ಪೌರತ್ವ ತಿದ್ದುಪಡಿ ಕಾಯ್ದೆ ಹಿಂಪಡೆಯಲು ಒತ್ತಾಯ
Update: 2019-12-13 18:13 GMT
ಬೆಂಗಳೂರು, ಡಿ.13: ಕೇಂದ್ರ ಸರಕಾರ ಜಾರಿಗೊಳಿಸಲು ಹೊರಟಿರುವ ಪೌರತ್ವ ತಿದ್ಧುಪಡಿ ಕಾಯ್ದೆ ಹಿಂಪಡೆಯಬೇಕು ಎಂದು ಲೋಕತಾಂತ್ರಿಕ ಜನತಾದಳ ಕರ್ನಾಟಕ (ಯು) ಒತ್ತಾಯಿಸಿದೆ.
ನಗರದ ಪ್ರೆಸ್ಕ್ಲಬ್ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಪಕ್ಷದ ಯುವ ಘಟಕ ಅಧ್ಯಕ್ಷ ಬಿ.ಎಸ್.ಗೌಡ ಮಾತನಾಡಿ, ಕೇಂದ್ರ ಸರಕಾರವು ಭಾರತದಲ್ಲಿಯೇ ಹುಟ್ಟಿ ಬೆಳೆದವರನ್ನು ದೇಶದಿಂದ ಹೊರಹಾಕಲು ಹೊಂಚು ನಡೆಸುತ್ತಿದೆ. ಇದು ಸಂವಿಧಾನ ವಿರೋಧಿ ನಿಲುವಾಗಿದೆ. ಇದನ್ನು ಖಂಡಿಸಿ ದೇಶದಾದ್ಯಂತ ಪ್ರತಿಭಟನೆ, ಧರಣಿಗಳು ನಡೆಯುತ್ತಿದ್ದರೂ, ಏಕಚಕ್ರಾಧಿಪತ್ಯದಂತೆ ಜಾರಿಗೆ ಮುಂದಾಗಿರುವುದು ಸರಿಯಲ್ಲ ಎಂದರು.
ಕೇಂದ್ರ ಸರಕಾರದ ತೀರ್ಮಾನದಂತೆ ಪಾಕಿಸ್ತಾನ, ಚೀನಾ, ಇರಾನ್, ಇರಾಕ್ ಸೇರಿದಂತೆ ಹಲವು ದೇಶಗಳಲ್ಲಿನ ಮುಸ್ಲಿಮ್ ಧರ್ಮ ಹೊರತುಪಡಿಸಿ, ಉಳಿದ ಧರ್ಮದವರನ್ನು ಕರೆ ತಂದು ಪೌರತ್ವ ನೀಡಲು ಮುಂದಾಗಿದ್ದಾರೆ. ಇದನ್ನು ಕೇಂದ್ರ ಸರಕಾರ ಕೂಡಲೇ ಹಿಂಪಡೆಯಬೇಕು. ಇಲ್ಲದಿದ್ದಲ್ಲಿ ಎಲ್ಲೆಡೆ ತೀವ್ರ ಪ್ರತಿಭಟನೆ ನಡೆಸುತ್ತೇವೆ ಎಂದರು.