ಬೆಂಗಳೂರು: ಆ್ಯಸಿಡ್ ಕುಡಿದು ದಂಪತಿ ಆತ್ಮಹತ್ಯೆ
ಬೆಂಗಳೂರು, ನ.15: ಆ್ಯಸಿಡ್ ಸೇವಿಸಿ ದಂಪತಿ ಆತ್ಮಹತ್ಯೆ ಮಾಡಿರುವ ಘಟನೆ ಇಲ್ಲಿನ ಬಸವೇಶ್ವರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮಂಜುನಾಥ ನಗರದ ನಿವಾಸಿಗಳಾದ ಮೋಹನ್(62), ಇವರ ಪತ್ನಿ ನಿರ್ಮಲಾ(50) ಮೃತ ದಂಪತಿ ಎಂದು ತಿಳಿದುಬಂದಿದೆ.
ಬೆಮೆಲ್ ಕಾರ್ಖಾನೆಯಿಂದ ನಿವೃತ್ತ ನೌಕರರಾಗಿದ್ದ ಮೋಹನ್, ಇತ್ತೀಚೆಗೆ ಹಣಕಾಸಿನ ತೊಂದರೆಗೆ ಸಿಲುಕಿದ್ದು, ಅದೇ ನೋವಿನಲ್ಲಿ ಗುರುವಾರ ರಾತ್ರಿ 11ರ ವೇಳೆ ಪತ್ನಿ ನಿರ್ಮಲಾ ಜತೆ ಶೌಚಾಲಯ ಸ್ವಚ್ಛಗೊಳಿಸುವ ಆ್ಯಸಿಡ್ ಕುಡಿದ ಪರಿಣಾಮ ಅಸ್ವಸ್ಥರಾಗಿ ಇಬ್ಬರು ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.
ಶುಕ್ರವಾರ ಮುಂಜಾನೆ ಪುತ್ರ ಬಾಗಿಲು ತೆಗೆದು ನೋಡಿದಾಗ ಇಬ್ಬರು ಬಾಯಲ್ಲಿ ರಕ್ತಕಾರಿ ಮೃತಪಟ್ಟಿರುವುದು ಕಂಡು ಬಂದಿದೆ. ಮೃತ ಮೋಹನ್ ಅವರು ತಮಿಳು ಭಾಷೆಯಲ್ಲಿ ಡೆತ್ನೋಟ್ ಬರೆದಿದ್ದಾರೆ.
ಹಣಕಾಸಿನ ತೊಂದರೆಯಿಂದ ಆತ್ಮಹತ್ಯೆಗೆ ಶರಣಾಗಿರಬಹುದೆಂದು ಶಂಕೆ ವ್ಯಕ್ತವಾಗಿದ್ದು, ಈ ಸಂಬಂಧ ದೂರು ದಾಖಲಿಸಿಕೊಂಡಿರುವ ಬಸವೇಶ್ವರ ನಗರ ಠಾಣಾ ಪೊಲೀಸರು ತನಿಖೆ ಕೈಗೊಂಡಿದ್ದಾರೆ.