ಕೋಟ್ಯಂತರ ರೂ. ವಂಚಿಸಿದ ಆರೋಪ: ತಮಿಳುನಾಡು ಮೂಲದ ವ್ಯಕ್ತಿಯ ವಿರುದ್ಧ ಎಸ್ಪಿಗೆ ದೂರು
ಬೆಂಗಳೂರು, ನ.26: ನಂಬಿಕೆ ಮೇಲೆ ಲಕ್ಷಾಂತರ ರೂಪಾಯಿ ಮೌಲ್ಯದ ಹಣ್ಣುಗಳನ್ನು ವ್ಯಾಪಾರಿಗಳಿಂದ ಖರೀದಿ ಮಾಡಿ, ಹಣ ನೀಡದೆ ವಂಚಿಸಲಾಗಿದೆ ಎಂದು ಆರೋಪಿಸಿ ಸಂತ್ರಸ್ತರು ಬೆಂಗಳೂರು ಗ್ರಾಮಾಂತರ ಎಸ್ಪಿಗೆ ದೂರು ಸಲ್ಲಿಕೆ ಮಾಡಿದ್ದಾರೆ.
ಮಂಗಳವಾರ ಇಲ್ಲಿನ ಮಿಲ್ಲರ್ ರಸ್ತೆಯ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಸ್ಪಿ ಕಚೇರಿಯಲ್ಲಿ ದೂರು ಸಲ್ಲಿಸಿದ ವ್ಯಾಪಾರಿಗಳು, ತಮಿಳುನಾಡು ಮೂಲದ ಎಸ್.ರಾಜಗೋಪಾಲ ಎಂಬಾತ ಈ ಕೃತ್ಯವೆಸಗಿದ್ದು, ಬರೋಬ್ಬರಿ 1 ಕೋಟಿ ರೂಪಾಯಿಗೂ ಅಧಿಕ ಮೊತ್ತವನ್ನು ಹತ್ತಾರು ವ್ಯಾಪಾರಿಗಳಿಗೆ ನೀಡದೆ ವಂಚಿಸಿದ್ದಾನೆ ಎಂದು ವ್ಯಾಪಾರಿಗಳು ಆರೋಪಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅಂತರರಾಜ್ಯ ಮಟ್ಟದ ಹಣ್ಣಿನ ವ್ಯಾಪಾರಿ ಮುಹಮ್ಮದ್ ತಬ್ರೇಝ್ ಅಂಜಮ್, ನಗರ ವ್ಯಾಪ್ತಿಯ ಹಣ್ಣಿನ ವ್ಯಾಪಾರಿಗಳಾದ ಹನುಮಂತ ಅವರಿಗೆ 8 ಲಕ್ಷ, ರಘುನಾಥ್-15, ರಾಕೇಶ್-15, ವಾಸು-5, ಮತೀನ್-15, ಬಾಬು-4, ಲಾಲುಸೇಠ್-2, ರೆಡ್ಡಿ ಮಂಡಿ-7 ಲಕ್ಷ ಸೇರಿದಂತೆ ಹತ್ತಾರು ಮಂದಿಗೆ ಬರೋಬ್ಬರಿ, 1 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಹಣ ವಂಚನೆ ಮಾಡಿದ್ದಾನೆ ಎಂದು ದೂರಿದರು.
ಇಲ್ಲಿನ ಎಲೆಕ್ಟ್ರಾನಿಕ್ ಸಿಟಿ ಹಾಗೂ ಸಿಟಿ ಮಾರ್ಕೆಟ್ನಲ್ಲಿ ದಾಳಿಂಬೆ ಮತ್ತು ಸೇಬು ಹಣ್ಣುಗಳ ಬೃಹತ್ ಮಾರಾಟ ಮಳಿಗೆಗಳನ್ನು ಹೊಂದಿರುವ ವ್ಯಾಪಾರಸ್ಥರನ್ನು ಗುರಿಯಾಗಿಸಿಕೊಂಡ ಆರೋಪಿ ಎಸ್.ರಾಜಗೋಪಾಲ, ಒಂದೇ ಬಾರಿಗೆ 4ರಿಂದ ಐದಾರು ಲಕ್ಷ ರೂ. ಮೌಲ್ಯದ ಹಣ್ಣುಗಳನ್ನು ಖರೀದಿಸಿ, ಹಣ ನೀಡುವ ಮೂಲಕ ನಂಬಿಕೆ ಗಿಟ್ಟಿಸಿಕೊಂಡಿದ್ದ. ತದನಂತರ, ಸರಿ ಸುಮಾರು, 30ರಿಂದ 40 ಲಕ್ಷ ರೂ. ಮೌಲ್ಯದ ಹಣ್ಣು ಖರೀದಿಸಿ, ಹಣ ನೀಡದೆ ತಲೆಮರೆಸಿಕೊಳ್ಳುತ್ತಿದ್ದ ಎಂದು ತಬ್ರೇಝ್ ದೂರಿನಲ್ಲಿ ಆರೋಪಿಸಿದ್ದಾರೆ.
ಕೆಲ ದಿನಗಳ ಹಿಂದೆ ಮತ್ತೇ ತಬ್ರೇಝ್ ಅಂಜುಂ ಅವರ ಬಳಿ ಬಂದಿದ್ದ ಆರೋಪಿಯೂ, ಖಾಸಗಿ ಬ್ಯಾಂಕ್ಗಳ ಚೆಕ್ ನೀಡಿ, ವ್ಯಾಪಾರ ಮುಂದುವರೆಸೋಣ ಎಂದಿದ್ದ. ಆದರೆ, ಖಾತೆಯಲ್ಲಿ ಹಣವಿಲ್ಲದ ಕಾರಣ, ಚೆಕ್ ಬೌನ್ಸ್ ಆಗಿದೆ ಎಂದು ದೂರುದಾರರು ಹೇಳಿದರು.
ಬೆದರಿಕೆ: ಆರೋಪಿ ರಾಜಗೋಪಾಲ ಮೇಲೆ ಪೊಲೀಸರಿಗೆ ದೂರು ನೀಡಿದ್ದ ಸಂದರ್ಭದಲ್ಲಿ ವ್ಯಾಪಾರಿ ತಬ್ರೇಝ್ ಅವರಿಗೆ ಬೆದರಿಕೆ ಹಾಕಿದ್ದು, ಹಣ ವಾಪಸ್ಸು ಕೇಳಿದರೆ, ಹೊರ ರಾಜ್ಯಗಳ ವ್ಯಕ್ತಿಗಳಿಂದ ಕೊಲೆ ಮಾಡಿಸುವುದಾಗಿ ಜೀವ ಬೆದರಿಕೆ ಹಾಕಿದ್ದಾನೆ ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಆರೋಪಿ ರಾಜಗೋಪಾಲ, ಇದುವರೆಗೂ ಹತ್ತಾರು ವ್ಯಾಪಾರಿಗಳಿಗೆ ವಂಚನೆ ಮಾಡಿದ್ದು, ಈ ಸಂಬಂಧ ಪೊಲೀಸ್ ಠಾಣೆಗಳಲ್ಲೂ ದೂರುಗಳು ದಾಖಲಾಗಿವೆ. ಆದರೆ, ಈತನ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಂಡಿಲ್ಲ. ಮುಂದೆಯಾದರೂ, ಇಂತಹ ವ್ಯಕ್ತಿಗಳ ವಿರುದ್ಧ ಕ್ರಮ ಜರುಗಿಸಿ ಎಂದು ವ್ಯಾಪಾರಿಗಳು ಆಗ್ರಹಿಸಿದರು.
ಹಲವು ಪ್ರಕರಣ ದಾಖಲು
ಆರೋಪಿ ಐಪಿಸಿ 1860ರ ಅನ್ವಯ 420(ವಂಚನೆ), 504(ಬೆದರಿಕೆ) ಹಾಗೂ 506 (ಉದ್ದೇಶ ಪೂರ್ವಕವಾಗಿ ಶಾಂತಿ ಕದಡಿದ) ಆರೋಪದಡಿ ಇಲ್ಲಿನ ಮಾಗಡಿ ರಸ್ತೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಜತೆಗೆ ತಮಿಳುನಾಡು ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ಈತ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಾಗಿದೆ ಎಂದು ದೂರುದಾರರು ಹೇಳಿದರು.