ಗ್ರಾಮೀಣ ಜನರಿಗೆ ಕೌಶಲ್ಯಾಧಾರಿತ ಸ್ವಯಂ ಉದ್ಯೋಗ ಅಗತ್ಯ: ಕೇಂದ್ರ ಸಚಿವ ಸದಾನಂದ ಗೌಡ

Update: 2019-11-01 18:06 GMT

ಬೆಂಗಳೂರು, ನ.1: ಸೂಕ್ತ ತರಬೇತಿ ಮೂಲಕ ಗ್ರಾಮೀಣ ಪ್ರದೇಶದ ಜನರಿಗೆ ಕೌಶಲ್ಯಾಧಾರಿತ ಸ್ವಯಂ ಉದ್ಯೋಗ ಕಲ್ಪಿಸಬೇಕಾದ ಅಗತ್ಯವಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರಗಳ ಖಾತೆ ಸಚಿವ ಸದಾನಂದಗೌಡ ಹೇಳಿದ್ದಾರೆ.

ಶುಕ್ರವಾರ ದೇವನಹಳ್ಳಿ ಬಳಿಯ ಖಾಸಗಿ ರೆಸಾರ್ಟ್ ನಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ವತಿಯಿಂದ ಆಯೋಜಿಸಿದ್ದ ಬಡತನ ನಿವಾರಣೆ ಹಾಗೂ ಗ್ರಾಮೀಣಾಭಿವೃದ್ಧಿಯಲ್ಲಿ ತೊಡಗಿಕೊಂಡಿರುವ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಸಂಸ್ಥೆಗಳೊಂದಿಗೆ ಚರ್ಚೆ ಮತ್ತು ಅಂತಾರಾಷ್ಟ್ರೀಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಗ್ರಾಮೀಣ ಪ್ರದೇಶಗಳಲ್ಲಿನ ಜನರು ದಿನವಿಡೀ ದುಡಿಯುತ್ತಿದ್ದಾರೆ. ಆದರೆ, ಅವರಿಗೆ ಭವಿಷ್ಯದ ಬಗ್ಗೆ ಮುಂದಾಲೋಚನೆ ಮಾಡಲಾಗುತ್ತಿಲ್ಲ. ಹೀಗಾಗಿ, ಜನರಿಗೆ ಹೆಚ್ಚು ಹೆಚ್ಚು ಶಿಕ್ಷಣ ನೀಡುವ ಮೂಲಕ ಸ್ವಯಂ ಉದ್ಯೋಗಿಗಳಾಗುವಂತೆ ಪ್ರೋತ್ಸಾಹ ನೀಡಬೇಕಿದೆ ಎಂದು ತಿಳಿಸಿದರು.

ದೇಶಕ್ಕೆ ಮಾದರಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯು ಹಲವಾರು ಜನಪರ, ಬಡವರ ಪರವಾದ ಯೋಜನೆಗಳನ್ನು ಜಾರಿ ಮಾಡಿದೆ. ಮಹಿಳಾ ಸಬಲೀಕರಣ‌ ವಿಷಯದಲ್ಲಿ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿದೆ. ಇದು ಇಡೀ ದೇಶಕ್ಕೆ ಒಂದು ಮಾದರಿಯಾದ ಸಂಸ್ಥೆ ಎಂದು ಸಚಿವರು ಬಣ್ಣಿಸಿದರು.

ಈ ಸಂಸ್ಥೆಯು ಕೇವಲ ಸ್ವಯಂ ಯೋಜನೆಗಳು ಅಲ್ಲದೆ, ಸರಕಾರಿ ಯೋಜನೆಗಳನ್ನು ಬಳಸಿಕೊಂಡು ಕಾರ್ಯ ನಿರ್ವಹಿಸುತ್ತಿರುವುದು ಶ್ಲಾಘನೀಯ. ಪ್ರಧಾನಿಯ ಸ್ವಚ್ಛ ಭಾರತ್ ಯೋಜನೆ ಜತೆ ಕೈ ಜೋಡಿಸಿ ದಕ್ಷಿಣ ಕನ್ನಡ ಸೇರಿದಂತೆ ಹಲವೆಡೆ ಸುಮಾರು 10 ಸಾವಿರ ದೇವಾಲಯಗಳಲ್ಲಿ ಸ್ವಚ್ಛತೆಯನ್ನು ಕಾಪಾಡುವಂತೆ ಕರೆ ನೀಡಲಾಗಿದೆ. ಇದು ನಿಜಕ್ಕೂ ಅವಿಸ್ಮರಣೀಯ ಎಂದು ಸಚಿವ ಸದಾನಂದಗೌಡ ಹೇಳಿದರು.

ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮಾತನಾಡಿ, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಮೂಲ ಉದ್ದೇಶ ಸಾಧಿಸುವಲ್ಲಿ ಸಫಲವಾಗಿದೆ. ಇಲ್ಲಿ ನಂಬಿಕೆ ಅಷ್ಟೇ ಅಲ್ಲದೆ, ಲೌಕಿಕ ಬದುಕಿಗೆ ಬೇಕಾದ ಸಹಕಾರವನ್ನೂ ಕಲ್ಪಿಸಿ ಕೊಡುವ ಯೋಜನೆಗಳೂ ಇವೆ. ಸಾಲದ ಸದ್ಬಳಕೆ ಮಾಡಿದರೆ ಅಪಾಯವಿಲ್ಲ. ಸಾಲ ಶೂಲವಾಗದೆ ಬಂಡವಾಳವಾಗಬೇಕು ಎಂಬುದು ನಮ್ಮ ಆಶಯ ಎಂದು ಹೇಳಿದರು.

ಇದೇ ಸಂಸ್ಥೆಯ ಮೂಲಕ ಮದ್ಯದ ನಶೆ ಕುಟುಂಬಗಳನ್ನು ನಾಶ ಮಾಡುತ್ತಿದೆ. ಆರಂಭದಲ್ಲಿ ಶೋಕಿಗಾಗಿ ವ್ಯಸನ ಅಂಟಿಸಿಕೊಳ್ಳುವವರು ನಂತರ ಮನೆ-ಮಠಗಳನ್ನು ಮಾರಿ ಬೀದಿಗೆ ಬರುತ್ತಾರೆ. ಇದರ ಬಗ್ಗೆ ಎಚ್ಚರ ವಹಿಸಿ ಮದ್ಯ ವ್ಯಸನದಿಂದ ದೂರ ಇರಬೇಕು ಎಂದು ಜಾಗೃತಿ ಮೂಡಿಸುವ ಅಭಿಯಾನ ನಡೆಸಿದೆವು. ಅದು ಹಲವು ಕುಟುಂಬಗಳನ್ನು ಸಬಲರನ್ನಾಗಿ ಮಾಡಿದೆ ಎಂದರು.

ನಮ್ಮ ಸಂಸ್ಥೆಯ ಕಾರ್ಯಕರ್ತರು ತಳಮಟ್ಟದಿಂದ ಕೆಲಸ ಮಾಡುತ್ತಿದ್ದಾರೆ. ಜನರೊಂದಿಗೆ ನಿಂತು, ಜನರ ಸಮಸ್ಯೆ ಅರಿತು, ಅಲ್ಲೇ ಪರಿಹಾರ ಮಾಡುವ ಮೂಲಕ ಎಲ್ಲರನ್ನೂ ಒಳಗೊಳ್ಳುವ ಕೆಲಸ ಮಾಡುತ್ತಿದ್ದಾರೆ. ಆರಂಭದಲ್ಲಿ ಕೇವಲ ಸಕಾರಾತ್ಮಕ ವರದಿ ನೀಡುತ್ತಿದ್ದರು. ನಾನು ಯಾಕೆ ಎಲ್ಲಿಯೂ ಸಮಸ್ಯೆಯೇ ಇಲ್ಲವಾ ಎಂದಾಗ ಅವರು ಹೆಚ್ಚು ಜನರೊಂದಿಗೆ ಬೆರೆತು ಕೆಲಸ ಮಾಡುತ್ತಿದ್ದಾರೆ ಎಂದು ವೀರೇಂದ್ರ ಹೆಗಡೆ ನುಡಿದರು.

ಕಾರ್ಯಕ್ರಮದಲ್ಲಿ ಫೈನಾನ್ಸ್ ಇಂಟಿವೇಟೀವ್ಸ್ ನ ಪ್ರಾದೇಶಿಕ ಕಾರ್ಯದರ್ಶಿ ಡಿ.ಎಸ್.ಕೆ.ರಾವ್, ಕೇಂದ್ರ ಪಂಚಾಯತ್ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಅಮರ್ ಜಿತ್ ಸಿನ್ಹಾ, ಅಲೋಸಿಸಿ ಡಿಸೋಜ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಪಂಚಾಯತ್ ಮಟ್ಟದಿಂದಲೂ ಮಹಿಳಾ ಸ್ವ ಸಹಾಯ ಸಂಘಗಳನ್ನು ತಲುಪಲು ಸಾಧ್ಯವಾಗಿದೆ. ಕೇಂದ್ರ ಸರಕಾರದ ಜನಧನ್, ಉಜ್ವಲ, ಸ್ವಚ್ಛ ಭಾರತ್ ಹಾಗೂ ಮಹಾತ್ಮಗಾಂಧೀ ನರೇಗಾ ಯೋಜನೆ ಸೇರಿದಂತೆ ಅನೇಕ ಯೋಜನೆಗಳನ್ನು ಸ್ವ ಸಹಾಯ ಗುಂಪುಗಳ ಮೂಲಕ ಯಶಸ್ವಿಗೊಳಿಸುವ ಕಡೆಗೆ ಸಹಕಾರಿಯಾಗಿದೆ. ಕಳೆದ ಐದೂವರೆ ವರ್ಷಗಳ ಅವಧಿಯಲ್ಲಿ ಇಡೀ ದೇಶದಾದ್ಯಂತ ಸರಿಸುಮಾರು ಎರಡೂವರೆ ಸಾವಿರ ಕೋಟಿಗೂ ಅಧಿಕ ಹಣವನ್ನು ಸಂಘಗಳಿಗೆ ಸಾಲದ ರೂಪದ ಮೂಲಕ ನೀಡಲಾಗಿದೆ. ಸರಕಾರಗಳು ಇದೇ ರೀತಿ ಹೆಚ್ಚಿನ ಸಹಕಾರ ನೀಡುತ್ತಿದ್ದರೆ ಮುಂದೊಂದು ದಿನ ಭಿನ್ನವಾದ ಸಮಾಜ ನೋಡಬಹುದು.
- ಅಮರ್ ಜಿತ್ ಸಿನ್ಹಾ, ಕೇಂದ್ರ ಪಂಚಾಯತ್ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News