ಮಹಾರಾಷ್ಟ್ರ ರಾಜ್ಯಪಾಲರಿಂದ ಪಕ್ಷಪಾತ ಧೋರಣೆ: ಮಲ್ಲಿಕಾರ್ಜುನ ಖರ್ಗೆ
Update: 2019-11-17 14:24 GMT
ಬೆಂಗಳೂರು, ನ.17: ಮಹಾರಾಷ್ಟ್ರ ಸರಕಾರ ರಚನೆ ವಿಚಾರದಲ್ಲಿ ರಾಜ್ಯಪಾಲ ಭಗತ್ಸಿಂಗ್ ಕೋಶಿಯಾರಿ ಬಿಜೆಪಿ ಪರವಾದಂತಹ ನಿರ್ಧಾರವನ್ನು ತೆಗೆದುಕೊಂಡಿದ್ದಾರೆಯೆಂದ ಕಾಂಗ್ರೆಸ್ನ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.
ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಗೆ ನೆರವಾಗುವ ಏಕೈಕ ಉದ್ದೇಶದಿಂದ ರಾಜ್ಯಪಾಲರು ಶಿವಸೇನಾ ಮತ್ತು ಎನ್ಸಿಪಿಗೆ ಸಾಕಷ್ಟು ಸಮಯಾವಕಾಶ ನೀಡಲಿಲ್ಲ. ಕಾಂಗ್ರೆಸ್ಗೆ ಹಕ್ಕು ಮಂಡನೆಗೆ ಅವಕಾಶವನ್ನೇ ನೀಡಲಿಲ್ಲ ಎಂದು ದೂರಿದರು.
ಶಿವಸೇನಾಗೆ 48 ಗಂಟೆ ಕಾಲಾವಕಾಶ ನೀಡಲಾಗಿಲ್ಲ. ಸಾಂವಿಧಾನಿಕವಾಗಿ ಕಾರ್ಯನಿರ್ವಹಿಸುತ್ತಿದ್ದೇನೆ ಎಂದು ತೋರ್ಪಡಿಸಿಕೊಳ್ಳಲಷ್ಟೇ ರಾಜ್ಯಪಾಲರು ಪ್ರಕ್ರಿಯೆಗಳನ್ನು ನೆರವೇರಿಸಿದ್ದಾರೆ. ಇದು ಪ್ರಜಾಪ್ರಭುತ್ವ ಮೌಲ್ಯಗಳಿಗೆ ಗಾಸಿಗೊಳಿಸುವಂತಹದ್ದೆಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.