ಅಜೀರ್ಣ ಸಮಸ್ಯೆಯೇ? ತೂಕವನ್ನು ಇಳಿಸಬೇಕೇ? ಹಾಗಿದ್ದರೆ ಇದನ್ನು ಸೇವಿಸಿ

Update: 2019-12-10 13:44 GMT

ಈ ಅದ್ಭುತ ಪಾನೀಯವು ನಿಮ್ಮ ಅಜೀರ್ಣ ಸಮಸ್ಯೆಗಳನ್ನು ನಿವಾರಿಸುತ್ತದೆ,ಶರೀರದ ಹೆಚ್ಚುವರಿ ತೂಕವನ್ನು ಇಳಿಸಲು ನೆರವಾಗುತ್ತದೆ,ಜೊತೆಗೆ ಇತರ ಹಲವಾರು ಆರೋಗ್ಯಲಾಭಗಳನ್ನೂ ನೀಡುತ್ತದೆ. ಅದುವೇ ಮೆಂತ್ಯದ ಪಾನೀಯ ಅಥವಾ ಮೆಂತ್ಯದ ನೀರು. ಇದು ತೂಕ ಇಳಿಕೆಗೆ ನೆರವಾಗುವುದು ಮಾತ್ರವಲ್ಲ,ಫ್ಲೂ ಮತ್ತು ವೈರಲ್ ಸೋಂಕುಗಳ ವಿರುದ್ಧವೂ ರಕ್ಷಣೆಯನ್ನು ನೀಡುತ್ತದೆ.

ಮೆಂತ್ಯ ಬೀಜಗಳಲ್ಲಿ ವಿಟಾಮಿನ್ ಎ ಮತ್ತು ಡಿ,ಕರಗಬಲ್ಲ ಮತ್ತು ಕರಗದ ನಾರು ಹಾಗೂ ಕಬ್ಬಿಣ ಸಮೃದ್ಧವಾಗಿವೆ. ತೂಕ ಇಳಿಕೆಯಿಂದ ಹಿಡಿದು ಮಧುಮೇಹ ನಿಯಂತ್ರಣ ಮತ್ತು ಅಜೀರ್ಣ ಸಮಸ್ಯೆ ಪರಿಹಾರದವರೆಗೆ ಹಲವಾರು ಆರೋಗ್ಯಲಾಭಗಳನ್ನು ಮೆಂತ್ಯ ನೀಡುತ್ತದೆ.

 ಬೆಳಿಗ್ಗೆ ಎದ್ದ ತಕ್ಷಣ ಖಾಲಿಹೊಟ್ಟೆಯಲ್ಲಿ ಒಂದು ಗ್ಲಾಸ್ ಮೆಂತ್ಯದ ನೀರನ್ನು ಸೇವಿಸುವುದರಿಂದ ಅನಗತ್ಯ ಕೊಬ್ಬು ಕರಗುತ್ತದೆ ಮತ್ತು ಆರೋಗ್ಯಕರ ಶರೀರ ನಮ್ಮದಾಗುತ್ತದೆ. ಮೆಂತ್ಯವು ಹೇರಳ ನಾರನ್ನು ಒಳಗೊಂಡಿರುವದರಿಂದ ಹಸಿವನ್ನು ಕುಂಠಿತಗೊಳಿಸುತ್ತದೆ. ಅದರಲ್ಲಿರುವ ಗಲಾಕ್ಟೋಮನನ್ ಎಂಬ ನೀರಿನಲ್ಲಿ ಕರಗಬಲ್ಲ ನಾರು ಸೇವನೆಯ ಬಳಿಕ ಜಠರದಲ್ಲಿ ಉಬ್ಬಿಕೊಳ್ಳುತ್ತದೆ ಮತ್ತು ಹೊಟ್ಟೆ ಉಂಬಿದ ಅನುಭವವನ್ನುಂಟು ಮಾಡುತ್ತದೆ. ಇದು ಅನಗತ್ಯ ಆಹಾರ ಸೇವನೆ ಅಥವಾ ಕೂಳುಬಾಕುತನಕ್ಕೆ ಕಡಿವಾಣ ಹಾಕುತ್ತದೆ,ತನ್ಮೂಲಕ ಶರೀರದ ತೂಕವನ್ನು ಕಡಿಮೆ ಮಾಡಲು ನೆರವಾಗುತ್ತದೆ.

 ಮೆಂತ್ಯದ ಬೀಜಗಳನ್ನು ಅಗಿದು ತಿನ್ನುವುದು ಅತ್ಯುತ್ತಮ ಪರಿಣಾಮಗಳನ್ನು ನೀಡುತ್ತದೆ. ಆದರೆ ಕಹಿರುಚಿಯಿಂದಾಗಿ ಇದನ್ನು ಹೆಚ್ಚಿನವರು ಇಷ್ಟಪಡುವುದಿಲ್ಲ. ಹೀಗಾಗಿ ರಾತ್ರಿ ಎರಡು ಚಮಚ ಮೆಂತ್ಯವನ್ನು ನೀರಿನಲ್ಲಿ ನೆನೆಸಿ ಬೆಳಿಗ್ಗೆ ಆ ನೀರನ್ನು ಸೇವಿಸುವುದು ಸುಲಭ ವಿಧಾನವಾಗಿದೆ. ತೂಕ ತಗ್ಗಿಸಲು ಪ್ರತಿದಿನ ಇದನ್ನು ಖಾಲಿಹೊಟ್ಟೆಯಲ್ಲಿ ಸೇವಿಸುವುದು ಅಗತ್ಯವಾಗಿದೆ. ಇದರಿಂದ ನಿಮ್ಮ ಅಜೀರ್ಣದ ಸಮಸ್ಯೆ ಕೆಲವೇ ವಾರಗಳಲ್ಲಿ ಮಾಯವಾಗುತ್ತದೆ.ಉಳಿದಂತೆ ದಿನದ ಯಾವುದೇ ಸಮಯದಲ್ಲಿಯೂ ಮೆಂತ್ಯದ ನೀರನ್ನು ಸೇವಿಸಬಹುದು,ಆದರೆ ಅತಿಯಾದ ಸೇವನೆ ಬೇಡ.

ಮೆಂತ್ಯ ನೀರಿನ ಇತರ ಆರೋಗ್ಯಲಾಭಗಳು: ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ನಿಯಂತ್ರಿಸುವ ಮೂಲಕ ಮಧುಮೇಹವನ್ನು ನಿಭಾಯಿಸುತ್ತದೆ. ಜೀರ್ಣಕ್ರಿಯೆಯನ್ನು ಹೆಚ್ಚಿಸುವ ಮೂಲಕ ಹೊಟ್ಟೆ ಸಂಬಂಧಿ ಸಮಸ್ಯೆಗಳಿಂದ ಮುಕ್ತಿ ನೀಡುತ್ತದೆ. ಮೂತ್ರಪಿಂಡ ಕಲ್ಲುಗಳನ್ನು ಕರಗಿಸುತ್ತದೆ. ಶರೀರದಲ್ಲಿ ಉಷ್ಣತೆಯನ್ನು ಕಡಿಮೆ ಮಾಡುವ ಮೂಲಕ ಶರೀರ ತಾಪಮಾನವನ್ನು ನಿಯಂತ್ರಿಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News