ಕೆಪಿಎಲ್ ಫಿಕ್ಸಿಂಗ್: ಸಿ.ಎಂ ಗೌತಮ್, ಅಬ್ರಾರ್ ಖಾಝಿ ಬಂಧನ

Update: 2019-11-08 05:19 GMT

ಬೆಂಗಳೂರು, ನ.7: ಕಳೆದ ಆವೃತ್ತಿಯ ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) ಟ್ವೆಂಟಿ-20 ಲೀಗ್‌ನ ವೇಳೆ ಮ್ಯಾಚ್ ಫಿಕ್ಸಿಂಗ್ ಹಗರಣದಲ್ಲಿ ಭಾಗಿಯಾದ ಆರೋಪದ ಮೇಲೆ ನಗರದ ಸಿಸಿಬಿ ಪೊಲೀಸರು ಕೆಪಿಎಲ್ ತಂಡದ ಬಳ್ಳಾರಿ ಟಸ್ಕರ್ಸ್ ತಂಡದ ನಾಯಕ ಸಿ.ಎಂ. ಗೌತಮ್ ಮತ್ತು ಆಟಗಾರ ಅಬ್ರಾರ್ ಖಾಝಿ ಅವರನ್ನು ಬಂಧಿಸಿದ್ದಾರೆ. ಈ ವರ್ಷದ ಆಗಸ್ಟ್ 31 ರಂದು ಬಳ್ಳಾರಿ ಟಸ್ಕರ್ಸ್ ಮತ್ತು ಹುಬ್ಬಳ್ಳಿ ಟೈಗರ್ಸ್ ತಂಡಗಳ ನಡುವೆ ಆಡಿದ ಕೆಪಿಎಲ್ ಫೈನಲ್‌ನಲ್ಲಿ ಫಿಕ್ಸಿಂಗ್ ನಡೆಸಿದ ಆರೋಪದ ಮೇಲೆ ಇವರಿಬ್ಬರನ್ನು ಬಂಧಿಸಲಾಗಿದೆ ಎಂದು ಸಿಸಿಬಿ ತಿಳಿಸಿದೆ.

ಕಳೆದ ಎರಡು ಆವೃತ್ತಿಗಳಲ್ಲಿ ನಡೆದಿದೆ ಎನ್ನಲಾದ ಮ್ಯಾಚ್ ಫಿಕ್ಸಿಂಗ್ ಹಗರಣದ ಬಗ್ಗೆ ಸಿಸಿಬಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

  ಕಳೆದ ಆವೃತ್ತಿಯ ಫೈನಲ್‌ನಲ್ಲಿ ನಿಧಾನಗತಿಯ ಬ್ಯಾಟಿಂಗ್‌ಗಾಗಿ ಇವರು 20 ಲಕ್ಷ ರೂ.ಪಡೆದಿದ್ದಾರೆ ಮತ್ತು ಕೆಪಿಎಲ್‌ನಲ್ಲಿ ಬೆಂಗಳೂರು ತಂಡದ ವಿರುದ್ಧ ಆಡಿದ ಮತ್ತೊಂದು ಪಂದ್ಯದಲ್ಲೂ ಮ್ಯಾಚ್ ಫಿಕ್ಸಿಂಗ್ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

   ಭಾರತ-ಎ ತಂಡದ ಆಟಗಾರ ಕರ್ನಾಟಕ ಮೂಲದ ಗೌತಮ್ ಅವರು ಕರ್ನಾಟಕ ಮತ್ತು ಗೋವಾ ತಂಡದ ಪರ ರಣಜಿಯಲ್ಲಿ ಆಡಿದ್ದಾರೆ. ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಗೌತಮ್ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಡೇರ್‌ಡೆವಿಲ್ಸ್ ತಂಡದ ಆಟಗಾರನಾಗಿ ಹಲವಾರು ಆವೃತ್ತಿಗಳಲ್ಲಿ ಆಡಿದ್ದಾರೆ.

  ಗೋವಾ ತಂಡ ಸೇರುವ ಮೊದಲು ಗೌತಮ್ ಕರ್ನಾಟಕ ರಾಜ್ಯ ತಂಡದ ಪರ ರಣಜಿಯಲ್ಲಿ ಆಡಿದ್ದರು. ಖಾಝಿ ಮಿರೊರಾಂ ತಂಡದಲ್ಲಿದ್ದಾರೆ. ಕೆಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರಿಕೆಟಿಗ ನಿಶಾಂತ್ ಸಿಂಗ್ ಶೆಖಾವತ್ ಅವರನ್ನು ಕರ್ನಾಟಕ ಪೊಲೀಸರು ಮಂಗಳವಾರ ಬಂಧಿಸಿದ್ದರು.

 ‘‘ಕ್ರಿಕೆಟ್ ಆಟಗಾರ ನಿಶಾಂತ್ ಸಿಂಗ್ ಶೆಖಾವತ್ ಅವರನ್ನು ಬಂಧಿಸಲಾಗಿದೆ. ಅವರು ಬುಕ್ಕಿಗಳೊಂದಿಗೆ ಸಂಪರ್ಕದಲ್ಲಿದ್ದರು ಮತ್ತು ಆಟಗಾರರೊಂದಿಗೆ ಫಿಕ್ಸಿಂಗ್ ನಡೆಸಲು ಬೆಂಗಳೂರು ಬ್ಲಾಸ್ಟರ್ಸ್ ತಂಡದ ಬೌಲಿಂಗ್ ತರಬೇತುದಾರ ವಿನು ಪ್ರಸಾದ್ ಅವರನ್ನು ಸಂಪರ್ಕಿಸಿದ್ದರು’’ ಎಂದು ಜಂಟಿ ಪೊಲೀಸ್ ಆಯುಕ್ತ (ಅಪರಾಧ) ಸಂದೀಪ್ ಪಾಟೀಲ್ ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.

 ಬೆಂಗಳೂರು ಮತ್ತು ಬೆಳಗಾವಿ ತಂಡದ ನಡುವೆ 2018 ರಲ್ಲಿ ಕೆಪಿಎಲ್ ಪಂದ್ಯವನ್ನು ಫಿಕ್ಸಿಂಗ್ ಮಾಡಿದ ಆರೋಪ ಶೆಕಾವತ್ ಮೇಲಿದೆ. ಇದರಲ್ಲಿ ಅವರು ನಿಧಾನವಾಗಿ ಆಡಿದ್ದಾರೆ ಮತ್ತು ಅದಕ್ಕಾಗಿ 5 ಲಕ್ಷ ರೂ. ಪಡೆದಿದ್ದಾರೆ ಎನ್ನಲಾಗಿದೆ.

  ಪೊಲೀಸರು ಬೆಳಗಾವಿ ಪ್ಯಾಂಥರ್ಸ್ ತಂಡದ ಮಾಲಕ ಅಲಿ ಅಶ್ಫಖ್ ಥಾರಾ, ಬೆಂಗಳೂರು ಬ್ಲಾಸ್ಟರ್ಸ್ ಬೌಲಿಂಗ್ ಕೋಚ್ ವಿನು ಪ್ರಸಾದ್ ಮತ್ತು ಬ್ಯಾಟ್ಸ್‌ಮನ್ ವಿಶ್ವನಾಥನ್ ಅವರನ್ನು ಬಂಧಿಸಿದ್ದರು.

 ಅಲಿ ದುಬೈ ಮೂಲದ ಬುಕ್ಕಿಯೊಂದಿಗೆ ಬೆಟ್ಟಿಂಗ್ ನಡೆಸಿದ್ದಾನೆ ಮತ್ತು ಲೀಗ್ ಸಮಯ ದಲ್ಲಿ ಇತರ ತಂಡಗಳ ಆಟಗಾರರೊಂದಿಗೆ ಸಂಪರ್ಕದಲ್ಲಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.

 ಶುಕ್ರವಾರ ಆರಂಭಗೊಳ್ಳಲಿರುವ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಮೆಂಟ್‌ಗೆ ಸಿ.ಎಂ. ಗೌತಮ್ ಗೋವಾ ಮತ್ತು ಅಬ್ರಾರ್ ಖಾಝಿ ಮಿರೆರಾಂ ತಂಡದಲ್ಲಿ ಅವಕಾಶ ಪಡೆದಿದ್ದರು. ಇದೀಗ ಫಿಕ್ಸಿಂಗ್ ಕಾರಣದಿಂದಾಗಿ ಅವರು ತಂಡದಲ್ಲಿ ಸ್ಥಾನ ಕಳೆದುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News