ಪ್ರತಿ ದಿನ ಕೇಸರಿಯ ನೀರನ್ನು ಸೇವಿಸಿದರೆ ಏನಾಗುತ್ತದೆ?

Update: 2019-12-11 12:10 GMT

ಕೇಸರಿ ಉತ್ಪಾದನೆಯಲ್ಲಿ ಭಾರತವು ವಿಶ್ವದಲ್ಲಿ ಮೂರನೇ ಸ್ಥಾನದಲ್ಲಿದ್ದು,ದೇಶದಲ್ಲಿ ಅತ್ಯಂತ ಹೆಚ್ಚಿನ ಕೇಸರಿ ಜಮ್ಮು-ಕಾಶ್ಮೀರದಲ್ಲಿ ಬೆಳೆಯುತ್ತದೆ. ಹೂವಿನ ಶಲಾಕಾಗ್ರದಲ್ಲಿರುವ ನವಿರಾದ ನಾರಿನಂತಹ ಎಳೆಯೇ ನಾವು ನೋಡುತ್ತಿರುವ ಕೇಸರಿಯಾಗಿದೆ. ಒಂದು ಪೌಂಡ್ (453 ಗ್ರಾಂ) ಕೇಸರಿಯನ್ನು ತಯಾರಿಸಲು ಸುಮಾರು 75,000 ಹೂವುಗಳು ಬೇಕಾಗುತ್ತವೆ. ಹೂವಿನ ಕೊಯ್ಲನ್ನು ದೈಹಿಕವಾಗಿ ಮಾಡಲಾಗುತ್ತದೆ ಮತ್ತು ಇದು ಹೆಚ್ಚಿನ ಶ್ರಮವನ್ನು ಬೇಡುತ್ತದೆ. ಹೀಗಾಗಿ ಕೇಸರಿ ವಿಶ್ವದಲ್ಲಿ ಅತ್ಯಂತ ದುಬಾರಿ ಸಂಬಾರ ವಸ್ತುಗಳಲ್ಲೊಂದಾಗಿದೆ. ಹೂವಿನ ಪಕಳೆಗಳೂ ಔಷಧಗಳ ತಯಾರಿಕೆಯಲ್ಲಿ ಬಳಕೆಯಾಗುತ್ತವೆ.

ಅಸ್ತಮಾ,ಕೆಮ್ಮು,ಗಂಟಲಿನ ಕಿರಿಕಿರಿ,ನಾಯಿಕೆಮ್ಮು ಇತ್ಯಾದಿಗಳ ಚಿಕಿತ್ಸೆಗೆ ಮತ್ತು ಕಫವನ್ನು ಕರಗಿಸಲೂ ಕೇಸರಿ ಬಳಕೆಯಾಗುತ್ತದೆ. ನಿದ್ರಾಹೀನತೆ,ಕ್ಯಾನ್ಸರ್,ಅಪಧಮನಿ ಕಾಠಿಣ್ಯ,ವಾಂತಿ,ಹೊಟ್ಟೆಯುಬ್ಬರ, ಖಿನ್ನತೆ,ಆತಂಕ, ಅಲ್ಝೀಮರ್ಸ್ ಕಾಯಿಲೆ, ರಕ್ತಸಹಿತ ಕೆಮ್ಮು,ನೋವು ಇತ್ಯಾದಿಗಳಿಗೂ ಕೇಸರಿಯು ಚಿಕಿತ್ಸೆಯನ್ನು ನೀಡುತ್ತದೆ, ಜ್ಞಾಪಕ ಶಕ್ತಿಯನ್ನೂ ಹೆಚ್ಚಿಸುತ್ತದೆ. ಮಹಿಳೆಯರಿಗೆ ಮುಟ್ಟಿನ ದಿನಗಳಲ್ಲಿ ಉಂಟಾಗುವ ತೊಂದರೆಗಳನ್ನೂ ನಿವಾರಿಸುತ್ತದೆ. ಪುರುಷರಲ್ಲಿ ಫಲವತ್ತತೆಯನ್ನು ಹೆಚ್ಚಿಸಲು ಕೇಸರಿ ನೆರವಾಗುತ್ತದೆ.

ಕೇಸರಿ ಅತ್ಯಂತ ದುಬಾರಿ ವಸ್ತುವಾಗಿದ್ದು ದಿನನಿತ್ಯ ಸೇವಿಸಲು ಪ್ರತಿಯೊಬ್ಬರೂ ಖರೀದಿಸಲು ಸಾಧ್ಯವಿಲ್ಲ. ಹೀಗಾಗಿ ಕೇಸರಿಯ ನೀರನ್ನು ಬಳಸಬಹುದಾಗಿದೆ ಮತ್ತು ಕೆಲವೇ ಕೇಸರಿ ಎಳೆಗಳಿಂದ ಪೂರ್ಣ ಲಾಭಗಳನ್ನು ಪಡೆಯಬಹುದಾಗಿದೆ. 5-7 ಕೇಸರಿ ಎಳೆಗಳನ್ನು ಬೆಚ್ಚಗಿನ ನೀರಿನಲ್ಲಿ 10 ನಿಮಿಷಗಳ ಕಾಲ ನೆನೆಸಿಟ್ಟರೆ ಕೇಸರಿ ನೀರು ಸಿದ್ಧವಾಗುತ್ತದೆ. ಈ ನೀರನ್ನು ಪ್ರತಿ ದಿನ ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಸೇವಿಸಿದರೆ ನಿಮ್ಮ ಹಲವಾರು ಸಮಸ್ಯೆಗಳು ಪರಿಹಾರಗೊಳ್ಳುತ್ತವೆ.

ಮನಸ್ಥಿತಿಯನ್ನು ಬದಲಿಸಬಲ್ಲ,ಕ್ಯಾನ್ಸರ್ ಕೋಶಗಳನ್ನು ಕೊಲ್ಲುವ,ಉರಿಯೂತವನ್ನು ತಗ್ಗಿಸುವ ಮತ್ತು ಉತ್ಕರ್ಷಣ ನಿರೋಧಕಗಳಾಗಿ ಕಾರ್ಯ ನಿರ್ವಹಿಸುವ ರಾಸಾಯನಿಕಗಳು ಕೇಸರಿಯಲ್ಲಿವೆ. ನಿಯಮಿತವಾಗಿ ಕೇಸರಿ ನೀರನ್ನು ಸೇವಿಸುವುದರಿಂದ ಎಲ್ಲ ವಿಧಗಳ ಕಾಯಿಲೆಗಳಿಂದ ಮುಕ್ತಿ ಪಡೆಯಬಹುದು. ಆದರೆ ಕೇಸರಿ ನೀರನ್ನು ಅತಿಯಾಗಿ ಸೇವಿಸಕೂಡದು.

ಕೇಸರಿ ನೀರಿನ ಇತರ ಲಾಭಗಳು:

ಕೇಸರಿ ನೀರಿನ ಸೇವನೆಯು ಮುಖದ ಚರ್ಮದ ಹೊಳಪನ್ನು ಹೆಚ್ಚಿಸುತ್ತದೆ,ತಲೆಗೂದಲಿನ ಆರೋಗ್ಯಕ್ಕೆ ಪೂರಕವಾಗಿದೆ. ಕೆಫೀನ್‌ಗಿಂತ ಹೆಚ್ಚು ಉತ್ತಮವಾಗಿ ಕಾರ್ಯಾಚರಿಸುತ್ತದೆ ಮತ್ತು ಮಹಿಳೆಯರಲ್ಲಿ ಮುಟ್ಟಿನ ದಿನಗಳ ನೋವನ್ನು ಕಡಿಮೆ ಮಾಡುತ್ತದೆ. ಮಾನಸಿಕ ಒತ್ತಡಗಳನ್ನು ನಿವಾರಿಸುತ್ತದೆ ಮತ್ತು ಗ್ಲಾಕೋಮಾದ ಸಮಸ್ಯೆಗಳನ್ನೂ ಕಡಿಮೆ ಮಾಡುತ್ತದೆ.

ಕೇಸರಿಯ ಅಡ್ಡಪರಿಣಾಮಗಳು ಮತ್ತು ಅಲರ್ಜಿಗಳು:

ಕೇಸರಿಯು ಅಡ್ಡಪರಿಣಾಮಗಳನ್ನು ಉಂಟು ಮಾಡುವ ಸಾಧ್ಯತೆಯಿರುವುದರಿಂದ ಅದನ್ನು ಎಚ್ಚರಿಕೆಯಿಂದ ಬಳಸಬೇಕು. ಹೆಚ್ಚಿನ ಪ್ರಮಾಣದಲ್ಲಿ ಕೇಸರಿ ಸೇವನೆಯು ತಲೆಸುತ್ತುವಿಕೆ,ಅತಿಸಾರ,ಲೋಳೆಯ ಪೊರೆಗಳು,ವಾಂತಿ,ಕಣ್ಣು ಮತ್ತು ಚರ್ಮ ಹಳದಿ ಬಣ್ಣಕ್ಕೆ ತಿರುಗುವಿಕೆ ಇತ್ಯಾದಿಗಳಿಗೆ ಕಾರಣವಾಗಬಹುದು. ಕೆಲವು ಸಂದರ್ಭಗಳಲ್ಲಿ 12ರಿಂದ 20 ಗ್ರಾಮ್‌ಗಳಷ್ಟು ಕೇಸರಿ ಸೇವನೆಯು ಸಾವನ್ನೂ ಉಂಟು ಮಾಡಬಲ್ಲದು. ಅದು ವ್ಯಕ್ತಿಯಲ್ಲಿ ಆಕ್ರೋಶ ಮತ್ತು ಹಠಾತ್ ಪ್ರವೃತ್ತಿಗೂ ಕಾರಣವಾಗಬಲ್ಲದು,ಹೀಗಾಗಿ ಬೈಪೋಲಾರ್ ಡಿಸಾರ್ಡರ್‌ನಿಂದ ಬಳಲುತ್ತಿರುವ ವ್ಯಕ್ತಿಗಳು ಕೇಸರಿಯನ್ನು ಸೇವಿಸಬಾರದು. ಕಡಿಮೆ ರಕ್ತದೊತ್ತಡವಿರುವವರು ಮತ್ತು ಹೃದ್ರೋಗಿಗಳು ಕೇಸರಿಯಿಂದ ದೂರವಿರಬೇಕು. ಗರ್ಭಿಣಿಯರೂ ಕೇಸರಿಯನ್ನು ಹೆಚ್ಚಿನ ಪ್ರಮಾಣದಲ್ಲಿ ತಿನ್ನಬಾರದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News