ದಮ್ಮಾಮ್ ನಲ್ಲಿ ಕುಂದಾಪುರದ ಯುವಕನ ಬಂಧನ?

Update: 2019-12-22 17:18 GMT

ದಮ್ಮಾಮ್: ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಸೌದಿ ರಾಜಕುಮಾರ, ಮುಸ್ಲಿಮರ ಪವಿತ್ರ ಸ್ಥಳ ಮಕ್ಕಾದ ಬಗ್ಗೆ ಅವಹೇಳನಕಾರಿ ಪೋಸ್ಟ್ ಮಾಡಿದ ಆರೋಪದಲ್ಲಿ ದಮ್ಮಾಮ್ ನಲ್ಲಿ ಉದ್ಯೋಗದಲ್ಲಿದ್ದ ಕುಂದಾಪುರದ ವ್ಯಕ್ತಿಯೊಬ್ಬರನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ. ಆದರೆ ಬಂಧನದ ಬಗ್ಗೆ ಖಚಿತ ಮಾಹಿತಿ ಲಭಿಸಿಲ್ಲ.

ದಮ್ಮಾಮ್ ನ ಕಂಪೆನಿಯೊಂದರಲ್ಲಿ ಹರೀಶ್ ಬಂಗೇರ ಎಂಬವರು ಉದ್ಯೋಗದಲ್ಲಿದ್ದು, ಇತ್ತೀಚೆಗಷ್ಟೇ ಅವರು ಅವಹೇಳನಕಾರಿ ಪೋಸ್ಟ್ ಗಳನ್ನು ಮಾಡಿದ್ದರು ಎಂದು ಆರೋಪಿಸಲಾಗಿದೆ. ಇದೀಗ ಅವರ ಬಂಧನವಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದ್ದು, ಅವರನ್ನು ಕರೆದೊಯ್ಯುತ್ತಿರುವ ಫೋಟೊಗಳು ವಾಟ್ಸ್ಯಾಪ್ ನಲ್ಲಿ ವೈರಲ್ ಆಗಿದೆ.

ಇಷ್ಟೇ ಅಲ್ಲದೆ ಹರೀಶ್ ರನ್ನು ಉದ್ಯೋಗದಿಂದ ಕಂಪೆನಿಯು ತೆಗೆದುಹಾಕಿದೆ ಎನ್ನಲಾಗುತ್ತಿದೆ.

ನಕಲಿ ಖಾತೆಯ ಮೂಲಕ ಎಸಗಿದ ಕೃತ್ಯ

ಹರೀಶ್ ಬಂಗೇರ ಅವರ ಪೋಸ್ಟ್ ಗಳ ಸ್ಕ್ರೀನ್ ಶಾಟ್ ಗಳು ವೈರಲ್ ಆಗಿ, ಅವರ ಬಂಧನವಾಗಿದೆ ಎನ್ನುವ ಮಾತುಗಳು ಕೇಳಿ ಬರುತ್ತಿರುವ ನಡುವೆ, ಹರೀಶ್ ಬಂಗೇರ ಹೆಸರಿನಲ್ಲಿ ಯಾರೋ ನಕಲಿ ಖಾತೆ ತೆರೆದು ಈ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ಹರೀಶ್ ಬಂಗೇರ ಪೌರತ್ವ ಕಾಯ್ದೆ ವಿಚಾರದಲ್ಲಿ ಒಂದು ಪೋಸ್ಟ್ ಮಾಡಿದ್ದು, ನಂತರ ಕ್ಷಮೆ ಯಾಚಿಸಿದ್ದರು. ಆದರೆ ಯಾರೋ ಹರೀಶ್ ಅವರ ಹೆಸರಿನಲ್ಲಿ ನಕಲಿ ಖಾತೆ ತೆರೆದು ಧಾರ್ಮಿಕ ಅವಹೇಳನದ ಪೋಸ್ಟ್ ಗಳನ್ನು ಮಾಡಿದ್ದಾರೆ ಎಂದು ಆರೋಪಿಸಲಾಗುತ್ತಿದೆ. ಯಾರೋ ನಡೆಸಿದ ಕೃತ್ಯಕ್ಕೆ ಹರೀಶ್ ಬಲಿಪಶುವಾಗಿದ್ದಾರೆ ಎನ್ನಲಾಗುತ್ತಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News