ಬೆಂಗಳೂರು: ಗ್ಯಾಸ್ ಸಿಲಿಂಡರ್ ಸೋರಿಕೆ- ಮಲಗಿದ್ದ ದಂಪತಿ ಉಸಿರುಗಟ್ಟಿ ಸಾವು

Update: 2019-11-13 16:59 GMT

ಬೆಂಗಳೂರು, ನ.13: ಅಡುಗೆ ಅನಿಲ(ಗ್ಯಾಸ್ ಸಿಲಿಂಡರ್) ಸೋರಿಕೆಯಿಂದ ರಾತ್ರಿ ವೇಳೆ ಮಲಗಿದ್ದ ದಂಪತಿ ಉಸಿರು ಗಟ್ಟಿ ಸಾವನ್ನಪ್ಪಿರುವ ಘಟನೆ ಬೇಗೂರಿನ ದೇವರಚಿಕ್ಕನಹಳ್ಳಿ ಬಳಿ ನಡೆದಿದೆ ಎಂದು ವರದಿಯಾಗಿದೆ.

ಆಂಧ್ರಪ್ರದೇಶ ರಾಜ್ಯದ ನಾಗಮುನಿ ಮತ್ತು ಪದ್ಮಾವತಿ ಮೃತ ದಂಪತಿ ಎಂದು ಪೊಲೀಸರು ಗುರುತಿಸಿದ್ದಾರೆ.

ಹಲವು ವರ್ಷಗಳಿಂದ ಬೆಂಗಳೂರಿನ ಬೇಗೂರಿನಲ್ಲಿ ವಾಸವಾಗಿದ್ದ ನಾಗಮುನಿ ಮತ್ತು ಪದ್ಮಾವತಿ ದಂಪತಿ ಸಣ್ಣಪುಟ್ಟ ಕೆಲಸ ಮಾಡುತ್ತಿದ್ದರು. ಮಂಗಳವಾರ ರಾತ್ರಿ ನಾಗಮುನಿ ಅವರು ಗ್ಯಾಸ್‌ನಲ್ಲಿ ಕಾಫಿ ಮಾಡಲು ಹಾಲು ಇಟ್ಟು ನಿದ್ದೆಗೆ ಜಾರಿದ್ದಾರೆ. ಆದರೆ, ಹಾಲು ಉಕ್ಕಿ ಚೆಲ್ಲಿದ್ದರಿಂದ ಬೆಂಕಿ ನಂದಿ ಹೋಗಿ ಗ್ಯಾಸ್ ಸೋರಿಕೆಯಾಗಿದೆ. ಮನೆ ಚಿಕ್ಕದಾದ ಕಾರಣ ಗಾಳಿ ಹೊರಹೋಗದೆ ದಂಪತಿಗಳು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ.

ಸ್ಥಳೀಯರು ಅನುಮಾನ ಬಂದು ಸ್ಥಳಕ್ಕೆ ಹೋಗಿ ನೋಡಿದಾಗ ಘಟನೆ ಬೆಳಕಿಗೆ ಬಂದಿದ್ದು, ಈ ಸಂಬಂಧ ಬೇಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News