ಬಿಜೆಪಿ ಸರಕಾರದ ವಿರುದ್ಧ ಮಾಜಿ ಸಚಿವ ಚಲುವರಾಯಸ್ವಾಮಿ ವಾಗ್ದಾಳಿ

Update: 2019-11-26 17:30 GMT

ಬೆಂಗಳೂರು, ನ.26: ಕೇಂದ್ರದಲ್ಲಿ ಎರಡನೆ ಬಾರಿಗೆ ಅಧಿಕಾರ ಹಿಡಿದಿರುವ ಬಿಜೆಪಿ ಸರಕಾರದ ಸಾಧನೆ ಶೂನ್ಯ ಹಾಗೂ ರಾಜ್ಯ ಸರಕಾರವೂ ಸಂಪೂರ್ಣವಾಗಿ ನಿಶ್ಯಕ್ತವಾಗಿದೆ ಎಂದು ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದ್ದಾರೆ.

ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ.ಶಿವರಾಜು ಪರ ಮತಯಾಚನೆ ವೇಳೆ ಮಾತನಾಡಿದ ಅವರು, ವಾಮ ಮಾರ್ಗದ ಮೂಲಕ ಅಧಿಕಾರ ಹಿಡಿಯುವುದು ಬಿಜೆಪಿ ನಾಯಕರ ರಕ್ತದಲ್ಲಿಯೇ ಕರಗತವಾಗಿದೆ ಎಂದು ಟೀಕಿಸಿದರು.

ಜಾತಿ, ಧರ್ಮಗಳ ನಡುವೆ ಕೋಮು ಸೌಹಾರ್ದತೆಯನ್ನು ಹಾಳು ಮಾಡಿ ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಾರೆ. ಬಿಜೆಪಿಯು ಅಕ್ರಮ ಹಣದ ಮೂಲಕ ಚುನಾವಣೆ ಗೆಲ್ಲುವುದು ಅವರ ಸಿದ್ದಾಂತವಾಗಿದೆ. ಪ್ರಧಾನಿ ಮೋದಿ ಮಾತುಗಳಿಗೆ ಮರುಳಾಗಿ ಜನ ಮತ ಹಾಕಿದರು. ಆದರೆ, ಇಂದು ನಾಗರಿಕರು ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಅವರು ತಿಳಿಸಿದರು.

ದೇಶದ ಆರ್ಥಿಕ ಪರಿಸ್ಥಿತಿ ಅಧಿಕವಾಗಿ ಕುಸಿತ ಕಂಡಿದೆ. ರಾಜ್ಯ ಸರಕಾರ ದಿವಾಳಿಯಾಗಿದೆ ಎಂದ ಅವರು, ರೈತರ ಸಮಸ್ಯೆಗಳ ಬಗ್ಗೆ ಮಾತನಾಡುತ್ತಿಲ್ಲ. ಪ್ರವಾಹ ಪೀಡಿತರ ಬಗ್ಗೆ ಚಕಾರ ಎತ್ತುತ್ತಿಲ್ಲ. ಆದರೆ, ಕೇವಲ ಸುಳ್ಳುಗಳನ್ನು ಹೇಳಿಕೊಂಡೇ ಚುನಾವಣಾ ಪ್ರಚಾರಕ್ಕಿಳಿದಿದ್ದಾರೆ ಎಂದು ದೂರಿದರು.

17 ಜನ ಶಾಸಕರ ರಾಜೀನಾಮೆ ಹಿಂದೆ ಹಣ ಹಾಗೂ ಅಧಿಕಾರದ ಆಸೆ ಕೆಲಸ ಮಾಡಿದೆ. ಈ ಸಂದರ್ಭದಲ್ಲಿ ರಾಜೀನಾಮೆ ನೀಡಿದವರಿಗೆ ಕ್ಷೇತ್ರದ ಮತದಾರರ ನೆನಪೇ ಆಗಿಲ್ಲ. ಇಂತಹವರಿಗೆ ಮತದಾರರೇ ಸರಿಯಾದ ಉತ್ತರ ನೀಡಬೇಕು ಎಂದು ಅವರು ಸಲಹೆ ನೀಡಿದರು.

ಈ ವೇಳೆ ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣ, ರಘುವೀರ್ ಗೌಡ, ರವಿ ಗಾಣಿಗ ಸೇರಿದಂತೆ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News