ಬಿಎಸ್‌ವೈ ಕೆಳಗಿಳಿಸಲು ಬಿ.ಎಲ್.ಸಂತೋಷ್ ಸೇರಿ ಬಿಜೆಪಿ ನಾಯಕರು ಪ್ರಯತ್ನಿಸುತ್ತಿದ್ದಾರೆ: ವಿ.ಎಸ್.ಉಗ್ರಪ್ಪ

Update: 2019-11-04 13:19 GMT

ಬೆಂಗಳೂರು, ನ.4: ಬಿಜೆಪಿ ಮುಖಂಡರುಗಳಿಗೆ ಸಾಮೂಹಿಕ ಸನ್ನಿ ಹಿಡಿದಂತೆ ಕಾಣುತ್ತಿದೆ. ಹತಾಶರಾಗಿ ಒಬ್ಬರ ಮೇಲೊಬ್ಬರು ಮಾತನಾಡುತ್ತಿದ್ದಾರೆ. ಇವರೆಲ್ಲರೂ ಬುದ್ಧಿಯ ಸ್ಥಿಮಿತ ಕಳೆದುಕೊಂಡಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ, ಸಚಿವ ಆರ್.ಅಶೋಕ್ ಸೇರಿದಂತೆ ಎಲ್ಲ ಬಿಜೆಪಿ ನಾಯಕರಿಗೂ ನಿಮ್ಹಾನ್ಸ್‌ನಲ್ಲಿ ಚಿಕಿತ್ಸೆ ಕೊಡಿಸುವ ಅಗತ್ಯವಿದೆ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಹೇಳಿದರು.

ಸೋಮವಾರ ನಗರದ ಕ್ವೀನ್ಸ್‌ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಯಡಿಯೂರಪ್ಪ ಆಡಿಯೋವನ್ನು ಸಿದ್ದರಾಮಯ್ಯ ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾಡಿರುವ ಆರೋಪ ಹಾಸ್ಯಾಸ್ಪದ ಎಂದರು.

ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಇದ್ದವರೆಲ್ಲ ಬಿಜೆಪಿಯವರೇ, ಆ ಸಭೆಗೆ ಬೇರೆಯವರಿಗೆ ಅವಕಾಶ ಕೊಡುತ್ತಾರಾ? ಕನಿಷ್ಠ ಪಕ್ಷ ಮಾಧ್ಯಮಗಳಿಗಾದರೂ ಅವಕಾಶ ಇರುತ್ತಾ? ಅಲ್ಲಿ ಇದ್ದವರೆಲ್ಲ ಬಿಜೆಪಿ ಮುಖಂಡರೇ, ಈ ವಿಚಾರ ಬಿಜೆಪಿ ರಾಜ್ಯಾಧ್ಯಕ್ಷರಿಗೆ ಗೊತ್ತಿಲ್ಲವೇ ಎಂದು ಉಗ್ರಪ್ಪ ಟೀಕಿಸಿದರು.

ಯಡಿಯೂರಪ್ಪ ಆಡಿಯೋ ಕುರಿತು ಆಂತರಿಕ ತನಿಖೆಗೆ ಆದೇಶಿಸಿರುವ ನಳಿನ್ ಕುಮಾರ್ ಕಟೀಲ್‌ಗೆ ಅಭಿನಂದನೆ ಸಲ್ಲಿಸುತ್ತೇನೆ. ಈ ಮೂಲಕ ಆಡಿಯೋದಲ್ಲಿರುವ ಮಾತುಗಳು ತಮ್ಮ ಸಭೆಯಲ್ಲೇ ಹೇಳಲ್ಪಟ್ಟಿದ್ದು ಅನ್ನೋದನ್ನು ಅವರು ಒಪ್ಪಿಕೊಂಡಂತಾಗಿದೆ ಎಂದು ಉಗ್ರಪ್ಪ ತಿಳಿಸಿದರು.

ತಾಕತ್ತಿದ್ದರೆ ರಾಜೀನಾಮೆ ನೀಡಿ ಚುನಾವಣೆಗೆ ಬನ್ನಿ ಎಂದು ಯಡಿಯೂರಪ್ಪ, ಸಿದ್ದರಾಮಯ್ಯಗೆ ಸವಾಲು ಹಾಕುವುದು ಏಕೆ? ನೀವೇ ರಾಜೀನಾಮೆ ಕೊಟ್ಟು ಚುನಾವಣೆ ಬನ್ನಿ ನೋಡೋಣ. ಯಡಿಯೂರಪ್ಪ ಎರಡು ನಾಲಿಗೆ ಇರುವ ರಾಜಕಾರಣಿ, ಆಡಿಯೋದಲ್ಲಿರುವಂತೆ ಮಾತನಾಡಿದ್ದು ನಾನೇ ಎಂದು ಒಪ್ಪಿಕೊಂಡಿದ್ದ ಅವರು, ಇದೀಗ ಸಿದ್ದರಾಮಯ್ಯ ವಿರುದ್ಧ ಮಾತನಾಡುತ್ತಿದ್ದಾರೆ ಎಂದು ಉಗ್ರಪ್ಪ ಟೀಕಿಸಿದರು.

ಮುಖ್ಯಮಂತ್ರಿ ಕನಸು ಕಾಣುವುದರಲ್ಲಿ ಯಾವುದೇ ತಪ್ಪಿಲ್ಲ, ಸಿದ್ದರಾಮಯ್ಯ ಜನಾದೇಶದಿಂದ ಮುಖ್ಯಮಂತ್ರಿ ಆಗಿದ್ದರು. ಆದರೆ, ಯಡಿಯೂರಪ್ಪ ಜನಾದೇಶ ಇಲ್ಲದೇ ಮುಖ್ಯಮಂತ್ರಿ ಆಗಿದ್ದಾರೆ. ಆಡಿಯೋ ಬಗ್ಗೆ ಸುಪ್ರೀಂಕೋರ್ಟಿನ ಹಾಲಿ ನ್ಯಾಯಾಧೀಶರ ಮೂಲಕ ವಿಚಾರಣೆ ನಡೆಸಲಿ ಎಂದು ಅವರು ಆಗ್ರಹಿಸಿದರು.

ಯಡಿಯೂರಪ್ಪ ಆಡಿಯೋದಲ್ಲಿ ಅವರ ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಬಗ್ಗೆ ಮಾತನಾಡಿಲ್ಲವೇ? ಆಪರೇಷನ್ ಕಮಲ ಅಮಿತ್ ಶಾ ಅಣತಿಯಂತೆ ನಡೆದಿದೆ ಎಂದು ಅವರು ಒಪ್ಪಿಕೊಂಡಿಲ್ಲವೇ? ಆಡಿಯೋ ನನ್ನದಲ್ಲ ಎಂದು ಅವರ ಆರಾಧ್ಯ ದೈವ ಸಿದ್ದಲಿಂಗೇಶ್ವರ ಮೇಲೆ ಪ್ರಮಾಣ ಮಾಡಲಿ ಎಂದು ಅವರು ಸವಾಲು ಹಾಕಿದರು.

ಅನರ್ಹ ಶಾಸಕರನ್ನು ರಕ್ಷಣೆ ಮಾಡಬೇಕು ಎಂದು ಯಡಿಯೂರಪ್ಪ ಹೇಳಿದ್ದಾರೆ. ಆಡಿಯೋ ವಿಚಾರ ಸುಪ್ರೀಂಕೋರ್ಟ್‌ಗೆ ಹೋದ ನಂತರ ಅದಕ್ಕೂ ನಮಗೂ ಸಂಬಂಧವಿಲ್ಲ ಎಂದು ಹೇಳುತ್ತಿದ್ದಾರೆ. ಅನರ್ಹ ಶಾಸಕರ ಬಗ್ಗೆ ನಮಗೆ ಯಾವುದೇ ವಿಚಾರಗಳು ಗೊತ್ತಿಲ್ಲ ಎನ್ನುತ್ತಿದ್ದಾರೆ. ಯಡಿಯೂರಪ್ಪನವರ ಈ ಸ್ಥಿತಿ ಬಗ್ಗೆ ಏನು ಹೇಳಬೇಕೋ ಗೊತ್ತಾಗುತ್ತಿಲ್ಲ ಎಂದು ಉಗ್ರಪ್ಪ ಹೇಳಿದರು.

ಬಿಎಸ್‌ವೈ ಇಳಿಸಲು ಬಿಜೆಪಿಯ ಚಿತಾವಣೆ

ಬಿಜೆಪಿಯಲ್ಲಿ ಗುಂಪುಗಾರಿಕೆ ನಡೆಯುತ್ತಿದೆ. ಯಡಿಯೂರಪ್ಪರನ್ನು ತೆಗೆಯಲೇಬೇಕು ಎಂದು ಹುನ್ನಾರ ನಡೆದಿದೆ. ಬಿ.ಎಲ್.ಸಂತೋಷ್ ಸೇರಿದಂತೆ ಎಲ್ಲರೂ ಚಿತಾವಣೆ ಮಾಡುತ್ತಿದ್ದಾರೆ. ಜಗದೀಶ್ ಶೆಟ್ಟರ್, ಪ್ರಹ್ಲಾದ್ ಜೋಶಿ ಕತ್ತಿ ಮಸೆಯುತ್ತಿದ್ದಾರೆ. ಈ ಹಿಂದೆ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದವರೇ ಈಗಲೂ ಪ್ರಯತ್ನ ನಡೆಸುತ್ತಿದ್ದಾರೆ.

-ವಿ.ಎಸ್.ಉಗ್ರಪ್ಪ, ಮಾಜಿ ಸಂಸದ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News