ಉದ್ಯಮ ಜಗತ್ತಿನಲ್ಲಿ ಕನ್ನಡದ ಅಸ್ಮಿತೆ

Update: 2019-12-15 07:08 GMT

ಆಡಳಿತ ವರ್ಗ ಮತ್ತು ಕಾರ್ಮಿಕರ ನಡುವಣ ಬಾಂಧವ್ಯ ಉತ್ತಮವಾಗಿರಬೇಕೆಂಬ ದೃಷ್ಟಿಯಿಂದ ಕನ್ನಡ ಬಳಕೆ ಅಗತ್ಯವಿದೆ ಎಂಬುದನ್ನು ಬಹಳಷ್ಟು ಉದ್ದಿಮೆಗಳು ಮನಗಂಡಿವೆ. ಉದ್ದಿಮೆಗಳಲ್ಲಿ ಕನ್ನಡ ಬಳಕೆಯ ಸಾಧ್ಯತೆ ಹೆಚ್ಚುತ್ತಿರುವುದು, ಆಡಳಿತ ವ್ಯವಹಾರದಲ್ಲಿ, ತಾಂತ್ರಿಕವಾಗಿ ಕನ್ನಡದ ಬಳಕೆ ಸ್ವಲ್ಪ ಕಷ್ಟ ಸಾಧ್ಯವಾದದ್ದು, ಬಹಳಷ್ಟು ಉದ್ಯಮಗಳು ತ್ರಿಭಾಷಾ ಸೂತ್ರದನ್ವಯ ನಾಮಫಲಕ, ಸೂಚನಾಫಲಕಗಳಲ್ಲಿ ಕನ್ನಡ ಬಳಸುತ್ತಿವೆೆ. ಕೆಲವು ಪರಿಪತ್ರಗಳು ಕನ್ನಡದಲ್ಲಿ ಬರುತ್ತಿವೆ.

ಉದ್ದಿಮೆ ಪದದ ಅರ್ಥವ್ಯಾಪ್ತಿಯು ವಿಶಾಲವಾದದ್ದು, ಇಲ್ಲಿ ಕೈಗಾರಿಕೆಗೆ ಸೀಮಿತಿಗೊಳಿಸಿಕೊಂಡು ವಿವೇಚಿಸಲಾಗಿದೆ. ಅದಕ್ಕೆ ಕಾರಣ ಕಾರ್ಖಾನೆಯ ಜಗತ್ತು ವಿಭಿನ್ನವಾದದ್ದು. ಅದು ತಂತ್ರಜ್ಞಾನಕ್ಕೆ ಸಂಬಂಧಿಸಿದ್ದು. ಅಲ್ಲಿ ಭಾಷೆಯ ಅಗತ್ಯ ಕಡಿಮೆ. ಕನ್ನಡದಂತಹ ಭಾಷೆಗಳನ್ನು ಅಲ್ಲಿ ಬಳಸಲು ಸಾಧ್ಯವೇ? ಎನ್ನುವ ಭಾವನೆ ವ್ಯಾಪಕವಾಗಿರುವುದು, ಜೊತೆಗೆ ಒಂದು ನಾಡಿನ ಪ್ರಗತಿಗೆ ಕೈಗಾರಿಕೀಕರಣ ರಾಜಮಾರ್ಗ ಎಂಬ ವಿಶ್ವವ್ಯಾಪಿ ಅಭಿಪ್ರಾಯ. ಕರ್ನಾಟಕದ ಒಟ್ಟು ಆಂತರಿಕ ಉತ್ಪನ್ನದಲ್ಲಿ ಕೈಗಾರಿಕಾ ವಲಯದ ಪಾಲು ಶೇ.21 ಎನ್ನುವ ಸಂಗತಿಯನ್ನು ಗಮನಿಸಿದಾಗ ಈವಲಯವನ್ನು ಕಡೆಗಣಿಸಲಾಗುವುದು. ಆದ್ದರಿಂದ ಉದ್ದಿಮೆಗಳಲ್ಲಿ ಕನ್ನಡ ಇಂದು ಎಷ್ಟರಮಟ್ಟಿಗೆ ಬಳಕೆಯಾಗುತ್ತಿದೆ. ಇದುವರೆಗೆ ಆಗಿರುವ ಕನ್ನಡ ಅನುಷ್ಠಾನ ಎಷ್ಟು?, ಮುಂದಿನ ದಿನಗಳಲ್ಲಿ ಕನ್ನಡವನ್ನು ಹೇಗೆ ಬೆಳೆಸಬೇಕು? ಎಂಬುದನ್ನು ಚಿಂತಿಸಲು ಇದು ಸಕಾಲ.

ತಮ್ಮ ಭಾಷೆಯೊಂದನ್ನೇ ಎಲ್ಲ ರಂಗಗಳಲ್ಲಿಯೂ ಬಳಸುವ ಸಮುದಾಯದಲ್ಲಿ ನಮ್ಮಂತೆ ಭಾಷಾಭಿಮಾನವು ತೋರಿಕೆಯ ತೀವ್ರತೆ ಪ್ರದರ್ಶನದಲ್ಲಿ ಪ್ರಕಟವಾಗುವುದಿಲ್ಲ. ಅಂತಹ ಸಮುದಾಯಗಳಲ್ಲಿ ಭಾಷೆಯ ಸ್ಥಾನಮಾನದ ಬಗ್ಗೆ ಇಷ್ಟು ಚಿಂತಿಸುವ ಅಗತ್ಯವೇ ಇರುವುದಿಲ್ಲ. ಕೃಷಿ ಪ್ರಧಾನವಾದ ನಮ್ಮ ರಾಜ್ಯದಲ್ಲಿ ವಿಶ್ವೇಶ್ವರಯ್ಯನವರು ‘ಕೈಗಾರಿಕೀಕರಣ ಇಲ್ಲವೇ ನಾಶ’ ಅನ್ನುವ ಧ್ಯೇಯ ವಾಕ್ಯದಿಂದ ಸಾಲು, ಸಾಲು ಉದ್ಯಮಗಳನ್ನು ಸ್ಥಾಪಿಸಿದರು. ಆಗ ಅವರು ಭಾಷೆಯ ಬಗ್ಗೆ ಚಿಂತಿಸಲಿಲ್ಲ. ಆಂಗ್ಲರ ಯಂತ್ರಗಳನ್ನು ಆಮದು ಮಾಡಿಕೊಂಡರು. ಸಹಜವಾಗಿ ಅವರ ತಂತ್ರಜ್ಞಾನ ಇಂಗ್ಲಿಷಿನಲ್ಲಿಯೇ ಇತ್ತು. ಅದನ್ನು ಹಾಗೇ ಅಳವಡಿಸಿಕೊಳ್ಳುವುದು ಅನಿವಾರ್ಯವಾಗಿತ್ತು. ಕನ್ನಡಕ್ಕೆ ಹೊಸದಾದ ಈ ಕ್ಷೇತ್ರದಲ್ಲಿ ಕನ್ನಡ ಬಳಸುವುದು ಅಷ್ಟು ಸುಲಭವಾಗಿರಲಿಲ್ಲ. ಇದು ಸಾಲದೆಂಬಂತೆ ಬ್ರಿಟಿಷರು ಪ್ರಾರಂಭಿಸಿದ ಚಿನ್ನದ ಗಣಿ ಕಾರ್ಖಾನೆಗಳು, ಸಿಗರೇಟು ಕಾರ್ಖಾನೆ, ಆರ್ಮಿ ಬೇಸ್ ವರ್ಕ್ ಷಾಪ್‌ಗಳಿಗೆ ತಮಿಳುನಾಡಿನ ಜನರನ್ನು ಕರೆತಂದರು. ನಿಧಾನವಾಗಿ ಕೈಗಾರಿಕಾ ರಂಗ ವಲಸಿಗರ ವಸಾಹತುಗಳಾಗಿ ಬಿಟ್ಟವು. ಸ್ವಾತಂತ್ರ ನಂತರ ಆರಂಭವಾದ ಕೇಂದ್ರೋದ್ಯಮಗಳಲ್ಲೂ ಇದೇ ವಾತಾವರಣ ಸೃಷ್ಟಿಯಾಯಿತು. ಇಲ್ಲಿ ಕೆಲಸಗಳು ಕನ್ನಡಿಗರ ಪಾಲಿಗೆ ಗಗನ ಕುಸುಮವಾಯಿತು. ಹಾಗಾಗಿ ಇಲ್ಲಿ ಕಳೆದ ಶತಮಾನದ 60-70ರ ದಶಕದವರೆಗೆ ಕನ್ನಡ ಬೇಕು ಎನ್ನುವ ಪ್ರಶ್ನೆ ಉದ್ಭವಿಸಲೇ ಇಲ್ಲ.

ಎಪ್ಪತ್ತರ ದಶಕದ ಹೊತ್ತಿಗೆ ಸ್ವಲ್ಪ ಮಟ್ಟಿಗೆ ಉದ್ಯಮಗಳಲ್ಲಿ ಕನ್ನಡಿಗರ ಸಂಖ್ಯೆ ಹೆಚ್ಚಿತ್ತು. ತಂತ್ರಜ್ಞಾನವೆಲ್ಲ ಪಾಶ್ಚಾತ್ಯರದೇ ಆಗಿದ್ದುದರಿಂದ ಅಲ್ಲಿ ಬಳಸುವ ಭಾಷೆ, ಪರಿಭಾಷೆ ಇಂಗ್ಲಿಷ್‌ನಲ್ಲಿಯೇ ಇರುತ್ತಿದ್ದವು. ಅಲ್ಲಿನ ಆಧಿಕಾರಿಗಳು ಇಂಗ್ಲಿಷ್ ಬೌದ್ಧಿಕ ದಾಸ್ಯಕ್ಕೆ ಒಳಗಾಗಿದ್ದರೆ, ಇಂಗ್ಲಿಷ್ ಬಾರದ ಬಹುಸಂಖ್ಯಾತ ಕಾರ್ಮಿಕರಲ್ಲೂ, ಡ್ರಾಯಿಂಗ್, ರೂಟ್‌ಕಾರ್ಡ್‌ಗಳಂತಹ ತಾಂತ್ರಿಕ ಸಂಗತಿಗಳನ್ನು ಕನ್ನಡದಲ್ಲಿ ಹೇಳಲಿಕ್ಕೆ ಸಾಧ್ಯವೇ ಇಲ್ಲ ಎನ್ನುವ ಭಾವನೆ ಭದ್ರವಾಗಿ ಬೇರೂರಿತ್ತು. ಅದು ಸ್ವಲ್ಪ ಮಟ್ಟಿಗೆ ಇಂದಿಗೂ ಮುಂದುವರಿದಿದೆ. ಈ ಪರಿಸ್ಥಿತಿ ಕೇವಲ ಕನ್ನಡಕ್ಕೆ ಸೀಮಿತವಾಗಿಲ್ಲ ಬಹುತೇಕ ಭಾರತೀಯ ಭಾಷೆಗಳದ್ದು ಇದೇ ಸ್ಥಿತಿ. ಇಂತಹ ಸನ್ನಿವೇಶದಲ್ಲಿ ಪ್ರತಿಷ್ಠಿತ ಎನ್.ಜಿ.ಇ.ಎಫ್. (ಇಂದು ಆ ಕಾರ್ಖಾನೆ ಮುಚ್ಚಿ ಹೋಗಿದೆ) ತಾಂತ್ರಿಕ ನಿರ್ದೇಶಕರಾಗಿದ್ದ ತ.ರಂ.ಕೃಷ್ಣಗೌಡರು ಕನ್ನಡ ಬಳಸುವುದರಿಂದ ಹೇಗೆ ಕಾರ್ಖಾನೆ ತನ್ನ ಉತ್ಪಾದಕತೆಯನ್ನು ವರ್ಧಿಸಿಕೊಳ್ಳಬಹುದು ಎಂಬುದನ್ನು ಪ್ರತಿಪಾದಿಸಿದರು. ಆಧುನಿಕ ವಿಜ್ಞಾನ, ತಂತ್ರಜ್ಞಾನಗಳನ್ನು ಇಂಗ್ಲಿಷ್ ಅಲ್ಲದೆ, ಜರ್ಮನ್, ಫ್ರೆಂಚ್, ರಶ್ಯನ್ ಚೀನೀ, ಜಪಾನ್ ಮುಂತಾದ ಭಾಷೆಗಳಲೆಲ್ಲ ಪ್ರಸ್ತುತಪಡಿಸಲಾಗುತ್ತಿದೆ. ಇಂಗ್ಲಿಷ್ ಬಳಸದೇ ಇರುವ ಜರ್ಮನಿ, ಜಪಾನ್ ಮುಂತಾದ ದೇಶಗಳು ವೈಜ್ಞಾನಿಕವಾಗಿ, ತಾಂತ್ರಿಕವಾಗಿ ಮಹತ್ವದ ಸಾಧನೆ ಮಾಡಿ ಪ್ರಪಂಚದಲ್ಲಿಯೇ ಮುಂಚೂಣಿಯಲ್ಲಿರುವುದನ್ನು ಕನ್ನಡಿಗರ ಗಮನಕ್ಕೆ ತಂದರು. ಅದು ಉತ್ತಮ ಫಲಿತಾಂಶ ನೀಡುವ ಸೂಚನೆಗಳಿತ್ತು, ದುರಂತವೆಂದರೆ ಅದು ವ್ಯಾಪಕತೆ ಪಡೆದುಕೊಳ್ಳದೆ ಒಂಟಿದನಿಯಾದದ್ದು.

ಜಾಗತೀಕರಣ, ಉದಾರೀಕರಣದ ಸದ್ದು ಹೆಚ್ಚಾದಂತೆ ಕನ್ನಡದಂತಹ ಭಾಷೆಗಳ ಸದ್ದು ಅಡಗಿ ಹೋಯಿತು IT( ಮಾಹಿತಿ ತಂತ್ರಜ್ಞಾನ),  BT(ಜೈವಿಕ ತಂತ್ರಜ್ಞಾನ)ಗಳ ಪ್ರವೇಶ ಕರ್ನಾಟಕದ ಹೆಸರನ್ನು, ಅದರಲ್ಲೂ ಬೆಂಗಳೂರಿನ ಹೆಸರನ್ನು ಜಾಗತಿಕ ಮಟ್ಟದಲ್ಲಿ ಪ್ರಸಿದ್ಧಿ ಪಡೆಯುವಂತೆ ಮಾಡಿತು. ಈ ರಂಗದಲ್ಲಿ ಕನ್ನಡಿಗರು ಅಸ್ಪಶ್ಯರಾದರು. ದೇಶ ವಿದೇಶಗಳ ಜನ ಇಲ್ಲಿಗೆ ಬಂದರು. ಇಂಗ್ಲಿಷ್ ಸದ್ದು ಹೆಚ್ಚಿತು. ಕನ್ನಡಿಗರ ಸಂಖ್ಯೆ ಶೇ.20ಕ್ಕಿಂತ ಕಮ್ಮಿಯಿರುವ ಇಲ್ಲಿ ಕನ್ನಡ ಹೇಗೆ ತಾನೆ ಬೆಳೆಯಲು ಸಾಧ್ಯ. ಕನ್ನಡ ನಿರುಪಯುಕ್ತವಾದದ್ದು ಅನ್ನುವ ರೀತಿ ವರ್ತಿಸಿದ ಪ್ರಕರಣಗಳು ಇವೆ. ಇಲ್ಲಿ ಕನ್ನಡಿಗರ ಹಬ್ಬಗಳಿಗೆ ರಜೆ ಕೊಡುವುದಿಲ್ಲ ಕೆಲವು ವರ್ಷಗಳ ಹಿಂದೆ ರಾಜ್ಯೋತ್ಸವ ರಜೆ ಇರಲಿಲ್ಲ. ಕನ್ನಡ ಸಂಘಟನೆಗಳ ಒತ್ತಡಕ್ಕೆ ಮಣಿದು ರಾಜ್ಯೋತ್ಸವ ಆಚರಣೆ ರಜೆ ಇದೆ. ಐಟಿಗಳು ‘ನವೆಂಬರ್ ಕನ್ನಡಿಗರಾಗಿ’ ಪರಿವರ್ತನೆಗೊಂಡಿದ್ದಾರೆಂಬ ನೆಮ್ಮದಿ ಕೆಲವರದು. ಇಲ್ಲಿರುವ ಕೆಲ ಉತ್ಸಾಹಿ ಕನ್ನಡ ತಂತ್ರಜ್ಞರು ಅಲ್ಲಿ ಕನ್ನಡಪರ ವಾತಾವರಣ ನಿರ್ಮಾಣಕ್ಕೆ ಮುಂದಾಗುತ್ತಿದ್ದಾರೆಂಬುದು ಒಂದು ಸಣ್ಣ ಆಶಾಕಿರಣ.

ಕನ್ನಡವನ್ನು ಕೊಲ್ಲುತ್ತಿರುವ ಹಿಂದಿ ಹೇರಿಕೆ

ಬ್ರಿಟಿಷರು ಭಾರತ ಬಿಟ್ಟು ಹೋದ ನಂತರವೂ ಇಂಗ್ಲಿಷ್ ಗಟ್ಟಿಯಾಗಿ ಬೇರೂರಿದೆ. ಅದಕ್ಕಿರುವ ಐತಿಹಾಸಿಕ ಕಾರಣದ ಜೊತೆಗೆ ವ್ಯಾವಹಾರಿಕವಾದ ಕಾರಣವೂ ಇದೆ. ದೇಶ ಸ್ವಾತಂತ್ರ ಗಳಿಸಿ, ಭಾಷಾವಾರು ಪ್ರಾಂತಗಳು ರಚನೆಯಾಗಿ ಅರ್ಧ ಶತಮಾನಗಳು ಕಳೆದ ನಂತರವೂ ಸಾಮಾಜಿಕವಾಗಿ ಕನ್ನಡದ ಪರಿಸ್ಥಿತಿ ಅಷ್ಟೇನೂ ಬದಲಾಗಿಲ್ಲ. ಬದಲಾಗಿ ಕನ್ನಡದ ಆತಂಕ ಇನ್ನಷ್ಟು ಹೆಚ್ಚಿದೆ. ಕೇಂದ್ರ ಸರಕಾರ ದೇಶೀಯ ಭಾಷೆಗಳನ್ನು ಪ್ರೋತ್ಸಾಹಿಸುವ ಬದಲು ಬಲವಂತವಾಗಿ ಹಿಂದಿಯನ್ನು ಹೇರಿ, ಇಂಗ್ಲಿಷ್ ಸ್ಥಾನದಲ್ಲಿ ಹಿಂದಿಯನ್ನು ಪ್ರತಿಷ್ಠಾಪಿಸುವ ಆಕ್ರಮಣಕಾರಿ ಧೋರಣೆ ತೀರ ಅಪಾಯಕಾರಿಯಾದದ್ದು. ಬೇಕೋ ಬೇಡವೋ ಇಂಗ್ಲಿಷ್ ಸಂಪೂರ್ಣವಾಗಿ ವಿಕಸನ ಹೊಂದಿ ಎಲ್ಲ ರಂಗಗಳಲ್ಲಿ ಬಳಕೆಗೆ ಸಜ್ಜಾಗಿರುವ ಭಾಷೆ; ಹಿಂದಿ ಸಜ್ಜಾಗಬೇಕಿರುವ ಭಾಷೆ. ಪ್ರೊ. ಎಚ್.ಎಸ್. ಕೃಷ್ಣಸ್ವಾಮಿ ಅಯ್ಯಂಗಾರ್ ಅವರು ಹೇಳುವಂತೆ ‘ಇತರ ಭಾರತೀಯ ಬೆಳವಣಿಗೆ ತಡೆಯಾಗಿ ಶೀಘ್ರವಾಗಿ ಬೆಳೆದ ಇತರ ಭಾಷೆಗಳು ತನ್ನಂತೆ ಬೆಳೆದಿಲ್ಲವಾದ್ದರಿಂದ, ಅವು ಸಾಮಾಜಿಕ ಬಳಕೆಗೆ ಒದಗಿ ಬರಲಾರವೆಂದು ವಾದಿಸಿ ಗೆಲ್ಲಬಯಸುವ ಭಾಷೆ. ಅದರ ಬೆಳವಣಿಗೆಗೆ ಸಿಗುತ್ತಿರುವ ಎಲ್ಲ ಸವಲತ್ತು ಸಾಧನಗಳು ಕನ್ನಡದಂತಹ ಭಾಷೆಗಳಿಗೆ ಒದಗಿ ಬರುತ್ತಿಲ್ಲ’ ಇಂಗ್ಲಿಷ್‌ನ್ನು ಆಧುನಿಕ ವಲಯದ ಉದ್ಯಮಗಳಲ್ಲಿ ಬಳಸುವುದಕ್ಕೆ ಕಾರಣವಿದೆ. ದೇಶೀಯ ಭಾಷೆಗಳಲ್ಲಿ ಅದಕ್ಕೆ ಬೇಕಾದ ಪರಿಭಾಷೆ ಲಭ್ಯವಿಲ್ಲವೆಂದು ವಾದಿಸಬಹುದಿತ್ತು. ಹಿಂದಿಗೆ ಇಂಗ್ಲಿಷ್‌ನ ಸಾಮರ್ಥ್ಯವನ್ನು ಒದಗಿಸಲು ನಡೆಸುತ್ತಿರುವ ಕಸರತ್ತು ದೇಶ ಭಾಷೆಗಳಿಗೆ ಮಾರಕವಾಗಿದೆ.

ಎಲ್ಲ ಪ್ರಾದೇಶಿಕ ಭಾಷೆಗಳಿಗೂ ಆಯಾ ಪ್ರದೇಶಗಳ ಸಾರ್ವತ್ರಿಕ ಭಾಷೆಯಾಗಿ ಬಳಕೆಯಾಗುವ ಶಕ್ತಿಯಿದೆ ಎಂಬುದನ್ನು ಕೇಂದ್ರ ಒಪ್ಪಬೇಕು. ಅದು ರಾಷ್ಟ್ರದ ಏಕತೆ ದೃಷ್ಟಿಯಿಂದ ಅಗತ್ಯ ಎಂಬುದನ್ನು ನಮ್ಮ ಜನಪ್ರತಿನಿಧಿಗಳು ಸಂಬಂಧಿಸಿದವರಿಗೆ ಮನವರಿಕೆ ಮಾಡಿ ಕೊಡವ ಕೆಲಸ ಮಾಡಬೇಕು.

ಸ್ವಾಭಿಮಾನಕ್ಕೆ ಸವಾಲಾಗಿರುವ ಅಧಿಕೃತ ಭಾಷಾ ಅಧಿನಿಯಮ:

ಒಕ್ಕೂಟದ ಅಧಿಕೃತ ಭಾಷೆಯಾಗಿ ಹಿಂದಿಯನ್ನು ಪ್ರತಿಷ್ಠಾಪಿಸಲು, ಹಿಂದಿಯೇತರ ರಾಜ್ಯಗಳೊಂದಿಗೆ ವ್ಯವಹರಿಸುವಾಗ ಅನುಸರಿಸಬೇಕಾದ ಅಂಶಗಳೇ ಇಲ್ಲ. 1963ರಲ್ಲಿ ಜಾರಿಗೆ ಬಂದು 1967ರಲ್ಲಿ ತಿದ್ದುಪಡಿಯಾದ ಅಧಿಕೃತ ಭಾಷಾ ಅಧಿನಿಯಮದನ್ವಯ ಕೇಂದ್ರ ಸರಕಾರದ ಸ್ವಾಮ್ಯ ಅಥವಾ ನಿಯಂತ್ರಣಕ್ಕೊಳಪಟ್ಟಿರುವ ಎಲ್ಲ ಸಂಸ್ಥೆ, ಉದ್ಯಮ, ಕಚೇರಿಗಳಲ್ಲಿನ ನಿರ್ಣಯಗಳು, ಆದೇಶಗಳು, ಪ್ರಕಟನೆ, ಪರಿಪತ್ರ, ನಿಯಮ, ಕರಾರು ಒಪ್ಪಂದಗಳು ಒಟ್ಟಿನಲ್ಲಿ ಆಡಳಿತ, ವ್ಯವಹಾರದ ಎಲ್ಲ ಸ್ತರಗಳಲ್ಲಿ ಹಿಂದಿ, ಇಂಗ್ಲಿಷ್‌ಗಳಲ್ಲಿರಬೇಕೆಂದು ಸ್ಪಷ್ಟಪಡಿಸಿದೆ. ಪ್ರಾದೇಶಿಕ ಭಾಷೆಗಳಲ್ಲಿರಬಾರದೆಂದು ಹೇಳಿಲ್ಲ. ಆದರೆ ಅದನ್ನು ಕಡ್ಡಾಯ ಎಂದೂ ಹೇಳಿಲ್ಲ. ಇದರ ಜೊತೆಗೆ ಹಿಂದಿಯಲ್ಲಿ ಸಹಿ ಮಾಡಿದರೆ ಇಷ್ಟು, ವ್ಯವಹರಿಸಿದರೆ ಮತ್ತಷ್ಟು, ಹಿಂದಿ ಪರೀಕ್ಷೆಗಳಲ್ಲಿ ಪಾಸಾದರೆ ನಿರಂತರ ಭತ್ತೆ ಹೀಗೆ ಹಲವು ಆಮಿಷಗಳನ್ನು ಒಡ್ಡಲಾಗುತ್ತಿದೆ. ಹಿಂದಿ ಸಪ್ತಾಹ, ಉತ್ಸವ, ನಾಟಕೋತ್ಸವ, ಸ್ಪರ್ಧೆ ಹೀಗೆ ಹಿಂದಿ ಹೇರಿಕೆಗೆ ನಾನು ಕೆಲಸ ಮಾಡುತ್ತಿರುವ ಎಚ್.ಎ.ಎಲ್.ನಲ್ಲೇ ಕನಿಷ್ಠವೆಂದರೂ 5 ಕೋಟಿ ರೂ.ಗಳಷ್ಟು ವ್ಯಯ ಮಾಡಲಾಗುತ್ತಿದೆ. 1976ರಲ್ಲಿ ಪ್ರಕಟವಾದ ಅಧಿಕೃತ ಭಾಷಾ ನಿಯಮದ ಪ್ರಕಾರ ಕೇಂದ್ರದ ಜೊತೆಗೆ, ರಾಜ್ಯಗಳೊಡನೆ ವ್ಯವಹರಿಸುವಾಗಲೂ ಇಂಗ್ಲಿಷ್ ಜೊತೆಗೆ ಹಿಂದಿಯನ್ನು ಕಡ್ಡಾಯವಾಗಿ ಬಳಸಬೇಕು.

ಈ ಹಿಂದಿ ಪರ ಕಾನೂನಿನ ಜೊತೆಗೆ ಕೇಂದ್ರೋದ್ಯಮ, ಸಾರ್ವಜನಿಕ ಉದ್ದಿಮೆಗಳಲ್ಲಿ ಉನ್ನ್ನತಾಧಿಕಾರಿಗಳೆಲ್ಲ ಉತ್ತರ ಭಾರತೀಯರೇ. ಹಾಗಾಗಿ ಹಿಂದಿ ಹೇರಿಕೆ ನಿರ್ಲಜ್ಜವಾಗಿ ನಡೆದಿದೆ. ಬರಗೂರು ರಾಮಚಂದ್ರಪ್ಪನವರು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದಾಗ ‘ಕನ್ನಡ ಘಟಕ’ ಸ್ಥಾಪಿಸುವಂತೆ ಕೇಂದ್ರ ಸರಕಾರದ ಉದ್ದಿಮೆಗಳಿಗೆ ಪತ್ರ ಬರೆದರು. ಅಲ್ಲಿನ ಕನ್ನಡ ಸಂಘಟನೆಗಳು, ಕಾರ್ಮಿಕ ಸಂಘಗಳು ಇದಕ್ಕೆ ಒತ್ತಡ ತಂದವು. ಇದರಿಂದಾಗಿ ಕನ್ನಡ ಘಟಕಗಳೇನೋ ಕೆಲವೆಡೆ ಅಸ್ತಿತ್ವಕ್ಕೆ ಬಂದವು. ಆದರೆ ಸೂಕ್ತ ಗಮನ ನೀಡದೆ ಅವು ನಿಷ್ಕ್ರಿಯವಾಗಿವೆ. ‘ಕನ್ನಡ ಅಭಿವೃದ್ಧಿ ಪ್ರಾಧಿಕಾರ’ವು ಕನ್ನಡ ಬಳಕೆ, ಕನ್ನಡಿಗರಿಗೆ ಉದ್ಯೋಗಕ್ಕೆ ಸಂಬಂಧಿಸಿದಂತೆ ಬರೆದ ಪತ್ರಗಳಿಗಳಿಗೆ ಬಹಳಷ್ಟು ಉದ್ದಿಮೆಗಳು ಸೂಕ್ತ ಗಮನ ನೀಡದ ನಿದರ್ಶನಗಳಿಗೆ. ಕೇಂದ್ರ ಸರಕಾರದ ಹಿಂದಿ ಹೇರಿಕೆಗೆ ವರ್ಷಕ್ಕೆ 5,000 ಕೋಟಿ ರೂ.ಗಳಷ್ಟನ್ನು ಖರ್ಚು ಮಾಡುತ್ತಿದೆ. ಕನ್ನಡದಂತಹ ದೇಶ ಭಾಷೆಗಳಿಗೆ 10 ಕೋಟಿ ರೂ. ನೀಡಲು ಮೀನಾ- ಮೇಷ ಎಣಿಸುತ್ತಿದೆ.

ಕರ್ನಾಟಕ ಸರಕಾರದ ಈ ಬಗ್ಗೆ ತೀವ್ರ ಪ್ರತಿಭಟನೆ ಸೂಚಿಸಿ ಕನ್ನಡವನ್ನೂ ಹಿಂದಿ, ಇಂಗ್ಲಿಷ್‌ಗೆ ಸಮಾನವಾಗಿ ಬಳಸಲು ಆಗ್ರಹಿಸಬೇಕು. ಜೊತೆಗೆ ಎಲ್ಲ ಕೇಂದ್ರೋದ್ಯಮಗಳ ಮುಖ್ಯಸ್ಥರನ್ನು ಮುಖ್ಯಮಂತ್ರಿಯವರೇ ಕರೆಯಿಸಿಕೊಂಡು ರಾಜ್ಯ ಸರಕಾರದ ನೆಲ-ಜಲ ಸೇರಿದಂತೆ ನೀಡುತ್ತಿರುವ ಸವಲತ್ತುಗಳನ್ನು ತಿಳಿಹೇಳಿ ಸ್ಥಳೀಯ ಜನಭಾಷೆ (ಕನ್ನಡ)ಯನ್ನು ಗೌರವಿಸಲು ಮಾನ್ಯ ಮಾಡಲು ಸೂಚಿಸಬೇಕು. ಇಂತಹ ಪ್ರಯತ್ನ ಮಾಡಲು ಕನ್ನಡ ಕಾರ್ಯಕರ್ತರು ಹಲವು ದಶಕಗಳಿಂದ ರಾಜ್ಯ ಸರಕಾರವನ್ನು ಕೋರುತ್ತಿದ್ದರೆ ಯಾರೂ ಸೂಕ್ತ ರೀತಿಯಲ್ಲಿ ಸ್ಪಂದಿಸಿಲ್ಲ. ವಿಶ್ವ ಕನ್ನಡ ಸಮ್ಮೇಳನದ ಸಂದರ್ಭದಲ್ಲಾದರೂ ಇಂತಹ ಕೆಲಸ ಆಗಲಿ. ಕೇಂದ್ರೋದ್ಯಮದ ಜೊತೆಗೆ ಖಾಸಗಿ ವಲಯದಲ್ಲೂ ಕನ್ನಡದ ಸ್ಥಿತಿ ಅಷ್ಟೇನೂ ಉತ್ಸಾಹದಾಯಕವಾಗಿಲ್ಲ.?

ಉದ್ದಿಮೆಗಳಲ್ಲಿ ಕನ್ನಡ ಬಳಕೆ ಎಲ್ಲಿ? ಎಷ್ಟು?

ಒಂದು ಕಾರ್ಖಾನೆಯ ಅಭಿವೃದ್ಧಿಯಾಗಬೇಕಾದರೆ ಅದರ ಉತ್ಪನ್ನ ಉತ್ಕೃಷ್ಟವಾಗಿರಬೇಕು. ಹಾಗೂ ನಿಗದಿತ ಸಮಯ ಪಾಲನೆ ಆಗಬೇಕು. ಅಂದರೆ ಅದರ ತಯಾರಿಕಾ ಕ್ರಿಯೆಯಲ್ಲಿ ನೇರವಾಗಿ ತೊಡಗುವ ಕಾರ್ಮಿಕರಲ್ಲಿ ಆ ಬಗ್ಗೆ ಅರಿವು ಮೂಡಿಸಬೇಕು. ಹಾಗಾಗಬೇಕಾದರೆ ಕಾರ್ಮಿಕರಿಗೆ ಚೆನ್ನಾಗಿ ಅರ್ಥವಾಗುವ, ತಿಳಿಯುವ ಭಾಷೆಗಳಲ್ಲಿ ಎಲ್ಲ ವಿವರ, ಮಾಹಿತಿ ಸಿಗುವಂತಾಗಬೇಕು. ಅದು ಅಪೇಕ್ಷಣೀಯ ಮತ್ತು ಫಲದಾಯಕ. ಈ ದೃಷ್ಟಿಯಿಂದ ಕಾರ್ಖಾನೆಗಳಲ್ಲಿ ಕನ್ನಡ ಬಳಕೆಗೆ ಬರಬೇಕು ಎಂದು ತ.ರಂ. ಕೃಷ್ಣಗೌಡ ನಂಬಿದ್ದರು. ಅವರು ಆ ನಿಟ್ಟಿನಲ್ಲಿ ನೂತನ ಸರಕಾರಿ ವಿದ್ಯುತ್ ಕಾರ್ಖಾನೆಯಲ್ಲಿ ಕನ್ನಡವನ್ನು ಎಲ್ಲ ಹಂತಗಳಲ್ಲಿ ಬಳಕೆಗೆ ತಂದು ಯಶಸ್ವಿಯಾಗಿದ್ದರು. ‘ಕನ್ನಡ ಔದ್ಯಮಿಕ ನಿಘಂಟು’ ಪ್ರಕಟಿಸಿದರು. ಭಾರತದ ಇನ್ಯಾವುದೇ ಭಾಷೆಗಳಲ್ಲಿ ಇಂತಹ ಪ್ರಯತ್ನಗಳು ಆಗಿರಲಿಲ್ಲ. (ಇಂದಿಗೂ ಆ ಮಟ್ಟದಲ್ಲಿ ಆಗಿಲ್ಲ)

ನೀಲಿನಕ್ಷೆ(Blue Print) ಕೆಲಸ ಸೂಚಿ, ತಾಂತ್ರಿಕ ಮಾಹಿತಿ, ತಾಂತ್ರಿಕ ವಿನ್ಯಾಸ ಪಟ್ಟಿ ಎಲ್ಲವನ್ನು ಕನ್ನಡದಲ್ಲಿ ತಂದಿದ್ದರು. ಉತ್ಪಾದನೆಯ ಮೇಲೆ ವಿವರಗಳು ಕನ್ನಡದಲ್ಲೇ ಇದ್ದವು.(ಜಪಾನ್, ಕೊರಿಯನ್ ಪದಾರ್ಥ ಕೊಂಡಾಗ ಆ ಮಾಹಿತಿ ಆಯಾ ಭಾಷೆಗಳಲ್ಲಿರುವಂತೆ) ರಫ್ತಾಗುವ ವಸ್ತುಗಳ ಮೇಲೆ ತಯಾರಿಕೆ ವಿವರವೂ ಕನ್ನಡದಲ್ಲೇ ಇತ್ತು. ಈ ಲೇಖನದ ಮೊದಲೇ ಸೂಚಿಸಿರುವಂತೆ ಅದು ಪ್ರಕಟಿಸಿದ 6,000 ಪದಗಳ ‘ಇಂಗ್ಲಿಷ್ ಕನ್ನಡ ಔದ್ಯಮಿಕ ನಿಘಂಟು’ ಕನ್ನಡ ಬಳಸಲು ಸಾಧ್ಯವಿಲ್ಲ ಅನ್ನುವವರಿಗೆ ಕನ್ನಡ ಅನುಷ್ಠಾನ ಹೇಗೆ ವ್ಯಾವಹಾರಿಕವಾಗಿ ಸಾಧ್ಯ ಎಂಬುದನ್ನು ಸಾಧಿಸಿ ತೋರಿಸಿತು. ಕನ್ನಡದಲ್ಲಿ ಕೊರೆಯಚ್ಚು (Stencil) ತಯಾರಿಸಿದರು. ಪದಕ್ರಮ ಕ್ರಿಯೆ (Step Function) ಸಿದ್ಧವಾಯಿತು ಮನಸ್ಸಿದ್ದರೆ ಮಾರ್ಗವಿದೆ ಎಂಬುದನ್ನು ಸಾಬೀತುಪಡಿಸಿ ತೋರಿಸಿದರು. ದೇಶದ ಇನ್ನಾವ ಭಾಗದಲ್ಲೂ ಇಂತಹ ಪ್ರಯತ್ನವಾಗಿರಿಲ್ಲ ಎಂಬುದನ್ನು ನೆನೆದಾಗ ಕನ್ನಡದ ಸಾಧ್ಯತೆ ಬಗ್ಗೆ ಹೆಮ್ಮೆ ಮೂಡುತ್ತದೆ. ಕಾರ್ಖಾನೆಯಲ್ಲಿ ಮೂರು ಹಂತವಿರುತ್ತದೆ. ಸಂಶೋಧನೆ, ಅಭಿವೃದ್ಧಿ, ತಯಾರಿಕೆ ಈ ಮೂರು ಹಂತದಲ್ಲಿ ಕನ್ನಡವನ್ನು ಅನುಷ್ಠಾನಗೊಳಿಸಿತ್ತು. ಈ ಪ್ರಯತ್ನದಿಂದ ಸ್ಫೂರ್ತಿ ಪಡೆದು ಕನ್ನಡವನ್ನು ಅನುಷ್ಠಾನಗೊಳಿಸುತ್ತಿದ್ದ ಹಲವು ರಾಜ್ಯ ಸರಕಾರಿ ಉದ್ದಿಮೆಗಳು ಒಂದೊಂದಾಗಿ ಮುಚ್ಚಿಹೋದವು. ವಿದೇಶದಲ್ಲಿರುವ ನನ್ನ ಮಿತ್ರರೊಬ್ಬರು ಮೈಸೂರು ಗಂಧದ ಸಾಬೂನಿನ ಮೇಲೆ ‘ಕನ್ನಡ ಅಕ್ಷರ’ ಇರುತ್ತದೆಂಬ ಕಾರಣಕ್ಕೆ ಅದನ್ನು ಹಲವು ಕನ್ನಡಿಗರು ಕೊಳ್ಳುತ್ತಿರುವುದಾಗಿ ತಿಳಿಸಿದರು. ಉದ್ದಿಮೆಗಳಲ್ಲಿ ಕನ್ನಡವನ್ನು ಬಳಸುವ ಮೂಲಕ ಬೆಳೆಸುತ್ತಿದ್ದ ಹಲವು ರಾಜ್ಯ ಸರಕಾರಿ ಉದ್ದಿಮೆಗಳು ಮುಚ್ಚಿ ಹೋದದ್ದು ಕನ್ನಡ ತಾಂತ್ರಿಕವಾಗಿ ಬೆಳೆಯುವ ಸಾಧ್ಯತೆಯನ್ನು ಕ್ಷೀಣಗೊಳಿಸಿದೆ.

 ಆಡಳಿತ ವರ್ಗ ಮತ್ತು ಕಾರ್ಮಿಕರ ನಡುವಣ ಬಾಂಧವ್ಯ ಉತ್ತಮವಾಗಿರಬೇಕೆಂಬ ದೃಷ್ಟಿಯಿಂದ ಕನ್ನಡ ಬಳಕೆ ಅಗತ್ಯವಿದೆ ಎಂಬುದನ್ನು ಬಹಳಷ್ಟು ಉದ್ದಿಮೆಗಳು ಮನಗಂಡಿವೆ. ಉದ್ದಿಮೆಗಳಲ್ಲಿ ಕನ್ನಡ ಬಳಕೆಯ ಸಾಧ್ಯತೆ ಹೆಚ್ಚುತ್ತಿರುವುದು, ಆಡಳಿತ ವ್ಯವಹಾರದಲ್ಲಿ, ತಾಂತ್ರಿಕವಾಗಿ ಕನ್ನಡದ ಬಳಕೆ ಸ್ವಲ್ಪ ಕಷ್ಟ ಸಾಧ್ಯವಾದದ್ದು, ಬಹಳಷ್ಟು ಉದ್ಯಮಗಳು ತ್ರಿಭಾಷಾ ಸೂತ್ರದನ್ವಯ ನಾಮಫಲಕ, ಸೂಚಿನಾಫಲಕಗಳಲ್ಲಿ ಕನ್ನಡ ಬಳಸುತ್ತಿವೆೆ. ಕೆಲವು ಪರಿಪತ್ರಗಳು ಕನ್ನಡದಲ್ಲಿ ಬರುತ್ತಿವೆ. ರಾಜ್ಯ ಸರಕಾರ ಕಾರ್ಮಿಕ ಇಲಾಖೆಯವರ ಪ್ರಯತ್ನದಿಂದ ಕಾರ್ಖಾನೆಗಳ ಸ್ಥಾಯಿ ಆದೇಶ(Standing Order) ಉಪಾದಾನ(Gratuity)ದಂತಹ ವಿವರಗಳನ್ನು ಕನ್ನಡದಲ್ಲಿ ಪ್ರದರ್ಶಿಸುತ್ತಿದೆೆ. ಅದೇ ಅವರು ಕನ್ನಡಕ್ಕೆ ಮಾಡುತ್ತಿರುವ ದೊಡ್ಡ ಕೊಡುಗೆ ಎಂಬಂತೆ ಭಾವಿಸುವ ಆಡಳಿತ ವರ್ಗಕ್ಕೂ ಕೊರತೆಯಿಲ್ಲ.

ಆಡಳಿತ ವ್ಯವಹಾರದಲ್ಲಿ ಕನ್ನಡ ಬಳಕೆ ಯಾವುದೇ ರಾಜ್ಯ ಸರಕಾರ ಇಲಾಖೆಗಳಿಗಿಂತ ಭಿನ್ನವಿಲ್ಲ. ಅಲ್ಲಿ ಕಾರ್ಮಿಕನಿಗೆ ತಲುಪುವ ಎಲ್ಲ ಸುತ್ತೋಲೆ, ಸೂಚನೆ, ಆದೇಶಗಳು, ಕಾರ್ಮಿಕ ಬಳಸುವ ನಮೂನೆಗಳಲ್ಲಿ ಕನ್ನಡವನ್ನು ಅನುಷ್ಠಾನಗೊಳಿಸಲು ಯಾವುದೇ ಕಷ್ಟವಿಲ್ಲ. ಆದರೆ ಕನ್ನಡ ಸಂಘಟನೆ ಬಲಿಷ್ಠವಾಗಿರುವ ಬಿಇಎಲ್‌ನಲ್ಲಿ ಮಾತ್ರ ಬಹುಮಟ್ಟಿಗೆ ಅನುಷ್ಠಾನಕ್ಕೆ ಬಂದಿದೆ. ಬಿಎಚ್‌ಇಎಲ್, ಬಿಇಎಂಎಲ್‌ನಲ್ಲೂ ಸ್ವಲ್ಪ ಮಟ್ಟಿಗೆ ಕನ್ನಡ ಜಾರಿಯಲ್ಲಿದೆ. ಉಳಿದಂತೆ ತೋರಿಕೆಗೆ ಮಾತ್ರ ಕೆಲವು ನಮೂನೆ ಕನ್ನಡದಲ್ಲಿವೆ. ಮೈಕೊ ಅಂತಹ ಬಹುರಾಷ್ಟ್ರೀಯ ಕಂಪೆನಿಯಲ್ಲಿ ಕನ್ನಡ ಬಳಕೆ ಆಗುತ್ತಿದೆ.ಹಲವು ಖಾಸಗೀ ಉದ್ಯಮಗಳಲ್ಲಿ ಕನ್ನಡವನ್ನು ಅಲ್ಪ ಸ್ವಲ್ಪ ಬಳಸುತ್ತಿದ್ದಾರೆ. ರಾಜ್ಯೋತ್ಸವ ಆಚರಣೆ ಎಲ್ಲ ಕಡೆ ನಡೆಯುತ್ತದೆ. ಆ ಸಂದರ್ಭದಲ್ಲಿ ಕನ್ನಡದ ಹೆಸರಿನಲ್ಲಿ ಸ್ಪರ್ಧೆಗಳು ನಡೆಯುತ್ತವೆ. ಕಾರ್ಖಾನೆಯ ಪುಸ್ತಕ ಭಂಡಾರಗಳಲ್ಲಿ ಕನ್ನಡ ಪುಸ್ತಕ ಸ್ಥಾನ ಪಡೆದಿದೆ. ಕನ್ನಡ ಸಾಧಕರನ್ನು ಕರೆದು ಗೌರವಿಸುತ್ತಾರೆ.ಕನ್ನಡ ಕಾಣಲು, ಕೇಳಲು ಸಾಧ್ಯವೇ ಇಲ್ಲದಂತಹ ವಾತಾವರಣವಿದ್ದ ಕಾರ್ಖಾನೆಗಳಲ್ಲಿ ಇಷ್ಟಾದರೂ ಕನ್ನಡಕ್ಕೆ ಅವಕಾಶ ಸಿಕ್ಕಿದೆಯಲ್ಲ ಎಂದು ಸಂಭ್ರಮಿಸುವ ಮಂದಿ ಇದ್ದಾರೆ. ವಾಸ್ತವವಾಗಿ ಕನ್ನಡದ ಬೆಳವಣಿಗೆ ಯ ದೃಷ್ಟಿಯಿಂದ ನಿಜವಾಗಿ ಆಗಬೇಕಿರುವುದು ತಾಂತ್ರಿಕ ಕ್ಷೇತ್ರದಲ್ಲಿ ಕನ್ನಡದ ಅನುಷ್ಠಾನ ಕನ್ನಡವು ರಜೆ ಚೀಟಿ, ವೇತನ ಪಟ್ಟಿಗೆ ಸೀಮಿತವಾಗಬಾರದು.

ತಾಂತ್ರಿಕ ಕನ್ನಡದ ಬಳಕೆ ಆಗಿರುವುದು, ಆಗಬೇಕಾದ್ದು

 ಯಂತ್ರಾಗಾರ(Machine Shop)ಗಳಲ್ಲಿ ಆಗುವ ಅಪಘಾತಗಳನ್ನು ತಪ್ಪಿಸಲು ಕೆಲವು ಸುರಕ್ಷಣಾ ಕ್ರಮಗಳನ್ನು ಅನುಸರಿಸಬೇಕಾದ ಮುಂಜಾಗರೂಕತೆ ನಿಯಮಗಳನ್ನು ದೊಡ್ಡದಾಗಿ ಪ್ರದರ್ಶಿಸುತ್ತಾರೆ. ಮೊದಲಿಗೆ ಅವು ಬರೀ ಇಂಗ್ಲೀಷ್‌ನಲ್ಲಿ ಮಾತ್ರ ಇರುತ್ತಿತ್ತು. ಕೆಲವು ವರ್ಷಗಳ ಹಿಂದೆ ಅದಕ್ಕೆ ಹಿಂದಿಯೂ ಸೇರಿತು. ಈಗ ನಿಧಾನವಾಗಿ ಕನ್ನಡವೂ ಸೇರುತ್ತಿದೆ. ಅದು ಸ್ವಲ್ಪ ತೃಪ್ತಿ ತರುವ ಸಂಗತಿ. ಅದು ಇನ್ನೂ ಪರಿಣಾಮಕಾರಿಯಾಗಿ ಅನುವಾದದ ಬದಲು ಕನ್ನಡದ ಮೂಲವೇ ಆದರೆ ಸಂತೋಷ. ಉದ್ದಿಮೆಗಳು ನಡೆಸುವ ‘ಗುಣ ಮಾಸ’ ‘ಉತ್ಪಾದಕತೆ ಸಪ್ತಾಹ’ಗಳ ಸಂದರ್ಭದಲ್ಲಿ ನಡೆಯುವ ಚಟುವಟಿಕೆಗಳಲ್ಲಿ ಕನ್ನಡಕ್ಕೂ ಅವಕಾಶ ಸಿಕ್ಕಿದೆ. ಇತ್ತೀಚೆಗೆ ಕಾರ್ಖಾನೆಯ ಚಟುವಟಿಕೆಗೆ ಸಂಬಂಧಿಸಿದಂತೆ ಹಲವು ಹೊಸ ಪರಿಕಲ್ಪನೆಗಳು ರೂಪು ತಳೆಯುತ್ತಿವೆ. ಆಡಳಿತ ವರ್ಗ ಅವುಗಳನ್ನು ಅನುಷ್ಠಾನಕ್ಕೆ ತರಲು ಪ್ರಯತ್ನಿಸುತ್ತಿವೆ. ಅವುಗಳಲ್ಲಿ ಒಂದಾದ (Lean Manufacturing)ಅನ್ನು ಎಚ್.ಎ.ಎಲ್. ‘ಸಂಪೂರ್ಣ ಪರಿವರ್ತನೆ’ಯೆಂಬ ಪುಸ್ತಕ ರೂಪದಲ್ಲಿ ಕನ್ನಡದಲ್ಲಿ ಪ್ರಕಟಿಸಿದೆ. ಹೀಗೆ ಸಣ್ಣ ಪುಟ್ಟ ಕೆಲಸಗಳು ನಡೆದಿವೆ. ಅವೆಲ್ಲ ಶ್ಲಾಘನೀಯ ಪ್ರಯತ್ನಗಳೇ.

ಉದ್ದಿಮೆಗಳಲ್ಲಿ ನಿಜವಾಗಿ ಕನ್ನಡ ಬಳಕೆಗೆ ಬರಬೇಕಿರುವುದು ತಾಂತ್ರಿಕ ಕ್ಷೇತ್ರದಲ್ಲಿ. ಅಲ್ಲಿ ಕನ್ನಡ ಬಳಕೆಗೆ ಬಂದರೆ ಕನ್ನಡವು ಜ್ಞಾನದ ಭಾಷೆಯ ಜೊತೆಗೆ ಅನ್ನದ ಭಾಷೆಯಾಗಬೇಕು ಎಂಬ ಕೂಗಿಗೆ ಶಕ್ತಿ ಬರುತ್ತದೆ. ಉದಾಹರಣೆಗೆ; ವಿಮಾನ ತಯಾರಿಕೆಯಲ್ಲಿ ತೊಡಗಿರುವ ಎಚ್.ಎ. ಎಲ್. ಕಾರ್ಖಾನೆ ವಿಮಾನ ತಯಾರಿಕೆಯ ಎಲ್ಲ ಹಂತಗಳ ತಾಂತ್ರಿಕ ಸಂಗತಿಗಳನ್ನು ಅಂದರೆ ಕೆಲಸದ ಮಾಹಿತಿ. ನಕ್ಷೆ, ಕಾರ್ಯ ಯೋಜನೆ, ಉತ್ಪಾದನಾ ನಿಬಂಧನೆ, ಕಾರ್ಯಪತ್ರ ಎಲ್ಲವ

Writer - ರಾಂ. ನಂ. ಚಂದ್ರಶೇಖರ

contributor

Editor - ರಾಂ. ನಂ. ಚಂದ್ರಶೇಖರ

contributor

Similar News