ಇಸ್ರೇಲ್ ಪ್ರಜೆಗೆ ಆಪದ್ಬಾಂಧವನಾದ ಅತೀಕ್ ಅಹಮದ್: ಸಪ್ತ ಸಾಗರದಾಚೆ ಹರಡಿದ ಬೆಂಗಳೂರು ಪೊಲೀಸರ ಕೀರ್ತಿ

Update: 2019-12-05 15:30 GMT

ಬೆಂಗಳೂರು, ಡಿ.5: ಭಾರತದ ಬಗ್ಗೆ ಅತೀವ ಅಭಿಮಾನ ಇಟ್ಟುಕೊಂಡಿರುವ ಇಸ್ರೇಲ್ ದೇಶದ 25ರ ಹರೆಯದ ಪ್ರಗತಿಪರ ರೈತ ‘ಯೀಡೋ ಕೀಡರ್’ ಎಂಬವರ ಪಾಲಿಗೆ ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯ ಹೆಡ್‌ಕಾನ್ಸ್‌ಟೇಬಲ್ ಅತೀಕ್ ಅಹಮದ್ ಆಪದ್ಬಾಂಧವನಾದ ಪ್ರಸಂಗವು ‘ಮಾನವ ಧರ್ಮಕ್ಕಿಂತ ದೊಡ್ಡ ಧರ್ಮ ಮತ್ತೊಂದಿಲ್ಲ’ ಎಂಬುದನ್ನು ಸ್ಮರಿಸುವಂತೆ ಮಾಡಿದೆ.

ಭಾರತ ಪ್ರವಾಸಕ್ಕೆ ಬಂದಿದ್ದ ಯೀಡೋ ಕೀಡರ್ ದಿಲ್ಲಿ, ಮುಂಬೈ ಮಹಾನಗರಗಳು ಸೇರಿದಂತೆ ಹಲವಾರು ಪ್ರವಾಸಿ ಸ್ಥಳಗಳನ್ನು ವೀಕ್ಷಿಸಿದ ಬಳಿಕ ಬೆಂಗಳೂರಿಗೆ ಬಂದಿದ್ದರು. ಕಳೆದ ನವೆಂಬರ್ 24ರಂದು ಕಬ್ಬನ್ ಪಾರ್ಕ್ ವೀಕ್ಷಿಸಲು ಹೋಗಿದ್ದ ಯೀಡೋ, ಇದೇ ವೇಳೆ ನಿದ್ರೆಗೆ ಜಾರಿದ್ದಾರೆ. ಎದ್ದು ನೋಡಿದಾಗ ಅವರ ಬಳಿಯಿದ್ದ 20 ಸಾವಿರ ರೂ.ನಗದು, ಐಫೋನ್, ಶ್ರೀಲಂಕಾಗೆ ತೆರಳಲು ಮುಂಗಡವಾಗಿ ಕಾಯ್ದಿರಿಸಲಾಗಿದ್ದ ಇ-ಟಿಕೆಟ್ ಇದ್ದ ಬ್ಯಾಗ್ ಕಳುವಾಗಿತ್ತು.

ಈ ಸಂಬಂಧ ದೂರು ನೀಡಲು ಕಬ್ಬನ್‌ಪಾರ್ಕ್ ಪೊಲೀಸ್ ಠಾಣೆಗೆ ಆಗಮಿಸಿದ ಯೀಡೋ ಬಳಸುತ್ತಿದ್ದ ಆ್ಯಕ್ಸೆಂಟ್ ಇಂಗ್ಲಿಷ್ ಭಾಷೆ, ಅಲ್ಲಿನ ಹೆಲ್ಪ್‌ಡೆಸ್ಕ್ ಸಿಬ್ಬಂದಿಗೆ ಅರ್ಥವಾಗುತ್ತಿರಲಿಲ್ಲ. ಇದೇ ವೇಳೆ ಠಾಣೆಗೆ ಆಗಮಿಸಿದ ಹೆಡ್‌ಕಾನ್ಸ್‌ಟೇಬಲ್ ಅತೀಕ್ ಅಹಮದ್, ಆತನ ಸಮಸ್ಯೆಗಳಿಗೆ ಸ್ಪಂದಿಸಿ, ಪರಿಹಾರ ಕಲ್ಪಿಸಿಕೊಟ್ಟ ರೀತಿ ಶ್ಲಾಘನಾರ್ಹ.

ಭಾರತದ ವೈವಿದ್ಯತೆ ಹಾಗೂ ಸಾಂಸ್ಕೃತಿಕ ಶ್ರೀಮಂತಿಕೆಯ ಬಗ್ಗೆ ಕುತೂಹಲಗಳಿದ್ದ ಅವನು ಭಾರತದ ಉದ್ದಗಲಕ್ಕೂ ಸಂಚರಿಸುವ ಬಯಕೆಯಿಂದ ಬಂದಿದ್ದ. ಯಿಡೋಗೆ ತನ್ನ ಹಣ, ಟಿಕೆಟ್‌ಗಿಂತ ಭಾರತದಲ್ಲಿ ಆತ ಕಂಡು, ಅನುಭವಿಸಿದ ಕ್ಷಣಗಳನ್ನು ಸೆರೆ ಹಿಡಿದಿದ್ದ ಮೊಬೈಲ್ ಫೋನ್ ಕಳುವಾಗಿದ್ದ ನೋವು ಹೆಚ್ಚಾಗಿ ಕಾಡುತ್ತಿತ್ತು. ಎಲ್ಲವನ್ನೂ ಕಳೆದುಕೊಂಡು ನಿತ್ರಾಣನಾಗಿದ್ದ ಆತನಿಗೆ ಅತೀಕ್ ಅಹಮದ್ ತಿನ್ನಲು ಎರಡು ಬರ್ಗರ್ ಕೊಡಿಸಿದರು. ಅಲ್ಲದೇ, ಯಿಡೋಗೆ ತನ್ನ ತಾಯಿ ಹಾಗೂ ಪ್ರೇಯಸಿ ಜೊತೆ ಮಾತನಾಡಲು ತಮ್ಮ ಮೊಬೈಲ್ ಅನ್ನು ನೀಡಿದರು. ಬ್ರಿಗೇಡ್ ರಸ್ತೆಯಲ್ಲಿರುವ ಅವೆನ್ಯೂ ವಾಣಿಜ್ಯ ಸಂಕೀರ್ಣದಲ್ಲಿರುವ ಪ್ರವಾಸೋದ್ಯಮ ಏಜೆಂಟ್ ಬಳಿ ಟಿಕೆಟ್‌ನ ನಕಲು ಪ್ರತಿ ಪಡೆಯುವ ಪ್ರಯತ್ನ ವಿಫಲವಾಗಿತ್ತು.

ಭಾರತದ ನೆಲವನ್ನು ಪಾದರಕ್ಷೆಯಲ್ಲಿ ಮೆಟ್ಟಲ್ಲ: ಜ್ಯೂಸ್ ಕುಡಿಯುವಾಗ ತಾನು ಪ್ಲಾಸ್ಟಿಕ್ ಬಳಸುವುದಿಲ್ಲ, ಮಾಂಸಾಹಾರ ತಿನ್ನುವುದಿಲ್ಲ, ವಿದೇಶಿ ಬಟ್ಟೆಯ ವ್ಯಾಮೋಹವಿಲ್ಲ, ಭಾರತದ ನೆಲವನ್ನು ಪಾದರಕ್ಷೆ ಹಾಕಿಕೊಂಡು ಮೆಟ್ಟುವುದಿಲ್ಲ, ಬರಿಗಾಲಲ್ಲಿ ನಡೆಯುತ್ತೇನೆ ಎಂದು ಯಿಡೋ ಹೇಳಿದಾಗ ‘ರಾಬಿನ್ ಶರ್ಮ ಬರೆದ (THE MONK WHO SOLD HIS FERRARI) ಕಥೆಯ ಕಥಾನಾಯಕ ಜೂಲಿಯನ್ ನೆನಪಾಯಿತು. ಭಾರತದ ಬಗ್ಗೆ ಅವನಿಗಿದ್ದ ಗೌರವ ನನಗೆ ಅವನ ಸಹಾಯಕ್ಕೆ ನಿಲ್ಲಿಸಲು ಪ್ರೇರೇಪಿಸಿತು ಎಂದು ಅತೀಕ್ ಅಹಮದ್ ಹೇಳಿದ್ದಾರೆ.

ಆನಂತರ ಠಾಣೆಯ ಎಸ್‌ಐ ಭರತ್, ತಮ್ಮ ಪರಿಚಯದ ಅಧಿಕಾರಿಯೊಬ್ಬರ ಮೂಲಕ ನಕಲು ಟಿಕೆಟ್ ಕೊಡಿಸುವ ವ್ಯವಸ್ಥೆ ಮಾಡುವ ಭರವಸೆ ಅವರಲ್ಲಿ ಆಶಾಭಾವನೆ ಮೂಡುವಂತೆ ಮಾಡಿತು. ಹಣವಿಲ್ಲದೆ ಶ್ರೀಲಂಕಾಗೆ ಹೋಗಲು ಆತನಿಗೆ ಸಾಧ್ಯವಿರಲಿಲ್ಲ. ತನ್ನ ತಾಯಿಯೊಂದಿಗೆ ಮತ್ತೊಮ್ಮೆ ಅತೀಕ್ ಅಹಮದ್ ಅವರ ಮೊಬೈಲ್‌ನಲ್ಲಿ ಮಾತನಾಡಿ, ತನ್ನ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಿಸಿಕೊಂಡ ನಂತರ ಮತ್ತೊಮ್ಮೆ ಟಿಕೆಟ್ ಹಾಗೂ ಮೊಬೈಲ್ ಖರೀದಿಸಿ ಬೇರೆ ದಿನ ಪ್ರಯಾಣ ಮಾಡಲು ಯೋಚಿಸಿದ್ದ. ನಂತರ, ಊಟ ಹಾಗೂ ಸಣ್ಣ ಖರ್ಚುಗಳಿಗೆ ಸ್ವಲ್ಪ ಹಣ ಕೊಟ್ಟರೆ ಈಗಲೇ ಹೊರಟು ಹೋಗುವುದಾಗಿ ಯಿಡೋ ಹೇಳಿದ. ಆದರೆ, ಯಾರಿಂದಲೂ ಹಣ ಪಡೆಯಲು ಆತನ ಆತ್ಮಸಾಕ್ಷಿ ಒಪ್ಪಿರಲಿಲ್ಲ. ಕೊನೆಗೆ ಅತೀಕ್ ಅಹಮದ್ ತಮ್ಮ ಬಳಿಯಿದ್ದ 1500 ರೂ.ಗಳನ್ನು ಆತನಿಗೆ ನೀಡಿ ವಿಮಾನ ನಿಲ್ದಾಣಕ್ಕೆ ತಲುಪಿಸುವ ವ್ಯವಸ್ಥೆ ಮಾಡಿದರು.

ಅತೀಕ್ ಅಹಮದ್ ಮಾಡಿದ ಸಹಾಯಕ್ಕೆ ಯಿಡೋ ತನ್ನ ಬಳಿಯಿದ್ದ ಆಫ್ರಿಕಾದ ಸಂಗೀತ ಸಾಧನ ಜಂಬೆ ವಾದ್ಯ ಕೊಡಲು ಬಂದಾಗ ಅದನ್ನು ನಯವಾಗಿಯೇ ತಿರಸ್ಕರಿಸಿದ್ದಾರೆ. ಅಲ್ಲದೇ, ತನ್ನ ಮೊಬೈಲ್ ನಂಬರ್ ಕೊಟ್ಟು ಏನಾದರೂ ವಿಚಾರವಿದ್ದಲ್ಲಿ ಕರೆ ಮಾಡುವಂತೆ ತಿಳಿಸಿದ್ದಾರೆ. ವಿಮಾನ ನಿಲ್ದಾಣದ ಪೊಲೀಸರು ಆತನ ಬಳಿಯಿದ್ದ ಫೋನ್ ನಂಬರ್ ಪಡೆದು ಅತೀಕ್ ಅಹಮದ್‌ಗೆ ಕರೆ ಮಾಡಿ, ಆತ ಹುಚ್ಚನಲ್ಲದ ಬಗ್ಗೆ ಖಾತ್ರಿ ಮಾಡಿಕೊಂಡರು. ಆನಂತರ ಆತ ಶ್ರೀಲಂಕಾಕ್ಕೆ ಹೋದನಾ? ವಿಮಾನ ನಿಲ್ದಾಣದಿಂದ ಆತನನ್ನು ಹೊರಗೆ ದಬ್ಬಲಾಯಿತಾ? ಅನ್ನೋದು ಮಾತ್ರ ಗೊತ್ತಾಗಿರಲಿಲ್ಲ. ಆತನಿಂದ ಯಾವ ಸಂದೇಶವಾಗಲಿ, ಕರೆಯು ಬಂದಿರಲಿಲ್ಲ. ಬಳಿಕ ಇಲ್ಲಿ ನಡೆದಿರುವ ಎಲ್ಲ ವಿಚಾರಗಳನ್ನು ಅತೀಕ್ ಅಹಮದ್, ಯಿಡೋ ತಾಯಿಗೆ ಕರೆ ಮಾಡಿ ವಿವರಿಸಿದ್ದರು.

ಇತ್ತೀಚೆಗಷ್ಟೇ ತಾನು ಬೆಳಗ್ಗೆ ಕರ್ತವ್ಯಕ್ಕೆ ತೆರಳಲು ಸಿದ್ಧವಾಗಿದ್ದಾಗ ಠಾಣೆಯಿಂದ ಸ್ನೇಹಿತನೊಬ್ಬ ಕರೆ ಮಾಡಿ ಇಸ್ರೇಲ್ ಮೂಲದ ವ್ಯಕ್ತಿಯೊಬ್ಬ ತನ್ನನ್ನು ಕಾಣಲು ಬಂದಿರುವ ವಿಚಾರ ತಿಳಿಸಿದಾಗ ಅತೀಕ್ ಅಹಮದ್ ಆನಂದಕ್ಕೆ ಪಾರವೇ ಇರಲಿಲ್ಲ. ಠಾಣೆಯ ಬಳಿ ಅತೀಕ್ ಅಹಮದ್‌ರನ್ನು ನೋಡುತ್ತಿದ್ದಂತೆ ಯಿಡೋ ತಬ್ಬಿಕೊಂಡಾಗ ಜಗತ್ತಲ್ಲಿ ಮಾನವ ಧರ್ಮಕ್ಕಿಂತ ದೊಡ್ಡ ಧರ್ಮ ಮತ್ತೊಂದಿಲ್ಲ ಅನ್ನಿಸಿ, ರಾಷ್ಟ್ರಕವಿ ಕುವೆಂಪು ಅವರ ಏನಾದರೂ ಸರಿಯೇ ಮೊದಲು ಮಾನವನಾಗು, ಮನುಜ ಮತ ವಿಶ್ವ ಪಥ ಎಂಬ ವಿಶ್ವ ಮಾನವತೆಯ ಸಂದೇಶದ ಮಹತ್ವ ಅರಿವಾಯಿತು.

ಅತೀಕ್ ಅಹಮದ್ ಬಳಿ ಪಡೆದಿದ್ದ ಹಣವನ್ನು ವಾಪಸ್ ಕೊಟ್ಟು, ಅವರನ್ನು ಮಾತನಾಡಿಕೊಂಡು ಹೋಗಲು ಯಿಡೋ ಬಂದಿದ್ದ. ಈ ಮೂಲಕ ಮನುಷ್ಯನ ಎದೆಯ ದನಿ ಹಾಗೂ ಹೃದಯ ವೈಶಾಲ್ಯತೆಯ ಮುಂದೆ ಜಗತ್ತು ತುಂಬಾ ಚಿಕ್ಕದು ಅನ್ನಿಸಿದ್ದು ಸುಳ್ಳಲ್ಲ.

'ವಾರ್ತಾಭಾರತಿ'ಯಿಂದ ಸನ್ಮಾನ

ಇಸ್ರೇಲ್ ದೇಶದ ಪ್ರಗತಿಪರ ರೈತ ‘ಯೀಡೋ’ ಅವರಿಗೆ ಮಾನವೀಯ ನೆಲೆಯಲ್ಲಿ ಸಹಾಯ ಮಾಡುವ ಮೂಲಕ ಭಾರತದ ಗರಿಮೆಯನ್ನು ಹೆಚ್ಚಿಸಿದ ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯ ಮುಖ್ಯಪೇದೆ ಅತೀಕ್ ಅಹಮದ್ ಅವರಿಗೆ ‘ವಾರ್ತಾಭಾರತಿ’ ಕಚೇರಿಯಲ್ಲಿ ಶಾಲು ಹೊದಿಸಿ, ಫಲಪುಷ್ಪ ನೀಡಿ ಸನ್ಮಾನಿಸಲಾಯಿತು. ಅತೀಕ್ ಅವರ ಸೇವೆಯಿಂದ ಖುಷಿಯಾದ ಉದ್ಯಮಿಯೊಬ್ಬರು ನೀಡಿದ ಹತ್ತು ಸಾವಿರ ರೂ. ನಗದು ಬಹುಮಾನವನ್ನು ಅವರಿಗೆ ನೀಡಲಾಯಿತು. ಈ ವೇಳೆ ಬೆಂಗಳೂರು ಬ್ಯೂರೋ ಮುಖ್ಯಸ್ಥ ಬಸವರಾಜು, ಮುಖ್ಯ ವರದಿಗಾರ ಸಿ.ಪ್ರಕಾಶ್ ಹಾಗೂ ಹಿರಿಯ ವರದಿಗಾರ ಅಮ್ಜದ್ ಖಾನ್ ಎಂ.ಸೇರಿದಂತೆ ಇನ್ನಿತರ ಸಿಬ್ಬಂದಿ ಉಪಸ್ಥಿತರಿದ್ದರು.

ನೀವು ಒಬ್ಬ ದೇವದೂತ

"ನೀವು ನನಗಾಗಿ ಮಾಡಿದ ಪ್ರತಿಯೊಂದು ಸಹಾಯಕ್ಕೂ ನಾನು ಧನ್ಯವಾದ ತಿಳಿಸುತ್ತೇನೆ. ನೀವು ಇಲ್ಲದೇ ಇದನ್ನೆಲ್ಲ ನಾನು ಮಾಡುವ ಕಲ್ಪನೆಯನ್ನು ಕೂಡ ಮಾಡಲಾರೆ. ಜೀವನ ಪರ್ಯಂತ ನೀವು ನನ್ನ ಹದೃಯದಲ್ಲಿ ಇರುತ್ತೀರಿ. ನೀವು ಎಂದಾದರೂ ಇಸ್ರೇಲ್‌ಗೆ ಬಂದರೆ ನನಗೆ ತಿಳಿಸಿ. ನಾನು ಕಾಯುತ್ತಿರುತ್ತೇನೆ" ಎಂದು ಯಿಡೋ ಕಳುಹಿಸಿರುವ ಸಂದೇಶವನ್ನು ಎಂದಿಗೂ ಡಿಲಿಟ್ ಮಾಡುವುದಿಲ್ಲ ಎಂದು ಅತೀಕ್ ಅಹಮದ್ ಹೇಳುತ್ತಾರೆ.

Writer - ಅಮ್ಜದ್‌ ಖಾನ್ ಎಂ.

contributor

Editor - ಅಮ್ಜದ್‌ ಖಾನ್ ಎಂ.

contributor

Similar News