ಟ್ರಕ್ ಚಾಲಕನ ಹತ್ಯೆಗೈದ ಉಗ್ರ ಎನ್ಕೌಂಟರ್ನಲ್ಲಿ ಹತ
Update: 2019-10-29 16:02 GMT
ಶ್ರೀನಗರ, ಅ. 29: ಜಮ್ಮು ಹಾಗೂ ಕಾಶ್ಮೀರದ ಅನಂತ್ನಾಗ್ ಜಿಲ್ಲೆಯಲ್ಲಿ ಟ್ರಕ್ ಚಾಲಕನನ್ನು ಗುಂಡು ಹಾರಿಸಿ ಹತ್ಯೆಗೈದ ಭಯೋತ್ಪಾದಕ ನನ್ನು ಭದ್ರತಾ ಪಡೆ ಬುಧವಾರ ಎನ್ಕೌಂಟರ್ ನಡೆಸಿ ಹತ್ಯೆಗೈದಿದೆ.
ಜಿಲ್ಲೆಯ ಬಿಜ್ಬೆಹರಾ ಪಟ್ಟಣದ ಕನೇಲ್ವಾನ್ ಪ್ರದೇಶದಲ್ಲಿ ಸೋಮವಾರ ಸಂಜೆ ಭಯೋತ್ಪಾದಕರು ಟ್ರಕ್ ಚಾಲಕ ನಾರಾಯಣ ದತ್ ಅವರನ್ನು ಗುಂಡು ಹಾರಿಸಿ ಹತ್ಯೆಗೈದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ನಡೆದ ಪ್ರದೇಶವನ್ನು ಭದ್ರತಾ ಪಡೆ ಸುತ್ತುವರಿದು ಕಾರ್ಯಾಚರಣೆ ನಡೆಸಿತು. ಈ ಸಂದರ್ಭ ಭದ್ರತಾ ಪಡೆ ಹಾಗೂ ಭಯೋತ್ಪಾದಕರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಭಯೋತ್ಪಾದಕ ಹತನಾಗಿದ್ದಾನೆ ಎಂದು ಅವರು ಹೇಳಿದ್ದಾರೆ.
ಈ ಸಂದರ್ಭ ಇಬ್ಬರು ಭಯೋತ್ಪಾದಕರು ಪರಾರಿಯಾಗಿದ್ದಾರೆ. ಹತ ಭಯೋತ್ಪಾದಕ ಸ್ಥಳೀಯ ನಿವಾಸಿ ಎಂದು ಗುರುತಿಸಲಾಗಿದೆ. ಹತ್ಯೆಯಾದ ಟ್ರಕ್ ಚಾಲಕನೊಂದಿಗೆ ಇದ್ದ ಇನ್ನೋರ್ವ ಚಾಲಕ ಭಯೋತ್ಪಾದಕನನ್ನು ಗುರುತಿಸಿದ್ದಾನೆ ಎಂದು ಅವರು ತಿಳಿಸಿದ್ದಾರೆ.