜಕೀಯ ಅಧಿಕಾರ ಹೊಂದಿರುವವರಿಗೆ ಈ ಭಾಷೆಗಳ ಇತಿಹಾಸ ಮತ್ತು ಇವುಗಳು ಆಧುನಿಕ ಭಾರತದ ನಿರ್ಮಾಣದಲ್ಲಿ ವಹಿಸಿದ ಪಾತ್ರ ತಿಳಿದಿರಬೇಕಾದ್ದು ಅವರ ಕರ್ತವ್ಯವಾಗಿದೆ. ಸಂವಿಧಾನ ಸಭೆಯಲ್ಲಿ ಕೂಡ ಭಾರತದ ಭಾಷಾ ನೀತಿಯ ಬಿರುಸಿನ ಚರ್ಚೆ ನಡೆದಿತ್ತು. ಭಾರತದ ರಾಜಕೀಯ ನಾಯಕರು ಯಾವುದೇ ಒಂದು ನಿರ್ದಿಷ್ಟ ಭಾಷೆಗೆ ಅದು ದೇಶವನ್ನು ಒಂದುಗೂಡಿಸುವ ಭಾಷೆ ಎಂಬ ವರದಿ ನೀಡಲು ಮುಂದಾಗಲಿಲ್ಲ. ಈ ನಿಟ್ಟಿನಲ್ಲಿ ಈ ಹಿಂದಿನ ನಾಯಕರಿಗಿದ್ದ ತಿಳುವಳಿಕೆ, ವಿವೇಕ ಬದಲಾದ ಹಿಂದಿನ ಕಾಲದಲ್ಲಿ ಕಾಣೆಯಾಗುತ್ತಿರುವಂತೆ ತೋರುತ್ತಿದೆ.

ಉದಾಹರಣೆಗೆ ಗೃಹ ಸಚಿವರು ಭಾಷಾ ವಿಷಯವನ್ನು ನಿಭಾಯಿಸುತ್ತಿರುವ ರೀತಿಯನ್ನೇ ಗಮನಿಸಬಹುದು. ಅವರ ನಿಲುವು ಬೇಜವಾಬ್ದಾರಿಯುತವಾದದ್ದೆಂದು ಹಲವರು ಹೇಳಿದ್ದಾರೆ. ಈ ಸೂಕ್ಷ್ಮ ವಿಷಯದಲ್ಲಿ ಅವರು ಐದು ದಿನಗಳ ಅವಧಿಯಲ್ಲಿ ಎರಡು ಹೇಳಿಕೆಗಳನ್ನು ನೀಡಿದರು. ಮೊದಲನೆಯದಾಗಿ ಹಿಂದಿ ಭಾಷೆ ಮಾತ್ರ ಭಾರತವನ್ನು ಒಂದುಗೂಡಿಸಬಲ್ಲದು, ಏಕೀಕರಿಸಬಲ್ಲದು ಎಂದು ಸೆಪ್ಟಂಬರ್ 14ರಂದು ಹೇಳಿದರು. ಬಳಿಕ ಸೆಪ್ಟಂಬರ್ 18ರಂದು ಅವರು ತನ್ನ ಹೇಳಿಕೆಯಿಂದ ಹಿಂದೆ ಸರಿದು ಹಿಂದಿಯನ್ನು ಎರಡನೆಯ ಭಾಷೆಯಾಗಿ ಬಳಸಿಕೊಳ್ಳಬೇಕಂದಷ್ಟೇ ತಾನು ಜನರಲ್ಲಿ ವಿನಂತಿಸಿಕೊಂಡಿದ್ದು ಎಂದು ಹೇಳಿದರು. ಅವರು ತನ್ನ ಸೆಪ್ಟಂಬರ್ 14ರ ಹೇಳಿಕೆಯಿಂದ ಹಿಂದೆ ಸರಿದದ್ದು ದೇಶದ ಜನರ ಗೆಲುವು. ಅದು ಭಾರತದ ಬಹುಭಾಷಿಕ ಬಹುತ್ವದ ಸಂಸ್ಕೃತಿಯ ಶ್ರೇಷ್ಠತೆಯನ್ನು ಮತ್ತೊಮ್ಮೆ ಘೋಷಿಸಿತು. ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದತಿ ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿಯ ಅಂತಿಮ ಯಾದಿಯ ಪ್ರಕಟನೆಯ ಬಳಿಕ ಹಿಂದಿಯನ್ನು ಈ ತರಹ ಬಳಸುವ ಮೂಲಕ ತಾನು ಮತದಾರರನ್ನು ಸುಲಭವಾಗಿ ಓಲೈಸಬಹುದು; ಅವರ ಮನಸ್ಸನ್ನು ಗೆದ್ದು ಬಿಡಬಹುದು ಎಂದು ಬಿಜೆಪಿ ತಿಳಿದಿರಬಹುದು. ಆದರೆ ದೇಶದ ಜನರ ವಿರೋಧದಿಂದಾಗಿ, ಪ್ರತಿಭಟನೆಯಿಂದಾಗಿ ಅದರ ಲೆಕ್ಕಾಚಾರ ತಲೆಕೆಳಗಾಯಿತು.

ತನ್ನ ಹೇಳಿಕೆಯನ್ನು ಹಿಂತೆಗೆದುಕೊಳ್ಳುವಾಗ ‘‘ಇತರರು ರಾಜಕೀಯ ಮಾಡುತ್ತಿದ್ದಾರೆ’’ ಎಂದು ಗೃಹ ಸಚಿವರು ಆಪಾದಿಸಿದರು. ಅದೇನಿದ್ದರೂ ಅವರ ಮಾತುಗಳನ್ನು ಸಂಘ ಪರಿವಾರದ ರಾಜಕೀಯ ಸಂದರ್ಭದ ಒಳಗಡೆಯೇ ಇಟ್ಟು ಪರಿಶೀಲಿಸಬೇಕು. ಸಂಘ ಪರಿವಾರ ‘‘ಒಂದು ರಾಷ್ಟ್ರ, ಒಂದು ಸಂಸ್ಕೃತಿ, ಒಂದು ಭಾಷೆ’’ ಎನ್ನುತ್ತದೆ ಈ ವಿಚಾರಧಾರೆ ಸಂಘ ಪರಿವಾರದ ಸಿದ್ಧಾಂತಿಗಳ ಆದಿ ಭಾಗದ ಬೋಧನೆಗಳಲ್ಲಿ ಕಂಡುಬರುತ್ತದೆ. ‘ಬಂಚ್ ಆಫ್ ಥಾಟ್ಸ್’ ಎಂಬ ಪುಸ್ತಕದಲ್ಲಿ ಆರೆಸ್ಸೆಸ್ ನ ಮಾಜಿ ಮುಖ್ಯಸ್ಥ ಎಂ.ಎಸ್. ಗೊಳ್ವಾಲ್ಕರ್ ಹಿಂದಿಗೆ ಆದ್ಯತೆ ನೀಡುವ ಬಗ್ಗೆ ಬರೆದಿದ್ದರು. ಒಂದು ಭಾಷೆ ಪರಿಕಲ್ಪನೆ ಮತ್ತು ಅದರಿಂದ ಮೂಡಿಬರುವ ರಾಜಕಾರಣವು ಭಾರತದ ಸಾಂಸ್ಕೃತಿಕ ಭಾವ ಪುಂಜಗಳಿಗೆ ವಿರುದ್ಧವಾಗಿದೆ. ಅದು ದೇಶದ ಏಕತೆಯನ್ನು ದುರ್ಬಲಗೊಳಿಸುತ್ತದೆ. ಆದ್ದರಿಂದಲೇ ಭಾರತದಾದ್ಯಂತ ಜನರು ಭಾಷೆಯ ಕುರಿತು ಗೃಹ ಸಚಿವರ ನಿಲುವನ್ನು ಸ್ವಯಂ ಸ್ಫೂರ್ತವಾಗಿ ವಿರೋಧಿಸಿದರು. ಅವರ ಹೇಳಿಕೆಯು ದೇಶದ ಮೇಲೆ ಆರೆಸ್ಸೆಸ್ ಮತ್ತು ಬಿಜೆಪಿ ಹಿಂದಿಯನ್ನು ಹೇರಲು ನಡೆಸುತ್ತಿರುವ ಪ್ರಯತ್ನವೆಂದು ಜನರು ಸರಿಯಾಗಿಯೇ ಗ್ರಹಿಸಿದರು.

ನವಭಾರತದ ನಿರ್ಮಾಣದಲ್ಲಿ ಹಿಂದಿ ವಹಿಸಿದ ಮಹತ್ವಪೂರ್ಣ ಪಾತ್ರವನ್ನು ಯಾರೂ ಅಲ್ಲಗಳೆಯುವುದಿಲ್ಲ. ಅದು ಸಾಹಿತ್ಯ ಮತ್ತು ಸಂಸ್ಕೃತಿಗೆ ನೀಡಿರುವ ಕೊಡುಗೆ ಕೂಡ ಪ್ರಶ್ನಾತೀತ. ಆದರೆ ಅದು ಮಾತ್ರ ದೇಶವನ್ನು ಒಂದುಗೂಡಿಸುವ ಅಂಶ ಎನ್ನುವುದು ಒಂದು ಪ್ರಶ್ನಾರ್ಹ ನಿಲುವು. ಹೀಗೆ ಹೇಳುವುದು ಇತರ ಎಲ್ಲ ಭಾರತೀಯ ಭಾಷೆಗಳ ಮಹತ್ವ ಮತ್ತು ಸ್ವಾಭಿಮಾನವನ್ನು ಅವಮಾನಿಸಿದಂತೆ ಆಗುತ್ತದೆ. ಬಹುಮತೀಯವಾದ (ಮೆಜಾರಿಟೇರಿಯನಿಸಂ) ಸಿದ್ಧಾಂತದಿಂದ ನಿಯಂತ್ರಿಸಲ್ಪಡುವ ಒಂದು ಸರಕಾರದಿಂದ ಇಂತಹ ನಿಲುವು ಕೇಳಿ ಬಂದಾಗ ಅದು ಇನ್ನಷ್ಟು ಅಪಾಯಕಾರಿಯಾಗುತ್ತದೆ. ಅದು ಜನರಿಗೆ ‘ಹಿಂದಿ-ಹಿಂದೂ-ಹಿಂದುಸ್ಥಾನ್’ ಎಂಬ ಆರೆಸ್ಸೆಸ್‌ನ ಘೋಷಣೆಯನ್ನು ನೆನಪಿಸುತ್ತದೆ. ಅದನ್ನು ಗೃಹ ಸಚಿವರ ಎಲ್ಲ ಬೆಂಬಲಿಗರು ದೇಶದ ಇತರ ಎಲ್ಲ ಭಾಷೆಗಳು ರಾಷ್ಟ್ರವಿರೋಧಿ ಎಂದು ಪರಿಗಣಿಸಲು ಅವರು ತಮಗೆ ನೀಡಿದ ಕರೆ ಎಂದು ತಿಳಿಯಬಹುದೇ? ಅಯೋಧ್ಯೆ ಹಾಗೂ ಜಮ್ಮು ಮತ್ತು ಕಾಶ್ಮೀರದ ಕುರಿತು ಸೃಷ್ಟಿಸಲಾದ ಉನ್ಮಾದದ ಬಳಿಕ ಹಿಂದಿಯ ಹೆಸರಿನಲ್ಲಿ ಇತರ ಎಲ್ಲಾ ಭಾಷೆಗಳ ವಿರುದ್ಧ ಒಂದು ಹೊಸ ದಾಳಿ ನಡೆಸಲು ಇದೊಂದು ಕರೆ ಇರಬಹುದು.

ಇನ್ನು ಗೃಹ ಸಚಿವರ ಹೇಳಿಕೆಗಳು ಆಕಸ್ಮಿಕವೇ? ಎಂಬ ಪ್ರಶ್ನೆ ಇದೆ. ದೇಶವನ್ನು ಕಾಡುತ್ತಿರುವ ನಿಜವಾದ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆ ಕಡೆಗೆ ಸೆಳೆಯಲು ಅವರು ಪ್ರಜ್ಞಾಪೂರ್ವಕವಾಗಿ ಇಟ್ಟ ಹೆಜ್ಜೆ ಇರಬಹುದೇ ಇದು? ಅವರು ಹೇಳಿಕೆ ನೀಡಿ ಒಂದು ತಿಂಗಳ ಬಳಿಕವೂ ನೌಕರರು ನಿರುದ್ಯೋಗಿಗಳಾಗಿದ್ದಾರೆ. ಯಾಕೆಂದರೆ ಫ್ಯಾಕ್ಟರಿಗಳು ಮುಚ್ಚುತ್ತಲೇ ಇವೆ. ನಿರುದ್ಯೋಗದ ದರ ಕಳೆದ 45 ವರ್ಷಗಳಲ್ಲೇ ಗರಿಷ್ಠ ಮಟ್ಟ ತಲುಪಿದೆ. ಭಾರತದ ಅರ್ಥ ವ್ಯವಸ್ಥೆ ಹದಗೆಟ್ಟಿದೆ. ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಲಪಂಥೀಯ ರಾಷ್ಟ್ರವಾದಿ ಸರಕಾರವು ಬಚಾವಾಗುವುದಕ್ಕಾಗಿ ವಿದೇಶಿ ಬಂಡವಾಳದ ಬಾಗಿಲು ತಟ್ಟುತ್ತಿದೆ. ಹಿಂದಿ ಎಂಬ ಗುರಾಣಿ ಹಿಡಿದು ಜನರ ಕ್ರೋಧದಿಂದ ರಕ್ಷಿಸಿಕೊಳ್ಳಲು ಗೃಹ ಸಚಿವರು ಪ್ರಯತ್ನಿಸುತ್ತಿದ್ದಲ್ಲಿ ಅವರ ಆ ಯೋಜನೆ ಅವರಿಗೇ ತಿರುಗುಬಾಣವಾದಂತೆ ಕಾಣಿಸುತ್ತಿದೆ.


(ಲೇಖಕರು ಸಿಪಿಐ ರಾಷ್ಟ್ರೀಯ ಮಂಡಳಿಯ ಕಾರ್ಯದರ್ಶಿ ಹಾಗೂ ಸಂಸತ್ತಿನಲ್ಲಿ ಪಕ್ಷದ ನಾಯಕ)
ಕೃಪೆ: ದಿ ಹಿಂದೂ     
 

Writer - ಬಿನೊಯ್ ವಿಸ್ವಂ

contributor

Editor - ಬಿನೊಯ್ ವಿಸ್ವಂ

contributor

Similar News