ಶಿಕ್ಷಣ ಕ್ರಾಂತಿಯ ಸ್ಮಾರಕ ನಿರ್ಮಾಣವಾಗಲಿ

Update: 2019-10-25 18:28 GMT

‘‘ಹೆಣ್ಣೊಂದು ಕಲಿತರೆ, ಶಾಲೆಯೊಂದು ತೆರೆದಂತೆ’’ ಎಂದು ಮಹಾತ್ಮಾ ಗಾಂಧೀಜಿ ಹೇಳಿದ್ದಾರೆ. ಗಾಂಧೀಜಿಯವರ ಸಂದೇಶಕ್ಕೂ, ಮೈಸೂರು ಮಹಾರಾಜರ ಆಡಳಿತಕ್ಕೂ ಒಂದು ತಾತ್ವಿಕ ನೆಲೆಗಟ್ಟನ್ನೊದಗಿಸಿದ ಮೈಸೂರು ನಗರದ ಎನ್‌ಟಿಎಂ ಶಾಲೆ ಇಂದು ನಮ್ಮ ಮುಂದಿರುವ ಸಾಕ್ಷಿಪಜ್ಞೆಯಾಗಿದೆ.

ನಮ್ಮ ದೇಶದಲ್ಲಿ ವಿಪರ್ಯಾಸವೆಂದರೆ ಯಾವ ಮೂಲೆಗೆ ಹೋದರೂ ಸರಕಾರಿ ಶಾಲೆಗಳ ಗುಣಮಟ್ಟ, ಅದರ ಪರಿಸ್ಥಿತಿ ಅತ್ಯಂತ ಶೋಚನೀಯ ಪರಿಸ್ಥಿತಿಯಲ್ಲಿ ಇವೆ. ನಮ್ಮನ್ನಾಳುವ ಸರಕಾರಗಳು ಯಾರೇ ಅಧಿಕಾರಕ್ಕೆ ಬಂದರೂ ಸಹ ಅವರೊಂದಿಗೆ ಶಿಕ್ಷಣದ ಬಕಾಸುರ ಬಂಡವಾಳಶಾಹಿಗಳು ಸೇರಿಕೊಂಡು ಅವರ ಅಧಿಕಾರದ ಸುಪರ್ದಿಯಲ್ಲಿ ವಿಹರಿಸುತ್ತ ಸಾಧ್ಯವಾದಷ್ಟು ಮಟ್ಟಿಗೆ ಸರಕಾರಿ ಶಾಲೆಗಳನ್ನು ಮುಚ್ಚಿಸಿ ಆ ಸ್ಥಳವನ್ನು ಕಬಳಿಸುವ ಹುನ್ನಾರವನ್ನು ಎಲ್ಲಾ ಆಯಾಮದಲ್ಲೂ ಪ್ರಯತ್ನಿಸಿ ನಂತರ ಗೆಲ್ಲುತ್ತಾರೆ. ಇದಕ್ಕೆಲ್ಲ ಪೂರ್ವನಿಯೋಜಿತವಾಗಿ ಶಿಕ್ಷಣದ ಗುಣಮಟ್ಟವನ್ನು ಸಡಿಲಗೊಳಿಸಿ ದುರ್ಬಲಗೊಳಿಸುವುದು, ಮೂಲಭೂತ ಸೌಕರ್ಯವನ್ನು ಮರೀಚಿಕೆಗೊಳಿಸುವುದು, ಗರಿಷ್ಠ ವಿದ್ಯಾರ್ಥಿಗಳ ಸಂಖ್ಯೆಯನ್ನು ಗಣನೀಯವಾಗಿ ಕುಗ್ಗಿಸಿ ಬೇರೆ ಸರಕಾರಿ ಶಾಲೆಯೊಂದಿಗೆ ವಿಲೀನಗೊಳಿಸುವುದು, ಆನಂತರ ಶಾಲೆಯ ಜಾಗವನ್ನು ಭೂ-ಕಬಳಿಕೆ ಮಾಡುವುದು.

ಇಂತಹ ಒಂದು ಹೆಜ್ಜೆಯನ್ನು ಇಂದು ಕೆಲ ಪಟ್ಟಭದ್ರ ಹಿತಾಸಕ್ತಿಯ ಜನರು ರಾಮಕೃಷ್ಣ ಆಶ್ರಮದವರ ಜೊತೆ ಕೈಜೋಡಿಸಿ, ಮೈಸೂರು ರಾಜರು ಹೆಣ್ಣುಮಕ್ಕಳಿಗಾಗಿಯೇ ತೆರೆದ ಎನ್‌ಟಿಎಂ ಶಾಲೆಯ ಜಾಗವನ್ನು ಕಬಳಿಸಿ ಆಶ್ರಮದ ಮುಖಾಂತರ ಆ ಶಾಲೆಯ ಜಾಗದಲ್ಲಿ ವಿವೇಕಾನಂದ ಸ್ಮಾರಕ ನಿರ್ಮಾಣ ಮಾಡಲು ಹೊರಟಿದ್ದಾರೆ. ಇದರ ವಿರುದ್ಧವಾಗಿ ‘ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳು’ ಎನ್ನುವ ಹಾಗೆ, ಇತಿಹಾಸತಜ್ಞ ನಂಜರಾಜೇಅರಸ್, ಸ.ರ. ಸುದರ್ಶನ್, ಹಿರಿಯ ಸಾಹಿತಿ ದೇವನೂರ ಮಹಾದೇವ, ಸಮಾಜವಾದಿ ಹೋರಾಟಗಾರರಾದ ಪ. ಮಲ್ಲೇಶ್, ರವಿಕೋಟಿ, ರೈತ ಸಂಘದ ಅಧ್ಯಕ್ಷರಾದ ಬಡಗಲಪುರ ನಾಗೇಂದ್ರ, ದಸಂಸ ಚೋರನಳ್ಳಿ ಶಿವಣ್ಣ, ಅಲಗೂಡು ಶಿವಕುಮಾರ್, ಜವರಪ್ಪ, ಬನ್ನೂರು ರಾಜುರವರ ನೇತೃತ್ವದಲ್ಲಿ ಹಲವು ಪ್ರಗತಿಪರ ಸಂಘಟನೆಗಳು, ವಿದ್ಯಾರ್ಥಿ ಸಂಘಟನೆಗಳು ಒಂದುಗೂಡಿ ಭೂಮಾಫಿಯಾ ವಿರುದ್ಧ ಸೆಟೆದು ನಿಂತು ಇಂದು ಎನ್‌ಟಿಎಂ ಶಾಲೆಯನ್ನು ಉಳಿಸಿದ್ದಾರೆ. ಇದು ಇವರಿಗೆ ತಾತ್ಕಾಲಿಕ ಗೆಲುವು ಎಂದು ಭೂಮಾಫಿಯಾ ಗ್ರಹಿಸಿರಬಹುದು. ಆದರೆ ಇದು ಅಂತಿಮ ಹೋರಾಟವಲ್ಲ ಎಂದು ನೆರೆದಿದ್ದವರ ಎದೆಯಲ್ಲಿ ಹೋರಾಟದ ಕಿಚ್ಚು ಬೆಳಗುತ್ತಿತ್ತು.

‘‘ಮಾನವೀಯತೆಯ ವಿಕಾಸ, ಮನುಷ್ಯನ ವ್ಯಕ್ತಿತ್ವ ಶಿಕ್ಷಣದಿಂದ ಬಯಲಿಗೆ ಬರುತ್ತದೆ ಹಾಗೂ ಭಾರತದ ಎಲ್ಲ ಸಮಸ್ಯೆಗಳಿಗೂ ಶಿಕ್ಷಣ ಒಂದು ಪರಿಹಾರ’’ ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದಾರೆ. ಈ ಸಂದೇಶ ನೀಡಿದ್ದ ವಿವೇಕಾನಂದರು ಇಂದು ಬದುಕಿದ್ದರೆ ಬಹುಶಃ ರಾಮಕೃಷ್ಣ ಆಶ್ರಮದ ವಿರುದ್ಧವೇ ಧರಣಿ ಕುಳಿತು ಎನ್‌ಟಿಎಂ ಸರಕಾರಿ ಶಾಲೆಯನ್ನು ಉಳಿಸುತ್ತಿದ್ದರು! ನಮ್ಮ ದೇಶದಲ್ಲಿ ಸಾಕಷ್ಟು ಸ್ಮಾರಕಗಳು ಅತೀ ಹೆಚ್ಚು ಸ್ಥಳಗಳಲ್ಲಿ ನಿರ್ಮಾಣವಾಗಿವೆೆ. ಸ್ಮಾರಕಗಳು ಆ ಸ್ಮಾರಕದ ವ್ಯಕ್ತಿಗಳ ವ್ಯಕ್ತಿತ್ವದ ವಿಕಸನ ಇತಿಹಾಸವನ್ನು ಯುವ ಪೀಳಿಗೆಗೆ ತಿಳಿಸುವ ಮಾರ್ಗದರ್ಶಕವಾಗಬೇಕು. ಆದರೆ, ಇಂದು ಈ ಸ್ಮಾರಕಗಳೆಲ್ಲ ಪೂಜೆಮಾಡುವ ಆರಾಧಕ ಕೇಂದ್ರಿತವಾಗಿವೆ, ಕೆಲವೊಮ್ಮೆ ಅತೀ ಹೆಚ್ಚು ಖರ್ಚು ಮಾಡಿ ನಿರ್ಮಿಸಿದ ಬೃಹತ್ ಗಾತ್ರದ ಸ್ಮಾರಕಗಳು ದೈನಂದಿನವಾಗಿ ನಲಗುವ ಹಸಿವು, ಬಡತನ, ಕ್ರೌರ್ಯ, ಅಸಮಾನತೆಯನ್ನು ಅನುಭವಿಸುವವರ ಕಣ್ಣಿಗೆ ಮಬ್ಬುಗಟ್ಟಿದ ಕಲ್ಲುಬಂಡೆಯ ರೀತಿ ಕಾಣುತ್ತಿರುತ್ತದೆ.

‘‘ಶಿಕ್ಷಣವೆಂಬುದು ಹುಲಿಯ ಹಾಲಿದ್ದ ಹಾಗೆ. ಅದನ್ನು ಕುಡಿದವನು ಘರ್ಜಿಸಲೇ ಬೇಕು’’ ಎಂದು ಅಂಬೇಡ್ಕರ್ ರವರ ಮಾತು. ‘‘ಶಿಕ್ಷಣವೆಂದರೆ ವ್ಯಕ್ತಿಯ ನಿರ್ಮಾಣ, ವ್ಯಕ್ತಿತ್ವ ನಿರ್ಮಾಣದ ಮೂಲಕ ಚಾರಿತ್ರ್ಯ ನಿರ್ಮಾಣ, ಚಾರಿತ್ರ್ಯ ನಿರ್ಮಾಣದಿಂದ ಮಾತ್ರವೇ ರಾಷ್ಟ್ರ ನಿರ್ಮಾಣ’’ ಎಂಬ ಸ್ವಾಮಿ ವಿವೇಕಾನಂದವರ ಸಂದೇಶದ ರೂವಾರಿಯಾಗಿ ಸರಕಾರ ಎನ್‌ಟಿಎಂ ಶಾಲೆಗೆ ಹೆಚ್ಚು ಅನುದಾನ ಒದಗಿಸಿ ಈ ಅನುದಾನದಡಿ ಶಿಕ್ಷಣದ ಹಿರಿಮೆಯನ್ನು ಎತ್ತಿ ಹಿಡಿದು ಶಿಥಿಲಾವಸ್ಥೆಗೆ ಜಾರುತ್ತಿರುವ ಬೇರೆ ಶಾಲೆಗೆ ಈ ಎನ್‌ಟಿಎಂ ಶಾಲೆ ಮಾರ್ಗದರ್ಶಿಯಾಗುವಂತಾಗುವ ಶಿಕ್ಷಣದ ಕ್ರಾಂತಿಯ ಸ್ಮಾರಕ ನಿರ್ಮಾಣವಾಗಬೇಕಾಗಿದೆ.

Writer - ಪುನೀತ್ ಎನ್., ಮೈಸೂರು

contributor

Editor - ಪುನೀತ್ ಎನ್., ಮೈಸೂರು

contributor

Similar News