ಮುಖ್ಯಮಂತ್ರಿಯನ್ನು ಭೇಟಿ ಮಾಡಿದ ಏರ್ ಬಸ್ ಪ್ರತಿನಿಧಿಗಳು
ಬೆಂಗಳೂರು, ನ.15: ಏರ್ಬಸ್ನ ಮುಖ್ಯ ತಾಂತ್ರಿಕ ಅಧಿಕಾರಿಗಳ ತಂಡ ಇಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರನ್ನು ಅವರ ಧವಳಗಿರಿ ನಿವಾಸದಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದರು.
ಈ ವೇಳೆ ಮಾತನಾಡಿದ ಮುಖ್ಯಮಂತ್ರಿ, ಏರ್ಬಸ್ ಸಂಸ್ಥೆ ಕರ್ನಾಟಕದಲ್ಲಿ ಅದರಲ್ಲೂ ಬೆಂಗಳೂರಲ್ಲಿ ತಮ್ಮ ಸೇವೆ ನೀಡಲು ಆಯ್ಕೆ ಮಾಡಿಕೊಂಡಿರುವುದು ಹೆಮ್ಮೆಯ ವಿಚಾರ ಎಂದರು.
ಬೆಂಗಳೂರು ಏರೋಸ್ಪೇಸ್ ಕ್ಯಾಪಿಟಲ್ ಆಗಿ ಗುರುತಿಸಿ ಕೊಂಡಿದೆ. ಇಲ್ಲಿ ಏರ್ಬಸ್ ಹೂಡಿಕೆ ಮಾಡಲು ಮುಂದಾಗಿರುವುದು ಸ್ವಾಗತಾರ್ಹ. ಸರಕಾರದ ವತಿಯಿಂದ ನಿಮಗೆ ಸಂಪೂರ್ಣ ಸಹಕಾರ ಹಾಗೂ ಬೆಂಬಲವಿರಲಿದೆ ಎಂದು ಯಡಿಯೂರಪ್ಪ ಭರವಸೆ ನೀಡಿದರು. ಈಗಾಗಲೇ ರಾಜ್ಯದಲ್ಲಿ ಏರೋಸ್ಪೇಸ್ ಪಾಲಿಸಿ ಜಾರಿಗೆ ತರಲಾಗಿದ್ದು, ಏರೋಸ್ಪೇಸ್ ಸಂಬಂಧ ಉತ್ತಮ ವಾತಾವರಣ ರಾಜ್ಯದಲ್ಲಿ ನಿರ್ಮಾಣವಾಗಿದೆ. ಬೆಳಗಾವಿಯಲ್ಲಿ ಏರ್ಕ್ರಾಫ್ಟ್ ಬಳಕೆಗೆ ಸೂಕ್ತ ಜಾಗ ಲಭ್ಯವಿದೆ. ಈ ಬಗ್ಗೆಯೂ ಚಿಂತಿಸಿ ಎಂದು ಮುಖ್ಯಮಂತ್ರಿ ಆಹ್ವಾನ ನೀಡಿದರು. ಏರ್ಬಸ್ ಇಂಡಿಯಾ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಆನಂದ್ ಸ್ಟಾನ್ಲಿ ಹಾಗೂ ಚೀಫ್ ಟೆಕ್ನಿಕಲ್ ಆಫೀಸರ್ ಗ್ರಾಜಿಯಾ ವಿಟ್ಟಡಿನಿ ಮುಖ್ಯಮಂತ್ರಿಗೆ ಅಭಿನಂದನೆ ಸಲ್ಲಿಸಿದರು.