ಕಾಫಿ ತೋಟದ ಮಾಲಕನಿಗೆ ನಟ ಸುದೀಪ್ ಆಪ್ತ ಬೆದರಿಕೆ ?
Update: 2019-11-21 16:32 GMT
ಬೆಂಗಳೂರು, ನ.21: ಸಿನೆಮಾ ನಟ ಸುದೀಪ್ ಆಪ್ತ ಎನ್ನಲಾದ ನವೀನ್ ಗೌಡ ಎಂಬವರು ಕಾಫಿ ತೋಟದ ಮಾಲಕನಿಗೆ ಬೆದರಿಕೆ ಹಾಕಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.
ಪ್ರಕರಣ ಸಂಬಂಧ ಗುರುವಾರ ನಗರದ ಸಿಸಿಬಿ ಕಚೇರಿಯಲ್ಲಿ ಆರೋಪಿ ನವೀನ್ ಗೌಡನನ್ನು ವಿಚಾರಣೆಗೊಳಪಡಿಸಲಾಯಿತು ಎಂದು ತಿಳಿದುಬಂದಿದೆ.
ಖಾಸಗಿ ವಾಹಿನಿಯಲ್ಲಿ ನಟ ಸುದೀಪ್ ಅವರ ಕಿಚ್ಚ ಕ್ರಿಯೇಷನ್ಸ್ ನಿರ್ಮಾಣದಡಿ ವಾರಸ್ದಾರ ಧಾರಾವಾಹಿ ಪ್ರಸಾರವಾಗುತ್ತಿತ್ತು. ಇದರ ಚಿತ್ರೀಕರಣಕ್ಕಾಗಿ ಚಿಕ್ಕಮಗಳೂರಿನ ದೀಪಕ್ ಮಯೂರ್ ಪಟೇಲ್ ಎಂಬುವವರ ಮನೆ ಮತ್ತು ಕಾಫಿ ತೋಟವನ್ನು ಬಾಡಿಗೆ ಪಡೆಯಲಾಗಿತ್ತು ಎನ್ನಲಾಗಿದೆ.
ಈ ವೇಳೆ, ವಾರಸ್ದಾರ ಧಾರಾವಾಹಿಗಾಗಿ ಕಾಫಿ ತೋಟ ಮತ್ತು ಮರಗಳನ್ನ ನಾಶ ಮಾಡಿದ್ದಾರೆ ಎಂಬ ದೂರನ್ನು ಸ್ಥಳೀಯ ಪೊಲೀಸ್ ಠಾಣೆಗೆ ಪಟೇಲ್ ಸಲ್ಲಿಸಿದ್ದರು. ಆದರೆ, ದೂರನ್ನು ವಾಪಸ್ಸು ಪಡೆಯುವಂತೆ ನವೀನ್ಗೌಡ ಕೊಲೆ ಬೆದರಿಕೆ ಹಾಕಿದ್ದರು ಎನ್ನಲಾಗಿದ್ದು, ಸದ್ಯ ಪ್ರಕರಣ ಸಿಸಿಬಿಗೆ ವರ್ಗಾವಣೆಯಾಗಿದೆ.