ಪೊಲೀಸರ ಸಮಯ ಪ್ರಜ್ಞೆಯಿಂದ ಉಳಿದ ದಂಪತಿ ಪ್ರಾಣ

Update: 2019-12-04 16:12 GMT

ಬೆಂಗಳೂರು, ಡಿ.4: ಆತ್ಮಹತ್ಯೆಗೆ ಯತ್ನಿಸಿದ ದಂಪತಿಯ ಪ್ರಾಣವನ್ನು ಸಮಯ ಪ್ರಜ್ಞೆಯಿಂದ ಇಲ್ಲಿನ ಗಿರಿನಗರ ಠಾಣಾ ಪೊಲೀಸರು ಉಳಿಸಿದ್ದಾರೆ.

ಇಲ್ಲಿನ ಶ್ರೀನಿವಾಸನಗರದ 2ನೆ ಹಂತದ 16ನೆ ಮುಖ್ಯ ರಸ್ತೆ ನಿವಾಸಿಗಳಾದ ಬಾಲಾಜಿ (31) ಮತ್ತು ಸೌಮ್ಯ (22) ಪ್ರಾಣಾಪಾಯದಿಂದ ಪಾರಾಗಿರುವ ದಂಪತಿ ಎಂದು ತಿಳಿದುಬಂದಿದೆ.

ಕ್ಷುಲ್ಲಕ ವಿಚಾರವಾಗಿ ಸೋಮವಾರ ಮಧ್ಯಾಹ್ನ ಸುಮಾರಿಗೆ ದಂಪತಿ ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು, ಈ ವೇಳೆ ಸೌಮ್ಯ, ತಮ್ಮ ಫೋಷಕರಿಗೆ ಮೊಬೈಲ್ ಕರೆ ಮಾಡಿ, ಆತ್ಮಹತ್ಯೆಗೆ ಮುಂದಾಗಿರುವುದಾಗಿ ಹೇಳಿದ್ದಾರೆ. ಇದರಿಂದ ಗಾಬರಿಯಾದ ಪೋಷಕರು ತಕ್ಷಣ ಮನೆ ಮಾಲಕರಿಗೆ ಹೇಳಿದ್ದು, ಮಾಲಕ ಬಾಲಾಜಿ ಅವರು ಮನೆ ಬಳಿ ಬಂದು ನೋಡಿದಾಗ ರಕ್ತದ ಮಡುವಿನಲ್ಲಿರುವುದನ್ನು ಕಂಡು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ.

ತಕ್ಷಣ ಪೊಲೀಸರು ಸ್ಥಳಕ್ಕಾಗಮಿಸಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ವೈದ್ಯರು ದಂಪತಿಯ ಸ್ಥಿತಿ ಗಮನಿಸಿ ಅವರಿಗೆ ಶಸ್ತ್ರ ಚಿಕಿತ್ಸೆ ಮಾಡಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಹಿರಿಯ ಪೊಲೀಸರು ತಿಳಿಸಿದ್ದಾರೆ.

ಮೇಲ್ನೋಟಕ್ಕೆ ಕೌಟುಂಬಿಕ ಕಲಹದಿಂದ ಆತ್ಮಹತ್ಯೆಗೆ ಯತ್ನಿಸಿರಬಹುದೆಂಬ ಶಂಕೆ ವ್ಯಕ್ತವಾಗಿದ್ದು, ದಂಪತಿ ಗುಣಮುಖವಾದ ನಂತರವಷ್ಟೇ ಘಟನೆಗೆ ಕಾರಣ ತಿಳಿದುಬರಲಿದೆ. ಘಟನೆ ಸಂಬಂಧ ಗಿರಿನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News