ಏನಿದು ಕ್ರಾಯೊಥೆರಪಿ? ಅದರ ಲಾಭಗಳು ಗೊತ್ತೇ?

Update: 2019-12-10 12:26 GMT

ಹೆಚ್ಚಿನವರು ಕ್ರಾಯೊಥೆರಪಿ ಹೆಸರನ್ನೇ ಕೇಳಿರಲಿಕ್ಕಿಲ್ಲ. ಇದಿನ್ನೂ ಇತರ ನೋವು ಶಮನ ಚಿಕಿತ್ಸೆಗಳಷ್ಟು ಜನಪ್ರಿಯವಾಗಿಲ್ಲ,ಆದರೆ ಖಂಡಿತವಾಗಿಯೂ ಅವೆಲ್ಲ ಚಿಕಿತ್ಸೆಗಳಿಗಿಂತ ಹೆಚ್ಚು ಪರಿಣಾಮಕಾರಿಯಾಗಿದೆ. ಹಲವಾರು ಬಾಲಿವುಡ್ ಮತ್ತು ಹಾಲಿವುಡ್ ಸೆಲೆಬ್ರಿಟಿಗಳು ಕ್ರಾಯೊಥೆರಪಿಯಲ್ಲಿ ವಿಶ್ವಾಸ ಹೊಂದಿದ್ದಾರೆ.

ಕ್ರಾಯೊಥೆರಪಿ ಎಂದರೇನು?

ಕಾಯೊಥೆರಪಿಯನ್ನು ಶೀತಲೀಕರಣ ಚಿಕಿತ್ಸೆ ಅಥವಾ ಘನೀಕರಣ ಚಿಕಿತ್ಸೆ ಎಂದು ಕರೆಯಬಹುದಾಗಿದ್ದು,ವ್ಯಕ್ತಿಯ ಶರೀರವನ್ನು ಸುಮಾರು ಮೈನಸ್ 150 ಡಿಗ್ರಿ ಸೆಲ್ಸಿಯಸ್‌ಗಳಷ್ಟು ಅತ್ಯಂತ ಘನೀಕರಿಸುವ ತಾಪಮಾನಕ್ಕೆ ಒಳಪಡಿಸಲಾಗುತ್ತದೆ. ನೋವು ಅಥವಾ ಉರಿಯೂತವನ್ನುಂಟು ಮಾಡುವ ಕೆರಳಿದ ನರವನ್ನು ಅಚೇತನಗೊಳಿಸಿ ವ್ಯಕ್ತಿಗೆ ಉಪಶಮನವನ್ನೊದಗಿಸಲು ಈ ನೋವು ನಿವಾರಕ ಚಿಕಿತ್ಸೆಯನ್ನು ನಡೆಸಲಾಗುತ್ತದೆ.

ಚರ್ಮ ರೋಗಗಳನ್ನು ಗುಣಪಡಿಸಲು ಈ ಚಿಕಿತ್ಸೆಯನ್ನು ವ್ಯಾಪಕವಾಗಿ ಬಳಸಲಾಗುತ್ತಿದ್ದು,ಎಲ್ಲ ಮೃತ ಜೀವಕೋಶಗಳನ್ನು ನಾಶಪಡಿಸುತ್ತದೆ ಮತ್ತು ಚರ್ಮಕ್ಕೆ ನೈಸರ್ಗಿಕ ಹೊಳಪನ್ನು ನೀಡಲು ನೆರವಾಗುತ್ತದೆ.

ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಈಗಾಗಲೇ ಬಳಕೆಯಲ್ಲಿರುವ ಕ್ರಾಯೊಥೆರಪಿ ಭಾರತಕ್ಕಿನ್ನೂ ಹೊಸದಾಗಿದೆ,ಹೀಗಾಗಿ ಹೆಚ್ಚಿನ ಜನರಿಗೆ ಇದರ ಅನುಭವವಿಲ್ಲ. ಪಾಶ್ಚಾತ್ಯ ರಾಷ್ಟ್ರಗಳ ಜನರು ಮೈಯನ್ನು ಹೆಪ್ಪುಗಟ್ಟಿಸುವ ತಾಪಮಾನಕ್ಕೆ ಒಗ್ಗಿಕೊಂಡಿರುವದರಿಂದ ಈ ಚಿಕಿತ್ಸೆಯನ್ನು ಸಹಿಸಿಕೊಳ್ಳಬಲ್ಲರು ಮತ್ತು ಇದು ಕ್ರಾಯೊಥೆರಪಿ ಅಲ್ಲಿ ಯಶಸ್ವಿಯಾಗಲು ಪ್ರಮುಖ ಕಾರಣವಾಗಿದೆ.

► ಕ್ರಾಯೊಥೆರಪಿಯ ಆರೋಗ್ಯಲಾಭಗಳು

* ನೋವಿನಿಂದ ಮುಕ್ತಿ

ನೋವಿನಿಂದ ಮುಕ್ತಿ ಈ ಚಿಕಿತ್ಸೆಯ ಪ್ರಮುಖ ಪ್ರಯೋಜನಗಳಲ್ಲೊಂದಾಗಿದೆ. ಸ್ನಾಯು ನೋವಿರಲಿ ಅಥವಾ ಸಂದು ನೋವಿರಲಿ,ಈ ಚಿಕಿತ್ಸೆಯು ಅವೆಲ್ಲವುಗಳನ್ನು ಶಮನಗೊಳಿಸುತ್ತದೆ ಎನ್ನಲಾಗಿದೆ. ಹಲವಾರು ಕ್ರೀಡಾಪಟುಗಳು ತ್ವರಿತ ಪರಿಹಾರಕ್ಕಾಗಿ ಈ ಚಿಕಿತ್ಸೆಯ ಮೊರೆ ಹೋಗುತ್ತಿದ್ದಾರೆ. ಸಾಮಾನ್ಯವಾಗಿ ಶರೀರದ ಯಾವುದಾದರೂ ಭಾಗದಲ್ಲಿ ತೀವ್ರ ನೋವಿದ್ದಾಗ ನಾವು ಐಸ್ ಪ್ಯಾಕ್ ಬಳಸುತ್ತೇವೆ. ಕ್ರಾಯೊಥೆರಪಿ ಕೂಡ ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ ಮತ್ತು ನೋವು ಶಮನ ಪ್ರಕ್ರಿಯೆಯನ್ನು ತ್ವರಿತಗೊಳಿಸುತ್ತದೆ. ಸಂಧಿವಾತ ರೋಗಿಗಳಿಗೂ ಈ ಚಿಕಿತ್ಸೆಯು ಲಾಭದಾಯಕ ವಾಗಬಲ್ಲದು.

* ಉರಿಯೂತವನ್ನು ತಗ್ಗಿಸುತ್ತದೆ

ನಮ್ಮ ಶರೀರದಲ್ಲಿಯ ರೋಗ ನಿರೋಧಕ ವ್ಯವಸ್ಥೆಯು ಯಾವುದೇ ಸೋಂಕಿನ ವಿರುದ್ಧ ಹೋರಾಡುವಾಗ ಕೆಲವೊಮ್ಮೆ ಅತಿ ಕ್ರಿಯಾಶೀಲವಾಗುತ್ತದೆ ಮತ್ತು ಇದು ದೀರ್ಘಕಾಲಿಕ ಉರಿಯೂತಕ್ಕೆ ಕಾರಣವಾಗುತ್ತದೆ. ಇದರಿಂದಾಗಿ ಇನ್ನಷ್ಟು ಸಂಭಾವ್ಯ ತೊಂದರೆಗಳನ್ನು ನಿವಾರಿಸಲು ಚಿಕಿತ್ಸೆಯು ಅಗತ್ಯವಾಗುತ್ತದೆ. ಕ್ರಾಯೊಥೆರಪಿಯು ಉರಿಯೂತವನ್ನು ಕಡಿಮೆಗೊಳಿಸುವ ಮೂಲಕ ವ್ಯಕ್ತಿಯ ಒಟ್ಟಾರೆ ಆರೋಗ್ಯವನ್ನು ಹೆಚ್ಚಿಸುತ್ತದೆ.

ಉರಿಯೂತವು ಪ್ರಮುಖ ಕಾರಣವಾಗಿರುವ ಕ್ಯಾನ್ಸರ್‌ನ್ನು ಕ್ರಾಯೊಥೆರಪಿಯಿಂದ ತಡೆಯಬಹುದು ಎನ್ನಲಾಗಿದೆ. ಆದರೆ ಇದು ವೈದ್ಯಕೀಯ ಚಿಕಿತ್ಸೆಯಾಗಿದ್ದು,ನುರಿತ ವೈದ್ಯರು ಮಾತ್ರ ನೀಡಬೇಕಾಗುತ್ತದೆ. ಅವರು ಕ್ಯಾನ್ಸರ್ ನಿವಾರಿಸಲು ಈ ಚಿಕಿತ್ಸೆಯ ಮೂಲಕ ಕ್ಯಾನ್ಸರ್ ಕೋಶಗಳನ್ನು ಘನೀಕರಿಸುತ್ತಾರೆ.

* ಮಾನಸಿಕ ಆರೋಗ್ಯವನ್ನು ಹೆಚ್ಚಿಸುತ್ತದೆ

ಮಿದುಳಿನಲ್ಲಿಯೂ ಉರಿಯೂತವು ಉಂಟಾಗುತ್ತದೆ ಮತ್ತು ಇದು ಜ್ಞಾಪಕ ಶಕ್ತಿ ನಷ್ಟ,ಕಡಿಮೆ ಏಕಾಗ್ರತೆ, ಉದ್ವೇಗ,ಒತ್ತಡ,ಬುದ್ಧಿಮಾಂದ್ಯತೆ ಇತ್ಯಾದಿಗಳಿಗೆ ಕಾರಣವಾಗುತ್ತದೆ. ಕ್ರಾಯೊಥೆರಪಿಯು ಮಿದುಳಿನ ಉರಿಯೂತ ಲಕ್ಷಣಗಳನ್ನು

ತಗ್ಗಿಸುವ ಮೂಲಕ ಮಾನಸಿಕ ಆರೋಗ್ಯವನ್ನು ಹೆಚ್ಚಿಸುತ್ತದೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News