ಬೆಂಗಳೂರಿನಾದ್ಯಂತ ಹೆಚ್ಚುವರಿ ಸಿಸಿ ಕ್ಯಾಮೆರಾ ಅಳವಡಿಕೆ: ಪೊಲೀಸ್ ಆಯುಕ್ತ ಭಾಸ್ಕರ್‌ ರಾವ್

Update: 2019-11-12 16:55 GMT

ಬೆಂಗಳೂರು, ನ.12 : ನಗರದಾದ್ಯಂತ ಸುರಕ್ಷತೆ ಕಾಪಾಡುವ ಸಲುವಾಗಿ ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ಏಳೂವರೆ ಸಾವಿರ ಸಿಸಿ ಕ್ಯಾಮೆರಾಗಳ ಖರೀದಿಗೆ ಚಿಂತನೆ ನಡೆಸಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್‌ರಾವ್ ಹೇಳಿದ್ದಾರೆ.

ಮಂಗಳವಾರ ನಗರದ ಗಾಂಧೀ ಭವನದಲ್ಲಿ ಕರ್ನಾಟಕ ಛಾಯಾಚಿತ್ರ ಗ್ರಾಹಕರ ಸಂಘದಿಂದ ಆಯೋಜಿಸಿದ್ದ ವಿಡಿಯೋ ಸಂಕಲನಕಾರರ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಪೊಲೀಸ್ ಇಲಾಖೆಗೆ ರಾಜ್ಯ ಸರಕಾರದಿಂದ ಸಂಪೂರ್ಣ ಸಹಕಾರ ನೀಡುತ್ತಿದೆ. ನಗರದಲ್ಲಿ ಸುರಕ್ಷತೆ ಕಾಪಾಡಲು ಹಣಕಾಸಿನ ನೆರವನ್ನೂ ನೀಡಿದೆ. ಹೀಗಾಗಿ, ಮುಂದಿನ ದಿನಗಳಲ್ಲಿ ಮತ್ತಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳಲಿದ್ದೇವೆ. ಸಂಚಾರ, ಅಪರಾಧ ಸೇರಿದಂತೆ ಎಲ್ಲ ರೀತಿಯಲ್ಲಿಯೂ ಭಿಗಿ ಭದ್ರತೆ ಕೈಗೊಳ್ಳಲಾಗುವುದು ಎಂದರು.

ಕಾನೂನು ಸಂರಕ್ಷಣೆ ಮಾಡುವ ಸಲುವಾಗಿ ನಮ್ಮ ಪೊಲೀಸ್ ಇಲಾಖೆಯಲ್ಲಿನ ಕ್ಯಾಮೆರಾ ಬಳಕೆ ಸಂಬಂಧ ಪೊಲೀಸರಿಗೆ ತರಬೇತಿ ನೀಡಲಾಗುವುದು. ನಮ್ಮ ಇಲಾಖೆಯಲ್ಲಿ ನಗರದ ಎಲ್ಲ ಪೊಲೀಸ್ ಠಾಣೆಗಳಲ್ಲಿ ಒಬ್ಬೊಬ್ಬರು ಛಾಯಾಗ್ರಾಹಕನ ಅಗತ್ಯವಿದೆ. ಈ ನಿಟ್ಟಿನಲ್ಲಿ ಸಂಘದಿಂದ ಆಧುನಿಕ ತಂತ್ರಜ್ಞಾನದ ಬಳಕೆ ಹಾಗೂ ಫೋಟೋಗ್ರಫಿ ಸಂಬಂಧ ಎರಡು ದಿನಗಳ ತರಬೇತಿ ಕಾರ್ಯಾಗಾರ ನಡೆಸಬೇಕು ಎಂದು ಮನವಿ ಮಾಡಿದರು.

ಪೊಲೀಸರಿಗೆ ಪ್ರತಿಯೊಂದಕ್ಕೂ ದಾಖಲಾತಿ ಅತಿಮುಖ್ಯವಾಗಿರುತ್ತದೆ. ಈ ನಿಟ್ಟಿನಲ್ಲಿ ಗುಣಮಟ್ಟದ ಛಾಯಾಚಿತ್ರಗಳು ನಮಗೆ ಅತಿಮುಖ್ಯವಾಗಿದೆ. ಹೀಗಾಗಿ, ಪೊಲೀಸರಿಗೆ ತರಬೇತಿ ಮೂಲಕ ಉತ್ತಮ ಛಾಯಾಚಿತ್ರ ತೆಗೆಯಲು ಕಲಿಸಬೇಕಿದೆ. ಬೆಂಗಳೂರು ನಗರ ಅತಿ ವೇಗವಾಗಿ ಮುಂದುವರಿಯುತ್ತಿದೆ. ಇಂತಹ ಸಂದರ್ಭದಲ್ಲಿ ನಗರದಲ್ಲಿ ಹೊಸ ತಂತ್ರಜ್ಞಾನ ಬಳಕೆ ಸಂಬಂಧ ತರಬೇತಿಗಳನ್ನು ಸಂಘದಿಂದ ನಡೆಯಲಿ ಎಂದು ನುಡಿದರು.

ಸಮಾಜದಲ್ಲಿ ಹಲವು ಹುದ್ದೆಗಳ ಅವಧಿ ಮುಗಿಯುತ್ತದೆ. ಮತ್ತೊಂದಿಷ್ಟು ಸೂರ್ಯನಂತೆ ಪ್ರತಿದಿನವೂ ಚಲನೆಯಲ್ಲಿರುತ್ತದೆ. ಅದೇ ರೀತಿ ಛಾಯಾಚಿತ್ರಗಾರರು ಎಂದಿಗೂ ಸೂರ್ಯನಂತೆಯೇ ಪ್ರಜ್ವಲಿಸುತ್ತಿರುತ್ತಾರೆ ಎಂದ ಅವರು, ಛಾಯಾಗ್ರಾಹಕರಿಂದ ಹಲವು ಸಾಫ್ಟ್‌ವೇರ್ ಗಳು, ತಂತ್ರಜ್ಞಾನ ಅಭಿವೃದ್ಧಿ ಆಗಿದೆ. ಎಷ್ಟೇ ತಂತ್ರಜ್ಞಾನ ಇದ್ದರೂ ಕೌಶಲ್ಯರಹಿತ ಛಾಯಾಚಿತ್ರ ಗುಣಮಟ್ಟವಿರಲ್ಲ. ಕೌಶಲ್ಯ ಛಾಯಾಗ್ರಾಹಕನೊಳಗೆ ಇರುತ್ತದೆ ಎಂದು ಭಾಸ್ಕರ್‌ರಾವ್ ಹೇಳಿದರು.

ಸಂಘದ ಅಧ್ಯಕ್ಷ ಎಸ್.ಪರಮೇಶ್ವರ್ ಮಾತನಾಡಿ, ತಂತ್ರಜ್ಞಾನ, ವೈಯಕ್ತಿಕ ಕೌಶಲ್ಯಾಭಿವೃದ್ಧಿ ಸೇರಿದಂತೆ ಅನೇಕ ವಿಷಯಗಳ ಕುರಿತು ಕಾರ್ಯಾಗಾರ ನಡೆಯುತ್ತಿದೆ. ಸಾಮಾಜಿಕ ಮಾಧ್ಯಮವು ಸಾಕಷ್ಟು ಬೆಳೆದಿದೆ. ಆದರೆ, ಅಲ್ಲಿನ ಛಾಯಾಚಿತ್ರಗಳು ಗುಣಮಟ್ಟವಿರಲ್ಲ. ಹೀಗಾಗಿ, ಕಲಾತ್ಮಕ ಛಾಯಾಚಿತ್ರಗಳ ಕುರಿತು ಸಾಮಾಜಿಕ ಮಾಧ್ಯಮ ಮೂಲಕವೇ ಜನರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದರು.

ಛಾಯಾಗ್ರಾಹಕರು ಹಲವಾರು ಸಂದರ್ಭದಲ್ಲಿ ಪೊಲೀಸರಿಂದ ವಿವಿಧ ರೀತಿಯ ಕಿರುಕುಳಕ್ಕೆ ಒಳಗಾಗುತ್ತಿರುವ ವರದಿಗಳು ಕಂಡುಬಂದಿವೆ. ಈ ಸಂಬಂಧ ಕ್ರಮ ಕೈಗೊಳ್ಳಬೇಕು. ಕಿರುಕುಳಗಳನ್ನು ತಪ್ಪಿಸಬೇಕು ಹಾಗೂ ಅಧಿಕವಾಗುತ್ತಿರುವ ಕ್ಯಾಮೆರಾಗಳ ಕಳ್ಳತನವನ್ನು ತಡೆಯಬೇಕು ಎಂದು ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ವಾರ್ತಾ ಮತ್ತು ಸಂಕರ್ಪ ಇಲಾಖೆ ಆಯುಕ್ತ ಎಸ್.ಎನ್.ಸಿದ್ದರಾಮಪ್ಪ, ಸಂಘದ ಉಪಾಧ್ಯಕ್ಷರಾದ ಮಹದೇವ, ರವಿಕುಮಾರ್, ಜಂಟಿ ಕಾರ್ಯದರ್ಶಿ ಎಚ್.ಕೆ.ವಸಂತ ಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News