ಸೀತಾಫಲದ ಕುರಿತು ಈ ಮಿಥ್ಯೆಗಳ ಹಿಂದಿನ ಸತ್ಯ ನಿಮಗೆ ತಿಳಿದಿರಲಿ

Update: 2019-11-03 14:50 GMT

ಸೀತಾಫಲ ರುಚಿಕರ ಹಣ್ಣಾಗಿದ್ದು,ಎಲ್ಲರೂ ಅದನ್ನು ಇಷ್ಟಪಡುತ್ತಾರೆ. ಪೋಷಕಾಂಶಗಳ ಆಗರವಾಗಿರುವ ಈ ಹಣ್ಣು ಡೇರಿ ಉತ್ಪನ್ನಗಳಿಗೆ ಅತ್ಯುತ್ತಮ ಪರ್ಯಾಯವಾಗಿದೆ ಮತ್ತು ಲ್ಯಾಕ್ಟೋಸ್ ಅಸಹಿಷ್ಣುತೆಯುಳ್ಳವರು ಇದನ್ನು ಧಾರಾಳವಾಗಿ ಸೇವಿಸಬಹುದು.ಆದರೆ ಸವಿಯಾದ ಸೀತಾಫಲದ ಕುರಿತು ಕೆಲವು ಮಿಥ್ಯೆಗಳಿದ್ದು,ಇದರಿಂದಾಗಿ ಕೆಲವರು ಇದನ್ನು ತಿನ್ನಲು ಬಯಸುವುದಿಲ್ಲ. ಈ ಮಿಥ್ಯೆಗಳು ಮತ್ತು ಅವುಗಳ ಹಿಂದಿನ ಸತ್ಯಗಳು ಇಲ್ಲಿವೆ......

►ಮಧುಮೇಹಿಗಳು ಸೀತಾಫಲವನ್ನು ತಿನ್ನಬಾರದು

-ಗ್ಲೈಸೆಮಿಕ್ ಇಂಡೆಕ್ಸ್ ರಕ್ತದಲ್ಲಿಯ ಸಕ್ಕರೆ ಮಟ್ಟದ ಮೇಲೆ ಕಾರ್ಬೊಹೈಡ್ರೇಟ್‌ಗಳ ಪರಿಣಾಮವನ್ನು ಅಳೆಯುವ ಮಾಪನವಾಗಿದೆ. ಸೀತಾಫಲವು ಕಡಿಮೆ ಗೈಸೆಮಿಕ್ ಸೂಚ್ಯಂಕ (54)ವನ್ನು ಹೊಂದಿದೆ. ಅದು ಸುರಕ್ಷಿತ ಆಹಾರ ಮಾತ್ರವಲ್ಲ, 55ಕ್ಕೂ ಕಡಿಮೆ ಗ್ಲೈಸೆಮಿಕ್ ಸೂಚ್ಯಂಕವನ್ನು ಹೊಂದಿರುವುದರಿಂದ ಮಧುಮೇಹಿಗಳು ಅದನ್ನು ಆರಾಮವಾಗಿ ತಿನ್ನಬಹುದು.

►ದಪ್ಪಗಿದ್ದವರು ಸೀತಾಫಲ ತಿನ್ನಬಾರದು

-ಸೀತಾಫಲವು ವಿಟಾಮಿನ್ ಬಿ ಕಾಂಪ್ಲೆಕ್ಸ್‌ನ,ವಿಶೇಷವಾಗಿ ಬಿ6 ವಿಟಾಮಿನ್ ‌ನ ಅತ್ಯುತ್ತಮ ಮೂಲವಾಗಿದೆ. ಬಿ6 ವಿಟಾಮಿನ್ ವಾಯು ಸಮಸ್ಯೆಯನ್ನು ತಗ್ಗಿಸುತ್ತದೆ. ಸೀತಾಫಲಕ್ಕೂ ತೂಕ ಏರಿಕೆ ಅಥವಾ ಬೊಜ್ಜಿಗೂ ಯಾವುದೇ ಸಂಬಂಧವಿಲ್ಲ

►ಸೀತಾಫಲ ಹೃದ್ರೋಗಿಗಳಿಗೆ ಹಾನಿಕಾರಕ

-ಸೀತಾಫಲದಲ್ಲಿ ಮ್ಯಾಗ್ನೀಷಿಯಂ,ಪೊಟ್ಯಾಷಿಯಮ್‌ನಂತಹ ಖನಿಜಗಳು ಮತ್ತು ವಿಟಾಮಿನ್ ಸಿ ಹೇರಳವಾಗಿದ್ದು,ಇವು ಹೃದಯ ಮತ್ತು ಹೃದಯನಾಳೀಯ ವ್ಯವಸ್ಥೆಯ ಮೇಲೆ ವಯಸ್ಸಾಗುವಿಕೆಯ ಪರಿಣಾಮಗಳನ್ನು ತಡೆಯುತ್ತವೆ. ಸೀತಾಫಲವು ಹೃದಯವನ್ನು ಆರೋಗ್ಯಯುತವಾಗಿರಿಸುವ ಜೊತೆಗೆ ಹಲವಾರು ರೋಗಗಳನ್ನು ದೂರವಿರಿಸಲು ನೆರವಾಗುತ್ತದೆ.

►ಪಿಸಿಒಡಿಯಿಂದ ಬಳಲುತ್ತಿರುವವರು ಸೀತಾಫಲದಿಂದ ದೂರವಿರಬೇಕು

 - ಪಾಲಿಸಿಸ್ಟಿಕ್ ಓವರಿ ಡಿಸೀಸ್ ಅಥವಾ ಪಿಸಿಒಡಿ ಹದಿಹರೆಯದ ಹೆಣ್ಣುಮಕ್ಕಳನ್ನು ಕಾಡುವ ವಿಪರೀತ ರಕ್ತಸ್ರಾವದ ಸಮಸ್ಯೆಯಾಗಿದೆ. ಸೀತಾಫಲವು ಕಬ್ಬಿಣದ ಉತ್ತಮ ಮೂಲವಾಗಿದೆ. ಕಬ್ಬಿಣ ಬಳಲಿಕೆ ಮತ್ತು ಮನಸ್ಸಿಗೆ ಕಿರಿಕಿರಿಯ ವಿರುದ್ಧ ಹೋರಾಡುವ ಜೊತೆಗೆ ಫಲವತ್ತತೆಯನ್ನು ಹೆಚ್ಚಿಸುತ್ತದೆ. ಸೀತಾಫಲಕ್ಕೆ ಪಿಸಿಒಡಿ ಅಥವಾ ಇತರ ಯಾವುದೇ ಸ್ಥಿತಿಯೊಂದಿಗೆ ಸಂಬಂಧವಿಲ್ಲ. ರಕ್ತಸ್ರಾವದ ಸಮಸ್ಯೆಯನ್ನು ಹೆಚ್ಚಿಸುತ್ತದೆ ಎಂದು ಬಹಳಷ್ಟು ಮಹಿಳೆಯರು ಸೀತಾಫಲವನ್ನು ತಿನ್ನುವುದಿಲ್ಲ,ಆದರೆ ಇದು ಸಂಪೂರ್ಣ ತಪ್ಪುಗ್ರಹಿಕೆಯಾಗಿದೆ.

ಆರೋಗ್ಯವೇ ಭಾಗ್ಯ. ಹಣ್ಣುಗಳ ಸೇವನೆ ಆರೋಗ್ಯಕ್ಕೆ ಒಳ್ಳೆಯದು ಮತ್ತು ನಾವು ಆಧಾರರಹಿತ ಕಾರಣಗಳನ್ನು ನಂಬಿ ಹಣ್ಣುಗಳನ್ನು ತಿನ್ನುವುದನ್ನು ನಿಲ್ಲಿಸಬಾರದು. ಸೀತಾಫಲ ಆರೋಗ್ಯಕ್ಕೆ ತುಂಬ ಒಳ್ಳೆಯದು,ಹೀಗಾಗಿ ಯಾವುದೇ ಚಿಂತೆಯಿಲ್ಲದೆ ಅದನ್ನು ಸೇವಿಸಿಬಹುದು.

►ಸೀತಾಫಲದ ಕೆಲವು ಅದ್ಭುತ ಆರೋಗ್ಯಲಾಭಗಳು

ಸೀತಾಫಲದ ಸೇವನೆಯು ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ,ಹೊಟ್ಟೆ ಉಬ್ಬರಿಸುವುದನ್ನು ಕಡಿಮೆ ಮಾಡುತ್ತದೆ. ವಾಯು,ಮಲಬದ್ಧತೆಯನ್ನು ತಡೆಯುತ್ತದೆ ಮತ್ತು ಜಠರದ ಹುಣ್ಣುಗಳಿಂದ ಮುಕ್ತಿಯನ್ನು ನೀಡುತ್ತದೆ. ಅದರಲ್ಲಿಯ ಜೈವಿಕ ಸಕ್ರಿಯ ಅಣುಗಳು ಬೊಜ್ಜು,ಮಧುಮೇಹ ಮತ್ತು ಕ್ಯಾನ್ಸರ್‌ನ ವಿರುದ್ಧ ರಕ್ಷಣೆಯನ್ನು ನೀಡುತ್ತವೆ. ಅದು ಚರ್ಮದ ಆರೋಗ್ಯವನ್ನು ಹೆಚ್ಚಿಸುತ್ತದೆ,ತಲೆಗೂದನ್ನು ಬಲಗೊಳಿಸುತ್ತದೆ,ಕಣ್ಣಿನ ಆರೋಗ್ಯವನ್ನು ಕಾಯ್ದುಕೊಳ್ಳುತ್ತದೆ. ಮಿದುಳಿನ ಆರೋಗ್ಯಕ್ಕೆ ಒಳ್ಳೆಯದು,ಜೊತೆಗೆ ಹಿಮೋಗ್ಲೋಬಿನ್ ಮಟ್ಟಗಳನ್ನು ಹೆಚ್ಚಿಸುತ್ತದೆ. ಎಲ್ಲ ವಯೋಮಾನದವರು ಈ ಹಣ್ಣನ್ನು ಸೇವಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News