'ಗೋಧ್ರಾದಲ್ಲಿ ಏನಾಯಿತು ನೆನಪಿದೆಯೇ..?': ಸಚಿವ ಸಿ.ಟಿ ರವಿ ವಿವಾದಾತ್ಮಕ ಹೇಳಿಕೆ
ಬೆಂಗಳೂರು, ಡಿ.20: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಪ್ರತಿಭಟನೆ ವೇಳೆ ಮಾಜಿ ಸಚಿವ ಯು.ಟಿ ಖಾದರ್ ನೀಡಿದ ಹೇಳಿಕೆಗೆ ತಿರುಗೇಟು ನೀಡುವ ಭರದಲ್ಲಿ ಸಚಿವ ಸಿ.ಟಿ ರವಿ ವಿವಾದಾತ್ಮಕ ಹೇಳಿಕೆ ನೀಡಿದ್ದು, ಗೋಧ್ರಾ ಘಟನೆಯನ್ನು ನೆನಪಿಸಿ 'ಗೋಧ್ರಾದಲ್ಲಿ ಏನಾಯಿತು ಎಂಬುದನ್ನು ಯು.ಟಿ ಖಾದರ್ ನೆನಪಿಸಿಕೊಳ್ಳಬೇಕು' ಎಂದು ಎಚ್ಚರಿಸಿದ್ದಾರೆ.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 'ಅವರಂತಹ ಮನಸ್ಥಿತಿಯವರೇ ಗೋಧ್ರಾದಲ್ಲಿ ಬೆಂಕಿ ಹಚ್ಚಿದ್ದಾರೆ. ಅವರ ಮನಸ್ಥಿತಿಯೇ ಕರ ಸೇವಕರನ್ನು ಜೀವಂತವಾಗಿ ಸುಟ್ಟದ್ದು. ಗೋಧ್ರಾದಲ್ಲಿ ರೈಲಿಗೆ ಬೆಂಕಿ ಹಚ್ಚಿದ ನಂತರ ಜನರು ರೊಚ್ಚಿಗೆದ್ದಾಗ ಪರಿಣಾಮ ಏನಾಯಿತು ಎಂಬುವುದು ಖಾದರ್ ಅವರಿಗೆ ತಿಳಿದಿರಬೇಕು. ಗೊತ್ತಿಲ್ಲದಿದ್ದರೆ, ಅದನ್ನು ನೆನಪಿಸಿಕೊಳ್ಳಬೇಕು. ಬಹುಸಂಖ್ಯಾತರ ತಾಳ್ಮೆಯನ್ನು ನೀವು ಪರೀಕ್ಷಿಸುತ್ತಿದ್ದೀರಿ. ಬಹುಸಂಖ್ಯಾತರು ರೊಚ್ಚಿಗೆದ್ದರೆ ಏನಾಗುತ್ತದೆ ಎಂಬುದನ್ನು ನೀವು ತಿಳಿದಿರಬೇಕು. ನಮ್ಮ ಸಹನೆ ದೌರ್ಬಲ್ಯವಲ್ಲ ಎಂದು ಸಿ.ಟಿ ರವಿ ಹೇಳಿದ್ದಾರೆ.