ಮಾಜಿ ಸಚಿವರ ಜೊತೆ ಹಣಕಾಸಿನ ವಿಚಾರದಲ್ಲಿ ವಿವಾದ: ಮಹಿಳೆ ಆತ್ಮಹತ್ಯೆ

Update: 2019-11-03 14:48 GMT

ಬೆಂಗಳೂರು, ನ.3: ಮಾಜಿ ಸಚಿವ ಬಾಬುರಾವ್ ಚಿಂಚನಸೂರು ಅವರಿಗೆ ಕೋಟ್ಯಂತರ ರೂಪಾಯಿ ಸಾಲ ನೀಡಿದ್ದ ಆರೋಪ ಕೇಳಿಬಂದ ಬೆನ್ನಲ್ಲೇ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಲ್ಲಿನ ಚಂದ್ರಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ ಎಂದು ವರದಿಯಾಗಿದೆ.

ನಗರದ ಚಂದ್ರಲೇಔಟ್ ನಿವಾಸಿ ಅಂಜನಾ ವಿ.ಶಾಂತವೀರ ಎಂಬಾಕೆ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಅಂಜನಾ ಅವರು ಬಾಬುರಾವ್ ಚಿಂಚನಸೂರು ಅವರಿಗೆ 11 ಕೋಟಿ ರೂ. ಸಾಲ ನೀಡಿದ್ದರು. ಬಳಿಕ ಅಂಜನಾ ಈ ವಿಚಾರ ಬಹಿರಂಗವಾಗಿ ವಿವಾದವಾಗಿತ್ತು. ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು. ಆದರೆ, ಹಣಕಾಸಿನ ವಿಚಾರ ಇತ್ಯರ್ಥ ಆಗಿರಲಿಲ್ಲ. ಹೀಗಾಗಿ, ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗುತ್ತಿದೆ.

ಗುರುವಾರ ರಾತ್ರಿ ಅಂಜನಾ ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಕುರಿತು ಅಂಜನಾ ಮಗ ವೈಯಕ್ತಿಕ ಕಾರಣಗಳಿಂದ ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಚಂದ್ರಲೇಔಟ್ ಪೊಲೀಸರಿಗೆ ದೂರು ನೀಡಿದ್ದಾರೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News