ವೆಂಕಟಾಚಲರ ಕಾರ್ಯವೈಖರಿ ಎಲ್ಲ ಟೀಕೆಗಳಿಗೆ ಉತ್ತರವಾಗಿತ್ತು: ಎಸ್.ಎಂ.ಕೃಷ್ಣ
ಬೆಂಗಳೂರು, ಅ.30: ನಿವೃತ್ತ ನ್ಯಾಯಮೂರ್ತಿ ಹಾಗೂ ರಾಜ್ಯದ ನಿವೃತ್ತ ಲೋಕಾಯುಕ್ತ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ ಎನ್.ವೆಂಕಟಾಚಲ ಮರಣದ ವಿಷಯ ತಿಳಿದು ದುಃಖವಾಗಿದೆ ಎಂದು ಕೇಂದ್ರದ ಮಾಜಿ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಕಂಬನಿ ಮಿಡಿದಿದ್ದಾರೆ.
ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ವೆಂಕಟಾಚಲರನ್ನು ರಾಜ್ಯದ ಲೋಕಾಯುಕ್ತ ಅಧಿಕಾರಿಯಾಗಿ ನೇಮಿಸಲಾಗಿತ್ತು. ಈ ವಿಚಾರವಾಗಿ ಎಸ್.ಎಂ.ಕೃಷ್ಣ ಜಾತಿ ರಾಜಕಾರಣ ಮಾಡಿದ್ದಾರೆ ಎಂಬ ಆರೋಪಗಳು ಆ ದಿನಗಳಲ್ಲಿ ಕೇಳಿ ಬಂದಿದ್ದವು. ಆದರೆ, ವೆಂಕಟಾಚಲರ ಕಾರ್ಯವೈಖರಿ ಈ ಎಲ್ಲ ಟೀಕೆಗಳಿಗೆ ತಕ್ಕ ಉತ್ತರವಾಗಿತ್ತು ಎಂದು ಅವರು ಹೇಳಿದ್ದಾರೆ.
ಭ್ರಷ್ಟರಿಗೆ ಸಿಂಹಸ್ವಪ್ನವಾಗಿದ್ದ ಅವರು ಭ್ರಷ್ಟಾಚಾರ ತಡೆಗೆ ಬ್ರಿಟನ್ ಮಾದರಿ ಕಾನೂನು ಬೇಕು ಎನ್ನುವುದು ವೆಂಕಟಾಚಲರ ವಾದವಾಗಿತ್ತು. ಶ್ರೀಯುತರ ಮರಣದಿಂದ ದೇಶಕ್ಕೆ ಹಾಗೂ ಕುಟುಂಬ ವರ್ಗದವರಿಗೆ ತುಂಬಲಾರದ ನಷ್ಟವಾಗಿದೆ. ಅವರಿಗಾಗಿರುವ ನೋವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಎಸ್.ಎಂ.ಕೃಷ್ಣ ಶೋಕ ಸಂದೇಶದಲ್ಲಿ ಪ್ರಾರ್ಥಿಸಿದ್ದಾರೆ.