ಸಿಎಎ: ಭಾರತೀಯರ ಹೋರಾಟವಾಗಲಿ

Update: 2019-12-22 10:59 GMT

ಎಲ್ಲಿಯವರೆಗೆ ಈ ಕ್ಯಾಬ್ ವಿರೋಧಿ ಹೋರಾಟ ಮುಸ್ಲಿಮರ ರಕ್ಷಣೆ ಎನ್ನುವ ಒಂದಂಶದ ಕಾರ್ಯಕ್ರಮವಾಗಿರುತ್ತದೆಯೋ ಅಲ್ಲಿಯವರೆಗೂ ಇದು ಸಾರ್ವಜನಿಕರ ಒಳಗೊಳ್ಳುವಿಕೆಯಿಂದಲೂ ವಂಚಿತವಾಗುತ್ತದೆ. ಏಕೆಂದರೆ ಭಾರತದ ಶ್ರೇಣೀಕೃತ ಸಮಾಜವು ಅಲ್ಪಸಂಖ್ಯಾತರ, ತಳ ಸಮುದಾಯಗಳ ಪ್ರತ್ಯೇಕತೆ ಮತ್ತು ತಾರತಮ್ಯ ವಿರೋಧಿ ಚಳವಳಿಗಳಿಗೆ ಸ್ಪಂದಿಸುವುದಿಲ್ಲ ಎನ್ನುವ ಕಟುಸತ್ಯ ಇತಿಹಾಸದಲ್ಲಿಯೂ ದಾಖಲಾಗಿದೆ ಮತ್ತು ವರ್ತಮಾನದಲ್ಲಿ ಯೂ ಚಾಲ್ತಿಯಲ್ಲಿದೆ. ಈ ವಾಸ್ತವ ದ ಹಿನ್ನೆಲೆಯಲ್ಲಿ ನಮ್ಮ ಕಾರ್ಯಯೋಜನೆ ಗಳು ಸಿದ್ಧಗೊಳ್ಳಬೇಕು. ನಾವೆಲ್ಲರೂ ಗುಸ್ಪೈತೀಯರು ಎನ್ನುವ ಸಂಗತಿ ದಲಿತ-ಹಿಂದುಳಿದ ಸಮುದಾಯಗಳಿಗೆ ಮನವರಿಕೆ ಮಾಡಿಕೊಡಬೇಕು. ಇಲ್ಲಿ ಗಾಂಧಿ ಮತ್ತು ಅಂಬೇಡ್ಕರ್ ಮತ್ತೆ ಮತ್ತೆ ಕೇಂದ್ರವಾಗಿ ಮೂಡಿಬರುತ್ತಾರೆ.

ಪೌರತ್ವ ತಿದ್ದುಪಡಿ ಕಾಯ್ದೆ, 2019 (ಕ್ಯಾಬ್) 11, ಡಿಸೆಂಬರ್ 2019ರಂದು ಸಂಸತ್ತಿನ ಎರಡೂ ಸದನಗಳಲ್ಲಿ ಅನುಮೋದನೆಗೊಂಡಿದೆ. 2003ರಲ್ಲಿ ಹುಟ್ಟಿನ ಆಧಾರದಲ್ಲಿ ಪೌರತ್ವ ನೀಡುವ ಸಂಬಂಧ ಅಕ್ರಮ ವಲಸಿಗರು ಎನ್ನುವುದನ್ನು ಸೇರಿಸಲಾಯಿತು. ಈ ತಿದ್ದುಪಡಿ ಈಗಿನ ಕ್ಯಾಬ್ ಮಸೂದೆಗೆ ಮೂಲವಾಗಿದೆ. ಆದರೆ ಆಗಲೂ ಎಲ್ಲಿಯೂ ಧರ್ಮದ ಆಧಾರವೆಂದು ಹೇಳಿರಲಿಲ್ಲ. ಈಗ ಧರ್ಮ ಆಧಾರಿತ ಶಾಸನ ಜಾರಿಗೆ ಬಂದಿದೆ. ಈ ಕ್ಯಾಬ್ ಅನುಸಾರ ಭಾರತದೊಂದಿಗೆ ಗಡಿ ಹಂಚಿಕೊಂಡಿರುವ ಪಕ್ಕದ ಮೂರು ಮುಸ್ಲಿಮ್ ದೇಶಗಳಲ್ಲಿನ (ಪಾಕಿಸ್ತಾನ, ಅಫ್ಘಾನಿಸ್ತಾನ, ಬಾಂಗ್ಲಾ) ಅಲ್ಪಸಂಖ್ಯಾತರಾಗಿರುವ ಹಿಂದೂ, ಸಿಖ್, ಜೈನ್, ಕ್ರಿಶ್ಚಿಯನ್, ಬೌದ್ಧ್ದ, ಪಾರ್ಸಿ ಧರ್ಮೀಯ ನಿರಾಶ್ರಿತರಿಗೆ ಭಾರತದಲ್ಲಿ ಆಶ್ರಯ ನೀಡುತ್ತದೆ. ಮುಸ್ಲಿಮ್‌ರಿಗೆ ಗುಸ್ಪೈತೀಯ ಎಂದು ಹೊಸ ಹಣೆಪಟ್ಟಿ ಹಚ್ಚಲಾಗಿದೆ. ಆದರೆ ಸದ್ಯಕ್ಕೆ ಈ ಕಾಯ್ದೆಗೆ ಭಾರಿ ವಿರೋಧ ವ್ಯಕ್ತವಾಗುತ್ತಿದೆ. ಈಶಾನ್ಯ ರಾಜ್ಯಗಳಲ್ಲಿ ಅದರಲ್ಲೂ ಅಸ್ಸಾಂ ರಾಜ್ಯದಲ್ಲಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಇದು ತಾತ್ಕಾಲಿಕವೋ ಅಥವಾ ಮುಂದುವರೆ ಯುತ್ತದೆಯೋ ಗೊತ್ತಿಲ್ಲ. ಆದರೆ ಈ ಕ್ಯಾಬ್ ಎನ್ನುವ ಜೀವವಿರೋಧಿ ಕಾಯ್ದೆಯನ್ನು ವಿರೋಧಿಸುವುದಕ್ಕೆ ನೂರಾರು ಕಾರಣಗಳಿವೆ. ಈ ಕುರಿತು ಈಗಾಗಲೇ ಸಾಕಷ್ಟು ಚರ್ಚೆಯಾಗಿದೆ. ಲೇಖನಗಳೂ ಪ್ರಕಟಗೊಂಡಿವೆ. ಮೊದಲನೆಯದಾಗಿ ಇದು ಧರ್ಮದ ಆಧಾರದ ಮೇಲೆ ಪ್ರಜೆಗಳಿಗೆ ತಾರತಮ್ಯ ಮಾಡುತ್ತದೆ, ಎರಡನೆಯದಾಗಿ ಧರ್ಮ ನಿರಪೇಕ್ಷಿತ ಆಶಯವನ್ನೊಳಗೊಂಡ, ಜಾತ್ಯತೀತ, ಸಮಾಜವಾದಿ ದೇಶವಾದ ಭಾರತದ ಸಂವಿಧಾನ ನೀತಿಸಂಹಿತೆಗಳಿಗೆ ಇದು ವಿರುದ್ಧವಾಗಿದೆ. ಇದು ನೇರವಾಗಿ ಪರಿಚ್ಚೇಧ 14, 21, 25ರ ಉಲ್ಲಂಘನೆ ಯಾಗಿದೆ. ಮೇಲ್ನೋಟಕ್ಕೆ ಕಾಣುವಂತೆ ಇದು ಸಾಂವಿಧಾನಿಕವಾಗಿ ಮಾನ್ಯಗೊಳ್ಳುವುದಿಲ್ಲ. ಕ್ಯಾಬ್ ಕಾಯ್ದೆ ಅನುಷ್ಠಾನಗೊಂಡರೆ ಭಾರತದ ಸೆಕ್ಯುಲರ್ ಪರಂಪರೆ ಕೊನೆಗೊಳ್ಳುತ್ತದೆ ಮತ್ತು ಇದು ಕ್ರಮೇಣ ಹಿಂದೂರಾಷ್ಟ್ರವಾಗುತ್ತ ದಾಪುಗಾಲಿಡಲು ಸಹಕಾರಿಯಾಗುತ್ತದೆ. ಮೂರನೆಯದಾಗಿ ಭಾರತ ದೊಂದಿಗೆ ಗಡಿ ಹಂಚಿಕೊಂಡಿರುವ ಮ್ಯಾನ್ಮಾರ್ ದೇಶದಲ್ಲಿನ ಅಲ್ಪಸಂಖ್ಯಾತರಾದ ರೋಹಿಂಗ್ಯಾ ಮುಸ್ಲಿಮ್‌ರನ್ನು, ಶ್ರೀಲಂಕಾದಲ್ಲಿ ಅಲ್ಪಸಂಖ್ಯಾತರಾದ ತಮಿಳು ಸಮುದಾಯವನ್ನು ಈ ಕಾಯ್ದೆಯು ಪರಿಗಣಿಸಿಲ್ಲ. ಅಂದರೆ ಧರ್ಮದ ಕಾರಣಕ್ಕಾಗಿ ದೌರ್ಜನ್ಯಕ್ಕೊಳಗಾದ ಬಾಂಗ್ಲಾ ದೇಶದ ಹಿಂದೂ ಭಾರತದಲ್ಲಿ ಪೌರತ್ವ ಪಡೆಯಬಹುದು ಆದರೆ ಅದೆ ಧರ್ಮದ ಕಾರಣಕ್ಕಾಗಿ ದೌರ್ಜನ್ಯಕೊಳಗಾದ ಮಯ್ಮಾರ್‌ನ ರೋಹಿಂಗ್ಯಾ ಮುಸ್ಲಿಮರಿಗೆ ಈ ಅವಕಾಶವಿಲ್ಲ. ಪಾಕಿಸ್ತಾನದ ಹಿಂದೂ ಭಾರತ ದಲ್ಲಿ ಆಶ್ರಯ ಪಡೆಯಬಹುದು ಆದರೆ ಅದೇ ದೇಶದ ಅಹ್ಮದೀಯ ಧರ್ಮದವನಿಗೆ ಅವಕಾಶ ವಿಲ್ಲ. ನಾಲ್ಕನೆಯದಾಗಿ ಪಕ್ಕದ ದೇಶಗಳಲ್ಲಿನ ಅಲ್ಪ ಸಂಖ್ಯಾತರು ಕೇವಲ ಧಾರ್ಮಿಕ ಕಾರಣಗಳಿಗೆ ಮಾತ್ರ ದೌರ್ಜನ್ಯಕ್ಕೆ ಒಳಗಾಗುವುದಿಲ್ಲ, ಜೊತೆಗೆ ಭಾಷೆಯ ಕಾರಣಕ್ಕೆ ಶ್ರೀಲಂಕಾ ತಮಿಳರು, ರಾಜಕೀಯ ಕಾರಣಕ್ಕೆ ಪಾಕಿಸ್ತಾನದ ಅಹ್ಮದೀಯರು ಮತ್ತು ಟಿಬೆಟ್‌ನ ಪ್ರಜೆಗಳು, ಸಾಮಾಜಿಕ ಕಾರಣಕ್ಕೆ ಬಾಂಗ್ಲಾ ದೇಶದ ಹೋರಾಟಗಾರರು ದೌರ್ಜನ್ಯಕ್ಕೆ ಒಳಗಾಗುತ್ತಾರೆ. ಆದರೆ ಇವರಿಗೆ ಕ್ಯಾಬ್ ಅಡಿಯಲ್ಲಿ ಆಶ್ರಯ ದೊರಕುವುದಿಲ್ಲ. ಅವರು ಅಕ್ರಮ ವಲಸಿಗರೆಂದು ಪರಿಗಣಿಸಿ ಯಾತನಾ ಶಿಬಿರಗಳಿಗೆ ತಳ್ಳಲಾಗುತ್ತದೆ. ರಕ್ಷಣೆ ಬಯಸಿ ಬಂದವರಿಗೆ ಅವನ/ಅವಳ ಧರ್ಮವನ್ನು ಸೂಚಿಸಿ ಆಶ್ರಯ ನಿರಾಕರಿಸುವುದು ದೇಶದ ಅನೈತಿಕ, ಕೀಳು ಮನಃಸ್ಥಿತಿಯ ದ್ಯೋತಕವಾಗಿದೆ. ಈ ಕ್ಯಾಬ್‌ನಿಂದ ಈವರೆಗಿನ ವೈವಿಧ್ಯತೆ ಸಂಪೂರ್ಣ ನಾಶಗೊಳ್ಳಲಿದೆ. ಕೇವಲ ಧರ್ಮವನ್ನು ಮಾತ್ರ ಪರಿಗಣಿಸಿರುವುದು, ಧರ್ಮದ ಆಧಾರದಲ್ಲಿ ಪ್ರತ್ಯೇಕತೆ ಮತ್ತು ತಾರತಮ್ಯ ಮಾಡುವುದು ಹಿಂದೂ ರಾಷ್ಟ್ರವನ್ನು ಕಟ್ಟಬಯಸುವ ಆರೆಸ್ಸೆಸ್‌ನ ಸಿದ್ಧಾಂತದ ಪ್ರತಿಪಾದನೆಯಾಗಿದೆ. ಸರ್ವಧರ್ಮ ಸಾಮರಸ್ಯದಲ್ಲಿ ಜೀವಿಸುತ್ತಿದ್ದ ಭಾರತ ದೇಶವು ಮುಂದಿನ ದಿನ ಗಳಲ್ಲಿ ಹಿಂದೂ ಧರ್ಮದ ಅಟ್ಟಹಾಸದಲ್ಲಿ ನರಳಬೇ ಕಾಗುತ್ತದೆ. ಇದು 1930-40ರ ದಶಕದ ಹಿಟ್ಲರ್ ಜರ್ಮನಿಯ ಪ್ರತಿರೂಪವಾಗಲಿದೆ ಮತ್ತು ಇದು ಅತಿರೇಕ ಹೇಳಿಕೆಯಂತೂ ಅಲ್ಲ. ಇಂತಹ ಅಮಾನವೀಯ, ಭಯಾನಕ ಕಾಯ್ದೆಯನ್ನು ಹಠತೊಟ್ಟು ಜಾರಿಗೊಳಿಸಿರುವ ಮೋದಿ-ಶಾ ಸರಕಾರವು ಆ ಮೂಲಕ ಭಾರತವನ್ನು ನಾಜಿ ಜರ್ಮನಿಗೆ ರೂಪಾಂತರ ಮಾಡಲಿದೆ. ಇದು ಇದು ವರೆಗಿನ ಒಳಗೊಳ್ಳುವಿಕೆ ಮತ್ತು ಸಮಾನತೆಯ ಸ್ವರೂಪವನ್ನು ಸಂಪೂರ್ಣ ಬದಲಾಯಿಸುತ್ತದೆ. ಪ್ರಜಾಪ್ರಭುತ್ವದಲ್ಲಿ ನೇರವಾಗಿ ಸವಾಲುಗಳನ್ನು ಎದುರಿಸದೆ ಪಲಾಯನವಾದಿಗಳಂತೆ ಈ ರೀತಿ ಕರಾಳ ಶಾಸನಗಳ ಮೂಲಕ ಆಡಳಿತ ನಡೆಸುವುದನ್ನು ಯಾವ ಭಾಷೆಯಲ್ಲಿ ಖಂಡಿಸಬೇಕು?

ಮತ್ತು ಈ ಕ್ಯಾಬ್ ಕಾಯ್ದೆಗೂ ಎನ್‌ಆರ್‌ಸಿ (ರಾಷ್ಟ್ರೀಯ ಪೌರತ್ವ ನೋಂದಣಿ) ಕಾಯ್ದೆಗೂ ಸಂಬಂಧವಿದೆ. ಅಂದರೆ ಎನ್‌ಆರ್‌ಸಿ ಅಡಿಯಲ್ಲಿ ಅಕ್ರಮ ವಲಸಿಗರು, ನುಸುಳುಕೋರರು, ವಿದೇಶಿಯರು ಎಂದು ಪರಿಗಣಿಸಲ್ಪಟ್ಟ ಹಿಂದೂಗಳು ಕ್ಯಾಬ್ ಕಾಯ್ದೆ ಅಡಿಯಲ್ಲಿ ಸಕ್ರಮಗೊಳ್ಳುತ್ತಾರೆ. ಅವರಿಗೆ ಆಶ್ರಯ ದೊರಕುತ್ತದೆ. ಆದರೆ ಅದೇ ಎನ್‌ಆರ್‌ಸಿ ಅಡಿಯಲ್ಲಿ ಅಕ್ರಮ ವಲಸಿಗರು ಎಂದು ಪರಿಗಣಿಸಲ್ಪಟ್ಟ ಮುಸ್ಲಿಮ್‌ರಿಗೆ ಈ ಕ್ಯಾಬ್ ಕಾಯ್ದೆ ಅಡಿಯಲ್ಲಿಯೂ ಅಕ್ರಮ ವಲಸಿಗರಾಗುತ್ತಾರೆ ಮತ್ತು ನಿರಾಶ್ರಿತರ ಯಾತನಾ ಶಿಬಿರಗಳಲ್ಲಿ ನರಳಬೇಕಾಗುತ್ತದೆ. ಮುಂದಿನ ದಿನಗಳಲ್ಲಿ ಗೃಹಮಂತ್ರಿ ಅಮಿತ್ ಶಾ ಅವರು ದೇಶಾದ್ಯಾಂತ ಪ್ರವಾಸ ಮಾಡಿ ಬಹುಸಂಖ್ಯಾತರಿಗೆ ‘ನಿಮಗೆ ಸಂಪೂರ್ಣ ರಕ್ಷಣೆ ದೊರಕಿದೆ ಈ ದೇಶ ನಿಮ್ಮದು’ ಎನ್ನುವ ಭರವಸೆ ಕೊಡುತ್ತ ಅಡ್ಡಾಡುತ್ತಾರೆ ಮತ್ತು ಅದೇ ಸಂದರ್ಭದಲ್ಲಿ ಗುಸ್ಪೈತೀಯ (ಕ್ಯಾಬ್ ಕಾಯ್ದೆ ಮುಸ್ಲಿಮ್‌ರಿಗೆ ಕೊಟ್ಟ ಹೆಸರು)ರಿಗೆ ಇನ್ನು ನಿಮ್ಮ ಆಟ ಮುಗಿಯಿತು, ನಿಮಗಾಗಿ ಯಾತನಾ ಶಿಬಿರಗಳಿವೆ ಎಂದು ಎಚ್ಚರಿಕೆಯೂ ಕೊಡಲಿದ್ದಾರೆ.

ಕತ್ತಲೆಗೆ ಹತ್ತು ತಲೆ, ನೂರಾರು?

ಗುಸ್ಪೈತೀಯ ಎನ್ನುವ ಹೊಸ ಹಣೆಪಟ್ಟಿಯಿಂದ ಸಂಪೂರ್ಣವಾಗಿ ಅತಂತ್ರರಾದ ಮುಸ್ಲಿಮ್ ಸಮುದಾಯ ಎರಡು ಬಗೆಯಲ್ಲಿ ಪ್ರತಿಕ್ರಿಯಿಸುತ್ತಿದೆ. ಒಂದು ಈಗಾಗಲೆ ತಮ್ಮ ಬಳಿ ಇರುವ ದಾಖಲೆಗಳನ್ನು ಮರುಪರಿಶೀಲನೆ ನಡೆಸುವುದು ಸಾಧ್ಯವಾದರೆ ಪರಿಷ್ಕ್ಕರಿಸಿಕೊಳ್ಳುವುದು (ಯಾಕೆಂದರೆ ಹಿರಿಯಣ್ಣ ಅಮಿತ್ ಶಾ ದೇಶಾದ್ಯಂತ ಸಂಚರಿಸಿ ಈ ಗುಸ್ಪೈತೀಯರನ್ನು ಪತ್ತೆ ಹಚ್ಚಲಿದ್ದಾರೆ, ವಿಚಾರಣೆಗೆ ಗುರಿಪಡಿಸಲಿದ್ದಾರೆ). ಸಂಪೂರ್ಣವಾಗಿ ಈ ಬಹುಸಂಖ್ಯಾವಾದದ ಮತೀಯವಾದಕ್ಕೆ ಶರಣಾಗಿರುವ ಬಹುಪಾಲು ಅಧಿಕಾರಶಾಹಿಯು ಮುಸ್ಲಿಮ್‌ರನ್ನು ಯಾವ ಬಗೆಯಲ್ಲಿ ಹಿಂಸಿಸಬಹುದು ಎನ್ನುವುದು ಊಹಿಸಿಕೊಳ್ಳುವುದು ಕಷ್ಟವಲ್ಲ. ಎರಡನೆಯದಾಗಿ ಸ್ವತಂತ್ರವಾಗಿ ಮತ್ತು ಪ್ರಗತಿಪರ ಸಂಘಟನೆಗಳ ಜೊತೆಗೂಡಿ ವ್ಯಾಪಕವಾಗಿ ಪ್ರತಿಭಟಿಸುವುದು.

 ಕ್ಯಾಬ್ ಕಾಯ್ದೆ ವಿರುದ್ಧ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯ ವಿವಿ ಮತ್ತು ಅಲಿಗಡ ಮುಸ್ಲಿಮ್ ವಿವಿಯಲ್ಲಿ ತೀವ್ರ ಸ್ವರೂಪದ ಪ್ರತಿಭಟನೆ ನಡೆದಿದೆ. ವಿವಿ ಕ್ಯಾಂಪಸ್‌ನೊಳಗೆ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳು, ಶಿಕ್ಷಕರ ಮೇಲೆ ಲಾಠಿ ಪ್ರಯೋಗ ಮಾಡಲಾಗಿದೆ, ಟಿಯರ್ ಗ್ಯಾಸ್ ಸಿಡಿಸಲಾಗಿದೆ. ಈ ಕ್ಯಾಬ್ ಕಾಯ್ದೆಯ ಬಲಿಪಶುಗಳಾಗುವವರು ಮುಸ್ಲಿಮ್ ಸಮುದಾಯದವರು ಎನ್ನುವ ನಂಬಿಕೆಯೂ ಇಲ್ಲಿ ಪ್ರದಾನವಾಗಿದೆ. ಈ ಎರಡೂ ವಿವಿಗಳು ಐತಿಹಾಸಿಕವಾಗಿ ಮುಸ್ಲಿಮ್ ಸಮುದಾಯದ ತಳಹದಿಯ ಮೇಲೆ ಕಟ್ಟಲ್ಪಟ್ಟಿವೆ. ಅವರ ಆತಂಕ ಸಹಜ. ಆದರೆ ದೇಶದ ಇತರ ವಿಶ್ವವಿದ್ಯಾನಿಲಯಗಳಲ್ಲಿ ಈ ಮಟ್ಟದ ಪ್ರತಿಭಟನೆ, ಪ್ರತಿರೋಧ ಕಂಡುಬರುತ್ತಿಲ್ಲ. ಯಾಕೆಂದರೆ ಅಲ್ಲಿನ ವಿದ್ಯಾರ್ಥಿಗಳು, ಶಿಕ್ಷಕರು ಈ ಕ್ಯಾಬ್, ಎನ್‌ಆರ್‌ಸಿ ಕಾಯ್ದೆಗಳು ಮುಸ್ಲಿಮ್ ಸಮುದಾಯಕ್ಕೆ ಅನ್ವಯಿಸುತ್ತವೆ ನಮಗಲ್ಲ ಎಂಬಂತೆ ಮುಗುಮ್ಮಾಗಿದ್ದಾರೆಯೇ? ಏಕೆಂದರೆ ಈ ಗುಸ್ಪೈತೀಯರು ಬೇಕಿದ್ದರೆ ತಮ್ಮ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲಿ ನಾವ್ಯಾಕೆ ಮಧ್ಯಪ್ರವೇಶ ಮಾಡಬೇಕು ಎನ್ನುವ ನೀಚ ಮನಃಸ್ಥಿತಿ ನಮ್ಮ ಉನ್ನತ ಶಿಕ್ಷಣ ವಲಯದಲ್ಲಿ ವ್ಯಾಪಕವಾಗಿ ಹಬ್ಬಿಕೊಂಡಿದೆ. ಎಲ್ಲರೂ ಜಾಣ ಮೌನದಲ್ಲಿದ್ದಾರೆ. ಗುಸ್ಪೈತೀಯ ಮುಸ್ಲಿಮರು ಆತಂಕದಲ್ಲಿದ್ದಾರೆ ಮತ್ತು ದಿಕ್ಕುತೋಚದೆ ಅಸಹಾಯತೆಯಲ್ಲಿ ನವೆಯುತ್ತಿದ್ದಾರೆ. ಆದರೆ ಎನ್‌ಆರ್‌ಸಿ ಮತ್ತು ಕ್ಯಾಬ್ ಎನ್ನುವ ಎರಡು ಕರಾಳ ಶಾಸನಗಳಿಗೆ ಪ್ರತಿಕ್ರಿಯಿಸದ ಬಹುಸಂಖ್ಯಾತರ ಮೌನ ಮತ್ತು ನಿರ್ಲಕ್ಷ ಕಳವಳಕಾರಿಯಾಗಿದೆ. ಮುಕುಲ್ ಕೇಶವನ್ ಅವರು ಈ ಕ್ಯಾಬ್ ಮತ್ತು ಎನ್‌ಆರ್‌ಸಿ ಶಾಸನಗಳ ಉದ್ದೇಶವೆ ಐಕ್ಯತೆಯನ್ನು ಧ್ವಂಸಗೊಳಿಸುವುದು. ಬಹುಸಂಖ್ಯಾತರಲ್ಲಿ ನಾವು ಸುರಕ್ಷಿತರು ಎನ್ನುವ ಭಾವನೆ ಮೂಡಿಸಿದರೆ ಮುಸ್ಲಿಮ್ ಸಮುದಾಯಕ್ಕೆ ನಮಗೆ ಇನ್ನು ರಕ್ಷಣೆ ಇಲ್ಲ ಎನ್ನುವ ತಬ್ಬಲಿತನ ಮೂಡಿಸಿದೆ ಎಂದಿದ್ದಾರೆ. ಆದರೆ ಕ್ಯಾಬ್ ಶಾಸನ ಕೇವಲ ಮುಸ್ಲಿಮರಿಗೆ ಮಾತ್ರ ಅನ್ವಯವಾಗುವುದಿಲ್ಲ. ಮುಂದಿನ ದಿನಗಳಲ್ಲಿ ಇಲ್ಲಿನ ಮಹಿಳೆಯರು, ಆದಿವಾಸಿಗಳು, ದಲಿತರೂ ಸಹ ಈ ಕಾಯ್ದೆಯ ಪ್ರತಿಗಾಮಿ ಉದ್ದೇಶಗಳಿಗೆ ಬಲಿಪಶುಗಳಾಗುತ್ತಾರೆ. ಇದನ್ನು ಸಂಬಂಧಪಟ್ಟವರಿಗೆ ಅರಿವು ಮೂಡಿಸುವುದು ಹೇಗೆ? ಬಿಜೆಪಿ ಪಕ್ಷ ಮತ್ತು ಸಂಘ ಪರಿವಾರ ಒಕ್ಕೊರಲಿನಿಂದ ಕ್ಯಾಬ್ ಅನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಆದರೆ ಪ್ರಜ್ಞಾವಂತ ನಾಗರಿಕರು ಛಿದ್ರ ಛಿದ್ರವಾಗಿದ್ದಾರೆ. ಚಿಂತಕ ಸುಹಾಸ್ ಪಲಿಸ್ಕರ್ ಅವರು ಬಹಳ ಕಾಲದಿಂದ ಸೆಕ್ಯುಲರ್ ರಾಜಕಾರಣವು ನೈತಿಕ ಮೌಲ್ಯಗಳನ್ನು, ಸಂವಿಧಾನ ನೀತಿಸಂಹಿತೆಗಳಿಗೆ ತನ್ನ ಬದ್ಧತೆಯನ್ನು ಪ್ರದರ್ಶಿಸುತ್ತಲೇ ಇದೆ. ಆದರೆ ಜನ ಸಮುದಾಯದ ಮನಸ್ಸು, ಮೆದುಳಿನಲ್ಲಿ ಈ ಮೌಲ್ಯಗಳನ್ನು, ಬದ್ಧತೆಯನ್ನು ತುಂಬುವಲ್ಲಿ ಮತ್ತು ಮನವರಿಕೆ ಮಾಡುವಲ್ಲಿ ಸೋತಿದ್ದಾರೆ ಅಥವಾ ಈ ಕುರಿತು ತಲೆಕೆಡೆಸಿಕೊಂಡಿಲ್ಲ. ಸೈದ್ಧಾಂತಿಕ ಮತ್ತು ಬೌದ್ಧಿಕ ಸಂಪನ್ಮೂಲಗಳನ್ನು ಸಾಂಕೇತಿಕವಾಗಿ ಪ್ರದರ್ಶಿಸುತ್ತಿದ್ದಾರೆ, ತಮ್ಮ ಪ್ರೇಕ್ಷಕರನ್ನು ಹೆಕ್ಕಿಕೊಳ್ಳುತ್ತಿದ್ದಾರೆ. ಅಂಬೇಡ್ಕರ್ ಮತ್ತು ಗಾಂಧಿಯನ್ನು ಸೀಮಿತ ಉದ್ದೇಶಕ್ಕೆ, ಅನುಕೂಲಕರವಾಗಿ ಮಾತ್ರ ಬಳಸಿಕೊಳ್ಳುತ್ತಿದ್ದಾರೆ ಮತ್ತು ಸಾರ್ವಜನಿಕರು ವಿಕೃತಿ, ವಂಚನೆ ಮತ್ತು ಮಿಥ್ಯೆಗಳಿಗೆ ಏಕಾಂಗಿಯಾಗಿ ಮುಖಾಮುಖಿಯಾಗುವಂತೆ ಗುರಿಪಡಿಸುತ್ತಿದ್ದಾರೆ. ದೊಡ್ಡ ಸಂಖ್ಯೆಯ ಸಾರ್ವಜನಿಕರು ಈ ಕ್ಯಾಬ್ ಕುರಿತು ತಲೆಕೆಡಿಸಿಕೊಂಡಿಲ್ಲದಿರುವುದು ಆಶ್ಚರ್ಯವೇನಲ್ಲ ಮತ್ತು ಈ ಕ್ಯಾಬ್ ಶಾಸನವು ಸುಧಾರಣೆ ಸ್ವರೂಪದ್ದಾಗಿದೆ, ನಿಷ್ಪಕ್ಷಪಾತವಾಗಿದೆ, ಸಂವಿಧಾನ ನೀತಿಸಂಹಿತೆಗಳನ್ನು ಉಲ್ಲಂಘಿಸಿಲ್ಲ, ಗಾಂಧಿ, ಅಂಬೇಡ್ಕರ್ ಸಿದ್ಧಾಂತಗಳನ್ನು ಮೀರಿ ಹೋಗಿಲ್ಲ ಎಂದು ನಂಬಿದ್ದಾರೆ. ಸಾರ್ವಜನಿಕ ಕಥನವನ್ನು ಈ ರೀತಿಯಲ್ಲಿ ಕಪಟತನದಿಂದ ಹೈಜಾಕ್ ಮಾಡಿರುವುದು ಭಾರತದ ಇತಿಹಾಸದಲ್ಲಿ ಹಿಂದೆಂದೂ ನಡೆದಿಲ್ಲ. ಗಣ್ಯ ನಾಗರಿಕರು ಈ ಕ್ಯಾಬ್ ಶಾಸನವನ್ನು ವಿರೋಧಿಸಿ ಪತ್ರ ಬರೆದು ಸಹಿ ಹಾಕಿದ್ದಾರೆ, ಬುದ್ಧ್ದಿಜೀವಿಗಳು ಮಾಧ್ಯಮಗಳಲ್ಲಿ ಬರೆಯುತ್ತಿದ್ದಾರೆ, ಸಣ್ಣ ಸಣ್ಣ ಗುಂಪುಗಳನ್ನು ಕಟ್ಟಿಕೊಂಡಿರುವ ಸಂಘಟನೆಗಳು ಸಾರ್ವಜನಿಕವಾಗಿ ಕೆಲ ಗಂಟೆಗಳ ಕಾಲ ಪ್ರತಿಭಟನೆ ಮಾಡುತ್ತಿದ್ದಾರೆ ಮತ್ತು ಸೀಮಿತ ನೆಲೆಯಲ್ಲಿ ಸಾರ್ವಜನಿಕ ಅಭಿಪ್ರಾಯವನ್ನು ಕ್ರೋಡೀಕರಿಸುತ್ತಿದ್ದಾರೆ, ನಾಗರಿಕ ಅಸಹಕಾರ, ಪ್ರತಿರೋಧದಂತಹ ವೈಯಕ್ತಿಕ ಮಟ್ಟದ ಪ್ರತಿಕ್ರಿಯೆಗಳಿವೆ. ಇವೆಲ್ಲವೂ ಬೌದ್ಧಿಕವಾಗಿ ಮತ್ತು ನೈತಿಕವಾಗಿ ಮಹತ್ವವುಳ್ಳ ಸಂಗತಿಗಳು. ಆದರೆ ಇವೆಲ್ಲವಕ್ಕೂ ರಾಜಕೀಯ ಹಿಡಿತದ, ನಡೆಗಳ ಕೊರತೆ ಇದೆ. ಒಂದು ಈ ಮಾದರಿಯ ಪ್ರತಿರೋಧಗಳು ಪ್ರತ್ಯೇಕಗೊಂಡಿವೆ, ಸಾರ್ವಜನಿಕರಿಂದ ಬೇರ್ಪಟ್ಟಿವೆ. ಎರಡನೆಯದಾಗಿ ಈಗಿನ ಆಡಳಿತ ನಡೆಸುತ್ತಿರುವ ಸರಕಾರವು ಇಂತಹ ಗಂಭೀರ ಪ್ರತಿರೋಧಗಳಿಗೆ ಸಂವೇದಿಸುವುದಿಲ್ಲ. ಮೂರನೆಯದಾಗಿ ಈ ಎಲ್ಲಾ ಕಾರಣಗಳಿಂದ ಈ ಪ್ರತಿಭಟನೆಗಳಿಗೆ ಜನ ಸಮೂಹದ ಬೆಂಬಲವಿರುವುದಿಲ್ಲ ಎಂದು ಮಾರ್ಮಿಕವಾಗಿ ಹೇಳಿದ್ದಾರೆ. ಇದು ನಿಜ. ಇಲ್ಲಿನ ಜನಪರ ಚಳವಳಿಗಳು ಬಹುಸಂಖ್ಯಾತ ಜನರ ಬೆಂಬಲದ ಕೊರತೆಯಿಂದ ಏಕಾಂಗಿಯಾಗಿರುವುದು ಈ ಮೋದಿ-ಶಾ ಜೋಡಿಗೆ ಅನುಕೂಲಕರವಾಗಿದೆ. ಇವರಿಗೆ ಇದು ಗೊತ್ತಿದೆ. ಈ ಕ್ಯಾಬ್ ಮತ್ತು ಎನ್‌ಆರ್‌ಸಿಯಂತಹ ಕರಾಳ ಶಾಸನಗಳನ್ನು ವಿರೋಧಿಸುವವರ ಪ್ರಮಾಣ ಶೇ.10-15ರಷ್ಟ್ಟಿದೆ ಎಂಬುದನ್ನು ಮನಗಂಡಿರುವ ಮೋದಿ-ಶಾ ಜೋಡಿ ತಮ್ಮ ಮತಬ್ಯಾಂಕ್ ಆದ ಶೇ.40 ಪ್ರಮಾಣದ ಜನಸಂಖ್ಯೆಯನ್ನು ಉದ್ದೇಶಿಸಿ ರಾಜಕೀಯ ಮಾಡುತ್ತಾರೆ. ಈ ಮತಬ್ಯಾಂಕ್ ಕೊಂಚವೂ ಕಡಿಮೆಯಾಗಬಾರದು ಮತ್ತು ಅದರ ಪ್ರಮಾಣ ಇನ್ನಷ್ಟು ವೃದ್ಧಿಸಬೇಕು ಎಂಬುದೇ ಇವರ ಗುರಿಯಾಗಿದೆ. ಮುಂದಿನ ವರ್ಷ ಬಿಹಾರ್ ಮತ್ತು ದಿಲ್ಲಿ ರಾಜ್ಯಗಳಲ್ಲಿ ಚುನಾವಣೆ ನಡೆಯಲಿದೆ. ಇವರ ಬತ್ತಳಿಕೆಯಲ್ಲಿ ಕಲಮು 370 ರದ್ಧತಿ ಮತ್ತು ಆ ಮೂಲಕ ಮುಸ್ಲಿಮರಿಗೆ ಪಾಠ ಕಲಿಸಿದ ಹೆಗ್ಗಳಿಕೆ ಮತ್ತು ಕ್ಯಾಬ್ ಮೂಲಕ ಈ ಗುಸ್ಪೈತೀಯರನ್ನು ದೇಶದಿಂದ ಹೊರಗೋಡಿಸುವ ಪ್ರಣಾಳಿಕೆಯೊಂದಿಗೆ ಚುನಾವಣಾ ಪ್ರಚಾರಕ್ಕೆ ದುಮುಕುತ್ತಾರೆ, ಜೊತೆಗೆ ರಾಮ ಮಂದಿರ ನಿರ್ಮಾಣದ ಅಜೆಂಡಾ ಸಹ ಬಲ ತುಂಬುತ್ತದೆ. ಮೋದಿ-ಶಾ ಜೋಡಿಯ ಈ ರಣತಂತ್ರಕ್ಕೆ ಪ್ರತಿಯಾಗಿ ವಿರೋಧ ಪಕ್ಷಗಳ ಕಾರ್ಯತಂತ್ರ ಯಾವ ಮಟ್ಟದಲ್ಲಿದೆ ಎನ್ನುವುದನ್ನು ಗಮನಿಸಿದಾಗ ನಿರಾಶೆ ಮೂಡಿಸುತ್ತದೆ. ಅವರಲ್ಲಿ ಆತ್ಮಸ್ಥೈರ್ಯವೇ ಕುಂದಿದೆ. ಈ ಬಹುಸಂಖ್ಯಾತ ಮತಾಂಧತೆಗೆ ಪ್ರತಿರೋಧವಾಗಿ ವಿರೋಧ ಪಕ್ಷಗಳಲ್ಲಿ ರಚನಾತ್ಮಕ ಹಮ್ಮುಗಳಿಲ್ಲ. ಅವರ ಬಳಿ ಸಾರ್ವಜನಿಕ ಬೆಂಬಲವಿಲ್ಲ ಮತ್ತು ಮುಖ್ಯವಾಗಿ ಅವರೊಳಗೆ ಒಗ್ಗಟ್ಟಿಲ್ಲ. ಕೇರಳ, ಪಶ್ಚಿಮ ಬಂಗಾಳ, ಪಂಜಾಬ್‌ನಲ್ಲಿರುವ ವಿರೋಧ ಪಕ್ಷಗಳ ಸರಕಾರಗಳು ಈ ಕ್ಯಾಬ್ ಶಾಸನವನ್ನು ತಮ್ಮ ರಾಜ್ಯಗಳಲ್ಲಿ ಜಾರಿಗೊಳಿಸುವುದಿಲ್ಲ ಎಂದು ಹೇಳಿವೆ. ಆದರೆ ಇದು ದುರ್ಬಲ ಪ್ರತಿಕ್ರಿಯೆ ಎಂದೇ ಹೇಳಬೇಕಾಗುತ್ತದೆ ಮತ್ತು ಇದಕ್ಕೆ ಕಾನೂನಿನ ಬೆಂಬಲ ದೊರಕುವುದಿಲ್ಲ.

ಸಾರ್ವಜನಿಕ ಪ್ರತಿಭಟನೆ ಮಾಡುತ್ತಿರುವ ಅಸ್ಸಾಂ ಮತ್ತು ತ್ರಿಪುರಾ ರಾಜ್ಯಗಳಲ್ಲಿ ಪಕ್ಕದ ಬಾಂಗ್ಲಾ ಮತ್ತು ಪಾಕಿಸ್ತಾನ ದೇಶದ ನುಸುಳುಕೋರರಿಗೆ ತಮ್ಮ ರಾಜ್ಯಗಳು ಆಶ್ರಯ ಕೊಡುತ್ತವೆ ಎನ್ನುವ ಒಂದೇ ಕಾರಣದಿಂದ ವಿರೋಧಿಸುತ್ತಿವೆೆ. ಇದು ಕೇವಲ ಸ್ಥಳೀಯರು ವರ್ಸಸ್ ಹೊರಗಿನವರು ಎನ್ನುವ ಅಂಶ ಮಾತ್ರವಿದೆ. ಈ ಪ್ರತಿರೋಧದಲ್ಲಿ ಮುಸ್ಲಿಮ್ ಸಮುದಾಯವು ತಾರತಮ್ಯಕ್ಕೆ ಒಳಗಾಗಿದೆ ಎನ್ನುವ ನೈತಿಕ ಪ್ರಜ್ಞೆಯ ಅಂಶ ಕಡಿಮೆ ಇದೆ. ಆದರೂ ಸಹ ಈಶಾನ್ಯ ರಾಜ್ಯಗಳ ಆ ಹೋರಾಟದ ತಿರುಳು ಮಿಕ್ಕ ರಾಜ್ಯಗಳಿಗೂ ಸ್ಫೂರ್ತಿಯಾಗಬೇಕು

ಮುಂದೇನು

ಈಗಾಗಲೇ ವಿಭಜನೆಗೊಂಡಿರುವ ಹಿಂದೂ-ಮುಸ್ಲಿಮ್ ಸಂಬಂಧವು ಈ ಕ್ಯಾಬ್ ಅನುಷ್ಠಾನಗೊಂಡರೆ ಮತ್ತಷ್ಟು ವಿಕೃತಿಗೆ ಹೊರಳಿಕೊಳ್ಳಲಿದೆ. ಮುಸ್ಲಿಮರ ಗೆಟ್ಟೋಗಳು ಹೆಚ್ಚಲಿದೆ. ಈಗಾಗಲೇ ಬೌದ್ಧ್ದಿಕ ಪ್ರೌಢತೆ ಮತ್ತು ಸಾಮಾಜಿಕ ಸಮಾನತೆಯ ಕೊರತೆಯಿಂದ ಅತಂತ್ರವಾಗಿರುವ ಮುಸ್ಲಿಮ್ ಸಮುದಾಯಕ್ಕೆ ಲಿಬರಲ್ ಮತ್ತು ಸೆಕ್ಯುಲರ್ ನಾಯಕತ್ವ ಇನ್ನು ಶೂನ್ಯವಾಗುತ್ತದೆ ಎನ್ನುವ ದುರಂತ ಸುಳ್ಳಲ್ಲ. ಸುಹಾಸ್ ಪಲಿಸ್ಕರ್ ಹೇಳುವಂತೆ ಪ್ರಜಾಪ್ರಭುತ್ವದ ಮೌಲ್ಯಗಳಿಗಾಗಿ ನಡೆಯುವ ಹೋರಾಟಗಳು ನಿರ್ವಾತದಲ್ಲಿ ಸಕ್ರಿಯವಾಗಿದ್ದರೆ ಪ್ರಯೋಜನವಿಲ್ಲ. ಸುಹಾಸ್ ಅವರು ಮುಂದುವರಿದು ಸುಧಾರಣಾವಾದದ ಮಿತಿಯೆಂದರೆ ಅದು ಆದರ್ಶಗಳಿಗೆ ಅಗತ್ಯವಾದ ರಾಜಕೀಯ ಗೆಲುವಿಗಾಗಿ ಅಮೂರ್ತ ವಿಚಾರವಾದವನ್ನು ನಿರೀಕ್ಷಿಸುತ್ತದೆ. ಆದರೆ ಪ್ರಜಾತಾಂತ್ರಿಕ ಹೋರಾಟಗಳು ಇಲ್ಲಿ ಮತ್ತು ಈಗಲೇ ಎನ್ನುವುದರ ಮೇಲೆ ಅವಲಂಬಿತವಾಗಿರುತ್ತದೆ. ಆದರ್ಶಗಳು ಗೌಣವಾಗಿರುತ್ತದೆ ಮತ್ತು ಈ ಆದರ್ಶಗಳು ಪೂರಕವಾಗಿ ಬಳಕೆಯಾಗಬೇಕು ಆ ಮೂಲಕ ಜನಾಂದೋಲನಕ್ಕೆ ಬಲ ತುಂಬಬೇಕು ಎಂದು ಹೇಳುತ್ತಾರೆ.

ಇಂದು ವಾಸ್ತವ ಸಂಗತಿಗಳು ಮತ್ತು ಆದರ್ಶಗಳು ಎರಡನ್ನೂ ಬೆರೆಸಿ ಹೆಣೆಯುವ ಜವಾಬ್ದಾರಿ ಇಲ್ಲಿನ ಪ್ರಜ್ಞಾವಂತರ ಮೇಲಿದೆ. ಇದನ್ನು ಬೆಸೆಯುವುದು ಹೇಗೆ? ಎಲ್ಲಿಂದ ಪ್ರಾರಂಭಿಸಬೇಕು? ಸಂವಿಧಾನದ ನೀತಿಸಂಹಿತೆಗಳನ್ನು ಜನಸಾಮಾನ್ಯರು ಚರ್ಚಿಸುವಂತೆ ಮತ್ತು ಅದರ ಆಶಯಗಳಿಗೆ ಬದ್ಧರಾಗುವಂತೆ ಪ್ರೇರೇಪಿಸುವುದು ಮೊದಲ ಗುರಿಯಾಗಬೇಕು. ಈ ಕ್ಯಾಬ್ ವಿರೋಧಿ ಹೋರಾಟವು ಸಂವಿಧಾನ ಉಳಿಸುವ ಹೋರಾಟವಾಗಬೇಕು. ಸಾರ್ವಜನಿಕರ ಪಾಲ್ಗೊಳ್ಳುವಿಕೆಗೆ ಹೆಚ್ಚಿನ ಒತ್ತನ್ನು ಕೊಡಬೇಕು. ಈ ಕ್ಯಾಬ್ ಮತ್ತು ಎನ್‌ಆರ್‌ಸಿ ಶಾಸನಗಳು ಕೇವಲ ಮುಸ್ಲಿಮ್ ಸಮುದಾಯವನ್ನು ಉದ್ದೇಶಿಸಿ ಜಾರಿಗೊಳಿಸಿಲ್ಲ ಜೊತೆಗೆ ದಲಿತರು ಮತ್ತು ಆದಿವಾಸಿಗಳು ಸಹ ಇದರ ಬಲಿಪಶುಗಳು ಎನ್ನುವ ಸತ್ಯವನ್ನು ತರ್ಕಬದ್ಧವಾಗಿ, ತಾಂತ್ರಿಕವಾಗಿ, ತಾತ್ವಿಕವಾಗಿ ಮಂಡಿಸಬೇಕು. ಎಲ್ಲಿಯವರೆಗೆ ಈ ಕ್ಯಾಬ್ ವಿರೋಧಿ ಹೋರಾಟ ಮುಸ್ಲಿಮರ ರಕ್ಷಣೆ ಎನ್ನುವ ಒಂದಂಶದ ಕಾರ್ಯಕ್ರಮವಾಗಿರುತ್ತದೆಯೋ ಅಲ್ಲಿಯವರೆಗೂ ಇದು ಸಾರ್ವಜನಿಕರ ಒಳಗೊಳ್ಳುವಿಕೆಯಿಂದಲೂ ವಂಚಿತವಾಗುತ್ತದೆ. ಏಕೆಂದರೆ ಭಾರತದ ಶ್ರೇಣೀಕೃತ ಸಮಾಜವು ಅಲ್ಪಸಂಖ್ಯಾತರ, ತಳ ಸಮುದಾಯಗಳ ಪ್ರತ್ಯೇಕತೆ ಮತ್ತು ತಾರತಮ್ಯ ವಿರೋಧಿ ಚಳವಳಿಗಳಿಗೆ ಸ್ಪಂದಿಸುವುದಿಲ್ಲ ಎನ್ನುವ ಕಟುಸತ್ಯ ಇತಿಹಾಸದಲ್ಲಿಯೂ ದಾಖಲಾಗಿದೆ ಮತ್ತು ವರ್ತಮಾನದಲ್ಲಿಯೂ ಚಾಲ್ತಿಯಲ್ಲಿದೆ. ಈ ವಾಸ್ತವದ ಹಿನ್ನೆಲೆಯಲ್ಲಿ ನಮ್ಮ ಕಾರ್ಯಯೋಜನೆಗಳು ಸಿದ್ಧಗೊಳ್ಳಬೇಕು. ನಾವೆಲ್ಲರೂ ಗುಸ್ಪೈತೀಯರು ಎನ್ನುವ ಸಂಗತಿ ದಲಿತ-ಹಿಂದುಳಿದ ಸಮುದಾಯಗಳಿಗೆ ಮನವರಿಕೆ ಮಾಡಿಕೊಡಬೇಕು. ಇಲ್ಲಿ ಗಾಂಧಿ ಮತ್ತು ಅಂಬೇಡ್ಕರ್ ಮತ್ತೆ ಮತ್ತೆ ಕೇಂದ್ರವಾಗಿ ಮೂಡಿಬರುತ್ತಾರೆ.

Writer - ಶ್ರೀ ಪಾದ ಭಟ್

contributor

Editor - ಶ್ರೀ ಪಾದ ಭಟ್

contributor

Similar News