ದೇಶದ ರಫ್ತು ಕ್ಷೇತ್ರದಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ: ಗೌರವ್‌ ಗುಪ್ತ

Update: 2019-11-15 17:40 GMT

ಬೆಂಗಳೂರು, ನ 15: ದೇಶದ ರಫ್ತು ಚಟುವಟಿಕೆಯಲ್ಲಿ ಕರ್ನಾಟಕವು ಸುಮಾರು ಮೂರನೇ ಒಂದರಷ್ಟು ಕೊಡುಗೆ ನೀಡುತ್ತಿದ್ದು, ಬೆಂಗಳೂರು ನಗರ ಎಲ್ಲಾ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತ ಹೇಳಿದ್ದಾರೆ.

ಶುಕ್ರವಾರ ನಗರದಲ್ಲಿ ನಡೆಯುತ್ತಿರುವ ಎರಡು ದಿನಗಳ 35ನೇ ಇನ್ವೆಸ್ಟ್ ಇಂಟರ್‌ನ್ಯಾಷನಲ್ ಮತ್ತು 8ನೇ ಏಷ್ಯನ್ ವ್ಯಾಲ್ಯೂ ಇಂಜಿನಿಯರಿಂಗ್ ಸಮ್ಮೇಳನದಲ್ಲಿ ಮಾತನಾಡಿದ ಅವರು, ದೇಶದಿಂದ ಒಟ್ಟಾರೆ 340 ಶತಕೋಟಿ ಡಾಲರ್ ಮೊತ್ತದಷ್ಟು ಉತ್ಪನ್ನಗಳನ್ನು ರಪ್ತು ಮಾಡುತ್ತಿದ್ದು, ಕರ್ನಾಟಕದಿಂದಲೇ 100 ಶತಕೋಟಿ ಡಾಲರ್‌ಗೂ ಹೆಚ್ಚು ಮೊತ್ತದ ಉತ್ಪನ್ನಗಳನ್ನು ರಫ್ತು ಮಾಡುತ್ತಿರುವುದು ವಿಶೇಷ ಎಂದರು.

ರಾಜ್ಯದಲ್ಲಿ ಮೈಸೂರು, ಹುಬ್ಬಳ್ಳಿಯಂತಹ ಎರಡನೇ ಹಂತದ ನಗರಗಳೂ ಸಹ ಉತ್ತಮ ಬೆಳವಣಿಗೆ ಸಾಧಿಸುತ್ತಿವೆ. ಇಂತಹ ನಗರಗಳಲ್ಲಿ ಹತ್ತು ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಇದ್ದು, ಅಲ್ಲಿಯೂ ಸಹ ಹೂಡಿಕೆಗೆ ಪ್ರಶಸ್ತವಾದ ವಾತಾವರಣವಿದೆ. ಇಡೀ ದೇಶದಲ್ಲಿ ಕರ್ನಾಟಕ ನಾವೀನ್ಯತೆಯಲ್ಲಿ ಮೊದಲ ಸ್ಥಾನದಲ್ಲಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಕೈಗಾರಿಕಾ ಬೆಳವಣಿಗೆಗೆ ಸರಕಾರ ಪ್ರಧಾನ ಆದ್ಯತೆ ನೀಡುತ್ತಿದೆ. ಸುಗಮ ವ್ಯವಹಾರ ವಲಯದಲ್ಲಿ ಮುಂಚೂಣಿಯಲ್ಲಿದ್ದು, ಸುಗಮ ವಹಿವಾಟು ಕ್ಷೇತ್ರದಲ್ಲಿ ದೇಶದ ಪ್ರಮುಖ ನಾಲ್ಕು ನಗರಗಳ ಪೈಕಿ ಬೆಂಗಳೂರು ಮುಂಚೂಣಿಯಲ್ಲಿದೆ ಎಂದು ವಿಶ್ವಬ್ಯಾಂಕ್ ಸಹ ಮಾನ್ಯತೆ ನೀಡಿದೆ. ಕಾಲಮಿತಿಯೊಳಗೆ ಸರಕಾರಿ ಸೇವೆಗಳನ್ನು ನೀಡುತ್ತಿದ್ದು, ಇದಕ್ಕೆ ಸಕಾಲ ಯೋಜನೆ ಜ್ವಲಂತ ನಿದರ್ಶನವಾಗಿದೆ ಎಂದು ಅವರು ತಿಳಿಸಿದರು.

ಇಂಜಿನಿಯರಿಂಗ್ ಕ್ಷೇತ್ರದಲ್ಲೂ ಸಹ ಉತ್ತಮವಾಗಿದ್ದು, ಕರ್ನಾಟಕ ವಿಶ್ವ ಮಟ್ಟದ ಇಂಜಿನಿಯರ್‌ಗಳನ್ನು ನೀಡಿದೆ. ಬೆಂಗಳೂರು ವ್ಯಾಲ್ಯೂ ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಗಮನಾರ್ಹ ಸುಧಾರಣೆ ಕಾಣುತ್ತಿದ್ದು, ಕಳೆದೊಂದು ಶತಮಾನದಿಂದ ಹಲವಾರು ಬೆಳವಣಿಗೆಗೆ ಈ ನಗರ ಸಾಕ್ಷಿಯಾಗಿದೆ. ದೇಶದಲ್ಲಿ ಮೊದಲು ವಿದ್ಯುತ್ ಕಂಡ ನಗರ, ಭಾರತೀಯ ವಿಜ್ಞಾನ ಮಂದಿರ, ವಿಮಾನ ಕೈಗಾರಿಕಾ ಕಾರ್ಖಾನೆ, ನ್ಯಾನೋ ಮಾಹಿತಿ, ಜೈವಿಕ ತಂತ್ರಜ್ಞಾನ, ರೊಬೊಟಿಕ್ ತಂತ್ರಜ್ಞಾನ, ರೊಬೊಟಿಕ್ ಶಸ್ತ್ರಚಿಕಿತ್ಸೆ, ಉತ್ಪಾದನಾ ವಲಯದಲ್ಲಿ ಗಮನಾರ್ಹ ಸಾಧನೆ ಮಾಡಿದೆ ಎಂದು ಅವರು ಶ್ಲಾಘನೆ ವ್ಯಕ್ತಪಡಿಸಿದರು.

ವ್ಯಾಲ್ಯೂ ಇಂಜಿನಿಯರಿಂಗ್ ವಲಯದ ಅಧ್ಯಕ್ಷ ನವೀನ್ ಕುಮಾರ್ ಮಾತನಾಡಿ, ತಾಂತ್ರಿಕ ಕ್ಷೇತ್ರದಲ್ಲಿ ಮೌಲ್ಯಕ್ಕೆ ಹೆಚ್ಚು ಆದ್ಯತೆ ನೀಡಿದೆ. ಕ್ರಿಯಾಶೀಲತೆಗೆ ಹೆಚ್ಚು ಒತ್ತು ನೀಡುವ ಉದ್ದೇಶದಿಂದ ಈ ಸಮ್ಮೇಳನ ನಡೆಸಲಾಗುತ್ತಿದ್ದು, ಜಾಗತಿಕವಾಗಿ ಬಳಕೆಯಲ್ಲಿರುವ ಉತ್ತಮ ಅಂಶಗಳನ್ನು ಅಳವಡಿಸಿಕೊಳ್ಳಲು ಆದ್ಯತೆ ನೀಡಲಾಗುತ್ತಿದೆ. ವ್ಯಾಲ್ಯೂ ಇಂಜಿನಿಯರಿಂಗ್ ವಲಯದಲ್ಲಿ ಗಡಿಗಳನ್ನು ಮೀರಿ ಉತ್ತಮ ಅಂಶಗಳನ್ನು ಅಳವಡಿಸಿಕೊಳ್ಳುವುದು ಈ ಬಾರಿಯ ಘೋಷವಾಕ್ಯವಾಗಿದೆ ಎಂದು ಹೇಳಿದರು.

ವ್ಯಾಲ್ಯೂ ಇಂಜಿನಿಯರಿಂಗ್ ಸಂಸ್ಥೆಯ ದಕ್ಷಿಣ ವಲಯದ ಅಧ್ಯಕ್ಷ ಅಮಿತ್ ಕುಮಾರ್ ಮಾತನಾಡಿ, ಮುಂಬೈ ನಂತರ ಬೆಂಗಳೂರಿನಲ್ಲಿ ಈ ಸಮ್ಮೇಳನ ನಡೆಯುತ್ತಿದೆ. ಅಮೆರಿಕ, ನೆದರ್ ಲ್ಯಾಂಡ್, ಕೆನಡಾ, ದೇಶಾದ್ಯಂತ ಹಲವಾರು ಮಂದಿ ಪಾಲ್ಗೊಂಡಿದ್ದು, 72 ಪ್ರಬಂಧಗಳನ್ನು ಮಂಡಿಸಲಾಗುತ್ತಿದೆ. ಟಾಟಾ, ಇಟಾಚಿ, ಜಿಇ, ಭಾಷ್‌ನಂತಹ ಸಂಸ್ಥೆಗಳು ಪಾಲ್ಗೊಂಡಿದ್ದು, ಶನಿವಾರ ತಜ್ಞರು ತಾಂತ್ರಿಕ ಪೇಪರ್‌ಗಳನ್ನು ಮಂಡಿಸಲಿದ್ದು. ಇದರಿಂದ ಕರ್ನಾಟಕಕ್ಕೆ ಹಚ್ಚಿನ ರೀತಿಯಲ್ಲಿ ಅನುಕೂಲವಾಗಲಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News